ಗ್ರಾಮೀಣ ಭಾರತದ ಅಭ್ಯುದಯವೇ ಗುರಿ-ಉದ್ಯೋಗ ಬಿಟ್ಟು ಜನಸೇವೆಗಿಳಿದ ಸಾಹಸಿ

ಟೀಮ್​​ ವೈ.ಎಸ್​​.

ಗ್ರಾಮೀಣ ಭಾರತದ ಅಭ್ಯುದಯವೇ ಗುರಿ-ಉದ್ಯೋಗ ಬಿಟ್ಟು ಜನಸೇವೆಗಿಳಿದ ಸಾಹಸಿ

Sunday October 25, 2015,

2 min Read

ಒಳ್ಳೆ ಕೆಲಸ, ಕೈತುಂಬಾ ಸಂಬಳ ಎಲ್ಲವೂ ಇತ್ತು. ಆದ್ರೆ ಅದರಲ್ಲಿ ತೃಪ್ತಿ ಇರಲಿಲ್ಲ. ಸಮಾಜಕ್ಕೆ ಏನಾದ್ರೂ ಒಳಿತು ಮಾಡಬೇಕೆಂಬ ಹಂಬಲ ಕಾಡ್ತಾ ಇತ್ತು. ಇದಕ್ಕಾಗಿಯೇ ಕೆಲಸ ಬಿಟ್ಟು ಸಮಾಜ ಸೇವೆಗಿಳಿದ ಅಜಯ್ ಚತುರ್ವೇದಿ ಅವರ ಬದುಕಿನ ಕಥೆ ಇದು. ಅಜಯ್ ಚತುರ್ವೇದಿ ಪೆನ್ಸಿಲ್ವೇನಿಯಾದ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸಿಟಿ ಬ್ಯಾಂಕ್‍ನಲ್ಲಿ ಕೆಲಸ ಮಾಡ್ತಿದ್ದ ಅಜಯ್‍ಗೆ ಒಳ್ಳೆ ಸಂಬಳವೂ ಇತ್ತು. ಆದ್ರೆ ಇದ್ದಕ್ಕಿದ್ದಂತೆ ಒಂದು ದಿನ ಹಿಮಾಲಯಕ್ಕೆ ಹೋಗಬೇಕಾಗಿ ಬಂತು. 2 ವಾರ ಹಿಮಾಲಯದಲ್ಲಿ ಅಜಯ್ ರಜೆ ಕಳೆದ್ರು. ಅಲ್ಲೇ ಅಜಯ್ ಅವರಿಗೆ ಬದುಕಿನ ಉತ್ತರ ಸಿಕ್ಕಿದ್ದು. ಪರಿಣಾಮ ಮತ್ತೆ 6 ತಿಂಗಳು ಅಜಯ್ ಚತುರ್ವೇದಿ ಹಿಮಾಲಯದ ಕೇದಾರನಾಥದಲ್ಲಿ ಉಳಿದುಕೊಂಡ್ರು.

image


ಉದ್ಯೋಗದಲ್ಲಿ ಅಜಯ್ ಅವರಿಗೆ ಅಷ್ಟೇನೂ ಸಮಾಧಾನವಿರಲಿಲ್ಲ. 2 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕೆಲಸ ಮಾಡಲು ಸಾಧ್ಯವಿಲ್ಲ ಅನ್ನೋ ಮನಸ್ಥಿತಿ ಅವರದ್ದಾಗಿತ್ತು. 1990ರ ದಶಕದಲ್ಲಿ ಷೇರು ಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆಗ ಅಜಯ್ ಟ್ರೇಡಿಂಗ್‍ನತ್ತಲೂ ಚಿತ್ತ ಹರಿಸಿದ್ರು. ಮಾರುಕಟ್ಟೆ ಭಾರೀ ಕುಸಿತ ಕಂಡಿಂದ್ರಿಂದ ಪೆನ್ಸಿಲ್ವೇನಿಯಾದ ವಾರ್ಟನ್ ಯೂನಿವರ್ಸಿಟಿಗೆ ತೆರಳಿದ್ರು. ಅಲ್ಲಿಂದ ಅವರ ನಿಜವಾದ ಪಯಣ ಆರಂಭವಾಗಿತ್ತು. ಅವರ ಮನಸ್ಸಿನಲ್ಲಿದ್ದ ಪ್ರಶ್ನೆಗಳಿಗೆಲ್ಲ ಉತ್ತರ ಸಿಗಲಾರಂಭಿಸಿತ್ತು. ಹಿಮಾಲಯ ಪ್ರವಾಸದಲ್ಲಿ ಅಜಯ್ ಅವರಿಗೆ ಬದುಕನ್ನೇ ಬದಲಾಯಿಸುವಂಥ ಅನುಭವವಾಗಿತ್ತು. ಪರಿಣಾಮ ಅಜಯ್ ಚತುರ್ವೇದಿ 2010ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ರು. ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ಏನನ್ನಾದ್ರೂ ಮಾಡ್ಬೇಕೆಂದು ಅಖಾಡಕ್ಕಿಳಿದ್ರು. ಆಗ್ಲೇ ಹರ್ವಾಗೆ ಅಜಯ್ ಅಡಿಗಲ್ಲು ಹಾಕಿದ್ರು.

ಸರ್ಕಾರ ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತಿಲ್ಲ ಅನ್ನೋದು ಅಜಯ್ ಅವರ ಕೊರಗಾಗಿತ್ತು. ಆಯಾಗಳು, ಮನೆಕೆಲಸದವರು, ಚೌಕಿದಾರರು ಹಾಗೂ ಡ್ರೈವರ್‍ಗಳಿಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮೂಲಕ ತರಬೇತಿ ನೀಡಬೇಕು ಅನ್ನೋದು ಅವರ ಅಭಿಪ್ರಾಯ. ಆದ್ರೆ ಇಂತಹ ಕಾರ್ಯಕ್ರಮಗಳಲ್ಲಿ ಖುದ್ದು ತಾವೇ ಭಾಗಿಯಾಗದಿದ್ರೆ ಅದನ್ನು ಟೀಕಿಸುವ ಹಕ್ಕಿಲ್ಲ ಅನ್ನೋದು ಅಜಯ್ ಅವರ ಅನಿಸಿಕೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿಕೊಡಲು ಬುದ್ಧಿವಂತರ ಅಗತ್ಯವಿದೆ ಎನ್ನುತ್ತಾರೆ ಅವರು. ಅಜಯ್ ಅವರ ಹರ್ವಾ, ಕೌಶಲ್ಯಾಭಿವೃದ್ಧಿ, ಬಿಪಿಓ, ಸಮುದಾಯ ಆಧಾರಿತ ಕೃಷಿ ಹಾಗೂ ಹಳ್ಳಿಗಳಲ್ಲಿ ಸೂಕ್ಷ್ಮ ವಿಮೆ ಮಾಡಿಸುವ ಕೆಲಸ ಮಾಡ್ತಿದೆ. ಕಳೆದ ಮೂರು ವರ್ಷಗಳಲ್ಲಿ ಹರ್ವಾ ತನ್ನ ದೃಷ್ಟಿಕೋನ ಹಾಗೂ ಉದ್ದೇಶದ ಪ್ರಕಾರವೇ ನಡೆದುಕೊಂಡಿದೆ. ಲಾಭದ ಉದ್ದೇಶದಿಂದ ಈ ಸಂಸ್ಥೆಯನ್ನು ಅಜಯ್ ಆರಂಭಿಸಿಲ್ಲ. ಗ್ರಾಮೀಣ ಪ್ರದೇಶದ ಜನರ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶ ಅವರದ್ದು. ಮೊದಲು ಅಜಯ್ ಹರ್ವಾ ಎಂಪ್ಲಾಯೀ ಲೋನ್ ಪ್ರೋಗ್ರಾಮ್ ಆರಂಭಿಸಿದ್ರು. ಈಗ ಹರ್ವಾ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದರ ಅಡಿಯಲ್ಲಿ ಬಜಾಜ್ ಅಲಾಯನ್ಸ್ ಗ್ರಾಮೀಣ ಪ್ರದೇಶದ ಜನರಿಗೆ ಸೂಕ್ಷ್ಮ ವಿಮೆಯನ್ನು ಒದಗಿಸುತ್ತಿದೆ.

image


ಸದ್ಯ ಹರ್ವಾ 20 ಶಾಖೆಗಳನ್ನು ಹೊಂದಿದೆ. ಈ ಪೈಕಿ 5 ಕಡೆಗಳಲ್ಲಿ ಅಜಯ್ ಸ್ವಂತವಾಗಿ ಅದನ್ನು ನಡೆಸ್ತಿದ್ದಾರೆ. ಉಳಿದವುಗಳನ್ನು ಫ್ರಾಂಚೈಸಿಗಳಿಗೆ ನೀಡಿದ್ದಾರೆ. ಭಾರತದ 14 ರಾಜ್ಯಗಳಲ್ಲಿ ಹರ್ವಾ ಸೇವೆ ಸಲ್ಲಿಸುತ್ತಿದೆ. ಗ್ರಾಮೀಣ ಪ್ರದೇಶದ ಶೇಕಡಾ 70ರಷ್ಟು ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ. ಕೃಷಿ, ವಿದ್ಯಾರ್ಥಿಗಳ ಹೆಲ್ಪ್ ಡೆಸ್ಕ್ ಹಾಗೂ ಇನ್ಷೂರೆನ್ಸ್ ಮಾರಾಟದ ಮೂಲಕ ಸಾವಿರಕ್ಕೂ ಅಧಿಕ ಮಂದಿ ಪ್ರತಿ ತಿಂಗಳು 1500-14000 ರೂಪಾಯಿ ಸಂಪಾದಿಸುತ್ತಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿರೋ ಹರ್ವಾ ಪಾಲುದಾರಿಕೆ ವಿಧಾನವನ್ನೂ ಪರಿಚಯಿಸ್ತಾ ಇದೆ. ರಾಷ್ಟ್ರೀಯ ಮಟ್ಟದಲ್ಲೂ ಈ ಸೇವೆಯನ್ನು ವಿಸ್ತರಿಸಿ ಸಂಸ್ಥೆಯನ್ನು ಉಳಿಸಿ ಬೆಳೆಸುವ ಯೋಜನೆಯನ್ನು ಅಜಯ್ ಹಾಕಿಕೊಂಡಿದ್ದಾರೆ. ವಿದೇಶಗಳನ್ನೂ ಇದನ್ನು ಪರಿಚಯಿಸುವ ಆಸೆಯೂ ಅವರಿಗಿದೆ.

image


ಮೂಲಸೌಕರ್ಯಗಳ ಕೊರತೆ ಹಾಗೂ ಸಂಪರ್ಕ ಸೌಲಭ್ಯಗಳನ್ನು ಪಡೆಯುವುದೇ ದೊಡ್ಡ ಸವಾಲು. ಜೊತೆಗೆ ಜನರ ಮನಸ್ಥಿತಿಯನ್ನು ಬದಲಾಯಿಸಿ ಹರ್ವಾ ಜೊತೆಗೆ ಕೈಜೋಡಿಸುವಂತೆ ಮಾಡುವುದು ಕೂಡ ಕಠಿಣ ಎನ್ನುತ್ತಾರೆ ಅಜಯ್ ಚತುರ್ವೇದಿ. ಅಜಯ್ ಈ ಸೇವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ವರ್ಲ್ಡ್​​​ ಎಕನಾಮಿಕ್ ಫೋರಮ್ 2013ರಲ್ಲಿ ಯಂಗ್ ಗ್ಲೋಬಲ್ ಲೀಡರ್ ಅನ್ನೋ ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವದ 50 ಕುಶಲ ನಾಯಕರ ಪೈಕಿ ಅಜಯ್ ಅವರ ಹೆಸರೂ ಇದೆ. ಫೇಸ್‍ಬುಕ್ ಒಂದು ಬಿಲಿಯನ್ ಜನರಿಗೆ ಹೇಗೆ ಅನುಕೂಲ ಮಾಡಿಕೊಟ್ಟಿದೆಯೋ ಹಾಗೆ ತಾವು ಗ್ರಾಮೀಣ ಜನರಿಗೆ ನೆರವಾಗಬೇಕೆಂಬ ಬಯಕೆ ಅವರದ್ದು. ಕೈಯಲ್ಲಿದ್ದ ಕೆಲಸ ಬಿಟ್ಟು ಸಮಾಜ ಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಅಜಯ್ ಚತುರ್ವೇದಿ ಅವರ ಪ್ರಯತ್ನಗಳೆಲ್ಲ ಸಫಲವಾಗಲಿ ಅನ್ನೋದು ನಮ್ಮ ಹಾರೈಕೆ.