ಅಬ್ಬರವಿಲ್ಲ, ಗಾಸಿಪ್​​ಗೆ ಸ್ಥಾನವೂ ಇಲ್ಲ- ಸಮಾಜದ ಅಭಿವೃದ್ಧಿಗೆ ಮುಂದಾಳತ್ವವಹಿಸಿದ "ಸಾರಥಿ"

ಉಷಾ ಹರೀಶ್

ಅಬ್ಬರವಿಲ್ಲ, ಗಾಸಿಪ್​​ಗೆ ಸ್ಥಾನವೂ ಇಲ್ಲ- ಸಮಾಜದ ಅಭಿವೃದ್ಧಿಗೆ ಮುಂದಾಳತ್ವವಹಿಸಿದ "ಸಾರಥಿ"

Thursday October 22, 2015,

3 min Read

ಈ ರೇಡಿಯೋದಲ್ಲಿ ಜಾಹೀರಾತುಗಳ ಹಾವಳಿ ಇಲ್ಲ, ಅಬ್ಬರಿಸುವ ಸಿನಿಮಾ ಸಂಗೀತವಿಲ್ಲ. ಇಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವರದಿಗಳು, ಚರ್ಚೆಗಳು, ಸೆಲೆಬ್ರಿಟಿ ಗಾಸಿಪ್​​ಗಳೆಲ್ಲವೂ ಗೌಣ. ಆದರೆ, ನಮ್ಮತನವನ್ನು ಸಾರುವ ಸಾಂಸ್ಕೃತಿಕ ಗಟ್ಟಿತನ, ಆತ್ಮೀಯತೆ ಇದೆ. ದಿನದ 24 ಗಂಟೆಗಳ ಕಾಲ ಜನರ ಆಶಯಗಳಿಗೆ ಸ್ಪಂದಿಸುವ ತುಡಿತವಿದೆ.

ಸಾಗಬೇಕಿರುವ ಹಾದಿ ಕಠಿಣ. ಈವರೆಗೆ ಬಂದಿರುವು ನೆರವು ಅಷ್ಟೇ. ಗರಿಷ್ಠ 12 ಕಿಲೋಮೀಟರ್​​​ ವ್ಯಾಪ್ತಿಗೆ ವಿಸ್ತರಿಸುವ, ಅಬ್ಬಬ್ಬಾ ಅಂದ್ರೂ 10 ಹಳ್ಳಿಗಳನ್ನು ತಲುಪುವ, ನಿಯಮಿತ ಕಾರ್ಯವ್ಯಾಪ್ತಿಯ ಸಮುದಾಯ ರೇಡಿಯೋ ಒಂದರ ಪರಿಣಾಮವೆಷ್ಟು ಎಂಬುದು ಯಾರಿಗೂ ಅನಿಸಬಹುದು. ಏಕೆಂದರೆ, ನಮ್ಮ ತಾತ, ಅಜ್ಜಿ ಕಾಲದಂತೆ ಏಕೈಕ ರೇಡಿಯೋ ಸ್ಟೇಷನ್​​ಳಿಗೆ ಅಂಟಿಕೊಳ್ಳುವ ಕಾಲ ಇದಲ್ಲ, ಹೊಸತನವನ್ನು ಹತ್ತು ಹಲವು ಆಯ್ಕೆಗಳಲ್ಲಿ ಯಾವುದರೊಂದಿಗೂ ಗಟ್ಟಿ ಭಾಂಧವ್ಯ ಹೊಂದಲು ಆಧುನಿಕ ಶ್ರೋತೃಗಳಿಗೆ ತುಸು ಹೆಚ್ಚೇ ಸಮಯ ಹಿಡಿಯುತ್ತದೆ. ಅಲ್ಲದೆ, ಮನೋರಂಜನೆಯ ಏಕೈಕ ಉದ್ದೇಶದೊಂದಿಗೆ ಟಿವಿ ಎದುರು ನಮನ್ನು ದಿನದ 24 ಗಂಟೆಗಳು ಕುಳ್ಳಿರಿಸಲು ಚಾನೆಲ್​ಗಳು ಶರವೇಗದಲ್ಲಿ ಸ್ಪರ್ಧೆ ನಡೆಸುತ್ತಿವೆ. ಶೆಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಎಂದು ವಿವಿಧ ಸ್ಥರಗಳ ಸೇವೆಗಳನ್ನು ಒದಗಿಸಲೇ ಬೇಕಾದಅನಿವಾರ್ಯತೆ ಇಂದಿನ ಮಾಧ್ಯಮಗಳಿಗೆ ಇರಬೇಕೆಂದಿಲ್ಲ. ಯಶಸ್ಸಿನ ಸಿದ್ಧ ಸೂತ್ರಗಳೇ ವ್ಯರ್ಥ ಎಂದು ಮೂಲೆಗುಂಪು ಮಾಡುವ ಕಾಲವಿದೆ. ಹೀಗಿರುವಾಗ ಒಂದು ಸಮುದಾಯ ರೇಡಿಯೋ ದಿಂದ ಏನು ಸಾಧ್ಯ, ಎಂದು ಯೋಚಿಸುತ್ತಿರುವಾಗ ಗ್ರಾಮೀಣ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಮತ್ತು ಅದಕ್ಕೆ ಪೂರಕವಾಗಿನ ಕೆಲಸ ನಿರ್ವಹಿಸುವ ಕನಸಿನೊಂದಿಗೆ ಪತ್ರಕರ್ತೆ ಡಿ. ಎಸ್. ಶಮಂತ ಸಮುದಾಯ ರೇಡಿಯೊ ಪ್ರಾರಂಭಿಸಿದ್ದಾರೆ.

image


ಕಳೆದ ಕೆಲ ವರ್ಷಗಳಿಂದ ಮಾಧ್ಯಮ ಸಂಪನ್ಮೂಲ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಾರಥಿ ಟ್ರಸ್ಟ್​​ನ ರೂವಾರಿಗಳಾಗಿರುವವರು, ಶಮಂತಾ, ಉಶಾ ಎಂ.ವಿ. ಮತ್ತು ನಿರ್ಮಲಾ ನಂದಕುಮಾರ್. ಇದರ ಅಂಗಸಂಸ್ಥೆಯೇ ಸಾರಥಿ ಝಲಕ್. 90.4 ಎ.ಎಂ. ಸಾರಥಿ ಝಲಕ್, ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಯಲ್ಲಿ ಈಗ್ಗೆ ಒಂದು ವರ್ಷದ ಹಿಂದೆ ಆರಂಭವಾಗಿದೆ. ಸಾರಥಿ ಝಲಕ್​​ನಲ್ಲಿ ವಾರದ 7ದಿನವೂ ಬೆಳಗ್ಗೆ 6-10ರವರೆಗೆ ಮುತ್ತಿನ ನುಡಿಗಳನ್ನು ಆಡುವ ಸಿಬ್ಬಂದಿ ಯಾರು ಗೊತ್ತೇ?, ಶಾಲೆ, ಕಾಲೇಜು ವಿದ್ಯಾರ್ಥಿಗಳು, ಖಾಯಂ ಸಿಬ್ಬಂದಿ, ತರಬೇತಿ ಪಡೆಯುತ್ತಿರುವ ಒಂದಷ್ಟು ಆರ್​​ಜೆಗಳು ಸೇರಿದಂತೆ ಒಟ್ಟಾರೆ 10 ಮಂದಿ.

ಸಾಮಾಜಿಕ,ಗ್ರಾಮೀಣಾಭಿವದ್ಧಿ, ಸ್ವಚ್ಛತೆಗೆ ಸಂಬಂಧ ಪಟ್ಟಂತೆ ಚರ್ಚಾ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಶ್ರೋತೃಗಳನ್ನು, ತನ್ನೊಳಗೆ ಎಳೆದುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಶಿಫ್ಟ್​​ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಉತ್ಸಾಹ, ಸ್ಥಳೀಯರೊಂದಿಗಿನ ಒಡನಾಟ ಅಚ್ಚರಿ ಎನಿಸುತ್ತದೆ. ಇದಕ್ಕೆ ಪುರಾವೆ ಎಂಬಂತೆ, ಎಸ್​​​ಎಂಎಸ್​​ಗಳು, ಕರೆಗಳ ಅವಿರತ ಪ್ರತಿಕ್ರಿಯೆಯೂ ಸಾರಥಿಯ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಸಾಮಾಜಿಕ ಉದ್ಯಮಶೀಲತೆಯಡಿ ರಾಜ್ಯದ ಮೊಟ್ಟ ಮೊದಲ ಸಮುದಾಯ ರೇಡಿಯೋ ಎಂಬ ಹೆಗ್ಗಳಿಕೆಯೂ ಸಾರಥಿಗಿದೆ.

ಕೇಳುಗರ ವೇದಿಕೆ

ರೇಡಿಯೋ ಕಾರ್ಯವೈಖರಿ, ಕಾರ್ಯಕ್ರಮಗಳ ಬಗೆಗಿನ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆಯಲಿಕ್ಕಾಗಿ ಕನಿಷ್ಠ ತಿಂಗಳಿಗೊಮ್ಮೆ ಕೇಳುಗರ ವೇದಿಕೆಯಲ್ಲಿ ಸ್ಥಳೀಯರ ಆಶಯಕ್ಕೆ ಮುಕ್ತ ವೇದಿಕೆ ಕಲ್ಪಿಸಲಾಗುತ್ತಿದೆ. ಸಾಧ್ಯವಾದಷ್ಟು ಸ್ಥಳೀಯ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನೆರವು ಪಡೆಯಲಾಗುತ್ತದೆ. ನಾಗರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸ್ಥಳೀಯ ಶಾಸಕರು, ಜನರೊಂದಿಗೆ ಮುಖಾಮುಖಿ ಸಭೆ ನಡೆಸಲು ಹಲವು ಬಾರಿ ಪ್ರಯತ್ನಿಸಿದರೂ, ಕನಿಷ್ಠ ಅವರ ಮೊಬೈಲ್ ನಂಬರ್ ಸಹ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಶಮಂತಾ.

ಸಾರಥಿ ಝಲಕ್ ಪ್ರಸಾರ 25 ಕಿಮಿಗಷ್ಟೇ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ಹೆಚ್ಚಿಸಿ 10 ಲಕ್ಷ ಶೋತೃಗಳನ್ನು ತಲುಪುವುದು ಶಮಂತಾ ಅವರ ಉದ್ದೇಶ.

ಏನಿದು ಸಮುದಾಯ ರೇಡಿಯೋ..?

ಸಮುದಾಯವೊಂದರ ನಿರ್ದಿಷ್ಟ ಆಸಕ್ತಿ, ಅಭಿರುಚಿಗಳಿಗೆ ಅನುಗುಣವಾಗಿ ರೇಡಿಯೋ ಮೂಲಕ ಸಾಮಾಜಿಕ ಅರಿವು ಮೂಡಿಸುವ ಸೇವೆಯೇ ಕಮ್ಯುನಿಟಿ ರೇಡಿಯೋದ ಕಾಯಕ(ಸಮುದಾಯ ರೇಡಿಯೋ). ಆದರೆ, ಈ ಸಮುದಾಯ ರೇಡಿಯೋ ಸ್ಥಳೀಯ ಕಾರ್ಯವ್ಯಾಪ್ತಿಯಲ್ಲಿ ಜನರಿಗೆ ಆಪ್ತವಾಗಿರಬೇಕು ಎಂಬುದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಉದ್ದೇಶ. ಭಾರತದಲ್ಲಿ ಸಮುದಾಯ ರೇಡಿಯೋ ಕುರಿತ ಅಭಿಯಾನ 1990ರ ಆಸುಪಾಸಿನಲ್ಲೇ ಆರಂಭವಾಗಿತ್ತು. 1995ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪೊಂದು ಇಂತಹದೊಂದು ಹೊಸ ಸಾಧ್ಯತೆಗೆ ಪುಷ್ಟಿ ನೀಡಿತು. ಇದರ ಅನ್ವಯ, ದೇಶದಾದ್ಯಂತ ಕೆಲ ಕಟ್ಟು ನಿಟ್ಟಿನಬಂಧನೆಗಳೊಂದಿಗೆ ಶೆಕ್ಷಣಿಕ ಸಮುದಾಯ ರೇಡಿಯೋಗಳು ಆರಂಭವಾದವು.

2006ರ ನವೆಂಬರ್​ನಲ್ಲಿ ಭಾರತ ಸರ್ಕಾರ, ಎನ್​​ಜಿಓ, ನಾಗರಿಕ ಸಂಸ್ಥೆಗಳನ್ನು ಪ್ರೋತ್ಸಾಹಿಸುವಂತಹ ಹೊಸ ಸಮುದಾಯ ರೇಡಿಯೋ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿತು. ಸರ್ಕಾರಿ ಮಾಹಿತಿ ಪ್ರಕಾರ, ದೇಶಾದ್ಯಂತ 4000 ಸಮುದಾಯ ರೇಡಿಯೋ ಪರವಾನಗಿಗಳು ಲಭ್ಯವಿದೆ. ನವೆಂಬರ್ 2006ರ ವೇಳೆಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ಪರವಾನಗಿ ಕೋರಿ 295 ಅರ್ಜಿಗಳು ಬಂದಿದ್ದವು ಮತ್ತು ಆ ವೇಳೆಗಾಗಲೇ 38 ಸಮುದಾಯ ರೇಡಿಯೋಗಳು ಕಾರ್ಯ ನಿರ್ವಹಿಸಲಾರಂಭಿಸಿದ್ದವು. ಇವುಗಳಲ್ಲಿ ಶೆಕ್ಷಣಿಕ ವಿಶ್ವವಿದ್ಯಾಲಯಗಳು ಮತ್ತು ಎನ್​​ಜಿಓಗಳ ಸಮುದಾಯ ರೇಡಿಯೋಗಳೇ ಹೆಚ್ಚಿನವು. ಭಾರತದಲ್ಲಿ ಮೊಟ್ಟಮೊದಲ ಸಮುದಾಯ ಆಧಾರಿತ ರೇಡಿಯೋ 2008ರ ಅಕ್ಟೋಬರ್​​ 15ರಂದು ಕಾರ್ಯಾರಂಭ ಮಾಡಿತ್ತು. ಆಂಧ್ರಪ್ರದೇಶದ ಮೇಡಕ್ ಜಿಲ್ಲೆಯ ಪಾಸ್ತಾಪುರ ಎಂಬ ಹಳ್ಳಿಯಿಂದ ಸಂಗವ ರೇಡಿಯೋ ಹೆಸರಿನ ಸಮುದಾಯ ರೇಡಿಯೋ ಪ್ರಸಾರ ಆರಂಭಿಸಿತು. ಆಂಧ್ರದ 75ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಎನ್​ಜಿಓ ಈ ಪ್ರಯತ್ನಕ್ಕೆ ನಾಂದಿ ಹಾಡಿತು.

image


ಪ್ರಸ್ತುತ ಶೆಕ್ಷಣಿಕ ಉದ್ದೇಶಶಗಳಿಗಾಗಿ ಹಲವು ವಿವಿಗಳಲ್ಲಿ ಸಮುದಾಯ ರೇಡಿಯೋ ತೆರೆಯಲಾಗಿದೆಯಾದರೂ, ಎನ್​​ಜಿಓ ಆಧಾರಿತ ಪ್ರತ್ಯೇಕ ಸಮುದಾಯ ರೇಡಿಯೋ ಸಾರಥಿಯ ಪ್ರಯತ್ನ ರಾಜ್ಯದಲ್ಲೇ ಪ್ರಥಮ.

ಯಶಸ್ವಿ ಅಭಿಯಾನ

ಕಳೆದ ಬಾರಿಯ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣಪನನ್ನೇ ಪೂಜಿಸುವಂತೆ ಸಲಹೆ ನೀಡಿದ ಸಾರಥಿ ಝಲಕ್ ಸಿಬ್ಬಂದಿಗೆ ಅಚ್ಚರಿ ಕಾದಿತ್ತು. ಬಣ್ಣ, ಬಣ್ಣದ ಗಣಪನನ್ನು ತಂದು ಪೂಜಿಸುತ್ತಿದ್ದ ಸ್ಥಳಿಯರು, ನಮ್ಮ ಕಚೇರಿಯಲ್ಲೇ ಅಂಥ ಗಣಪತಿ ಸಿಕ್ಕರೆ ಕೊಡಿ ಎಂದು ಸ್ಥಳೀಯರು ದುಂಬಾಲು ಬಿದ್ದರಂತೆ. ಏಕೆಂದರೆ, ಈವರೆಗೆ ಅಂಥ ಅಲೋಚನೆಗಳು ಪರಿಕಲ್ಪನೆ ಇದೆ ಎಂಬುದೇ ಸುತ್ತಮುತ್ತಲಿನವರಿಗೆ, ಸ್ಥಳೀಯರಿಗೆ ತಿಳಿದಿರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ ಸಿಬ್ಬಂದಿ ಮಾಲಿನ್ಯ ಮಂಡಳಿ ಸಹಯೋಗದೊಂದಿಗೆ ರೇಡಿಯೋ ಸ್ಟೇಷನ್ ಆವರಣದಲ್ಲೇ ಪರಿಸರ ಸ್ನೇಹಿ ಗಣಪನ ಮಾರಾಟಕ್ಕೆ ವ್ಯವಸ್ಥೆ ಮಾಡಿತು. ಇಂತಹುದ್ದೊಂದು ಸಾಮಾಜಿಕ ಕಳಕಳಿಯುಳ್ಳ ಕಾರ್ಯವೈಖರಿಗೆ ಸ್ಥಳೀಯರು ಖುದ್ದು ಕಚೇರಿಗೆ ಬಂದು ಅಭಿನಂದನೆ ಸಲ್ಲಿಸಿದ ಉದಾಹರಣೆಗಳು ಇವೆ.

" ಸಾಮಾಜಿಕ ಉದ್ಯಮಶೀಲತೆಯ ಭಾಗವಾಗಿ ಆರಂಭವಾದ ಸಾರಥಿ ಝಲಕ್ ಸಮುದಾಯ ರೇಡಿಯೋ ಸಾಮಾಜಿಕ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಮ್ಮ ಕಾರ್ಯಕ್ರಮಗಳ ಬಗೆಗಿನ ಯಾವುದೇ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಜನಸಾಮಾನ್ಯರಿಗೆ ಮುಕ್ತ ವಾತಾವರಣ ಕಲ್ಪಿಸಿರುವುದರಿಂದ ಅಂತಹುದೊಂದು ಒಳಗೊಳ್ಳುವಿಕೆಯ ಪರಿಕಲ್ಪನೆಯೇ ಸ್ಥಳೀಯರನ್ನು ಬಹು ಬೇಗ ಆಕರ್ಷಿಸಿತು. ಶೀಘ್ರದಲ್ಲೇ, ಶೆಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸಾರ ಮಾಡಲು ಯೋಜನೆ ರೂಪಿಸಲಾಗುತ್ತಿದೆ".

-ಶಮಂತಾ ಡಿ.ಎಸ್,ನಿರ್ದೇಶಕಿ, ಸಾರಥಿ ಮಾಧ್ಯಮ ಸಂಪನ್ಮೂಲ ಸಂಸ್ಥೆ