ಹುಣಸೆ ಹಣ್ಣು ಕೀಳುತ್ತಿದ್ದ ಹುಡುಗಿ ಪದವೀಧರಳಾದ ಕಥೆ

ಟೀಮ್​​ ವೈ.ಎಸ್​​.

ಹುಣಸೆ ಹಣ್ಣು ಕೀಳುತ್ತಿದ್ದ ಹುಡುಗಿ ಪದವೀಧರಳಾದ ಕಥೆ

Tuesday November 03, 2015,

4 min Read

ನಾನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಬೆಳೆದೆ. ಮಣ್ಣಿನಲ್ಲಿ ಆಟವಾಡುತ್ತಾ, ಮರಗಳಿಗೆ ಕಲ್ಲೆಸೆಯುತ್ತಾ, ಶಾಲಿನಲ್ಲಿ ಮೀನು ಹಿಡಿಯುತ್ತಾ ನನ್ನ ಬಾಲ್ಯವೆಲ್ಲಾ ಕಳೆದೆ. ಆದರೆ, ಬೆಳದಂತೆಲ್ಲಾ ಪುರುಷ ಪ್ರಧಾನ ಸಮಾಜ ಮತ್ತು ಕೌಟುಂಬಿಕ ವ್ಯವಸ್ಥೆಯನ್ನು ಎದುರಿಸಬೇಕಾಯಿತು. ನಾನು ಪುರುಷರ ಜೊತೆ ಅತ್ಯಂತ ಕಡಿಮೆ ಮಾತನಾಡುತ್ತಿದ್ದೆ, ಹಿರಿಯರ ಮುಂದೆ ನನ್ನ ಅಭಿಪ್ರಾಯಗಳನ್ನು ಹೇಳುವಂತಿರಲಿಲ್ಲ.

ಆದರೆ, ಎಲ್ಲರ ಬದುಕಿನಲ್ಲೂ ಒಂದು ತಿರುವು ಇದ್ದೇ ಇರುತ್ತದೆ. ಅಶ್ವಿತಾ ಶೆಟ್ಟಿಗೆ ಆಗ 13 ವರ್ಷ, ಹೆಲೆನ್ ಕೆಲ್ಲರ್ ಅವರ ಜೀವನಚರಿತ್ರೆ ಓದುವ ಅವಕಾಶ ಸಿಕ್ಕಿತ್ತು. ಆ ಪುಸ್ತಕವೇ ಅಶ್ವಿತಾ ಬದುಕು ಬದಲಾಯಿಸಲು ಕಾರಣ. ನನ್ನ ಬದುಕನ್ನು ಬದಲಾಯಿಸುವ ಶಕ್ತಿ ಇರುವುದು ನನಗೆ ಮಾತ್ರ, ಬೇರೆ ಯಾರಿಗೂ ಅಲ್ಲ ಎನ್ನುವುದನ್ನು ಅಶ್ವಿತಾ ನಿಶ್ಚಯಿಸಿಕೊಂಡರು. ಓದುವುದರಲ್ಲೂ ಮುಂದಿದ್ದ ಅಶ್ವಿತಾ ಶಿಕ್ಷಕಿಯಾಗಬೇಕು ಎಂಬ ಕನಸು ಕಂಡಿದ್ದರು. ತಾನು ಓದುತ್ತಿರುವಾಗಲೇ ತನ್ನ ನೆರೆಹೊರೆಯ ವಿದ್ಯಾರ್ಥಿಗಳಿಗೂ ಪಾಠ ಹೇಳಿಕೊಡಲು ಆರಂಭಿಸಿದ್ದರು. ಬಳಿಕ 15-20 ಮಂದಿಯ ಗುಂಪುಗಳಲ್ಲಿ ಪಾಠ ಹೇಳಿಕೊಡಲು ಟ್ಯೂಷನ್ ಸೆಂಟರ್ ಆರಂಭಿಸಿದರು. ಟ್ಯೂಷನ್ ಸೆಂಟರ್​​ನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಆಕೆಯಲ್ಲಿ ವಿಶ್ವಾಸವೂ ಹೆಚ್ಚಾಗತೊಡಗಿತು.

image


ಆಕೆ ಬೀಡಿ ಕಾರ್ಮಿಕರ ಮಗಳು

ನನ್ನ ಪೋಷಕರು ಅನಕ್ಷರಸ್ಥರಾಗಿದ್ದು. ಅವರಿಗೆ ಶಿಕ್ಷಣದ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಪ್ರತಿ ಬಾರಿಯೂ ನಾನು ಪಾಸ್ ಆದಾಗ ಹೆತ್ತವರನ್ನು ಒಪ್ಪಿಸಲು ಹೆಣಗಬೇಕಾಗಿತ್ತು. ಪರಿಸ್ಥಿತಿ ವ್ಯತಿರಿಕ್ತವಾಗಿಯೇ ಇತ್ತು. ಆದರೆ, ನನ್ನ ಬದುಕಿನ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವ ಪೋಷಕರು ಸಿಕ್ಕಿದ್ದು ನನ್ನ ಪಾಲಿಗೆ ದೊಡ್ಡ ಆಶೀರ್ವಾದ.

ಕಾಲೇಜು ಮತ್ತು ಕನಸುಗಳು

ಇಂಗ್ಲೀಷ್ ಅಂದರೆ ಅಶ್ವಿತಾಗೆ ಅಷ್ಟಕ್ಕಷ್ಟೆ. ಆದರೆ, ಅದರಿಂದ ಆಕೆಯೇನೂ ಎದೆಗುಂದಿರಲಿಲ್ಲ. ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್​​ನಲ್ಲಿ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದರೂ, ಯಾವುದೇ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ಎಲ್ಲವೂ ಆಂಗ್ಲಭಾಷೆಯಲ್ಲೇ ಇತ್ತು. ಆದರೆ, ಕೈಬರಹ ಚೆನ್ನಾಗಿದ್ದುದರಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಅಶ್ವಿತಾ.

ಆದರೆ, ಕನಸೊಂದು ಇದ್ದೇ ಇತ್ತು. ಒಂದಲ್ಲ ಒಂದು ದಿನ ಒಳ್ಳೆಯ ಸಂಸ್ಥೆಗೆ ಸೇರಿಕೊಂಡು, ಒಳ್ಳೆಯ ಪ್ರೊಫೆಸರ್​​ಗಳಿಂದ ಕಲಿಯಬೇಕು ಎನ್ನುವುದು ಆಕೆಯ ಕನಸಾಗಿತ್ತು. ಆಗಾಗ ತಾಯಿಯ ಬಳಿ ಒಂದಲ್ಲ ಒಂದು ದಿನ ನಾನೂ ಕಾಲೇಜಿಗೆ ಹೋಗುತ್ತೇನೆ ಎನ್ನುತ್ತಿದ್ದಳು. ಮೊದಲು ಹೈಸ್ಕೂಲ್ ಪಾಸ್ ಮಾಡು ಎಂದು ಅಮ್ಮ ಹೇಳುತ್ತಿದ್ದರು. ತಾಯಿಯೇನು, ಅಶ್ವಿತಾರನ್ನು ಕುಗ್ಗಿಸಲು ಹೇಳುತ್ತಿರಲಿಲ್ಲ. ಆದರೆ, ಅಂತಹ ದೊಡ್ಡ ಕನಸು ಕಾಣುವುದು ಹುಡುಗಿಯರಿಗೆ ತರವಲ್ಲ ಎನ್ನುವುದು ಅವರ ಭಾವನೆಯಾಗಿತ್ತು.

ಅಂತಿಮ ವರ್ಷದ ಪದವಿ ಓದುತ್ತಿದ್ದ ವೇಳೆಗೆ ತಮಿಳು ಮ್ಯಾಗಝಿನ್ ಒಂದರಲ್ಲಿ ಯಂಗ್ ಇಂಡಿಯಾ ಫೆಲೋಶಿಪ್ ಬಗ್ಗೆ ಮಾಹಿತಿ ಸಿಕ್ಕಿತು. ಇಡೀ ಜಗತ್ತೇ ಒಂದಾಗಿ ನಿಂತು ತನ್ನ ಸಹಾಯಕ್ಕೆ ಧಾವಿಸಿ ಬಂದಿದೆಯೋ ಎನ್ನುವಂತಹ ಅನುಭವ ಅಶ್ಚಿತಾರಿಗಾಗಿತ್ತು. ಗ್ರಂಥಪಾಲಕರೊಬ್ಬರು ಅಶ್ವಿತಾಗೆ ಈ-ಮೇಲ್ ಐಡಿ ರಚಿಸಿಕೊಟ್ಟರು. ಗೆಳೆಯರೊಬ್ಬರು, ಅಶ್ವಿತಾಗೆ ಮೊಬೈಲ್ ಫೋನ್ ಕೊಟ್ಟು ಪ್ರತಿದಿನ ಅರ್ಜಿ ತುಂಬಲು ಮತ್ತು ದೂರವಾಣಿ ಸಂದರ್ಶನಕ್ಕೆ ನೆರವಾದರು. ಅಂತಿಮ ಹಂತದ ಸಂದರ್ಶನಕ್ಕೆ ದೆಹಲಿಗೆ ಹೋಗಲು ಅಶ್ವಿತಾ ಬಳಿ ಹಣವಿರಲಿಲ್ಲ. ಕೊನೆಗೆ ಸಂದರ್ಶಕ ಮಂಡಳಿಯೇ ಸ್ಕೈಪ್ ಮೂಲಕ ಸಂದರ್ಶನಕ್ಕೆ ಅವಕಾಶ ಕಲ್ಪಿಸಿತು. ಹತ್ತಿರದ ಪಟ್ಟಣವೊಂದರಲ್ಲಿ ಸ್ಕೈಪ್ ಮೂಲಕ ಸಂದರ್ಶನವೂ ನಡೆಯಿತು.

ಅಲ್ಲಿ ಕಾದಿತ್ತು ಶಾಕ್ !

ಆಕೆ ಜೀವನದಲ್ಲೇ ಮೊದಲ ಬಾರಿಗೆ ಇಂಗ್ಲೀಷ್​​​ನಲ್ಲಿ ಮಾತನಾಡಿದ್ದಳು. ಅದೂ ದೂರವಾಣಿ ಸಂದರ್ಶನದಲ್ಲಿ. ಆಗ ಆಕೆಗೆ 20 ವರ್ಷ. ಆಕೆ ಉತ್ತೀರ್ಣಳಾಗಿ, ದೆಹಲಿಗೆ ತೆರಳಿದಳು. “ಆರಂಭದಲ್ಲಿ ನಾನು ಕುಗ್ಗಿ ಹೋಗಿದ್ದೆ. ಹಿಂಜರಿಕೆ ಇತ್ತು. ಜೀವನದಲ್ಲಿ ಮೊದಲ ಬಾರಿಗೆ ನಗರ ಜೀವನವನ್ನು ಅನುಭವಿಸಿದ್ದೆ. ಅಮೆರಿಕಾ ಶೈಲಿಯಿಂದಾಗಿ ನನಗೆ ಆರಂಭದಲ್ಲಿ ಕೆಲವು ಪಾಠಗಳು ಅರ್ಥವೇ ಆಗಲಿಲ್ಲ. ವಿಷಯವನ್ನು ಸ್ವೀಕರಿಸುವುದೂ ನನಗೆ ಸಮಸ್ಯೆಯಾಗಿತ್ತು. ಇಂಗ್ಲೀಷ್​​​ನಲ್ಲಿ ನನ್ನ ಅನಿಸಿಕೆಗಳನ್ನು ತಿಳಿಸಲೂ ಕಷ್ಟಪಡುತ್ತಿದ್ದೆ.” ಆದರೆ, ಅಶ್ವಿತಾ ಹಠ ಬಿಡಲಿಲ್ಲ. ಪ್ರೊಫೆಸರ್​​ಗಳ ಜೊತೆ ಹೆಚ್ಚು ಸಮಯ ಕಳೆದರು. ಈಗ ಇಂಗ್ಲೀಷ್​​ನಲ್ಲೇ ವ್ಯವಹರಿಸುವಷ್ಟರ ಮಟ್ಟಿಗೆ ಆಂಗ್ಲಭಾಷೆಯ ಮೇಲೆ ಪ್ರಭುತ್ವ ಸಾಧಿಸಿದರು. ಫೆಲೋಶಿಪ್ ಅಶ್ವಿತಾರ ದಿಗಂತಗಳನ್ನೇ ಬದಲಾಯಿಸಿತು. ಇದು ನನಗೆ ಇಂಗ್ಲೀಷ್​​ನಲ್ಲಿ ಬರೆಯಲು ಮತ್ತು ಮಾತನಾಡಲು ಸಾಧ್ಯವಾಗಿಸಿತು. ನನಗೆ ಜೀವನದ ಗೆಳೆಯರೂ ಅಲ್ಲಿ ಸಿಕ್ಕಿದರು ಎನ್ನುತ್ತಾರೆ ಅಶ್ವಿತಾ.

ಫೆಲೋಶಿಪ್ ಬಳಿಕ ಅಶ್ವಿತಾ ಕಮ್ಯುನಿಟಿ ಎಂಗೇಜ್​​ಮೆಂಟ್ ಮ್ಯಾನೇಜರ್ ಆಗಿ ಸುಘುವಾಂಶು ಹೆಲ್ತ್​ಕೇರ್​​ನಲ್ಲಿ ಕೆಲಸ ಆರಂಭಿಸಿದರು. ಇದು ಗ್ರಾಮೀಣ ಭಾರತದಲ್ಲಿ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಒದಗಿಸುವ ಸಂಸ್ಥೆಯಾಗಿತ್ತು. ತನ್ನ ಕೆಲಸದ ಅಂಗವಾಗಿ, ಅಶ್ವಿತಾ ಶಾಲೆ ಮತ್ತು ಕಾಲೇಜುಗಳಿಗಾಗಿ ಅನೀಮಿಯಾ ಮತ್ತು ಕಾರ್ಡಿಯೋ ವಾಸ್ಕ್ಯುಲರ್ ರೋಗಗಳ ಬಗ್ಗೆ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಬಗ್ಗೆ ತಿಳುವಳಿಕೆ ಸಾಮಗ್ರಿಗಳನ್ನು ರೂಪಿಸಿದರು.

ಒಳ್ಳೆಯ ಶಿಕ್ಷಣ ಮತ್ತು ಗೌರವಯುತವಾದ ಕೆಲಸ.. ಅಷ್ಟೇ ಅಲ್ಲವೇ ಕನಸು? ಆದರೆ ಅಶ್ವಿತಾಗೆ ಏನೋ ಕಳೆದುಕೊಂಡಂತಿತ್ತು.

ಕೆಲಸ ಮಾಡುತ್ತಿದ್ದಾಗ ನಾನು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಇಷ್ಟೆಲ್ಲಾ ಕಷ್ಟ ಪಟ್ಟು ಓದಿದ್ದು ಇಷ್ಟಕ್ಕೆನಾ? ನನ್ನ ಶಿಕ್ಷಣದ ಗುರಿ ಇಷ್ಟೆನಾ? ಜಗತ್ತಿನಲ್ಲಿ ಬದಲಾಯಿಸಬೇಕಾಗಿದ್ದು ಏನಿದೆ ? ನನಗೂ ನನ್ನ ಗೆಳೆಯರಿಗೂ ವ್ಯತ್ಯಾಸವೇನು? ನನ್ನ ಹಳ್ಳಿಯ ಹಲವು ಮಕ್ಕಳು ಇನ್ನೂ ಶಿಕ್ಷಣ ಪಡೆಯಲು ಒದ್ದಾಡುತ್ತಿದ್ದಾರೆ.. ನಾನು ಏನು ಮಾಡಬೇಕು? ಹೀಗೆ ತರಹೇವಾರಿ ಪ್ರಶ್ನೆಗಳು ಕಾಡುತ್ತಿದ್ದವು.

ನಾನು ಮುಂದುವರಿಯಲು ಎರಡೇ ಕಾರಣ, ಒಂದು ಅವಕಾಶಗಳ ಬೆನ್ನತ್ತಿದ್ದು, ಮತ್ತೊಂದು ನನ್ನಲ್ಲಿಲ್ಲದ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡಿದ್ದು.

ಬೋಧಿ ಟ್ರೀ ಫೌಂಡೇಶನ್ ನ ಹುಟ್ಟು

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಶ್ವಿತಾ ತಿರುನಲ್ವೇಲಿಗೆ ಹಿಂತಿರುಗಿದರು. ಗ್ರಾಮೀಣ ಪದವೀಧರರನ್ನು ಸಬಲೀಕರಿಸಲು ಬೋಧಿವೃಕ್ಷ ಫೌಂಡೇಶನ್ ಹುಟ್ಟುಹಾಕಿದರು. ಅವರಿಗೆ ಕೌಶಲ್ಯ ತರಬೇತಿ ಸೇರಿದಂತೆ ಅವಕಾಶಗಳನ್ನು ಕಲ್ಪಿಸಲು ಆರಂಭಿಸಿದರು. “ನಮ್ಮ ಗ್ರಾಮೀಣ ಪದವೀಧರರನ್ನು ತರಬೇತಿಗೊಳಿಸಬಹುದು ಮತ್ತು ಇತರರೊಂದಿಗೆ ಸಂವಹನ ನಡೆಸುವ ಶಕ್ತಿ ತುಂಬಬಹುದು. ಜೊತೆಗೆ ಸ್ವಾಭಿಮಾನ, ತಮ್ಮ ಕೆಲಸಗಳ ಜವಬ್ದಾರಿ ಹಾಗೂ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಮಾಡಬಹುದು. ನಮ್ಮ ಈ ಪ್ರಯತ್ನಗಳು ನಿಜವಾದ ನಾಯಕರನ್ನು ಸೃಷ್ಟಿಸುತ್ತವೆ. ಸ್ಥಳೀಯ ಕನಸುಗಳ ಪ್ರತೀಕವಾದ ಅವರು ತಮ್ಮ ತಮ್ಮ ಹಳ್ಳಿಗಳನ್ನು ಉದ್ಧಾರ ಮಾಡಬಹುದು ಎನ್ನುವುದು ನಮ್ಮ ನಂಬಿಕೆ,” ಎನ್ನುತ್ತಾರೆ. ಅವರು ವಿವಿಧ ಅವಕಾಶಗಳ ಬಗ್ಗೆ ಮೂರು ಗಂಟೆಗಳ ಕಾಲ ತರಬೇತಿ ನೀಡುತ್ತಾರೆ. ಫೆಲೋಷಿಪ್, ಸ್ಕಾಲರ್​​ಶಿಪ್, ಸರಕಾರಿ ನೌಕರಿ, ಖಾಸಗಿ ಉದ್ಯೋಗ, ಉದ್ಯಮಶೀಲತೆ ಅವಕಾಶಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಕಲಾ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ವಿಶೇಷ ತರಬೇತಿ ಆಯೋಜಿಸುತ್ತಾರೆ.

ಅಶ್ವಿತಾರ ಕಾಲೇಜಿಲ್ಲೇ ಬಿಬಿಎ ಓದಿದ್ದ ಗಾಂಧಿಮತಿಯವರು, ಈ ಕಾರ್ಯಕ್ರಮಗಳ ಪ್ರಯೋಜನ ಪಡೆದವರಲ್ಲಿ ಒಬ್ಬರು. ಗಾಂಧಿಯವರ ಪ್ರಗತಿ ಅಚ್ಚರಿದಾಯಕವಾಗಿದೆ. ಅವರು ಎಲ್ಲರೊಂದಿಗೆ ಸುಲಲಿತವಾಗಿ ಸಂವಹನ ನಡೆಸುತ್ತಾರೆ. ವ್ಯಾಕರಣ ದೋಷವೂ ಕಡಿಮೆ ಇರುತ್ತದೆ. ನಾನು ಹಳ್ಳಿಯವಳು. ನನಗೆ ಇಂಗ್ಲಿಷ್ ಗೊತ್ತೇ ಇರಲಿಲ್ಲ. ಇಲ್ಲಿ ಸಿಕ್ಕ ತರಬೇತಿಯಿಂದಾಗಿ ನನಗೆ ಇಂಗ್ಲಿಷ್ನ ಅನಿವಾರ್ಯತೆ ಬಗ್ಗೆ ಗೊತ್ತಾಯಿತು. ನನಗೆ ಈಗ ಹಿಂಜರಿಕೆಯಾಗುತ್ತಿಲ್ಲ. ನಾನು ನನ್ನ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದ್ದೇನೆ.

ಈ ತರಬೇತಿ ಕಾರ್ಯಕ್ರಮಗಳ ಯಶಸ್ಸಿಗೆ ಬಾಲಾಜಿ, ಸೆಬಾಸ್ಟಿನ್ ಮತ್ತು ಪದ್ಮ ಎಂಬ ನಿಜವಾದ ಹೀರೋಗಳೇ ಕಾರಣ ಎನ್ನುತ್ತಾರೆ ಅಶ್ವಿತಾ. ಕಳೆದ ಒಂದು ವರ್ಷದ ಅವಧಿಯಲ್ಲಿ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. 20ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಇವರು ಲೈಬ್ರರಿಯನ್ನು ಸ್ಥಾಪಿಸಿದ್ದಾರೆ. ಜಂಟಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಸಾಗಬೇಕಾದ ಹಾದಿ ದೊಡ್ಡದಿದೆ

ಅಕ್ಯುಮೆನ್ನ ಫೆಲೋ ಆಗಿರುವ ಅಶ್ವಿತಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. “ಇದು ನನಗೆ ನನ್ನನ್ನು ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸಿತು. ನನಗೆ ಈ ಜಗತ್ತಿನಲ್ಲಿ ಧ್ವನಿ ಸಿಗಲು ಸಹಾಯ ಮಾಡಿತು. ಇತರ ಫೆಲೋಗಳೂ ನನಗೆ ಸಹಕರಿಸಿದರು. ಅವರು ನಾನು ಮಾತನಾಡುವ ಭಾಷೆಯನ್ನು ಅರ್ಥಮಾಡಿಕೊಂಡರು, ನನ್ನ ಸಮಸ್ಯೆಗಳನ್ನು ಅರ್ಥಮಾಡಿಕೊಂಡರು.”

ಬೋಧಿ ಟ್ರೀ ಫೌಂಡೇಶನ್ ಸ್ಥಾಪಿಸುವ ವೇಳೆ ತಮ್ಮ ವೈಯುಕ್ತಿಕ ಖರ್ಚುಗಳನ್ನು ನಿಭಾಯಿಸಲು ಅಶ್ವಿತಾರಿಗೆ ಆರ್ಥಿಕ ಸಹಾಯ ನೀಡಿದೆ. ಮದರ್ ತೆರೆಸಾ ವೈಐಎಫ್ ಸೋಷಿಯಲ್ ಎಂಟರ್​​ಪ್ರೈಸಸ್ ಸ್ಕಾಲರ್​​ಶಿಪ್ ಕೂಡಾ ಅಶ್ವಿತಾಗೆ ಲಭಿಸಿದೆ. ಇದಲ್ಲದೆ, ಕೆಲವು ದಾನಿಗಳಿಂದ ತಮ್ಮ ಸಂಸ್ಥೆಗೆ ಹಣಸಂಗ್ರಹಿಸುವಲ್ಲೂ ಯಶಸ್ವಿಯಾಗಿದ್ದಾರೆ. ಈಗ ಅವರು ತಮ್ಮ ತಂಡವನ್ನು ಹೆಚ್ಚಿಸಲು, ಹೊಸ ಕಾರ್ಯಕ್ರಮಗಳ ಆಯೋಜನೆಗಾಗಿ ಹೆಚ್ಚಿನ ಹಣ ಸಂಗ್ರಹಿಸಲು ಚಿಂತನೆ ನಡೆಸುತ್ತಿದ್ದಾರೆ.

ಗ್ರಾಮೀಣ-ನಗರ ಬೇಧವಿಲ್ಲದ, ಮಾನವ ಜ್ಞಾನ, ಕೌಶಲ್ಯ,ಸಂಪತ್ತು ಮತ್ತು ಅವಕಾಶಗಳ ಸಮಾನ ಹಂಚಿಕೆಯಾಗುವಂತಹ ದೇಶದಲ್ಲಿ ತಾವು ಬದುಕಬೇಕೆಂಬ ಕನಸು ಕಾಣುತ್ತಿದ್ದಾರೆ ಅಶ್ವಿತಾ. ಈ ಕನಸನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಬೋಧಿ ಟ್ರೀ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ.