ವ್ಯವಸ್ಥೆಯಲ್ಲಿರುವ ರಾಜಕೀಯಕ್ಕೊಂದು ಉದಾಹರಣೆ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ..!

ಟೀಮ್​ ವೈ.ಎಸ್​. ಕನ್ನಡ

ವ್ಯವಸ್ಥೆಯಲ್ಲಿರುವ ರಾಜಕೀಯಕ್ಕೊಂದು ಉದಾಹರಣೆ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ..!

Sunday May 15, 2016,

3 min Read

ಭ್ರಷ್ಟಾಚಾರ ಭಾರತದ ಅತೀ ದೊಡ್ಡ ಸಮಸ್ಯೆ. ಭಾರತದಲ್ಲಿ ಕ್ಯಾನ್ಸರ್ ನಂತೆ ಹಬ್ಬುತ್ತಿರುವ ಭ್ರಷ್ಟಾಚಾರ ಇಡೀ ದೇಶವನ್ನೇ ಅಸ್ಥಿರಗೊಳಿಸುತ್ತಿದೆ. ಆದ್ರೆ ಈ ಭಯಾನಕ ಕ್ಯಾನ್ಸರ್ ಮಾತ್ರ ಕೊನೆಗೊಳ್ಳುವ ಸಾಧ್ಯತೆಗಳು ಮಾತ್ರ ಗೋಚರಿಸುತ್ತಿಲ್ಲ. ಇದೀಗ ಇಡೀ ರಾಷ್ಟ್ರದಲ್ಲಿ ಭೂತದಂತೆ ಪ್ರತ್ಯಕ್ಷವಾಗಿರೋದು ಹಾಗೂ ವ್ಯಾಪಕ ಚರ್ಚೆಗಳಿಗೆ ಎಡೆಮಾಡಿಕೊಟ್ಟಿರೋದು ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ. ವಾಸ್ತವ ಅಂದ್ರೆ ಈ ಹಗರಣವೇನೂ ಹೊಸತಲ್ಲ. 2014ರ ಚುನಾವಣಾ ಸಂದರ್ಭದಲ್ಲಿ ಈ ಹಗರಣದ ಬಗ್ಗೆ ಯುಪಿಎನತ್ತ ಬೊಟ್ಟು ಮಾಡಿ ತೋರಿಸಲಾಗಿತ್ತು. ಕಾಂಗ್ರೆಸ್ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ವಿಐಪಿ ಹೆಲಿಕಾಪ್ಟರ್ ಗಳ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿದೆ ಅಂತ ಆರೋಪಿಸಲಾಗಿತ್ತು. ಇದು ಇಡೀ ದೇಶದ ಜನರಿಗೆ ಆಘಾತಕಾರಿಯಾಗಿದ್ದು, ಪ್ರಕರಣದ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆದವು. ಹೀಗಿದ್ರೂ ಈ ವಿಚಾರ ಚುನಾವಣೆಯ ಮುಕ್ತಾಯದೊಂದಿಗೇ ತಣ್ಣಗಾಗಿತ್ತು. ಆದ್ರೀಗ ಇಡೀ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದ್ದು ಇದಕ್ಕೆ ಕಾರಣ ಮಿಲನ್ ಕೋರ್ಟ್ ಕೊಟ್ಟ ತೀರ್ಪು. ಈ ತೀರ್ಪಿನೊಂದಿಗೆ ಇಡೀ ಪ್ರಕರಣ ಮತ್ತೆ ಕಾವು ಪಡೆದುಕೊಂಡಿದೆ. ಆದ್ರೆ ಆಡಳಿತದಲ್ಲಿರುವ ಬಿಜೆಪಿ ಕಾಂಗ್ರೆಸ್ ನತ್ತ ಬೊಟ್ಟು ಮಾಡಿದ್ರೆ ಕಾಂಗ್ರೆಸ್ ಆಡಳಿತ ರೂಢ ಪಕ್ಷದತ್ತ ಬೊಟ್ಟು ಮಾಡುತ್ತಿದೆ.

image


ದೇಶದಲ್ಲಿರುವ ಆಡಳಿತ ವ್ಯವಸ್ಥೆ ಹಾಗೂ ಕಾನೂನಿನಲ್ಲಿರುವ ದೋಷಗಳನ್ನ ಎತ್ತಿ ತೋರಿಸಲು ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣವೊಂದೇ ಉದಾಹರಣೆಯಾಗಿ ಸಾಕು. ದೇಶದ ವ್ಯವಸ್ಥೆಯಲ್ಲಿ ರಾಜಕೀಯ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೆ ಅನ್ನೋದಕ್ಕೂ ಈ ವಿವಿಐಪಿ ಹೆಲಿಕಾಪ್ಟರ್ ಹಗರಣವನ್ನೇ ಉದಾಹರಿಸಬಹುದು. ಆದ್ರೆ ಆಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್ ಮಾಡಿಕೊಳ್ಳಲು ಮುಂದಾಗಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾಲಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ. 2003ರಲ್ಲಿ ಈ ಡೀಲಿಂಗ್ ಕುದುರಿಸಲು ಸಾಕಷ್ಟು ಸರ್ಕಸ್ ಮಾಡಲಾಯ್ತು. ಆದ್ರೆ ಡೀಲ್ ಸಕ್ಸಸ್ ಫುಲ್ ಆಗಿದ್ದು ನಂತ್ರದ ವರ್ಷದಲ್ಲಿ ಯುಪಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತ್ರ. ಹಾಗಾಗಿ ಮಿಲಿಯನ್ ಮೊತ್ತದ ಯೂರೋಗಳನ್ನ ಹೆಲಿಕಾಪ್ಟರ್ ಗಳನ್ನ ಖರೀದಿಸಲು ಕೊಟ್ಟಿದ್ದು ಯುಪಿಎ ಸರ್ಕಾರ. ಆ ವೇಳೆ ಪ್ರಧಾನಿಯಾಗಿದ್ದಿದ್ದು ಮನಮೋಹನ್ ಸಿಂಗ್. ಯುಪಿಎ ಸರ್ಕಾರದ ಈ ಅಧಿಕಾರವಧಿಯಲ್ಲಿ ಎಲ್ಲಾ ಪೇಮೆಂಟ್ ಗಳನ್ನೂ ಮಾಡಿ ಮುಗಿಸಿಯಾಗಿತ್ತು. ಆದ್ರೆ ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಗಾಗಿದ್ದು ಹಾಗೂ ಎಲ್ಲರ ಚರ್ಚೆಯ ಕೇಂದ್ರಬಿಂದುವಾಗಿದ್ದು 2014ರ ಚುನಾವಣೆಯಲ್ಲಿ.

ಇನ್ನು ಪ್ರಕರಣದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಶುರುವಾಗ್ತಿದ್ದಂತೆ ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿತ್ತು. ಕಳೆದ ಪಂಚ ರಾಜ್ಯ ಚುನಾವಣೆ ವೇಳೆ ಇದನ್ನೇ ಬ್ರಹ್ಮಾತ್ರವಾಗಿ ಪ್ರಯೋಗಿಸಿದ್ದ ಎನ್ ಡಿಎ ರಾಜಕೀಯ ಗೇಮ್ ಪ್ಲಾನ್ ಮಾಡಿತ್ತು. ಇನ್ನೊಂದೆಡೆ ಕೋರ್ಟ್ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಅಹ್ಮದ್ ಪಟೇಲ್ ಹೆಸರನ್ನ ಉಲ್ಲೇಖಿಸಿತ್ತು. ಇದು ರಾಜಕೀಯವಾಗಿ ಇನ್ನಷ್ಟು ಬಳಸಿಕೊಳ್ಳಲು ಇಂಬು ನೀಡಿತ್ತು. ಬಿಜೆಪಿ ಕಾಂಗ್ರೆಸ್ ಪಾರ್ಟಿಯನ್ನ ಟಾರ್ಗೆಟ್ ಮಾಡಿ ಸಂಪೂರ್ಣ ಮೇಲುಗೈ ಸಾಧಿಸುವ ಲೆಕ್ಕಾಚಾರದಲ್ಲಿದೆ. ಆದ್ರೆ ಹಗರಣದಲ್ಲಿವ ರಾಜಕೀಯ ಒಳಸುಳಿಗಳನ್ನ ನೋಡ್ತಾ ಇದ್ರೆ ಸಾರ್ವಜನಿಕ ವಲಯದಲ್ಲಿ ಕೆಲವೊಂದು ಪ್ರಶ್ನೆಗಳು ಉದ್ಭವಿಸುವುದು ಖಚಿತ. ಮೊದಲನೆಯದಾಗಿ ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣಕ್ಕೆ ಜೀವ ಬರುತ್ತಿದ್ದಂತೆ ಇಟಲಿ ಸರ್ಕಾರ ಪ್ರಕರಣದ ಬಗ್ಗೆ ತನಿಖೆಗೆ ಮುಂದಾಗಿದೆ. ಇದ್ರ ಬಗ್ಗೆ ಕೋರ್ಟ್ ಕೂಡ ಆರಂಭಿಕ ಹಂತದ ತನಿಖೆ ನಡೆಸಿದ್ದು ಮುಂದಿನ ವಿಚಾರಣೆಗೂ ಸೂಚಿಸಿದೆ. ಜೊತೆಗೆ ಕೆಳ ಹಂತದ ನ್ಯಾಯಾಲಯ ಇಬ್ಬರು ಅಧಿಕಾರಿಗಳನ್ನ ತಪ್ಪಿತಸ್ಥರನ್ನಾಗಿ ಗುರುತಿಸಿರೋದು ಇಡೀ ಪ್ರಕರಣಕ್ಕೆ ತಿರುವು ನೀಡಿದೆ. ಆದ್ರೆ ಭಾರತದಲ್ಲಿ ಈ ಡೀಲ್ ಮುಗಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನ ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಸಾಕ್ಷಿ ದಾಖಲೆಗಳಿವೆ ಅಂತ ಹೇಳುವ ಮೋದಿ ಸರ್ಕಾರ ಕಳೆದೆರಡು ವರ್ಷಗಳಿಂದ ಬೇರೆ ಯಾವುದೇ ಹೆಜ್ಜೆ ಇಟ್ಟಿಲ್ಲ. ತನಿಖೆ ನಡೆಸುತ್ತಿರುವ ಸಿಬಿಐ ಕೂಡ ಸ್ಪಷ್ಟ ನಿರ್ಧಾರಕ್ಕೆ ಹಾಗೂ ಪುರಾವೆಗಳ ಪರಿಶೀಲನೆಗೆ ಮುಂದಾಗುತ್ತಿಲ್ಲ. ಇದಕ್ಕೆ ಸ್ಪಷ್ಟ ಕಾರಣಗಳನ್ನ ಭ್ರಷ್ಟಾಚಾರ ಸಹಿಸುವುದಿಲ್ಲ ಅಂತ ಹೇಳುತ್ತಲೇ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯೇ ನೀಡಬೇಕು ಅನ್ನೋದು ಸಾರ್ವಜನಿಕ ವಲಯದಲ್ಲಿರುವ ಸದ್ಯದ ಆಗ್ರಹ.

ಇದ್ರ ಜೊತೆಗೆ ಇಡೀ ಹೆಲಿಕಾಪ್ಟರ್ ಹಗರಣ ಬಗೆಹರಿಸಲು ಕಠಿಣವೆನಿಸುವ ಕೆಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಭ್ರಷ್ಟಚಾರ ನಿರ್ಮೂಲನೆ ವಿರುದ್ಧ ಹೊಂದಿರುವ ಬದ್ಧತೆಯನ್ನೇ ಇದು ಪ್ರಶ್ನೆಗೆ ಒಳಪಡಿಸುತ್ತಿದೆ.

ಪ್ರತಿಷ್ಠೆಯ ಹೆಸರಿನಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳು ನಿಜವಾಗಿಯೂ ಭ್ರಷ್ಟಚಾರ ವಿರೋಧಿ ನೀತಿಯ ಮೇಲೆ ಒಲವು ಹೊಂದಿದ್ಯಾ ಅನ್ನೋದು. ಆದ್ರೆ ವಾಸ್ತವದಲ್ಲಿ ಸಿಗೋ ಉತ್ತರವೂ ಇಲ್ಲ ಅನ್ನೋದೂ ಸ್ಪಷ್ಟ. ಕೇವಲ ಚುನಾವಣೆ ವೇಳೆ ಮಾತ್ರ ಧ್ವನಿ ಎತ್ತುವ ಬಿಜೆಪಿ ನಂತ್ರ ಮೌನ ವಹಿಸೋದು ಯಾಕೆ ಅನ್ನೋದು ಪ್ರಶ್ನೆ . ಇನ್ನು ಭ್ರಷ್ಟಾಚಾರಗಳ ಬಗ್ಗೆ ಮಾತನಾಡುವ ಪೊಲಿಟಿಕಲ್ ಪಾರ್ಟಿಗಳು ತಮ್ಮ ಪಕ್ಷದ ಬಗ್ಗೆ ಎಷ್ಟು ನಿಖರತೆ ಹೊಂದಿವೆ ಅನ್ನೋದಕ್ಕೂ ಉತ್ತರವಿಲ್ಲ. ಇನ್ನು ಪ್ರಕರಣಗಳ ಬಗ್ಗೆ ತನಿಖೆ ನಡೆಯುವ ತನಿಖಾ ಸಂಸ್ಥೆಗಳ ಮೇಲಾದ್ರೂ ಒತ್ತಡ ಹೇರಿ ಪ್ರಕರಣವನ್ನ ಮುಗಿಸುವ ಇರಾದೆಯಲ್ಲಿದೆಯಾ ಅನ್ನೋದಕ್ಕೂ ಸಿಗೋದು ನಿರಾಸೆಯ ಉತ್ತರವಷ್ಟೆ. ಹಾಗಾದ್ರೆ ಇದಕ್ಕೆ ಪರಿಹಾರವೇನು. ಇದಕ್ಕೆ ಯಾರನ್ನ ದೂರಬೇಕು ಅನ್ನೋ ಪ್ರಶ್ನೆಗಳು ಸಹಜವಾಗೇ ಮೂಡುತ್ತವೆ. ಯಾವುದೇ ಸರ್ಕಾರಗಳು ಬಂದ್ರೂ ನಿಗದಿತ ಸಮದ ಪರಿಮಿತಿಯಲ್ಲಿ ತನಿಖೆಗಳನ್ನ ಮುಗಿಸಲು ಮುತುವರ್ಜಿ ತೋರುವುದಿಲ್ಲ ಅನ್ನೋದು ಸತ್ಯ. ಹೀಗಿರುವಾಗ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಬಗ್ಗೆ ಸೂಕ್ತ ತನಿಖೆ ಸಾಧ್ಯನಾ. ಇದ್ರ ಬಗ್ಗೆ ಯಾರು ಮುತುವರ್ಜಿ ವಹಿಸಬೇಕು ಅನ್ನೋ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ.