ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

ಟೀಮ್​ ವೈ.ಎಸ್​.ಕನ್ನಡ

ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

Tuesday January 12, 2016,

3 min Read

ಟ್ರಾಫಿಕ್ ಸಮಸ್ಯೆ ಇಂದು ನಿನ್ನೆಯದಲ್ಲ. ದಶಕಗಳಿಂದ ಬೆಂಗಳೂರು ಟ್ರಾಫಿಕ್ ತವರೂರಿನಂತಾಗಿದೆ. ಇಲ್ಲಿ ಪ್ರತಿ ದಿನವೂ ಸಂಚಾರ ದಟ್ಟಣೆಯಲ್ಲಿ ಸಿಲುಕದೇ ಬಚಾವ್ ಆಗಲು ಸಾಧ್ಯವೇ ಇಲ್ಲ. ಎಂಟು ಗಂಟೆಗಳ ಕಾಲ ಆಫೀಸ್​ನಲ್ಲಿ ಕೆಲಸ ಮಾಡಿದ್ರೆ, 4 ಗಂಟೆಗಳ ಟ್ರಾಫಿಕ್​ನಲ್ಲೇ ಸಮಯ ಕಳೆಯುವವರು ಬೆಂಗಳೂರಿನಲ್ಲಿ ತುಂಬಾ ಜನ ಇದ್ದಾರೆ. ಆದರೆ ಇಲ್ಲೊಂದು ಮಹಿಳಾ ಗುಂಪು ಇಂತಹ ಸಮಸ್ಯೆಗೆ ಪರಿಹಾರ ಹುಡುಕಿಕೊಂಡಿದೆ.

image


ಬೆಂಗಳೂರು ಟ್ರಾಫಿಕ್​ಗೆ ಬರೀ ಬಯ್ಯೋ ಜಾಯಮಾನ ನಿಮ್ಮದಾದ್ರೆ, ಎಲ್ಲದಕ್ಕೂ ಸರ್ಕಾರವೇ ಹೊಣೆ ಅಂತ ದೂಷಿಸುವ ಬುದ್ಧಿ ನಿಮಗಿದ್ರೆ, ಖಂಡಿತ ಈ ಸ್ಟೋರಿ ಓದಿ. ಬಹುಷಃ ನಿಮ್ಮ ಸುತ್ತಮತ್ತಲಲ್ಲೇ ಸಮಸ್ಯೆಗೆ ಪರಿಹಾರ ಸಿಗಬಹುದು. ಯಾಕಂದ್ರೆ ನಾವು ನಿಮಗೆ ಪರಿಚಯಿಸಲು ಹೊರಟಿರುವ ಮಹಿಳೆಯರು ಎಲ್ಲರಿಗಿಂತ ವಿಭಿನ್ನ. ಅವರ ಒಂದು ಪ್ರಯತ್ನದಿಂದಾಗಿ ಇಂದು ದೇವರಬೀಸನಹಳ್ಳಿ ಜನ ನಿಟ್ಟುಸಿರು ಬಿಡುತ್ತಿದ್ದಾರೆ..

ದೇವರಬೀಸನಹಳ್ಳಿ ಜನರಿಗೆ ಸಖತ್ ಆಗಿ ಕಾಡಿದ್ದು ಟ್ರಾಫಿಕ್ ಸಮಸ್ಯೆ. ಶಾಲೆಗೆ ಹೋಗುವ ಮಕ್ಕಳು ಅದೆಷ್ಟೋ ಸಲ ಕ್ಲಾಸ್​ ತಪ್ಪಿ ಹೋಗ್ತಾ ಇತ್ತು. ಕಚೇರಿಗೆ ಹೋಗುವವರು ಗಂಟೆ ಮುಂಚೆ ಮನೆ ಬೀಡಬೇಕಾಗಿತ್ತು. ಸಾಯಂಕಾಲ ಮನೆಗೆ ಲೇಟ್ ಆಗಿ ಬರುವುದು ಮಾಮೂಲಿ ಆಗಿಬಿಟ್ಟಿತ್ತು. ಟ್ರಾಫಿಕ್ ಸಮಸ್ಯೆಯಿಂದಾಗಿ ಸಮಯ ವ್ಯರ್ಥದ ಜೊತೆಗೆ ವಾಯುಮಾಲಿನ್ಯ ಕೂಡ ಆಗುತ್ತಿತ್ತು. ಇದರೊಂದಿಗೆ ಇಂಧನ ವ್ಯಯವಾಗುತ್ತಿತ್ತು. ಶಬ್ಧ ಮಾಲಿನ್ಯದಿಂದಾಗಿ ವಯಸ್ಸಾದವರಿಗೂ ಸಮಸ್ಯೆಯಾಗುತ್ತಿತ್ತು. ಇದಕ್ಕೆಲ್ಲ ಕಾರಣ ಹದಗೆಟ್ಟ ರಸ್ತೆ. ಟ್ರಾಫಿಕ್ ಪೋಲೀಸರ ಕೊರತೆ.

ದೇವರಬೀಸನಹಳ್ಳಿ ಸರ್ಕಲ್​ನಲ್ಲಿ ಟ್ರಾಫಿಕ್​ ನಿಯಂತ್ರಿಸಬೇಕೆಂದು ಅಲ್ಲಿನ ಮಹಿಳೆಯರು ಗಂಭೀರವಾಗಿ ಚಿಂತಿಸಿದ್ರು. ಸಾವಿತ್ರಿ ರಂಗನ್ ಮತ್ತು ಸೌಮ್ಯ ಎಂಬುವವರು ಎಲ್ಲರೂ ಒಟ್ಟಾಗಿ ಏನಾದ್ರೂ ಮಾಡಬೇಕು ಎಂದು ಯೋಚಿಸುತ್ತಿರುವಾಗಲೆ ಒಂದು ಫೋರಮ್ ಸಿದ್ಧವಾಯ್ತು. ಮಹಿಳೆಯರು ಪೀಕ್ ಸಮಯದಲ್ಲಿ ಟ್ರಾಫಿಕ್​ ಪೊಲೀಸ್ ಕೆಲಸ ಮಾಡಲು ಮುಂದಾದ್ರು. "ಆಗ ವಾಟ್ಸ್​ಆ್ಯಪ್​ನಲ್ಲಿ ಗ್ರೂಪ್ ಮಾಡಿಕೊಂಡು ಎಲ್ಲರೂ ಒಂದೊಂದು ಗಂಟೆ ಪೀಕ್​ ಅವರ್​ನಲ್ಲಿ ಬಂದು ಟ್ರಾಫಿಕ್ ನಿಯಂತ್ರಣ ಮಾಡಬೇಕು ಎಂದು ಯೋಜನೆ ರೂಪಿಸಿದ್ವಿ'' ಎನ್ನುತ್ತಾರೆ ಸೌಮ್ಯ.

image


ಆಗ ಅವರು ಟ್ರಾಫಿಕ್ ಪೋಲೀಸರು ವಾಹನಗಳನ್ನು ನಿಯಂತ್ರಿಸಲು ಅನುಸರಿಸುವ ನಿಯಮಗಳನ್ನು ಕಲಿತ್ರು. ತಾವೇ ಸೂಚನಾ ಫಲಕ ಹಿಡಿದುಕೊಂಡ್ರು. ಆರು ತಿಂಗಳ ಹಿಂದೆ ಶುರುವಾದ ಈ ಸಣ್ಣ ಪ್ರಯತ್ನ ಇಂದು ಹಲವು ಜನರ ನೆಮ್ಮದಿಗೆ ಕಾರಣವಾಗಿದೆ. ಗಂಟೆಗಳ ಕಾಲ ಟ್ರಾಫಿಕ್​ನಲ್ಲಿ ಒದ್ದಾಡುತ್ತಿದ್ದವರೆಲ್ಲ ಈಗ 10 ನಿಮಿಷದಲ್ಲೇ ಸುಗಮವಾಗಿ ಬಂದು ಮನೆಗೆ ತಲುಪುತ್ತಾರೆ. ಇದಕ್ಕೆಲ್ಲ ಕಾರಣ ಈ ಟ್ರಾಫಿಕ್ ಫೋರಮ್.

ಇಂದು ಈ ಫೋರಮ್​ನಲ್ಲಿ ಹಲವು ಗೃಹಿಣಿಯರಿದ್ದಾರೆ. ಕೆಲಸ ಮಾಡುವ ಮಹಿಳೆಯರೂ ಇದ್ದಾರೆ. ಅವರದ್ದೇ ಆದ ವಾಟ್ಸ್​ಆ್ಯಪ್​ ಗುಂಪು ಮಾಡಿಕೊಂಡು ಇಲ್ಲಿ, ಎಲ್ಲರೂ ಒಂದೊಂದು ಗಂಟೆ ಟ್ರಾಫಿಕ್ ನಿಯಂತ್ರಿಸುತ್ತಾರೆ. ಗ್ರೂಪ್ನಲ್ಲೇ ಯಾರು ಯಾವ ಸಮಯದಲ್ಲಿ ಹೋಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಹಾಗಾಗಿ ಇದು ಯಾರಿಗೂ ಹೊರೆಯಾಗಿಲ್ಲ. ಮೊದ-ಮೊದಲು ಇವರ ಪ್ರಯತ್ನಕ್ಕೆ ನಗುತ್ತಿದ್ದ ಜನರು ಇಂದು ಇವರನ್ನು ಹೊಗಳುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ತಲೆಬಾಗಿದ್ದಾರೆ. ಇವರಿಂದಾಗಿಯೇ ಈ ಭಾಗದ ಜನರ ಮೊಗದಲ್ಲಿ ನಗು ಮೂಡಿದೆ.

image


ಇವರು ಸರ್ಕಾರದಿಂದ ಏನನ್ನೂ ಕೇಳಲಿಲ್ಲ. ಹಾಗಂತ ಕೆಲಸವಿಲ್ಲದೆ ಫ್ರೀಯಾಗಿರೊಲ್ಲ. ಬ್ಯುಸಿ ಲೈಪ್​ ನಡುವೆ ಬಿಡುವು ಮಾಡಿಕೊಂಡು ತಮ್ಮ ಏರಿಯಾದ ಸರ್ಕಲ್​ನಲ್ಲಿ ಗಂಟೆಗೆ ಒಬ್ಬರಂತೆ ಬೆಳಗ್ಗೆಯಿಂದ ರಾತ್ರಿಯವರೆಗೆ ಟ್ರಾಫಿಕ್ ನಿಯಂತ್ರಣ ಮಾಡ್ತಾರೆ . ಬೆಳಂದೂರ್ ಹತ್ತಿರ ಇರುವ ದೇವರಬೀಸನಹಳ್ಳಿಯ ಸರ್ಕಲ್​ನಲ್ಲಿ ಈ ಅಪರೂಪದ ಪ್ರಯತ್ನ ನಡೆಯುತ್ತಿರೋದು ನಿಜವಾಗಿಯೂ ಎಲ್ಲರಿಗೂ ಪ್ರೇರಣೆಯಾಗಿದೆ. ಹಾಗಾಗಿ ಅನೇಕರು ತಮ್ಮೊಂದಿಗೆ ಕೈಜೋಡಿಸುತ್ತಿರುವುದಾಗಿ ಈ ಫೋರಮ್​ನ ಸಕ್ರೀಯ ಸದಸ್ಯ ಆಟೋ ಚಾಲಕರಾದ ಮೊಹ್ಮದ್ ರಫೀಕ್ ಹೇಳುತ್ತಾರೆ.

ಮೊದಲು ಇಲ್ಲಿ ಬಾಡಿಗೆ ಬಂದರೆ ಹೋಗಿ ಬರಲು ಗಂಟೆಗಟ್ಟಲೆ ಸಮಯ ಬೇಕಾಗ್ತಿತ್ತು. ಹೆಚ್ಚು ಬಾಡಿಗೆ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಬಾಡಿಗೆ ಸಿಕ್ಕರೂ ಅರ್ಧ ಹಣ ಟ್ರಾಫಿಕ್ನಲ್ಲೇ ಖಾಲಿಯಾಗುತ್ತಿತ್ತು. ದುಡಿದ ಹಣ ಕೂಡ ನಮಗೆ ಸಿಗುತ್ತಿರಲಿಲ್ಲ. ಆದರೆ ಈಗ ನಮ್ಮ ಫೋರಮ್​ನವರು ಮಾಡುತ್ತಿರುವ ಕಾರ್ಯದಿಂದ ಇಂಧನ ಉಳಿಯುತ್ತಿದೆ. ವಾಯುಮಾಲಿನ್ಯ, ಶಬ್ಧ ಮಾಲಿನ್ಯ ಕಡಿಮೆ ಮಾಡುವುದರ ಜೊತೆಗೆ ಸಮಯದ ಉಳಿತಾಯವಾಗುತ್ತಿದೆ. ಹಾಗಾಗಿ ನಮ್ಮ ಕುಟುಂಬದವರಿಗೆ ನಾವು ಸಮಯ ನೀಡಲು ಸಾಧ್ಯವಾಗುತ್ತಿದೆ ಇದರಿಂದ ಎಲ್ಲರೂ ಖೂಷಿಯಾಗಿದ್ದಾರೆ ಎನ್ನುತ್ತಾರೆ ಅವರು.

image


"ದೇವರಬೀಸನಹಳ್ಳಿ ಟ್ರಾಫಿಕ್ ಫೋರಮ್ ಅನ್ನೋ ವಾಟ್ಸ್​ಆ್ಯಪ್​ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಅದರಲ್ಲಿ ಯಾರು ಫ್ರೀಯಾಗಿರ್ತಾರೆ ಅಂತ ತಿಳಿದು ಟ್ರಾಫಿಕ್ ನಿಯಂತ್ರಣಕ್ಕೆ ಒಬ್ಬರಾದ ಮೇಲೆ ಒಬ್ಬರು ಬರ್ತಾರೆ. ಇವರ ಏರಿಯಾದ ಟ್ರಾಫಿಕ್ ಕಮ್ಮಿಯಾಗಿದೆ. ಅರ್ಧಗಂಟೆಯ ಪ್ರಯಾಣ 10ನಿಮಿಷಕ್ಕೆ ಇಳಿದಿದೆ. ಈ ಕೆಲಸ ನಮಗೂ ನಮ್ಮ ಏರಿಯಾದ ಜನಕ್ಕೂ ಖುಷಿಕೊಟ್ಟಿದೆ'' ಅಂತಾರೆ ಸ್ವಇಚ್ಛೆಯಿಂದ ಟ್ರಾಫಿಕ್ ನಿಯಂತ್ರಣಕ್ಕಿಳಿದಿರುವ ಸಾವಿತ್ರಿ ರಂಗನ್.

ಸದ್ಯ ಇವರ ಕೆಲಸವನ್ನು ನೋಡಿ ಇವರ ಗ್ರೂಪ್​ಗೆ ಹಲವರು ಸ್ವಯಂ ಪ್ರೇರಣೆಯಿಂದ ಬಂದು ಸೇರಿಕೊಳ್ಳುತ್ತಿದ್ದಾರೆ. ಚಿಕ್ಕಮಕ್ಕಳು ಸಹ ಆಸಕ್ತಿ ತೋರಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಇಲ್ಲಿ ಸೇವೆ ಮಾಡುವ ಅವಕಾಶ ನೀಡಿಲ್ಲ. ಅವರಿಗೆ ಚೆನ್ನಾಗಿ ಓದಿ ಎಂದು ಕಿವಿಮಾತು ಹೇಳುವ ಈ ಫೋರಮ್ ಸದಸ್ಯರು, ಈ ಕಾರ್ಯದಿಂದ ತುಂಬ ನೆಮ್ಮದಿಯಾಗಿದ್ದಾರೆ. ಸದ್ಯ ಹಲವು ಪುರುಷರು ಸಹ ಇವರ ಜೊತೆ ಕೈಜೋಡಿಸಿದ್ದು, ಸಾಯಂಕಾಲ 5 ರಿಂದ 9ರವರೆಗೆ ಮತ್ತು ಬೆಳ್ಳಂಬೆಳಗ್ಗೆ ಟ್ರಾಫಿಕ್ ನಿಯಂತ್ರಿಸುತ್ತಿದ್ದಾರೆ. ಇವರ ಈ ಒಂದು ಸಣ್ಣ ಪ್ರಯತ್ನದಿಂದ ಉಳಿಯುತ್ತಿರುವ ಎರಡು ಮೂರು ಗಂಟೆ ಸಮಯವನ್ನು ಎಲ್ಲರೂ ತಮ್ಮ ಕುಟುಂಬದೊಂದಿಗೆ ಸಾರ್ಥಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಫೋರಮ್ ಹಲವರಿಗೆ ಪ್ರೇರಣೆಯಾಗಿದೆ.

image


ನಮ್ಮ ಸುತ್ತಮತ್ತಲಿನ ಸಮಸ್ಯೆಗಳನ್ನ ನೊಡಿಕೊಂಡು ಸುಮ್ಮನಿರೊದು ಬಿಟ್ಟು ನಾವೇ ಪರಿಹಾರ ಕಂಡುಕೊಂಡ್ರೇ ಸುಖೀ, ನೆಮ್ಮದಿಯ ಜೀವನ ನಮ್ಮದಾಗುತ್ತದೆ. ನಮ್ಮ ಸಮಸ್ಯೆಗಳ ವಿರುದ್ಧ ನಾವೇ ಎದ್ದು ನಿಂತು, ಜವಾಬ್ಧಾರಿ ಹೊತ್ತು, ಪರಿಹಾರದ ಕಡೆಗೆ ಸಾಗಿದರೆ ಯಶಸ್ಸು ನಿಶ್ಚಿತ. ಇವರ ಪ್ರಯತ್ನ ಹಲವರಿಗೆ ಪ್ರೇರಣೆಯಾದಲ್ಲಿ, ಪೋಲೀಸರ ಹೊರೆ ಕಮ್ಮಿಯಾಗಲಿದೆ. ಭಾರತ ಟ್ರಾಫಿಕ್ ಮುಕ್ತ ದೇಶವಾಗಲಿದೆ. ಒಂದು ಸಣ್ಣ ಪ್ರಯತ್ನ ನಿಮ್ಮಿಂದಲೂ ಆದರೆ ಮಾತ್ರ...