`ಯಾವಾಗ ಬೇಕಾದ್ರೂ ಎಲ್ಲಿ ಬೇಕಾದ್ರೂ' ಟಿವಿ ನೋಡಿ... Yupp TV ಒಡೆಯ ಉದಯ್ ರೆಡ್ಡಿ ಯಶೋಗಾಥೆ

ಟೀಮ್​ ವೈ.ಎಸ್​. ಕನ್ನಡ

`ಯಾವಾಗ ಬೇಕಾದ್ರೂ ಎಲ್ಲಿ ಬೇಕಾದ್ರೂ' ಟಿವಿ ನೋಡಿ... 
Yupp TV ಒಡೆಯ ಉದಯ್ ರೆಡ್ಡಿ ಯಶೋಗಾಥೆ

Friday January 01, 2016,

5 min Read

ಟೆಲಿವಿಷನ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದವರು ಉದಯ್ ರೆಡ್ಡಿ. Yupp TV ಸಂಸ್ಥಾಪಕ ಹಾಗೂ ಸಿಇಓ ಉದಯ್ ರೆಡ್ಡಿ ಒಬ್ಬ ಯಶಸ್ವಿ ಉದ್ಯಮಿ. ಪರಿಶ್ರಮದಿಂದಲೇ ಯಶಸ್ಸಿನ ಉತ್ತುಂಗ ತಲುಪಿದ ಸಾಹಸಿ. ತಂತ್ರಜ್ಞಾನದ ನೆರವಿನಿಂದ ಆರೋಗ್ಯ ಹಾಗೂ ಶಿಕ್ಷಣ ಸೇವೆಯನ್ನು ಭಾರತದ ಹಳ್ಳಿ ಹಳ್ಳಿಗೂ ತಲುಪಿಸುವುದು ಉದಯ್ ರೆಡ್ಡಿ ಅವರ ಕನಸು. ಜಗತ್ತಿನಲ್ಲಿ ಎರಡು ಬಗೆಯ ಜನರಿರ್ತಾರೆ, ಮೊದಲನೆಯವರು ಹಣವನ್ನು ಹುಡುಕಿಕೊಂಡಿ ಹೋಗ್ತಾರೆ, ಎರಡನೆಯವರನ್ನು ಹಣವೇ ಅರಸಿ ಬರುತ್ತದೆ. ಸಹಜವಾಗಿಯೇ ಎರಡನೆಯವರ ಸಾಲಿಗೆ ಸೇರುವ ಎಲ್ಲರ ಗುರಿ ಕೆಲಸ ಮಾತ್ರ, ಅದೇ ಪ್ರಯತ್ನದಲ್ಲಿ ಅವರು ಜಗತ್ತನ್ನೇ ಗೆಲ್ಲುತ್ತಾರೆ. ಅವರ ಹಾದಿಯಲ್ಲಿ ಅಡ್ಡಿ-ಆತಂಕಗಳು, ಅಪಾಯಗಳು ಹೆಚ್ಚು. ಆದ್ರೆ ಹಿಂತಿರುಗಿ ನೋಡದೇ ನಿರಂತರವಾಗಿ ಸಾಗುವುದರಿಂದ ಅಂದುಕೊಂಡಿದ್ದನ್ನು ಅವರು ಸಾಧಿಸುತ್ತಾರೆ. ಎಷ್ಟೇ ಸವಾಲುಗಳು ಎದುರಾದ್ರೂ ಗುರಿ ನಿಮ್ಮಿಂದ ದೂರವಾಗಬಾರದು ಅಷ್ಟೆ. ಙuಠಿಠಿ ಖಿಗಿಯ ಸಂಸ್ಥಾಪಕ ಹಾಗೂ ಸಿಇಓ ಉದಯ್ ರೆಡ್ಡಿ ಕೂಡ ಇಂತಹ ಸಾಧಕರಲ್ಲೊಬ್ಬರು. ಅವರು ತಂತ್ರಜ್ಞಾನ ಮತ್ತು ಕೈಗಾರಿಕೆಯಲ್ಲಿ ಸಾಧನೆಯ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. `ಎಲ್ಲಿಯಾದ್ರೂ, ಯಾವಾಗಲಾದ್ರೂ ಟಿವಿ' ಎಂಬ ಮಾತನ್ನು ಉದಯ್ ರೆಡ್ಡಿ ಸಾಕಾರಗೊಳಿಸಿದ್ದಾರೆ. ಇಂಟರ್ನೆಟ್ ಸಹಾಯದಿಂದ ಯಾವಾಗ ಬೇಕಾದ್ರೂ, ಎಲ್ಲಿಯಾದ್ರೂ ಟಿವಿ ನೋಡುವಂತಹ ಅವಕಾಶವನ್ನು ಉದಯ್ ರೆಡ್ಡಿ ಕಲ್ಪಿಸಿಕೊಟ್ಟಿದ್ದಾರೆ.

image


ತೆಲಂಗಾಣ ಹಾಗೂ ಆಂಧ್ರಪ್ರದೇಶದ ರಾಜಧಾನಿ ಹೈದ್ರಾಬಾದ್‍ನಿಂದ 140 ಕಿಲೋ ಮೀಟರ್ ದೂರದಲ್ಲಿ ಕಾಜಿಪೇಟ್, ಹನಮ್‍ಕೊಂಡಾ ಮತ್ತು ವರಂಗಲ್ ಎಂಬ ಮೂರು ಪುಟ್ಟ ಪಟ್ಟಣಗಳಿವೆ. ಹನಮ್‍ಕೊಂಡಾದ ರೈತ ಕುಟುಂಬವೊಂದರಲ್ಲಿ ಜನಿಸಿದವರು ಉದಯ್ ರೆಡ್ಡಿ. ಚಿಕ್ಕದಾದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರು, ನಾಗರೀಕ ಸೇವೆಗೆ ಸೇರಲು ಬಯಸಿದ್ರು. ಐಎಎಸ್ ಮಾಡಿ ಕಲೆಕ್ಟರ್ ಆಗಿ ತಮ್ಮ ಊರಿನ ಜೊತೆಗೆ ಭಾರತದ ಇತರ ಗ್ರಾಮಗಳನ್ನೂ ಅಭಿವೃದ್ಧಿಪಡಿಸಬೇಕೆಂದು ಪಣ ತೊಟ್ಟಿದ್ರು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಅವರ ಕನಸಾಗಿತ್ತು. ಹೀಗೆ ಕನಸಿನ ಮೂಟೆ ಹೊತ್ತು ಉದಯ್ ರೆಡ್ಡಿ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿದ್ರು. ಸಿವಿಲ್ ಸರ್ವೀಸ್ ಸೇರಬೇಕೆಂಬ ಹಂಬಲದಲ್ಲೇ ದಿಲ್ಲಿ ಕಾಲೇಜ್ ಆಫ್ ಎಂಜಿನಿಯರಿಂಗ್‍ನಲ್ಲಿ ಪ್ರವೇಶ ಪಡೆದ ಉದಯ್, ತಮ್ಮ ಕನಸನ್ನು ನನಸಾಗಿಸಲು ಪಟ್ಟ ಪ್ರಯತ್ನಗಳ ಬಗ್ಗೆ `ಯುವರ್‍ಸ್ಟೋರಿ' ಜೊತೆ ಮಾತನಾಡಿದ್ದಾರೆ. ``ಹನಮ್‍ಕೊಂಡಾದ ಸರ್ಕಾರಿ ಕಾಲೇಜಿನಲ್ಲಿ ಓದ್ತಾ ಇದ್ದಾಗ್ಲೇ ಸಿವಿಲ್ ಸರ್ವೀಸ್ ಸೇರಬೇಕೆಂದು ನಾನು ನಿರ್ಧರಿಸಿದ್ದೆ. ನನ್ನ ಮನೆಯವರದ್ದು ಕೂಡ ಇದೇ ಕನಸಾಗಿತ್ತು. ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಬಗ್ಗೆ ನನಗೆ ಅರಿವಿತ್ತು, ಅವರಿಗಾಗಿ ಏನನ್ನಾದ್ರೂ ಮಾಡಬೇಕೆಂಬ ಆಸೆಯಿತ್ತು. ಆದ್ರೆ ದಿಲ್ಲಿ ಕಾಲೇಜ್ ಆಪ್ ಎಂಜಿನಿಯರಿಂಗ್‍ನಲ್ಲಿ `ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್'ನಲ್ಲಿ ಪದವಿ ಪಡೆದ ನಾನು ಕ್ಯಾಂಪಸ್ ಸಂದರ್ಶದಲ್ಲಿ, ಸೀಮಸ್ಸ್ ಕಂಪನಿಗೆ ಆಯ್ಕೆಯಾಗಿದ್ದೆ. ಒಂದು ವರ್ಷ ಕೆಲಸ ಮಾಡಿ ನಂತರ ನಾಗರೀಕ ಸೇವೆ ಸೇರೋಣ ಎಂದುಕೊಂಡಿದ್ದೆ. ಆ ಸಮಯದಲ್ಲಿ ಭಾರತದಲ್ಲಿ ಹೊಸ ಹೊಸ ಅವಕಾಶಗಳ ಬಾಗಿಲು ತೆರೆದಿತ್ತು, ಆದ್ರೆ ನನ್ನ ಮನೆಯವರ ಮನಸ್ಸಿನಲ್ಲಿ ನಾನು ಸಿವಿಲ್ ಸರ್ವೀಸ್ ಮಾಡಲೇಬೇಕೆಂಬ ಆಸೆ ಗಟ್ಟಿಯಾಗಿತ್ತು. ಸೀಮನ್ಸ್ ಕಂಪನಿ ಸೇರಿದ್ದ ನನಗೆ ಭಾರತದ ವಿವಿಧ ನಗರಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಂತರ ನಾರ್ಟೆಲ್‍ನಲ್ಲಿ ಕರ್ತವ್ಯ ನಿರ್ವಹಿಸಿದ ನಾನು ದೂರಸಂಪರ್ಕ ವಲಯಕ್ಕೆ ಸೀಮಿತವಾಗಿ ಹೋದೆ'' ಎನ್ನುತ್ತಾರೆ ಉದಯ್.

ಉದಯ್ ಅವರ ಬದುಕಿನಲ್ಲಿ ಅದು ಮಹತ್ವದ ಘಟ್ಟವಾಗಿತ್ತು. ಯಾಕಂದ್ರೆ ಅವರು ನಾರ್ಟೆಲ್‍ನಂತಹ ಜನಪ್ರಿಯ ಕಂಪನಿಯನ್ನು ಸೇರಿದ್ದರು. ಕೆಲ್ಲೊಗ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಉದಯ್ ಎಂಬಿಎ ಕೂಡ ಮುಗಿಸಿದ್ರು. 1995ರ ನಂತರದ ಸಮಯವಂತೂ ಅವರ ಪಾಲಿಗೆ ಸುವರ್ಣಯುಗವಿದ್ದಂತೆ. ಅದು ಕ್ರಾಂತಿಕಾರಿ ಬದಲಾವಣೆಯ ಆರಂಭವಾಗಿತ್ತು, ವೈರ್‍ಲೆಸ್ ನೆಟ್‍ವರ್ಕ್ ತಂತ್ರಜ್ಞಾನ ಲಗ್ಗೆ ಇಟ್ಟಿತ್ತು. ಆಗ ಸಿಂಗಾಪುರ, ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೆಲಸ ಮಾಡುವ ಸದವಕಾಶ ಉದಯ್ ರೆಡ್ಡಿ ಅವರಿಗೆ ಸಿಕ್ಕಿತ್ತು. ಸೇಲ್ಸ್ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದ ಉದಯ್, ಲ್ಯಾಟಿನ್ ಅಮೆರಿಕದ ಮಾರುಕಟ್ಟೆ ಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯ್ತು. ಪ್ರತಿ ವರ್ಷ ಹೊಸ ದೇಶ, ಹೊಸ ಕೆಲಸ, ಹೊಸ ಅನುಭವದೊಂದಿಗೆ ಅವರು ನಾರ್ಟೆಲ್‍ನಲ್ಲಿ 11 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ರು. ಉನ್ನತ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ನನಗೆ ಸಿಕ್ಕ ಅತ್ಯುತ್ತಮ ಅವಕಾಶ ಇದು ಎನ್ನುತ್ತಾರೆ ಉದಯ್.

ಒಬ್ಬ ಉದ್ಯಮಶೀಲ ವ್ಯಕ್ತಿತ್ವದವರನ್ನು ಕೈತುಂಬಾ ಸಂಬಳ ಬರುವ ಕೆಲಸ ಕೂಡ ಹಿಡಿದಿಟ್ಟುಕೊಳ್ಳಲಾರದು. ತಮ್ಮದೇ ಆದ ಸಾಮ್ರಾಜ್ಯವೊಂದನ್ನು ಕಟ್ಟುವ ಬಯಕೆ ಸದಾ ಅವರಲ್ಲಿ ಹಸಿರಾಗಿರುತ್ತದೆ. ಉದಯ್ ಅವರ ಬದುಕಲ್ಲೂ ಆಗಿದ್ದು ಇದೇ. 2006ರಲ್ಲಿ ಅವರು ಙuಠಿಠಿ ಖಿಗಿ ಯನ್ನು ಆರಂಭಿಸಿದ್ರು. ವಿಶೇಷ ಅಂದ್ರೆ ಈ ಕಂಪನಿಯನ್ನು ಅವರು ಶುರು ಮಾಡಿದ್ದು ಅಮೆರಿಕದಲ್ಲಿ. ಈ ಕ್ಷೇತ್ರ ಅವರಿಗೆ ಹೊಸದೇನಲ್ಲ, ಆದ್ರೂ ಅಮೆರಿಕದಲ್ಲಿ ಆಗಷ್ಟೇ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳಾಗ್ತಾ ಇತ್ತು. ಉದ್ಯಮ ಶುರು ಮಾಡುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕೆ ಕೇವಲ ಬಂಡವಾಳ ಮಾತ್ರವಲ್ಲ, ನಿರ್ವಹಣಾ ಕೌಶಲ್ಯ, ಹೊಸ ಹೊಸ ಪರಿಕಲ್ಪನೆಗಳು, ಪರಿಪಕ್ವವಾದ ಮನಸ್ಸು ಇರಬೇಕು. ಆ ಸಮಯದಲ್ಲಿ ಉದಯ್ ಕೂಡ ಸಾಕಷ್ಟು ಕಷ್ಟಗಳನ್ನು, ಸವಾಲುಗಳನ್ನು ಎದುರಿಸಿದ್ದಾರೆ.

ಉದಯ್ ಸ್ವಂತ ಕಂಪನಿಯ ಕೆಲಸ ಆರಂಭಿಸಿದಾಗ ಬ್ರಾಡ್‍ಬ್ಯಾಂಡ್ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಸ್ಮಾರ್ಟ್ ಟಿವಿ ಹಾಗೂ ಸ್ಮಾರ್ಟ್ ಫೋನ್ ಕೂಡ ಜನಪ್ರಿಯವಾಗಿರಲಿಲ್ಲ. ವಿಶೇಷ ಅಂದ್ರೆ ತಮ್ಮ ಸಂಸ್ಥೆಗಾಗಿ ಉದಯ್ ಯಾರಿಂದ್ಲೂ ಹಣಕಾಸಿನ ನೆರವು ಪಡೆದಿರಲಿಲ್ಲ, ತಾವು ಕಷ್ಟಪಟ್ಟು ಕೂಡಿಟ್ಟ ಹಣದಿಂದ್ಲೇ ಉದ್ಯಮ ಆರಂಭಿಸಿದ್ರು. ಜನರು ಯಾವಾಗ ಬೇಕಾದ್ರೂ, ಎಲ್ಲಿಯಾದ್ರೂ ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಮೂಲಕ ಟಿವಿ ನೇರಪ್ರಸಾರ ನೋಡುವಂತಾಗಬೇಕು ಅನ್ನೋದು ಅವರ ಆಸೆಯಾಗಿತ್ತು. ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗುವ ಸಂದರ್ಭದಲ್ಲಿ ಬಿಡುವಿಲ್ಲ ಅಂತಾದ್ರೆ ಅದನ್ಯಾಕೆ ನಮಗೆ ಅನುಕೂಲವಾದಾಗ ನೋಡುವಂತಾಗಬಾರದು ಅನ್ನೋ ಆಲೋಚನೆ ಅವರಲ್ಲಿತ್ತು. ಪರಿಣಾಮ `ಲೈವ್ ಟಿವಿ, ಕ್ಯಾಚ್-ಅಪ್ ಟಿವಿ' ಜನ್ಮ ತಳೆದಿತ್ತು.

ಬೇರೆ ಬೇರೆ ರಾಷ್ಟ್ರಗಳು ಮಾತ್ರವಲ್ಲ ಭಾರತದ ಹಳ್ಳಿ ಹಳ್ಳಿಗಳಿಗೂ ಮನರಂಜನೆ ವಾಹಿನಿಯೊಂದನ್ನು ಒದಗಿಸಬೇಕೆಂಬ ಉದಯ್ ಅವರ ಆಸೆಯೇನೋ ಕೈಗೂಡಿತ್ತು. ಆದ್ರೆ ಅವರ ಈ ಉದ್ಯಮ ಪಯಣ, ಕಲ್ಲು-ಮುಳ್ಳಿನ ಹಾದಿಯಾಗಿತ್ತು. ಅಮೆರಿಕದಲ್ಲಿ ಉದ್ಯಮಕ್ಕೆ ಅಡಿಪಾಯ ಹಾಕಿದಾಗ ವ್ಯಾಪಾರದಲ್ಲಿ ಏಕಸ್ವಾಮ್ಯತೆಯಿತ್ತು. ಉದಯ್ ಅವರ ಜೊತೆಗಿದ್ದ ಕಂಪನಿಯನ್ನು, ಪ್ರತಿಸ್ಪರ್ಧಿಗಳು ಸೆಳೆದುಕೊಂಡುಬಿಟ್ಟಿದ್ರು. ಆದ್ರೆ ದಿಢೀರನೆ ಅವರು ನಮ್ಮೊಂದಿಗಿನ ಬಾಂಧವ್ಯ ಕಡಿದುಕೊಳ್ಳದೇ ಇದ್ದಿದ್ದು ಒಳ್ಳೆಯದೇ ಆಯ್ತು, ಕೊಂಚ ಕಾಲಾವಕಾಶ ಕೊಟ್ಟಿದ್ರಿಂದ ನಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಸಾಧ್ಯವಾಯ್ತು ಎನ್ನುತ್ತಾರೆ ಉದಯ್. ಕೊನೆಗೆ ಹೈದ್ರಾಬಾದ್‍ನಲ್ಲಿ ಪಾಲುದಾರಿಕೆ ಮೂಲಕ ಉದಯ್ ಕಾರ್ಯಾರಂಭ ಮಾಡಿದ್ರು. ಅಷ್ಟರಲ್ಲಿ, ಕೂಡಿಟ್ಟ ಹಣವನ್ನೆಲ್ಲ ಉದಯ್ ಖರ್ಚು ಮಾಡಿದ್ರು, ಈ ಹೊಸ ಉದ್ಯಮದ ಬಗ್ಗೆ ಜನರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಹಾಗಾಗಿ ಆದಾಯದ ಲೆಕ್ಕದಲ್ಲಿ ನೋಡಿದ್ರೆ ಅವರಿಗೆ ಅಷ್ಟೇನೂ ಯಶಸ್ಸು ಸಿಕ್ಕಿರಲಿಲ್ಲ. 2010ರಲ್ಲಿ ಅವರು ತಮ್ಮ ಫ್ಲಾಟ್‍ನ್ನು ಕೂಡ ಮಾರಬೇಕಾಗಿ ಬಂತು. ಕುಟುಂಬದವರು ಹಾಗೂ ಸ್ನೇಹಿತರು ಕೂಡ ಆರ್ಥಿಕ ಸಹಾಯ ಮಾಡಿದ್ರು. ಸಾಮಾಜಿಕ ಜವಾಬ್ಧಾರಿಯೂ ಹೆಚ್ಚಿದ್ರಿಂದ ಇನ್ನಷ್ಟು ಜಾಗರೂಕರಾಗಿ ಉದಯ್ ಕೆಲಸ ಮಾಡಲಾರಂಭಿಸಿದ್ರು. ಪರಿಣಾಮ ಯಶಸ್ಸು ಕೂಡ ಅವರನ್ನು ಅರಸಿ ಬಂದಿತ್ತು.

ಇದೀಗ Yupp TV ಕೇವಲ ಅಮೆರಿಕ ಮಾತ್ರವಲ್ಲ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ, 13 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಟಿವಿ ಚಾನೆಲ್‍ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಈ ಮೂಲಕ ಹಲವು ಪ್ರಾಂತ್ಯಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ತಿಳುವಳಿಕೆ ಮೂಡಿಸುತ್ತಿದೆ. ಈಗ ಙuಠಿಠಿ ಖಿಗಿ ಒಂದು ಯಶಸ್ವಿ ಉದ್ಯಮ. ಉದಯ್ ಅವರ ಯಶಸ್ಸಿನ ಹಿಂದೆ ಹಲವು ರಹಸ್ಯಗಳಿವೆ. ಮಾರುಕಟ್ಟೆಯ ಬಗ್ಗೆ ಅರಿವು, ಹೊಸ ತಂತ್ರಜ್ಞಾನದ ಅಳವಡಿಕೆ ಬಗ್ಗೆ ತಿಳುವಳಿಕೆ, ಜನರ ಮಧ್ಯೆ ಇದ್ದುಕೊಂಡೇ ಕೆಲಸ ಮಾಡುವ ಕೌಶಲ್ಯ, ಜನರ ಬಳಿ ತಲುಪುವ ಮಾರ್ಗವನ್ನು ಇನ್ನಷ್ಟು ಸರಳಗೊಳಿಸುವಿಕೆ ಅವರ ಯಶಸ್ಸಿನ ಹಿಂದಿರುವ ಗುಟ್ಟು. ಈ ಯಶಸ್ಸನ್ನು ಉದಯ್ ರೆಡ್ಡಿ ಸಹಜವಾಗಿ ಸ್ವೀಕರಿಸುತ್ತಾರೆ. ``ಈ ಹಂತಕ್ಕೆ ತಲುಪಿರುವುದಕ್ಕೆ ಖುಷಿಯಾಗುತ್ತೆ, ಜನರು ಙuಠಿಠಿ ಖಿಗಿ ಯಶಸ್ಸಿನ ಬಗ್ಗೆ ಮಾತನಾಡ್ತಾರೆ, ಆದ್ರೆ ಸಾಧಿಸುವುದು ಇನ್ನೂ ಬಹಳಷ್ಟಿದೆ. ನಾನು ತುಂಬಾ ಕಷ್ಟಗಳನ್ನು ಎದುರಿಸಿದ್ದೇನೆ, ಶೇ.50ರಷ್ಟು ಸಮಯ ನಾನು ಕುಟುಂಬದವರಿಂದ ದೂರವಿದ್ದೆ, ಹಾಗಾಗಿ ಇವತ್ತು ಕೂಡ ಯಶಸ್ಸು ಅನ್ನೋದು ನನ್ನ ತಲೆಗೇರಿಲ್ಲ. ಜನರು ಎಷ್ಟು ಶೀಘ್ರವಾಗಿ ಯಶಸ್ಸು ಗಳಿಸ್ತಾರೋ ಅಷ್ಟೇ ಶೀಘ್ರವಾಗಿ ಹಿನ್ನಡೆ ಅನುಭವಿಸಿದ ಉದಾಹರಣೆಗಳಿವೆ. ರೇಸ್‍ನಿಂದ್ಲೇ ಹಿಂದೆ ಸರಿದವರೂ ಇದ್ದಾರೆ. ಕೆಲ ಸಮಯ ನನ್ನ ಪಾಲಿಗೂ ಕಠಿಣವಾಗಿತ್ತು. ಒಂದು ಟಿವಿ ಚಾನೆಲ್‍ನವರನ್ನು ಒಪ್ಪಿಸಲು ನಾನು 6 ಬಾರಿ ಹೋಗಿದ್ದೆ. ಇನ್ನೊಬ್ಬರನ್ನು ಒಪ್ಪಿಸಲು ಒಂದು ವರ್ಷವೇ ಬೇಕಾಯ್ತು. ಆದ್ರೆ ಒಮ್ಮೆ ಬೆಸೆದ ಬಾಂಧವ್ಯ ಗಟ್ಟಿಯಾಗಿ ಉಳಿದಿದೆ. ಒಂದೆರಡು ಚಾನೆಲ್‍ಗಳು ಹಿಂದೆ ಸರಿದಾಗ ಮುಂದೇನು ಅನ್ನೋ ಆತಂಕ ಎದುರಾಗಿದ್ದು ನಿಜ, ಆದ್ರೆ ಬಳಿಕ ಅವರೆಲ್ಲ Yupp TV ಯನ್ನೇ ಸೇರಿದ್ದಾರೆ.

ಬ್ರಾಂಡ್‍ಬ್ಯಾಂಡ್‍ನಲ್ಲಿ ಟಿವಿ ಚಾನೆಲ್ ಸೇವೆಯನ್ನು ಒದಗಿಸ್ತಾ ಇರೋ ಕಂಪನಿಗಳ ಪೈಕಿ ಙuಠಿಠಿ ಖಿಗಿ ಮೊದಲ ಸ್ಥಾನದಲ್ಲಿದೆ. ಕೇವಲ ಮನರಂಜನೆ ಮಾತ್ರವಲ್ಲ, ಸುದ್ದಿ ಜಗತ್ತಿಗೂ ಉದಯ್ ಕಾಲಿಟ್ಟಿದ್ದಾರೆ. ಇನ್ನು ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಯುವ ಪೀಳಿಗೆಗೆ ತಮ್ಮ ಅನುಭವದ ಮೂಟೆ ಹಂಚಬೇಕೆನ್ನುವುದು ಅವರ ಆಸೆ. ಹೊಸದೇನನ್ನಾದ್ರೂ ಮಾಡಬೇಕೆಂಬ ಆಲೋಚನೆಯ ಜೊತೆಗೆ, ಅದೇನು ಅನ್ನೋ ಸ್ಪಷ್ಟತೆ ಇರಬೇಕು. ಈಗ ಉದ್ಯಮವನ್ನು ಇಡೀ ವಿಶ್ವಕ್ಕೆ ಪರಿಚಯಿಸಲು ಅಮೆರಿಕಕ್ಕೆ ಹೋಗಬೇಕಾದ ಅವಶ್ಯಕತೆಯಿಲ್ಲ, ಭಾರತದಲ್ಲೇ ಉಳಿದುಕೊಂಡು ಅದನ್ನು ಮಾಡಬಹುದು ಅನ್ನೋದು ಉದಯ್ ಅವರ ಅಭಿಪ್ರಾಯ.

ಯಶಸ್ವಿ ಉದ್ಯಮಿ ಎನಿಸಿಕೊಂಡಿರುವ ಉದಯ್ ರೆಡ್ಡಿ ಅವರ, ಐಎಎಸ್ ಮಾಡಬೇಕೆಂಬ ಕನಸು ಇನ್ನೂ ನನಸಾಗಿಲ್ಲ. ಇವತ್ತಿಗೂ ಅವರು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ಸಿಎಸ್‍ಆರ್ ಚಟುವಟಿಕೆಗಳ ಅಡಿಯಲ್ಲಿ ಕೆಲವು ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೆಲಿಮೆಡಿಸಿನ್ ಮೂಲಕ, ಸಣ್ಣ ಪುಟ್ಟ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ವಿಧಾನವನ್ನು ಸರಳಗೊಳಿಸಲಾಗುತ್ತಿದೆ. ಇದನ್ನು ಇಡೀ ಜಗತ್ತಿಗೇ ಪರಿಚಯಿಸುವುದು ಉದಯ್ ರೆಡ್ಡಿ ಅವರ ಹೆಬ್ಬಯಕೆ.

ಲೇಖಕರು: ಡಾ. ಅರವಿಂದ್ ಯಾದವ್

ಅನುವಾದ: ಭಾರತಿ ಭಟ್