ಬಡವರ ಬದುಕನ್ನೇ ಬದಲಿಸಿದ ಪರಿನಾಮ್: ಸಾಧನೆಯ ದಾರಿ ಹೇಳಿಕೊಡುವ ಮಲ್ಲಿಕಾ

ಟೀಮ್​ ವೈ.ಎಸ್​​.

ಬಡವರ  ಬದುಕನ್ನೇ ಬದಲಿಸಿದ ಪರಿನಾಮ್: ಸಾಧನೆಯ ದಾರಿ ಹೇಳಿಕೊಡುವ ಮಲ್ಲಿಕಾ

Wednesday October 07, 2015,

7 min Read

ಕೆಲವೊಮ್ಮೆ ಅನುಭವ ಕಲಿಸುವ ಪಾಠ ಎಲ್ಲವನ್ನೂ ಬದಲಿಸಿ ಬಿಡುತ್ತದೆ. ನಾವು ನಡೆಯುವ ದಾರಿ ಮತ್ತು ಸೇರ ಬೇಕಾದ ಗುರಿಯನ್ನು ನಿರ್ಧಾರ ಮಾಡೋದು ಕೂಡ ಕಾಲವೇ. ಅನುಭವದ ಪಾಠಕ್ಕಿಂತ ಮಿಗಿಲಾದ ಪಾಠ ಬೇರೆ ಯಾವುದೂ ಕೂಡ ಇರೋದಿಕ್ಕೆ ಸಾಧ್ಯವಿಲ್ಲ. ಇದೆಲ್ಲಾ ಅನುಭವಕ್ಕೆ ಬಂದಿದ್ದು ಮಲ್ಲಿಕಾ ಘೋಷ್ ಅನ್ನುವ ಅಪ್ರತಿಮ ಸಾಧಕಿಗೆ. ಮಲ್ಲಿಕಾ ಮತ್ತು ಅವರ ಅಮ್ಮ ಎಲೈನ್ ಘೋಷ್ ಪರಿನಾಮ್ ಅನ್ನೋ ಸಂಸ್ಥೆ ಸ್ಥಾಪಿಸಿ ಹಲವರ ಬಾಳಿಗೆ ಆಶಾಕಿರಣವಾದ್ರು. ಅಮ್ಮ ವಿಧಿವಶವಾದ ಮೇಲೆ ಅವರ ಆಶಯವನ್ನು ಪೂರ್ಣಗೊಳಿಸಿದ್ದು ಮಗಳು ಮಲ್ಲಿಕಾ ಘೋಶ್.

image


ಮಲ್ಲಿಕಾ ಘೋಷ್ ಇಂಗ್ಲೆಂಡ್​​ನ ಬೋರ್ಡಿಂಗ್ ಸ್ಕೂಲ್ ಮತ್ತು ಯುಎಸ್ಎಯ ಯೂನಿವರ್ಸಿಟಿ ಒಂದರಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ನಂತ್ರ ಮೆಕ್ಕಾನ್ ಎರಿಕ್ಸ್​​ನ್​​ನಲ್ಲಿ ದಕ್ಷಿಣ ಭಾರತದ ಚಿತ್ರಗಳ ಮುಖ್ಯಸ್ಥರಾಗಿದ್ದರು. ಆದ್ರೆ ಸಾಮಾಜಿಕ ಕೆಲಸಗಳನ್ನು ಮಾಡಬೇಕೆಂಬ ಹಂಬಲ ಅವರನ್ನು ಕೆಲಸ ಬಿಡುವಂತೆ ಮಾಡಿತು. ಮಲ್ಲಿಕಾ ತಂದೆ ಸಮಿತ್ ಘೋಷ್ ಖ್ಯಾತ ಮೈಕ್ರೋ ಫೈನಾನ್ಸ್ ಉಜ್ಜೀವನ್ ಅನ್ನೋ ಸಂಸ್ಥೆಯನ್ನು 2005ರಲ್ಲಿ ಸ್ಥಾಪಿಸಿದ್ದರು. ಆದ್ರೆ ಪರಿನಾಮ್ ಸ್ಥಾಪನೆಯ ಹಿಂದೆ ದೊಡ್ಡ ಕನಸಿತ್ತು. ಆದ್ರೆ ಬಡಬಗ್ಗರಿಗೆ ದೀನ ದಲಿತರಿಗೆ ಕೇವಲ ಆರ್ಥಿಕ ಸಹಾಯ ಮಾತ್ರ ಸಾಕಾಗೋದಿಲ್ಲ ಅನ್ನೊ ಅರಿವಿತ್ತು. ಹೀಗಾಗಿ ಬೇರೇನಾದ್ರೂ ಸಹಾಯ ಮಾಡ್ಬೇಕು ಅನ್ನೋ ಕನಸು ಹುಟ್ಟಿಕೊಂಡಿತ್ತು. ಬಡತನ ಅದ್ರ ಪಾಡಿಗೆ ಅದು ಹುಟ್ಟಿಕೊಳ್ಳುತ್ತೆ ಅನ್ನೋದನ್ನ ನಂಬಿದ್ದರು ಇವ್ರು. ಪರಿನಾಮ್ ಹಲವು ವಿಷಯಗಳಲ್ಲಿ ಸಹಾಯ ನೀಡುತ್ತಿದೆ. ಹೆಲ್ತ್​​ಕೇರ್, ಶಿಕ್ಷಣ, ಊಟ, ವಸತಿ ಮತ್ತು ಸಾಮಾಜಿಕ ಪರಿವರ್ತನೆಗಳಂತಹ ಕೆಸವನ್ನು ಮಾಡುತ್ತಿದೆ. ಹೀಗಾಗಿ ಸಮಿತ್ರರ ಉಜ್ಜೀವನ್ ಫೈನಾನ್ಸ್​​ಗಿಂತ ಸಾಕಷ್ಟು ಮುಂದೆ ನಿಂತಿದೆ ಅಮ್ಮ ಮಗಳ ಪರಿನಾಮ್ ಮತ್ತು ಅದ್ರ ಸಾಮಾಜಿಕ ಕೆಲಸಗಳು. ಪರಿನಾಮ್ ಕಡುಬಡವರನ್ನು ಪ್ರಮುಖವಾಗಿರಿಸಿಕೊಂಡು ಅವ್ರ ಕಡೆಗೆ ಹೆಚ್ಚು ಗಮನ ಕೊಡುತ್ತಿದೆ. ನಗರದಲ್ಲೇ ಇದ್ದು ಅತೀ ಚಿಕ್ಕ ಬಂಡವಾಳ ಹೂಡಲು ಸಾಧ್ಯವಿಲ್ಲದವರ ಕಡೆ ಪರಿನಾಮ್ ಗಮನಕೊಡುತ್ತಿದೆ.

ಕಾರ್ಪೋರೇಟ್ ಕೆಲಸ ಬಿಟ್ಟು ಸಮಾಜಿಕ ಕೆಲಸಕ್ಕೆ ನಿಂತವರು..

ನನಗೆ ಟಿವಿ ಮತ್ತು ಚಲನಚಿತ್ರಗಳೆಂದರೆ ಪಂಚಪ್ರಾಣ ಚಿಕ್ಕವಳಿದ್ದಾಗಲೇ ಚಿತ್ರತಾರೆ ಆಗ್ಬೇಕು ಮತ್ತು ಅದ್ರಲ್ಲಿ ಭವಿಷ್ಯವಿದೆ ಅಂತ ಕನಸು ಕಂಡಿದ್ದೆ. ವಿದೇಶಗಳಲ್ಲಿ ಚಲನಚಿತ್ರಗಳ ಬಗ್ಗೆ ಅಧ್ಯಯನ ನಡೆಸಿದ್ದೆ. ಭಾರತಕ್ಕೆ ವಾಪಾಸ್ ಬಂದಮೇಲೆ 7 ವರ್ಷಗಳ ಕಾಲ ಜಾಹೀರಾತು ಕ್ಷೇತ್ರದಲ್ಲಿ ದುಡಿಮೆ ನಡೆಸಿದೆ.ಆದ್ರೆ ಇದು ನನಗೆ ತೃಪ್ತಿ ನೀಡುತ್ತಿಲ್ಲ ಅನ್ನೋ ಭಾವನೆ ಕಾಡತೊಡಗಿತು. ಒಂದೇ ತರಹದ ಕೆಲಸ ಮತ್ತು ಅದರ ಒತ್ತಡದಿಂದ ಬೇಜಾರು ಹುಟ್ಟಿಕೊಂಡಿತ್ತು. ನನ್ನ ಅಮ್ಮ ಪರಿನಾಮ್ ಮತ್ತು ಅಪ್ಪ ಉಜ್ಜೀವನ್ ಅನ್ನೋ ಸಂಸ್ಥೆಯನ್ನು ಆದಾಗಲೇ ಕಟ್ಟಿದ್ದರು. ಜಾಹೀರಾತು ಲೋಕದಲ್ಲಿ ಕೇವಲ 30 ಸೆಕೆಂಡ್​​ಗಳ ಜಾಹೀರಾತಿಗೆ ಲಕ್ಷಲಕ್ಷ ಬಿಲ್ ಮಾಡುತ್ತಿದ್ದರು. ಅಷ್ಟೊಂದು ದುಡ್ಡು ಖರ್ಚು ಮಾಡಿದ್ರೂ ಗ್ರಾಹಕನಿಗೆ ಸಮಾಧಾನ ಇರುತ್ತಾ ಇರ್ಲಿಲ್ಲ. ಮನೆಗೆ ಬಂದ್ರೆ ಅಮ್ಮ ಮತ್ತು ಅಪ್ಪ ಅವ್ರ ಮಾಡುತ್ತಿದ್ದ ಕೆಲಸದ ಬಗ್ಗೆ ಮಾತನಾಡುತ್ತಿದ್ದರು. ಮಹಿಳೆಯರಿಗೆ ಸಹಾಯ ಮಾಡುವ ಬಗ್ಗೆ ಚರ್ಚಿಸ್ತಾ ಇದ್ರು. ಬಡ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಪ್ಲಾನ್​​ಗಳನ್ನು ಮಾಡುತ್ತಿದ್ದರು. ಬಡವರ ಆರೋಗ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿದ್ದರು. ಶಿಕ್ಷಣ ಇಲ್ಲದವರಿಗೆ ಅದನ್ನು ನೀಡುವ ಬಗ್ಗೆ, ಆರ್ಥಿಕವಾಗಿ ದುರ್ಬಲವಾಗಿದ್ದವರಿಗೆ ಸಹಾಯ.. ಇಂತಹ ಮಾತುಗಳು ನನ್ನನ್ನು ಬದಲಿಸಿತು. ನಾನು ಆರಂಭದಲ್ಲಿ ಕೆಲ ಫೀಲ್ಡ್ ವಿಸಿಟ್​​​ಗ ಳನ್ನು ಮಾಡಿದ್ದೆ.. ನನ್ನಲ್ಲೇ ಪಾಸಿಟಿವ್ ಬದಲಾವಣೆ ಮಾಡತೊಡಗಿತು. ನಾನು ಮಾಡುತ್ತಿದ್ದ ಕೆಲಸಕ್ಕಿಂತ ನನ್ನ ಪೋಷಕರು ಮಾಡುತ್ತಿರುವ ಕೆಲಸ ತೃಪ್ತಿ ನೀಡುತ್ತಿದೆ ಅಂತ ಅನಿಸತೊಡಗಿತು. ಹೀಗೆ ಮಲ್ಲಿಕಾ ಘೋಷ್ ತನ್ನಲ್ಲಾದ ಬದಲಾವಣೆಗಳನ್ನು ಹೇಳಿಕೊಳ್ಳುತ್ತಾರೆ.

image


ನನಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ. ಮಕ್ಕಳು ಮತ್ತು ಪ್ರಾಣಿಗಳು ಅಂದ್ರೆ ಅದ್ಯಾವುದೋ ಮೋಹ. ಹೀಗಾಗಿ ನಾನು ಕೈ ತುಂಬಾ ಸಂಬಳ ಬರೋ ಕಾರ್ಪೋರೇಟ್ ಕೆಲಸ ಬಿಡಲು ನಿರ್ಧಾರ ಮಾಡಿದೆ. ಆದ್ರೆ ಉಜ್ಜೀವನ್ ಅಥವಾ ಪರಿನಾಮ್​​ನಲ್ಲಿ ಕೆಲಸ ಮಾಡೋದು ನನ್ನ ಮೊದಲ ಆದ್ಯತೆ ಅಗಿರಲಿಲ್ಲ. ಮಕ್ಕಳ ಜೊತೆಗೆ ಸಮಯ ಕಳೆಯೋದು ಮತ್ತು ಅವರಿಗೆ ಸಹಾಯ ಮಾಡೋದು ಮೊದಲ ಕನಸಾಗಿತ್ತು. ಆದ್ರೆ ಮೊದಲ ಎರಡು ವಾರಗಳಲ್ಲೇ ನನಗೆ ಬೋರ್ ಹೊಡೆಸಲು ಶುರುವಾಗಿತ್ತು. ಹೀಗಾಗಿ ನಾನು ಮಕ್ಕಳಿಗೆ ಸಹಾಯ ಮಾಡುವ ಎನ್​ಜಿಒಗಳ ಜೊತೆ ಮಾತುಕತೆ ನಡೆಸಲು ಯೋಚಿಸಿದೆ. ಅದ್ರ ಬಗ್ಗೆ ಅಧ್ಯಯನ ಕೂಡ ಮಾಡಿದೆ. ಆದ್ರೆ ಅವುಗಳೆಲ್ಲಾ ಹೆಚ್ಚಾಗಿ ನನ್ನ ಗಮನ ಸೆಳೆಯಲಿಲ್ಲ. ನಾನು ಮಾಡ್ತಿದ್ದ ಕೆಲಸಗಳನ್ನು ನೋಡಿ ಅಪ್ಪ ಸಮಿತ್ ಘೋಷ್ ಅಮ್ಮ ಆರಂಭಿಸಿರುವ ಎನ್​ಜಿಒ ಪರಿನಾಮ್​​ನಲ್ಲಿ ಕೆಲಸ ಮಾಡು ಅಂತ ಸಲಹೆ ನೀಡಿದ್ರು. ನನ್ನ ಅಮ್ಮ ಮೊದಲು ನನ್ನನ್ನು ಪರಿನಾಮ್​ಗೆ ಇಂಟರ್ನಿಯಾಗಿ ಸೇರಿಸಿಕೊಂಡ್ರು. 3 ತಿಂಗಳ ಕಾಲ ಅಮ್ಮನ ಜೊತೆ ಕೆಲಸ ಮಾಡಿದೆ. ಆಕೆ ನನಗೆ ಸ್ಫೂರ್ತಿ ನೀಡಬಲ್ಲ ಕೆಲವೊಂದು ಪ್ರಾಜೆಕ್ಟ್​​​ಗಳನ್ನು ಕೈಗೆ ಕೊಟ್ಟಳು. ನಾನು ಆರ್ಥಿಕ ಸಾಕ್ಷರತೆಯ ಪರಿಕಲ್ಪನೆ ಬಗ್ಗೆ ಅಧ್ಯಯನ ನಡೆಸಿ ಕೆಲಸ ಶುರುಮಾಡಿಕೊಂಡಿದೆ. ಮಕ್ಕಳ ಬಗ್ಗೆ ನನಗಿದ್ದ ಪ್ರೀತಿಯನ್ನು ನೋಡಿ ಸಮ್ಮರ್ ಕ್ಯಾಂಪ್ ಒಂದನ್ನು ಹ್ಯಾಂಡಲ್ ಮಾಡುವಂತೆ ಅಮ್ಮ ಸಲಹೆ ನೀಡಿದ್ರು. ಇದು ನನ್ನ ಬದುಕನ್ನೇ ಬದಲಿಸಿತು. ಕಾರ್ಪೋರೇಟ್ ಕೆಲಸಕ್ಕೆ ಹೋಗೋದಿಕ್ಕೆ ಮತ್ತೆ ಮನಸ್ಸಾಗಲಿಲ್ಲ. ಬದುಕಿನಲ್ಲಿ ಯಾವುದಾದರು ನೆನಪಿನಲ್ಲುಳಿಯುವಂತಹ ಮತ್ತು ಇನ್ನೊಬ್ಬರಿಗೆ ಸಹಾಯವಾಗುವಂತಹಸ ಕೆಲಸ ಮಾಡಲು ನಿರ್ಧಾರ ಮಾಡಿದೆ ಅಂತ ಮಲ್ಲಿಕಾ ತಾನು ಬದಲಾದ ರೀತಿಯನ್ನು ವಿವರಿಸುತ್ತಾರೆ.

ಪರಿನಾಮ್ ಯಾಕೆ ವಿಭಿನ್ನ..?

ನಮ್ಮದು 25 ರಿಜಿಸ್ಟಾರ್ಡ್ ಎನ್​​ಜಿಒಗಳ ಒಂದು ಸಮೂಹ. ಸಾಮಾಜಿಕ ಉದ್ದೇಶವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ನಾವು ಕೆಲಸ ಮಾಡಬೇಕಾದ್ರೆ ಹೆಚ್ಚು ಹೆಚ್ಚು ಅನುದಾನ ಮತ್ತು ಸಹಾಯಗಳನ್ನು ಪಡೆಯಲೇಬೇಕು. ಡೆಲ್ ಫೌಂಡೇಷನ್​​ನ ಮೈಕಲ್ ಮತ್ತು ಸೂಸನ್, ಸಿಟಿ ಫೌಂಡೇಷನ್, ಹೆಚ್ಎಸ್​​ಬಿಸಿ ಬ್ಯಾಂಕ್ ಮತ್ತು ಹಲವು ದಾನಿಗಳು ನೆರವು ನೀಡಿ ನಮ್ಮ ಕೈಯಿಂದ ಕೆಲಸ ಮಾಡಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಾವು ಅತ್ಯತ್ತಮ ಮತ್ತು ಪಾರದರ್ಶಕ ಎನ್​​ಜಿಒ ಅನ್ನೋ ಖ್ಯಾತಿ ಪಡೆದುಕೊಂಡಿದ್ದೇವೆ. ನಾನು ಆರಂಭದಿಂದಲೂ ಹಣಕಾಸಿನ ವಿಚಾರದಲ್ಲಿ ಶಿಸ್ತನ್ನು ರೂಢಿಸಿಕೊಂಡು ಬಂದಿದ್ದೇನೆ. ದಾನಿಗಳು ನೀಡುವ ಸಹಾಯಹಸ್ತದಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ಇತರೆ ಖರ್ಚಿಗಾಗಿ ಬಳಸಿಕೊಳ್ಳುತ್ತೇವೆ. ಹೆಚ್ಚು ಹಣವನ್ನು ಯಾರಿಗೆ ಅಗತ್ಯವಿದೆಯೋ ಅವರಿಗಾಗಿ ಮೀಸಲಿಡುತ್ತಿದ್ದೇವೆ. ಹಾಗಂತ ನಾವು ಯಾರ ಬಳಿಯೂ ಹಣಕ್ಕಾಗಿ ಬೇಡಿಕೆಯನ್ನಾಗಲಿ ಅಥವಾ ವಾರ್ಷಿಕ ಚಂದವನ್ನಾಗಿ ಎಂದೂ ಕೇಳಿಲ್ಲ.

ಪರಿನಾಮ್​​ನಲ್ಲಿ ಎದುರಿಸಿದ ಚಾಲೆಂಜ್

ನನ್ನ ಅಮ್ಮನದೇ ಸಂಸ್ಥೆ ಪರಿನಾಮ್​​ನಲ್ಲಿ ನಾನು ಇಂಟರ್ನಿಯಾಗಿ ಕೆಲಸ ಮಾಡಿದ ಬಳಿಕ ಕನ್ಸಲ್ಟೆಂಟ್ ಆಗಿ ಸೇರಿಕೊಂಡೆ. ಆದ್ರೆ ನಿಜವಾದ ಕೆಲಸ ಆರಂಭಿಸಿದ ಬಳಿಕ ಸಂಸ್ಥೆಯ ಬೆಳವಣಿಗೆಯಲ್ಲಿ ಇರುವ ಅಡೆ ತಡೆ ಮತ್ತು ಸಮಸ್ಯೆಗಳ ಬಗ್ಗೆ ಹೆಚ್ಚು ಅರಿವಾಗಿತ್ತು. ಫಾರಿನ್ ಕಾಂಟ್ರಿಬ್ಯುಷನ್ ರಿಜೆಸ್ಟ್ರೇಶನ್ ಆ್ಯಕ್ಟ್ (FRCA) ಪಡೆಯೋದಿಕ್ಕಾಗಿ ಪಡೆದ ಕಷ್ಟ ಅಷ್ಟಿಷ್ಟಲ್ಲ. ಎಲ್ಲಾ ಕಡೆ ಲಂಚಕ್ಕಾಗಿ ಕೈ ಚಾಚುತ್ತಿದ್ದರು. ಆದ್ರೆ ನಾನು ಮತ್ತು ನನ್ನಮ್ಮ ಲಂಚ ಕೊಡಲಿಲ್ಲ. ಕೊನೆಗೆ FRCA ಪಡೆದಾಗ 3 ವರ್ಷ ಕಳೆದು ಹೋಗಿತ್ತು. ಇಷ್ಟು ಹೊತ್ತಿಗೆ ನನ್ನ ಬಗ್ಗೆ ಅಮ್ಮನಿಗೆ ಸಾಕಷ್ಟು ನಂಬಿಕೆ ಹುಟ್ಟಿಕೊಂಡಿತ್ತು. ಹೀಗಾಗಿ ನನಗೆ ಹೆಚ್ಚಿನ ಜವಾಬ್ದಾರಿ ವಹಿಸಿದ್ದರು. ಫೈನಾನ್ಸ್ ವಿಚಾರದಿಂದ ಹಿಡಿದು, ಸಹಾಯ ಧನ, ಅನುದಾನ ಹೀಗೆ ಹಲವು ವಿಭಾಗಗಳ ಜವಾಬ್ದಾರಿಯನ್ನುವಹಿಸಿಕೊಂಡೆ. ಆರಂಭದಲ್ಲಿ ಹಣಕಾಸಿನ ಕೊರತೆ ಸ್ವಲ್ಪ ಹೆಚ್ಚಿದ್ದರಿಂದ ಹೆಲ್ತ್​​ಕ್ಯಾಂಪ್​​ಮತ್ತು ಶಿಕ್ಷಣದ ಬಗ್ಗೆ ಕೆಲವು ಕ್ಯಾಂಪ್​​ಗಳನ್ನು ಮಾಡಿದ್ದೆವು. ಅಲ್ಲಿ ಆರ್ಥಿಕ ಶಿಕ್ಷಣದ ಬಗ್ಗೆ ತಿಳಿ ಹೇಳುವುದು ನಮ್ಮ ಕನಸಾಗಿತ್ತು. ಅಪ್ಪನ ಉಜ್ಜೀವನ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟೆವು. ಈ ವೇಳೆ ನಾವು ಕೇವಲ 300ರಷ್ಟಿದ್ದ ಬ್ಯಾಂಕ್ ಅಕೌಂಟ್​ಗಳ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸಿಬಿಟ್ಟಿದ್ದೆವು. 700ಕ್ಕೂ ಅಧಿಕ ಕುಟುಂಬಗಳು ನಮ್ಮ ಅರ್ಬನ್ ಆಲ್ಟ್ರಾ ಪ್ರೋಗ್ರಾಂನ ಭಾಗಿಗಳಾಗಿದ್ದರು.

ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ನನ್ನ ಅಮ್ಮ ವಿಧಿವಶರಾದ್ರು. ನನ್ನ ಮುಂದಿದ್ದ ಚಾಲೆಂಜ್ ದೊಡ್ಡದಾಯಿತು. ಅಮ್ಮನ ಸ್ಥಾನವನ್ನು ತುಂಬುವುದು ನನ್ನ ಪಾಲಿಗೆ ಕಷ್ಟವಾಗಿತ್ತು. ಆದ್ರೆ ನಾನು ಹಠ ಬಿಡಲಿಲ್ಲ. ಒಂದು ತಂಡವನ್ನು ಕಟ್ಟಿದೆ. ಜವಾಬ್ದಾರಿಯನ್ನು ಎಲ್ಲರಿಗೂ ಹಂಚಿದೆ. ನಾಲ್ಕುವರೆ ವರ್ಷ ಮಾಡಿದ ಕೆಲಸ ಫಲ ಕೊಡಲು ಆರಂಭಿಸಿತ್ತು. ಆದ್ರೆ ಅಮ್ಮನಿಲ್ಲ ಅನ್ನೋ ಕೊರತೆ ದಿನಾ ಕಾಡುತ್ತಿತ್ತು.

ಚಾಲೆಂಜ್ ಅನ್ನೋದೇ ಹಾಗೇ. ಆರಂಭದಲ್ಲೇ ಸಾಕಷ್ಟು ಕಾಡುತ್ತದೆ. ಆದ್ರೆ ಅದಕ್ಕೆ ಪರಿಹಾರವೂ ಇರುತ್ತದೆ. ನೀವು ಎಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸುತ್ತೀರಿ ಅನ್ನೋದರ ಮೇಲೆ ಎಲ್ಲವೂ ಅವಲಂಭಿತವಾಗಿರುತ್ತದೆ. ನೀವು ಬೆಳೆದಂತೆ ಸಮಸ್ಯೆಗಳನ್ನು ಪರಿಸಹರಿಸುವ ದಾರಿಯೂ ಸುಲಭವಾಗಿ ಕಾಣಸಿಗುತ್ತದೆ. ಆದ್ರೆ ಅಲ್ಲಿಯ ತನಕ ಛಲ ಬಿಡುವ ಹಾಗಿಲ್ಲ.

image


ಪರಿನಾಮ್​​ನ ಆರ್ಥಿಕ ಶಿಕ್ಷಣ “ದೀಕ್ಷಾ”

ಹಣದ ವ್ಯವಹಾರದ ಬಗ್ಗೆ ಸಣ್ಣಪುಟ್ಟ ಅರಿವು ಎಲ್ಲರಿಗೂ ಇದ್ದೇ ಇರುತ್ತದೆ. ಮಕ್ಕಳಿರುವಾಗಲೇ ಪೋಷಕರು ಬ್ಯಾಂಕ್ ಅಕೌಂಟ್ ಬಗ್ಗೆ, ಸೇವಿಂಗ್ ಬ್ಯಾಂಕ್ ಬಗ್ಗೆ ತಿಳಿಸಿಕೊಟ್ಟಿರುತ್ತಾರೆ. ಆದ್ರೆ ಅದು ಪ್ರಾಯೋಗೀಕವಾಗಿರೋದಿಲ್ಲ. ಹೀಗಾಗಿ ಪರಿನಾಮ್​​ನ ಆರ್ಥಿಕ ಶಿಕ್ಷಣ ದೀಕ್ಷಾ ಯಶಸ್ಸು ಕಂಡಿತ್ತು. ಪರಿನಾಮ್ ಬ್ಯಾಂಕ್ ಅಕೌಂಟ್ ಮತ್ತು ಹಣದ ಉಳಿಕೆಯ ಬಗ್ಗೆ ಜನರಿಗೆ ಪ್ರಾಕ್ಟೀಕಲ್ ಆಗಿ ತಿಳಿ ಹೇಳಿತ್ತು. ಚಿಕ್ಕವರಿದ್ದಾಗ ನಾವೇನಾದ್ರೂ ವಸ್ತು ಬೇಕು ಅಂತ ಅಂಗಡಿಗೆ ಹೋದಾಗ ಪೋಷಕರು ನಮಗೆ ಉಳಿತಾಯದ ಪಾಠ ಮಾಡ್ತಾ ಇದ್ರು. ಹೀಗೆ ನಾವು ಹಣದ ಉಳಿಕೆ ಬಗ್ಗೆ ಚಿಕ್ಕ ವಿಷಯವನ್ನು ತಿಳಿದುಕೊಂಡಿರುತ್ತೇವೆ. ನಾನು ಇಂಗ್ಲೆಂಡ್​​ನ ಬೋರ್ಡಿಂಗ್ ಸ್ಕೂಲ್​​ನಲ್ಲಿ ಓದಿದವಳು. ಆದ್ರೆ ಮೊದಲ ಬಾರಿಗೆ ಬ್ಯಾಂಕ್ ಅಕೌಂಟ್ ಓಪನ್ ಮಾಡಿಸಿದ್ದಾಗ ನನಗಿದ್ದ ಭಯ ಅಮ್ಮ ಜೊತೆಗೆ ಬಂದಮೇಲೆಯೇ ದೂರವಾಗಿದ್ದನ್ನು ಇನ್ನೂ ಮರೆತಿಲ್ಲ. ಮೊದಲ ಬಾರಿಗೆ ಎಟಿಎಂ ಕಾರ್ಡ್​ ಉಪಯೋಗಿಸಿದಾಗಲೂ ಇಂತಹ ಅನುಭವ ಆಗಿತ್ತು. ಆದ್ರೆ ಆ ಅನುಭಗಳೆಲ್ಲಾ ನನಗೆ ಸಾಕಷ್ಟು ಪಾಠ ಕಲಿಸಿತ್ತು.

ಆದ್ರೆ ಕಡುಬಡತನ ಅನುಭವಿಸಿದವರ ಸ್ಥಿತಿ ಬೇರೆಯೇ ಇರುತ್ತದೆ. ಆದಾಯವನ್ನು ಗಳಿಸಿದ್ರೂ ಅವ್ರಿಗೆ ಅದನ್ನು ಉಳಿಸುವ ವಿಧಾನ ಗೊತ್ತಿರೋದಿಲ್ಲ. ಮೂಲಭೂತ ಸೌಕರ್ಯಗಳನ್ನು ಪಡೆಯಲು ಕೂಡ ಹಿಂದೆ ಮುಂದೆ ಯೋಚಿಸುವವರೇ ಹೆಚ್ಚು. ಹೀಗಾಗಿ ಪರಿನಾಮ್​​ನ ದೀಕ್ಷಾ ಕಡುಬಡವರಿಗೆ ಉಳಿತಾಯದ ಬಗ್ಗೆ ಶಿಕ್ಷಣ ನೀಡುವ ಯೋಚನೆ ಮಾಡಿತ್ತು. ಹಣ ಉಳಿಕೆ ಬಗ್ಗೆ ಮತ್ತು ಸದ್ಭಳಕೆ ಬಗ್ಗೆ ಶಿಕ್ಷಣ ನೀಡಿತು. ಇದ್ರ ಜೊತೆಗೆ ಅವರ ಆದಾಯದ ಮಿತಿಯಲ್ಲಿ ಸಾಲ ಪಡೆಯುವ ಬಗ್ಗೆ ಮತ್ತು ಅದನ್ನು ತೀರಿಸುವ ಬಗ್ಗೆ ತಿಳಿಸಿಕೊಟ್ಟಿತು. ಈ ಮೂಲಕ ದೇಶದ 16 ರಾಜ್ಯಗಳಲ್ಲಿ ಕಡುಬಡವರಿಗೆ ದೀಕ್ಷಾ ಪರಿನಾಮ್ ಜೊತೆ ಸೇರಿಕೊಂಡು ಆರ್ಥಿಕ ಸದ್ಭಳಕೆ ಬಗ್ಗೆ ಶಿಕ್ಷಣ ನೀಡಿತು.

ಕಡುಬಡವರಿಗಾಗಿ ವಿಶೇಷ ಕಾರ್ಯಕ್ರಮ

ಕಡುಬಡವರಿಗೆ ಆರ್ಥಿಕ ಶಿಕ್ಷಣ ಅನ್ನೋದು ಅಮ್ಮನ ಯೋಚನೆ ಆಗಿತ್ತು. ಆಕೆ ಹಲವು ಪ್ರತಿಭೆಗಳ ಆಗರವಾಗಿದ್ದಳು. ಇಂಗ್ಲೀಷ್ ಮತ್ತು ಸೈಕಾಲಜಿ ವಿಷಯದಲ್ಲಿ ಪದವಿ ಪಡೆದಿದ್ರೂ ಆಕೆ ಕೆಲಸ ಆರಂಭಿಸಿದ್ದು ಸಿಟಿ ಬ್ಯಾಂಕ್​​ನಲ್ಲಿ ಕ್ಲರ್ಕ್ ಆಗಿ. ಮದುವೆ ನಂತರ ಕೆಲಸಕ್ಕೆ ರಾಜಿನಾಮೆ ನೀಡಿದ್ದಳು. ಅಷ್ಟು ಹೊತ್ತಿಗೆ ನಾವು ಮಧ್ಯಪ್ರಾಚ್ಯದಿಂದ ಭಾರತಕ್ಕೆ ವಾಪಾಸಾಗಿದ್ದೆವು. ಬೆಂಗಳೂರಿನಲ್ಲಿ ಚಿಕ್ಕದೊಂದು ಸೈಟ್ ಇದ್ರೂ ಅದರಲ್ಲಿ ಮನೆ ಕಟ್ಟುವ ಜವಾಬ್ದಾರಿ ನನ್ನ ಮೇಲಿತ್ತು. ಮನೆ ಕಟ್ಟುವಾಗಿ ಗುತ್ತಿಗೆದಾರರು ಕಾರ್ಮಿಕರನ್ನು ಹೇಗೆ ಬಳಸಿಕೊಳ್ಳುತ್ತಿದ್ದರು ಅನ್ನೋದನ್ನ ಅಮ್ಮ ನನಗೆ ಪ್ರಾಯೋಗಿಕವಾಗಿ ತಿಳಿ ಹೇಳಿದ್ದರು. ಕಾರ್ಮಿಕರು ಕಡುಬಡವರಾಗಿದ್ದರಿಂದ ಗುತ್ತಿಗೆದಾರನ ಮಾತನ್ನು ಕೇಳಲೇ ಬೇಕಿತ್ತು. ಇದು ಪರಿನಾಮ್​​ನ ಯೋಚನೆಯ ದಾರಿಯನ್ನು ಬದಲಿಸಿತ್ತು ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಕಡು ಬಡವರು ಒಂದು ಚಿಕ್ಕ ಹಣದ ವಹಿವಾಟು ನಡೆಸೋದಿಕ್ಕೆ ಅಸಮರ್ಥರು ಅಂತ ಎಲ್ಲರೂ ನಿರ್ಧಾರ ಮಾಡಿಕೊಂಡಿರುತ್ತಾರೆ. ಅದು ನಿಜವೂ ಹೌದು. ಯಾಕಂದ್ರೆ ಅವರ ತಲಾ ಆದಾಯ ಪ್ರತೀ ತಿಂಗಳಿಗೆ 1500 ರೂಪಾಯಿಗಳಿಗಿಂತ ಕಡಿಮೆ ಇರುತ್ತದೆ. ಅವರು ವಾಸಿಸುವ ಸ್ಲಂಗಳಲ್ಲಿ ವಿದ್ಯುತ್ ಮತ್ತು ನೀರಿನ ಸಮಸ್ಯೆ ಕೂಡ ಇರುತ್ತದೆ. ಮಕ್ಕಳು ಶಾಲೆಗೆ ಹೋಗೋದನ್ನೇ ಮರೆತಿರುತ್ತಾರೆ. ಶಾಲೆಗೆ ಮಕ್ಕಳನ್ನು ಯಾಕೆ ಕಳುಹಿಸಬೇಕು ಅಂತ ಪ್ರಶ್ನಿಸುವ ಪೋಷಕರೇ ಹೆಚ್ಚಾಗಿ ಸಿಗುತ್ತಾರೆ.

ಅಲ್ಟ್ರಾ ಪೂರ್ ಪ್ರೋಗ್ರಾಂನಲ್ಲಿ ನಾವು ಗ್ರಾಮೀಣ ಭಾಗದ ಕಡು ಬಡವರ ಬಗ್ಗೆ ಸಾಕಷ್ಟು ಅಭ್ಯಾಸ ನಡೆಸಿದ್ದೆವು. ಆದ್ರೆ ನಾವು ಆಯ್ದುಕೊಂಡಿದ್ದು ನಗರದ ಕಡುಬಡವರನ್ನು. ಕನಿಷ್ಠ ಸೌಲಭ್ಯದ ಜೊತೆ ಹಣಕಾಸಿನ ನೆರವು ಸಿಗಬೇಕಾದ್ರೆ ಬೇಕಾಗಿರುವ ಅಂಶಗಳನ್ನು ಒದಗಿಸಿಕೊಡುವ ಬಗ್ಗೆ ಯೋಚನೆ ಮಾಡಿದೆವು. ಈ ಕಾರ್ಯಕ್ರಮ ಕುಟಂಬಗಳನ್ನು ಅರಿವಿಲ್ಲದೆಯೇ ಒಂದಾಗಿಸಿತ್ತು. ಮಕ್ಕಳ ಪೋಷಕರಿಗೆ ಸಾಧ್ಯವಿರುವ ಕೆಲಸ ಒದಗಿಸಿಕೊಡುವ ಪ್ರಯತ್ನ ಮಾಡಿದೆವು. ಪ್ರತಿದಿನವೂ ಕೆಲಸ ಮಾಡುವಂತೆ ಒತ್ತಾಯ ಪಡಿಸಿದೆವು.ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದೆವು. ಖಾಯಿಲೆಯಿಂದ ಬಳಲುತ್ತಿದ್ದವರಿಗೆ ವೈದ್ಯರ ನೆರವು ಸಿಗುವಂತೆ ನೋಡಿಕೊಂಡೆವು. ನಿಧಾನವಾಗಿ ಹಣದ ಹರಿವು ಹೆಚ್ಚಿತು. ಸ್ಲಂನಲ್ಲಿ ಉದ್ಯೋಗವಿಲ್ಲದೆ ಕುಳಿತವರೆಲ್ಲಾ ಕೆಲಸಕ್ಕೆ ಹೊರಟ್ರು. ಭವಿಷ್ಯ ಬದಲಾಗುವ ಸಮಯ ಹತ್ತಿರ ಬರುವ ಸೂಚನೆ ಸಿಕ್ತು. ಪರಿನಾಮ್ ಪಾಲಿಗೆ ಹೊಸತನ್ನು ಸಾಧಿಸಿದ ಖುಷಿ ಜೊತೆಗೆ ಇನ್ನೊಬ್ಬರಿಗೆ ಸಹಾಯ ಮಾಡಿದ ತೃಪ್ತಿ.

ಪರಿನಾಮ್​​ನ ಈ ಯೋಜನೆಗೆ ಯಾವುದೇ ದಾಖಲಾತಿಗಳ ಅವಶ್ಯಕತೆ ಇರಲಿಲ್ಲ. ಆದ್ರೆ ಪರಿನಾಮ್ ಅವರಿಗೆ ಭವಿಷ್ಯದಲ್ಲಿ ಅವಶ್ಯಕತೆ ಬೀಳುವ ಡಾಕ್ಯುಮೆಂಟ್, ಅಡ್ರೆಸ್ ಪ್ರೂಫ್ ಮತ್ತು ಜನನ ಪ್ರಮಾಣ ಪತ್ರವನ್ನು ಒದಗಿಸುವ ಕಾರ್ಯ ಮಾಡಿತು. ಸ್ಲಂನಲ್ಲಿರುವ ಪ್ರತಿಭಾವಂತ ಮಕ್ಕಳನ್ನು ಹುಡಕಿ ಅವರಿಗಾಗಿ ಟ್ಯೂಷನ್ ಕ್ಲಾಸ್​​ಗಳನ್ನು ಆರಂಭಿಸಿದೆವು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿತ್ತು. ಮಕ್ಕಳು ಶಾಲೆಗೆ ಹೋಗುವುದನ್ನು ಆರಂಭದಲ್ಲಿ ಪೋಷಕರು ವಿರೋಧಿಸಿದ್ರೂ ನಂತ್ರ ಮಕ್ಕಳು ಕಲಿತು ಬುದ್ಧಿವಂತರಾಗೋದನ್ನ ನೋಡಿ ಖುಷಿ ಪಡಲು ಆರಂಭಿಸಿದ್ರು. ಟ್ಯೂಷನ್ ಸೆಂಟರ್​​ಗಳ ಪ್ರಯತ್ನಕ್ಕೆ ಕೆಲವು ಶಾಲೆಗಳು ಕೂಡ ಸಾಥ್ ನೀಡಿದವು. ಕ್ರಿಸ್ಟಲ್ ಹೌಸ್, ಇಂಡಸ್ ಕಮ್ಯೂನಿಟಿ ಸ್ಕೂಲ್, ಹೋಪ್ ಫೌಂಡೇಷನ್​​ನಂತಹ ಶಾಲೆಗಳು ಟ್ಯೂಷನ್ ಸೆಂಟರ್​​ನಲ್ಲಿದ್ದ ಮಕ್ಕಳಿಗೆ ಶಿಕ್ಷಣ ನೀಡಲು ವ್ಯವಸ್ಥೆ ಮಾಡಿಕೊಟ್ಟರು. ಶಾಲೆಗೆ ಹೋಗುವ ಮಕ್ಕಳ ಫೀಸ್ ಮತ್ತು ಇತರ ಖರ್ಚನ್ನು ಭರಿಸಲು ಹಲವು ಸಂಸ್ಥೆಗಳು ಅನುದಾನ ನೀಡಿದ್ರೆ, ಕೆಲವು ವ್ಯಕ್ತಿಗಳು ಹಲವು ಮಕ್ಕಳ ಹಣಕಾಸಿನ ಮತ್ತು ಶಿಕ್ಷಣ ನೀಡುವ ಜವಾಬ್ದಾರಿ ತೆಗೆದುಕೊಂಡ್ರು.

ಕಡುಬಡವರ ಬಗ್ಗೆ ಅಮ್ಮನಿಗೆ ಸಾಕಷ್ಟು ಒಲವಿತ್ತು. ಆದ್ರೆ ಅವರ ಆಸೆಯನ್ನು ಅವರಿಗೆ ಪೂರೈಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಮಗಳಾಗಿ ನಾನು ಆ ಕಾರ್ಯವನ್ನು ಮಾಡ್ತಾ ಇದ್ದೀನಿ ಅಂತ ಮಲ್ಲಿಕಾ ಘೋಷ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬಡತನದಲ್ಲಿ ಜೀವನ ಸಾಗಿಸುತ್ತಿದ್ದವರನ್ನು ಮಧ್ಯಮ ವರ್ಗಕ್ಕೆ ತಂದು ನಿಲ್ಲಿಸಿದ ತೃಪ್ತಿಯ ಜೊತೆಗೆ ಜೀವನದಲ್ಲಿ ಏನಾದ್ರೂ ಸಾಧಿಸಿದ ಖುಷಿಯೂ ಇದೆ. ಆದ್ರೆ ಈ ಬದಲಾವಣೆ ಅಷ್ಟು ಸುಲಭವಾಗಿ ಆಗೊದಿಲ್ಲ. ಜನರ ಮನ ಒಲಿಸಲು ತಿಂಗಳು ಗಟ್ಟಲೆ ಶ್ರಮ ಪಡಬೇಕು. ಎಲ್ಲಾ ಅಡೆತಡೆಗಳನ್ನು ಗೆದ್ದು ಬರುವ ಆತ್ಮವಿಶ್ವಾಸ ಇರಬೇಕು. ಕೆಲವೊಂದು ಬಾರಿ ಆ ಜನರು ಬೈಯುವ ಮಾತುಗಳನ್ನು ಕೂಡ ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಬದಲೇ ಆಗೋದಿಲ್ಲ ಅನ್ನೋ ಜನರನ್ನು ಬದಲಿಸಬಲ್ಲೆ ಅನ್ನೋ ವಿಶ್ವಾಸ ಗಟ್ಟಿಯಾಗಿದ್ರೆ ಕೆಲಸ ಪ್ರಗತಿ ಕಾಣುತ್ತದೆ. ಪರಿನಾಮ್ ಹಲವು ಜನರ ಬದುಕನ್ನು ಬದಲಿಸುವ ಜೊತೆಗೆ ನನ್ನ ಬದುಕನ್ನು ಕೂಡ ಬದಲಿಸಿದೆ ಅಂತ ತೃಪ್ತಿಯಿಂದ ಮಾತು ಮುಗಿಸ್ತಾರೆ ಮಲ್ಲಿಕಾ..!