ಅಂಗವೈಕಲ್ಯವನ್ನೇ ಮೀರಿ ನಿಂತ ದಿಟ್ಟೆ : ಸ್ಟೇಜ್ ನಲ್ಲಿ ‘ಮಾಸ್ಟರ್’ ಆಫ್ ಸೆರೆಮನಿ..!

ಟೀಮ್​ ವೈ.ಎಸ್​. ಕನ್ನಡ

ಅಂಗವೈಕಲ್ಯವನ್ನೇ ಮೀರಿ ನಿಂತ ದಿಟ್ಟೆ : ಸ್ಟೇಜ್ ನಲ್ಲಿ ‘ಮಾಸ್ಟರ್’ ಆಫ್ ಸೆರೆಮನಿ..!

Thursday April 14, 2016,

3 min Read

ಅಂಗವೈಕಲ್ಯ ಹೊಂದಿರುವ ಅದೆಷ್ಟೋ ಮಂದಿ ಬದುಕಿನಲ್ಲಿ ಮೇಲೇಳುವ ಚೈತನ್ಯವನ್ನೇ ಕಳೆದುಕೊಂಡಿರುತ್ತಾರೆ. ಶರೀರದ ಚೇತನವೇ ಇಲ್ಲದ ಕೆಲವು ಮಂದಿ ಬದುಕು ಇದಿಷ್ಟೇ ಅಂತ ನಿರ್ಧಾರಕ್ಕೆ ಬಂದು ಕಾಲವನ್ನ ತಳ್ಳುವ ಪ್ರಯತ್ನದಲ್ಲಿರುತ್ತಾರೆ. ಆದ್ರೆ ಕೆಲವರಿಗೆ ಅದು ಯಾವತ್ತಿಗೂ ಕೊರತೆಯಾಗಿ ಕಾಡಿದ್ದೇ ಇಲ್ಲ. ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿ ಅದನ್ನ ಮೀರಿ ನಿಲ್ಲುವ ಪ್ರಯತ್ನ ನಡೆಸುತ್ತಾರೆ. ಅದ್ರಲ್ಲಿ ಯಶಸ್ಸು ಕಂಡು ಬದುಕಿನ ಅನುಭೂತಿ ಪಡೆಯುತ್ತಾರೆ. ಆದ್ರೆ ಅಂತಹ ಅಪೂರ್ವ ಸಾಹಸಿಗಳು ತೀರಾ ವಿರಳ ಮತ್ತು ಅಪರೂಪ. ಇಂತಹ ಅಪರೂಪದಲ್ಲಿ ಆತ್ಮವಿಶ್ವಾಸದ ಪ್ರತಿರೂಪವಾಗಿ ನಿಲ್ಲುವಾಕೆ ರಾಜ್ವೀ ಗೊಸಾಲಿಯಾ.. ಈಕೆಯನ್ನ ನೋಡಿದ್ರೆ ಎಂತವರಿಗೂ ಒಂದು ಅದಮ್ಯವಾದ ಆತ್ಮವಿಶ್ವಾಸ ಬರುತ್ತದೆ. ಆಕೆಯ ಬುದ್ಧಿ ಮತ್ತೆ ನೋಡಿದ್ರೆ ಅಚ್ಚರಿ ಮೂಡುತ್ತದೆ. ಆದ್ರೆ ಈಕೆಗಿರುವ ಅಂಗವೈಕಲ್ಯದಿಂದಾಗಿ ನಡೆಯಲೂ ಅಸಮರ್ಥಳಾಗಿದ್ದಾಳೆ. ಹಾಗಂತ ರಾಜ್ವೀ ಗೊಸಾಲಿಯಾ ಯಾವತ್ತೂ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿಲ್ಲ. ಆದ್ರೆ ತನಗೊದಗಿದ ಪರಿಸ್ಥಿತಿಯನ್ನ ನೆನಪಿಸಿಕೊಂಡು ಭಾವುಕಳಾಗುತ್ತಾಳೆ. 

“ ನನಗೆ ಸುಮಾರು 10 ವರ್ಷವಾಗಿರಬಹುದು. ಆಗ ನನಗೆ ನನ್ನ ಬಗ್ಗೆಯೇ ಪ್ರಶ್ನೆಗಳು ಬಂದವು. ನಾನು ಯಾರು ಏನು ನನ್ನ ಐಡೆಂಟಿಟಿ ಅನ್ನೋ ಸವಾಲುಗಳು ನನ್ನೊಳಗೇ ಹುಟ್ಟಿಕೊಂಡವು. ಅದಕ್ಕೆ ನಾನು ಉತ್ತರ ಕಂಡುಕೊಳ್ಳಬೇಕು ಅಂತ ನಿರ್ಧರಿಸಿದ್ದೆ ” 
             -ರಾಜ್ವೀ ಗೊಸಾಲಿಯಾ 

ಇದೀಗ ರಾಜ್ವೀ ಗೊಸಾಲಿಯಾಗೆ 28 ವರ್ಷ. ವಿದೇಶದಲ್ಲಿ ಉನ್ನತ ಅಧ್ಯಯನ ಪೂರೈಸಿರುವಾಕೆ. ಆದ್ರೆ ವ್ಹೀಲ್ ಚೇರ್ ನಲ್ಲಿ ಕುಳಿತ ಬೇರೆ ಯಾವುದೇ ವ್ಯಕ್ತಿಗೆ ಅದು ಅಸಾಧ್ಯವೆನಿಸಬಹುದು. ಆದ್ರೆ ರಾಜ್ವಿಗೆ ಮಾತ್ರ ತನ್ನ ಸಾಧನೆಯ ಹಾದಿಯಲ್ಲಿ ಯಾವುದೂ ಸವಾಲು ಅಂತ ಅನಿಸಲೇ ಇಲ್ಲ. ಇದೀಗ ಎನ್ ಜಿಓದಲ್ಲಿ ಕೆಲಸ ಮಾಡುತ್ತಿರುವ ರಾಜ್ವೀ ಗೊಸಾಲಿಯಾ ಅಹಮದಾಬಾದ್ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅದ್ಭುತವಾದ ಎಂಸಿಗಳನ್ನ ಮಾಡುವ ಮೂಲಕ ಮಿಂಚುತ್ತಿದ್ದಾಳೆ. “ ಜನ ನನ್ನತ್ತ ತಿರುಗಿ ನೋಡಬೇಕು, ಡಿಪ್ರೆಸ್ ಆಗಿ ಬೇಸರವಾಗಿ ಮನೆಯಲ್ಲಿ ಕುಳಿತುಕೊಳ್ಳುವುದು ಸುಲಭದ ಕೆಲಸ. ಆದ್ರೆ ನಾನು ನನಗೆ ಬೆಂಬಲ ನೀಡಿ ಬೆಳೆಸಿದ ಹೆತ್ತವರಿಗಾಗಿ ದುಡಿಯಲೇ ಬೇಕು. ನನ್ನ ಬದುಕಿನಲ್ಲಿ ಉನ್ನತಿಯನ್ನ ಕಾಣಬೇಕು. ನಾನು ನನ್ನ ಕಾಲಿನ ಮೇಲೆ ಬಲವಿಟ್ಟು ನಿಲ್ಲಲಾರೆ, ಆದ್ರೆ ನಾನು ಕೆಲಸದಲ್ಲಿ ನಾನು ಓಡಬಲ್ಲೆ ” ಅಂತ ರಾಜ್ವೀ ಗೊಸಾಲಿಯಾ ಅತ್ಯಂತ ಆತ್ಮವಿಶ್ವಾಸದಿಂದ ಹೇಳುತ್ತಾರೆ.

image


ಇದನ್ನು ಓದಿ: ಬೆಂಗಳೂರಿನಲ್ಲೂ ಇದೆ ತಾಜ್​ಮಹಲ್

ರಾಜ್ವೀ ಗೊಸಾಲಿಯಾ ಶಾಶ್ವತವಾದ ಅಂಗವೈಕಲ್ಯದಿಂದ ಬಳಲುತ್ತಿರುವಾಕೆ. ಆಕೆ ಪ್ರಿಮೆಚ್ಯುರ್ ಬೇಬಿಯಾಗಿ ಹುಟ್ಟಿನಿಂದಲೇ ಸಮಸ್ಯೆಗಳಿಗೆ ತುತ್ತಾಗಿದ್ದವಳು. ಬೆಳೆಯುತ್ತಾ ಬೆಳೆಯುತ್ತಾ ಅಸಹಜ ಸಮಸ್ಯೆಗಳು, ಬ್ಯಾಲೆನ್ಸ್ ಇಲ್ಲದ ರೀತಿಗಳು, ಅಸಹಜ ದೈಹಿಕ ಬೆಳವಣಿಗೆಗಳು ಕಂಡುಬಂದವು. ಇದು 1000ದಲ್ಲಿ ಒಬ್ಬ ಮಕ್ಕಳಿಗೆ ಕಂಡುಬರುವ ಸಮಸ್ಯೆಯಾಗಿತ್ತು. ಆದ್ರೆ ಬೆಳೆಯುತ್ತಾ ಬೆಳೆಯುತ್ತಾ ರಾಜ್ವೀ ಗೊಸಾಲಿಯಾಗೆ ಅದರಿಂದ ಹೊರಬರಲು ಸಾಧ್ಯವಾಗಲೇ ಇಲ್ಲ.

ಉತ್ತಮ ಸೌಕರ್ಯ, ಉತ್ತಮ ಯೋಚನೆ

ರಾಜ್ವೀ ಗೊಸಾಲಿಯಾ ಹುಟ್ಟಿನಿಂದಲೇ ವಿಶೇಷ ಮಗುವಾಗಿ ಗುರುತಿಸಿಕೊಂಡಳು. ಹೀಗಾಗಿ ಆಕೆಯ ಅಪ್ಪ ಅಮ್ಮನಿಗೆ ಕಡ್ಡಾಯವಾಗಿ ಕೌನ್ಸಿಲಿಂಗ್ ಅಗತ್ಯವಿತ್ತು. ಆದ್ರೆ ಆಕೆಯ ಖಾಯಿಲೆಗೆ ಇನ್ನಷ್ಟೇ ಔಷಧ ಕಂಡುಹಿಡಿಯಬೇಕಾಗಿತ್ತು. ಹಾಗಂತ ಹೆತ್ತವರು ಅದನ್ನ ಅಲ್ಲಿಗೇ ಬಿಡಲು ಸಿದ್ಧವಿರಲಿಲ್ಲ. ತಮ್ಮ ಮಗುವಿನ ಆರೈಕೆ ಮತ್ತು ಆಪರೇಶನ್ ಗಾಗಿ ಎಷ್ಟು ಬೇಕಾದ್ರೂ ಖರ್ಚು ಮಾಡಲು ಅವರು ಸಿದ್ಧರಾಗಿದ್ರು. ಆದ್ರೆ ಅವರಂದುಕೊಂಡಂತೆ ರಾಜ್ವೀ ಗೊಸಾಲಿಯಾ ಮಾತ್ರ ಸಹಜ ಸ್ಥಿತಿಗೆ ಬರಲೇ ಇಲ್ಲ. ಆದ್ರೆ ರಾಜ್ವೀ ಮಾತ್ರ ಎಂದಿಗೂ ಕುಗ್ಗಲೇ ಇಲ್ಲ. ಸಾಮಾನ್ಯವಾಗಿ ಎಲ್ಲವೂ ಸರಿ ಇರುವ ವ್ಯಕ್ತಿಗಳಿಗೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ತನಗೆ ಮಾತ್ರ ಹೇಗೆ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಅನ್ನೋದು ವಿಶೇಷವಾಗಿ ಕಾಣಿಸುತ್ತದೆ ಅಂತ ಯೋಚಿಸಿದಳು. ಸರಿ ಇದ್ದವರು ಬಸ್, ವಿಮಾನ, ರೈಲು ಅಂತ ಬೇರೆ ಬೇರೆ ಚೇರ್ ಗಳನ್ನ ಅವಲಂಬಿಸಿರಬೇಕಾಗಿರುತ್ತದೆ. ಆದ್ರೆ ನಾನು ನನ್ನದೇ ಫಿಕ್ಸ್ ಚೇರ್ ಹೊಂದಿರುತ್ತೇನೆ ಅಂತ ನಗುತ್ತಲೇ ಆಕೆ ಹೇಳುತ್ತಾಳೆ.

image


ವಿಕಲ ಚೇತನರೂ ಕೂಡ ಭರವಸೆ ಹಾಗೂ ಕನಸುಗಳನ್ನ ಹೊಂದಿರುತ್ತಾರೆ. ನಮಗೂ ಶಿಕ್ಷಣ ಹಾಗೂ ಯಶಸ್ವೀ ಕೆರಿಯರ್ ಬೇಕು. ನಮಗೂ ಪ್ಯಾಶನ್ ಇದೆ. ಮದುವೆಯಾಗಬೇಕು ಅನ್ನೋ ಆಸೆಯೂ ಇದೆ. ಆದ್ರೆ ಸಮಾಜ ಅದನ್ನ ಅರ್ಥಮಾಡಿಕೊಳ್ಳುವುದೇ ಇಲ್ಲ ಅಂತ ರಾಜ್ವೀ ಗೊಸಾಲಿಯಾ ಬೇಸರದಿಂದ ಹೇಳುತ್ತಾಳೆ. ಅದ್ರಲ್ಲೂ ಭಾರತೀಯರು ವಿಕಲ ಚೇತನರನ್ನ ನೋಡುವ ದೃಷ್ಠಿಕೋನ ಬದಲಾಗಬೇಕು ಅನ್ನೋದು ರಾಜ್ವೀ ವಾದ. ಇನ್ನು ಕನಸುಗಳನ್ನ ಹೊತ್ತ ಸಾಗಿದ ರಾಜ್ವೀ ಗೊಸಾಲಿಯಾ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ. ಗ್ರ್ಯಾಜುಯೇಷನ್ ಮುಗಿಸಿ ಕೆಲಸಕ್ಕೆ ತಯಾರಾಗುವಾಗ ಅಲ್ಲಿ ಇನ್ನಿಲ್ಲದ ಪ್ರಶ್ನೆಗಳು ಹಾಗೂ ಸಮಸ್ಯೆಗಳು ಈಕೆಯನ್ನ ಕಾಡಿದವು. ಆದ್ರೆ 2012ರಲ್ಲಿ ಒಡಫೋನ್ ಈಕೆಗೆ ಅವಕಾಶ ನೀಡಿದಾಗ ರಾಜ್ವೀ ಸಂಭ್ರಮಿಸಿದ್ದು ಅಷ್ಟಿಷ್ಟಲ್ಲ. ಕನಸುಗಳನ್ನ ಕಾಣಿರಿ. ಅದನ್ನ ಕತ್ತರಿಸುವ ಬದಲು ಅದಕ್ಕೆ ಇನ್ನಷ್ಟು ಶಕ್ತಿ ಪೋಣಿಸಲು ಪ್ರಯತ್ನಿಸಿರಿ. ನಿಮ್ಮ ಧೈರ್ಯ, ನಂಬಿಕೆ ಹಾಗೂ ಗುರಿ ಯಾವತ್ತಿಗೂ ನಿಮ್ಮ ಕೈಬಿಡುವುದಿಲ್ಲ ಅಂತ ರಾಜ್ವೀ ಗೊಸಾಲಿಯಾ ಇತರರಿಗೂ ತನ್ನ ಸ್ಫೂರ್ತಿಯ ಮಾತುಗಳನ್ನ ಹೇಳುತ್ತಾಳೆ…

ಲೇಖಕರು – ಶಾರಿಕಾ ನಾಯರ್

ಅನುವಾದ – ಸ್ವಾತಿ 

ಇದನ್ನು ಓದಿ:

1. ಮಹಿಳಾ ಉದ್ಯಮಿಗಳಿಗಾಗಿ ``ಸ್ಟ್ಯಾಂಡ್‍ಅಪ್ ಇಂಡಿಯಾ''

2. ಉದ್ಯೋಗ ಕ್ಷೇತ್ರದಲ್ಲಿ ಸಹಜ ಸೌಂದರ್ಯವಂತರಾಗಿ ಗುರುತಿಸಿಕೊಳ್ಳುವುದು ಹೇಗೆ.. ?

3. ನಿಮ್ಮ ಕಾಲೇಜಿಗೂ ಬರುತ್ತೆ ಟೆಲಿ ಎಜುಕೇಷನ್​..!