ಕೊನೆ ಕ್ಷಣದಲ್ಲಿ ಮನುಷ್ಯ ಏನು ಯೋಚಿಸ್ತಾನೆ?

ಟೀಮ್​ ವೈ.ಎಸ್​. ಕನ್ನಡ

ಕೊನೆ ಕ್ಷಣದಲ್ಲಿ ಮನುಷ್ಯ ಏನು ಯೋಚಿಸ್ತಾನೆ?

Sunday December 20, 2015,

2 min Read


ಜನನದ ಬೆನ್ನಲ್ಲಿ ಮರಣ ಇದೆ. ಈ ಭೂಮಿಗೆ ಬರುವ ಪ್ರತಿಯೊಂದು ಜೀವಿಗೂ ಸಾವು ಖಚಿತ. ಆದರೆ ಸಾವಿನ ನಂತರ ಮನುಷ್ಯ ಏನಾಗ್ತಾನೆ? ಮರಣದ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ? ಮರುಜನ್ಮ ಎಂಬುದಿದೆಯಾ? ಹೀಗೆ ಸಾವಿನ ಬಗ್ಗೆ ಅನೇಕ ಪ್ರಶ್ನೆಗಳಿವೆ. ವೈಜ್ಞಾನಿಕ ಹಾಗೂ ಪೌರಾಣಿಕ ಶೋಧದಿಂದಲೂ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಜೀವಂತ ಇರುವಷ್ಟು ದಿನ ಪುಣ್ಯ ಸಂಪಾದಿಸಿದ್ರೆ ಸ್ವರ್ಗಕ್ಕೆ ಹೋಗ್ತಾರೆ ಎಂಬ ನಂಬಿಕೆಯೂ ಇದೆ. ಅದೇನೇ ಇರಲಿ ಹೇಳಿ ಕೇಳಿ ಬರದ ಆ ಸಾವು ಮಾತ್ರ ನಿಗೂಢ. ಸಾವಿನ ಬಗ್ಗೆ ಪ್ರತಿಯೊಬ್ಬ ಮನುಷ್ಯನಿಗೂ ಭಯ, ಆತಂಕವಿದೆ. ಸಾವಿನ ನಂತರದ ಜೀವನದ ಬಗ್ಗೆ ಹೇಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲವೋ ಹಾಗೇ ಸಾವಿನಂಚಿನಲ್ಲಿರುವ ಮನುಷ್ಯ ಕೊನೆ ಕ್ಷಣದಲ್ಲಿ ಏನು ಯೋಚಿಸುತ್ತಾನೆ ಎನ್ನುವ ಬಗ್ಗೆಯೂ ಸ್ಪಷ್ಟನೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

image


ಈ ಜಗತ್ತನ್ನು ಬಿಟ್ಟು, ತಮ್ಮವರಿಂದ ಶಾಶ್ವತವಾಗಿ ದೂರವಾಗುವ ಆ ಜೀವ ಸಾವಿನ ಕೊನೆಯ ಕ್ಷಣದಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಮೆಲುಕು ಹಾಗುತ್ತದೆ. ತನ್ನ ಜೀವನದಲ್ಲಿ ನಡೆದ ಒಳ್ಳೆಯ ಹಾಗೂ ಕೆಟ್ಟ ಘಟನೆಗಳನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತದೆ. ತಜ್ಞರ ಪ್ರಕಾರ, ತಾವು ಮಾಡಿದ ದುಷ್ಟ ಕರ್ಮಗಳನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತಾನಂತೆ ಮನುಷ್ಯ. ಸಾವಿಗೂ ಮುನ್ನ ಅವರು ಸಾಕಷ್ಟು ಶಾಂತವಾಗಿರಲು ಪ್ರಯತ್ನಿಸುತ್ತಾರೆ. ಆ ಕ್ಷಣ ತನ್ನ ಬಳಿ ಇರುವವರ ಹತ್ತಿರ ಈವರೆಗೆ ಯಾರಿಗೂ ಹೇಳದ ಅತಿಮುಖ್ಯ ವಿಷಯಗಳಿದ್ದರೆ ಅದನ್ನು ತೆರೆದಿಡಲು ಬಯಸುತ್ತಾರೆ.

ಯಾವ ಕಾರಣಕ್ಕಾಗಿ ಈ ಭೂಮಿಗೆ ಬಂದಿದ್ದೆನೋ ಆ ಕರ್ತವ್ಯವನ್ನು ಏಕೆ ಮಾಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಸಾವನ್ನಪ್ಪುವ ಮೊದಲು ವ್ಯಕ್ತಿ ಅವಶ್ಯವಾಗಿ ಯಾವುದರ ಬಗ್ಗೆ ಚರ್ಚೆ ನಡೆಸುತ್ತಾನೆಂಬುದನ್ನು ನೋಡೋಣ ಬನ್ನಿ.

ಕನಸು ನನಸಾಗದಿರುವ ಬಗ್ಗೆ ವಿಷಾದ: ಸಾಯಬೇಕು ಎಂದುಕೊಂಡವನಿಗೂ ಕೊನೆ ಕ್ಷಣದಲ್ಲಿ ಬದುಕಬೇಕೆಂಬ ಆಸೆ ಬಂದುಬಿಡುತ್ತದೆ. ತಾನು ಅರ್ಧಕ್ಕೆ ನಿಲ್ಲಿಸಿದ ಕೆಲಸಗಳು ನೆನಪಾಗುತ್ತವೆ. ತನ್ನ ಕಸನು ನೆನಪಿಗೆ ಬರುತ್ತದೆ. ಪ್ರತಿಯೊಬ್ಬ ಮನುಷ್ಯನೂ ಸಾಯುವ ಮುನ್ನ ಕನಸು ನನಸಾಗದಿರುವ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾನೆ. ಯಾವುದಾದರೊಂದು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಅದನ್ನು ಪೂರ್ಣಗೊಳಿಸಲಾಗಲಿಲ್ಲ ಎಂಬುದು ಆತನನ್ನು ಕಾಡುತ್ತದೆ. ಮರಣಕ್ಕಿಂತ ಮುನ್ನ ಅದನ್ನು ಮುಗಿಸಬೇಕಿತ್ತೆಂಬ ವಿಷಾದ ಅವನಲ್ಲಿರುತ್ತದೆ.

ಕುಟುಂಬಕ್ಕಾಗಿ ಏನಾದರೂ ಮಾಡಬೇಕೆಂಬ ಇಚ್ಛೆ ಇತ್ತು: ಮನುಷ್ಯ ಮರಣಕ್ಕೆ ಹತ್ತಿರವಾಗುತ್ತಿದ್ದಂತೆ ಕುಟುಂಬದ ಬಗ್ಗೆ ಚಿಂತೆ ಕಾಡಲಾರಂಭಿಸುತ್ತದೆ. ಪುರುಷರಲ್ಲಿ ಈ ಆಲೋಚನೆ ಬರುವುದು ಹೆಚ್ಚು. ಮನೆ ಜವಾಬ್ದಾರಿಯನ್ನು ಪುರುಷರು ನೋಡಿಕೊಳ್ಳುವುದಿಂದ ಅವರಿಗೆ ಈ ವಿಷಯ ಕಾಡುತ್ತದೆ. ನಾನಿಲ್ಲದ ಕುಟುಂಬದಲ್ಲಿ ಜವಾಬ್ದಾರಿ ಹೊತ್ತುಕೊಳ್ಳುವವರು ಯಾರು? ಕುಟುಂಬಕ್ಕಾಗಿ ನಾನು ಆ ಕೆಲಸ ಮಾಡಬೇಕಿತ್ತು. ಅದು ಬಾಕಿ ಇದೆ. ಇದರಿಂದ ಮನೆಯವರಿಗೆ ತೊಂದರೆಯಾಗುತ್ತ್ದೆ ಎಂದು ವಿಷಾದ ವ್ಯಕ್ತಪಡಿಸುವುದರ ಜೊತೆಗೆ ಕ್ಷಮೆ ಕೇಳಲು ಇಚ್ಛಿಸುತ್ತಾರೆ ಮರಣ ಹೊಂದುವ ವ್ಯಕ್ತಿ.

ಅಂದು ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದರೆ: ಕೆಲವೊಮ್ಮೆ ಮನುಷ್ಯ ಜೀವಂತವಾಗಿದ್ದೂ ಸತ್ತಂತಿರುತ್ತಾನೆ. ತನ್ನ ಭಾವನೆಗಳನ್ನು ಸ್ಪಷ್ಟವಾಗಿ ಹೇಳಿಕೊಳ್ಳುವುದಿಲ್ಲ. ಇದರಿಂದ ಕೆಲವೊಮ್ಮೆ ಆಪ್ತ ಸ್ನೇಹಿತರನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಸಾಯುವ ಮುನ್ನ ಮನುಷ್ಯ ಈ ಬಗ್ಗೆಯೂ ವಿಷಾದ ವ್ಯಕ್ತಪಡಿಸುತ್ತಾನೆ. ಅಂದು ನಾನು ನನ್ನ ಭಾವನೆಗಳನ್ನು ಹೇಳಿದ್ದರೆ ನನ್ನ ಸ್ನೇಹಿತ ಇಂದು ನನ್ನ ಬಳಿ ಇರುತ್ತಿದ್ದ ಎಂದು ಬೇಸರ ವ್ಯಕ್ತಪಡಿಸುತ್ತಾನೆ.

ಸ್ನೇಹಿತರ ಜೊತೆ ಸ್ನೇಹ ನಿಭಾಯಿಸಿದ್ದರೆ: ಸ್ನೇಹಿತರು ಕಷ್ಟದಲ್ಲಿರುವಾಗ ಅವರಿಗೆ ಸಹಾಯ ಮಾಡದೇ ಗೆಳೆತನವನ್ನು ಪೂರ್ಣವಾಗಿ ನಿಭಾಯಿಸದ ವ್ಯಕ್ತಿ ಕೊನೆಗಾಲದಲ್ಲಿ ಈ ಬಗ್ಗೆ ಪಶ್ಚಾತಾಪ ಪಡುತ್ತಾನೆ. ಸ್ನೇಹಕ್ಕೆ ಬೆಲೆ ಕೊಟ್ಟು, ಸ್ನೇಹಿತನಿಗೆ ನೆರವಾಗಬೇಕಿತ್ತೆಂದು ವಿಷಾದ ವ್ಯಕ್ತಪಡಿಸುತ್ತಾನೆ. ತನ್ನ ತಪ್ಪನ್ನು ನೆನೆದು ಮರುಗುತ್ತಾನೆ. ಆ ಸ್ನೇಹಿತನಲ್ಲಿ ಅಥವಾ ವ್ಯಕ್ತಿಗೆ ಕ್ಷಮೆ ಕೇಳಲು ಬಯಸುತ್ತಾನೆ.

ನನ್ನ ಸಂತೋಷ: ಸಾವಿನ ಅಂಚಿನಲ್ಲಿರುವ ವ್ಯಕ್ತಿ ತಾನು ತನ್ನ ಜೀವನದಲ್ಲಿ ಕಳೆದುಕೊಂಡ ಸಂತೋಷದ ಬಗ್ಗೆಯೂ ಚಿಂತನೆ ನಡೆಸುತ್ತಾನೆ. ಬೇರೆಯವರ ಕಷ್ಟ-ಸುಖ ನೋಡುವ ಜೊತೆಗೆ ನನ್ನನ್ನು ನಾನು ಸಂತೋಷವಾಗಿಟ್ಟುಕೊಳ್ಳುವ ಕೆಲಸ ಮಾಡಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಚಿಂತಿಸುತ್ತಾನೆ. ಸಾಂಪ್ರದಾಯಿಕ ವಿಷಯಗಳನ್ನು ಉಳಿಸಿಕೊಂಡು,ಆಧುನಿಕ ವಿಷಯಗಳನ್ನು ಹೊರಗಿಟ್ಟು ಬದುಕುತ್ತ ಬಂದೆ ಎಂಬುದರ ಬಗ್ಗೆಯೂ ವಿಷಾದಿಸುತ್ತಾನೆ.


ಲೇಖಕರು : ದೀಪ್ತಿ ನಾಯರ್

ಅನುವಾದಕರು: ರೂಪಾ ಹೆಗಡೆ

    Share on
    close