ಅಮ್ಮನ ಔಷಧಿಗಾಗಿ ಗಲ್ಲಿ ಗಲ್ಲಿ ಸುತ್ತಿದ ಬಾಲಕ ಈಗ ಸಂಗೀತದ ಧ್ರುವತಾರೆ

ಟೀಮ್​​ ವೈ.ಎಸ್​​. ಕನ್ನಡ

ಅಮ್ಮನ ಔಷಧಿಗಾಗಿ ಗಲ್ಲಿ ಗಲ್ಲಿ ಸುತ್ತಿದ ಬಾಲಕ ಈಗ ಸಂಗೀತದ ಧ್ರುವತಾರೆ

Sunday November 29, 2015,

3 min Read

ಯಶಸ್ಸಿನ ಹಿಂದೆ ಮಹಾ ಸಂಘರ್ಷ ಅಡಗಿರುತ್ತದೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸೂರ್ಯನಂತೆ ಹೊಳೆಯುತ್ತಿರುವ ಮಹಾನ್ ಗಾಯಕ, ಸಂಗೀತ ಮಾಂತ್ರಿಕ ಪಂಡಿತ್ ಜಸ್​​​ರಾಜ್ ಸಾಧನೆಯ ಹಿಂದೆಯೂ ಬಹಳಷ್ಟು ಹೋರಾಟಗಳಿವೆ. ಅವರಿಗೆ ಸಂಘರ್ಷದ ನೆನಪುಗಳು ಕಾಡುವುದು ಅದೊಂದು ಜಾಗದಲ್ಲಿ ಮಾತ್ರ. ಅದು ತಂದೆಯ ಸಮಾಧಿ. ಪೂರ್ತಿ ವರ್ಷ ಅವರು ಎಲ್ಲೇ ಇರಲಿ, ನವೆಂಬರ್ ಕೊನೆಯ ವಾರ ಮಾತ್ರ ಪಂಡಿತ್ ಜಸ್ ರಾಜ್ ಹೈದ್ರಾಬಾದ್ ಗೆ ಬರ್ತಾರೆ. ಕೆಲ ಸಮಯಗಳ ಕಾಲ ತಂದೆಯ ಸಮಾಧಿ ಮುಂದೆ ಕುಳಿತು ತಾವು ಸಂಗೀತ ಆರಂಭಿಸಿದ ಆ ದಿನಗಳನ್ನು ನೆನೆಯುತ್ತಾರೆ. ಜಸ್ ರಾಜ್ ಐದು ವರ್ಷದವರಾಗಿದ್ದಾಗ ತಂದೆಯನ್ನು ಕಳೆದುಕೊಂಡರು. ಅಲ್ಲಿಂದ ಆರಂಭವಾಯ್ತು ಅವರ ನಿರಂತರ ಹೋರಾಟ.

image


ಹೈದರಾಬಾದ್​​ನ ಅಂಬರಪೇಟ್ ನಲ್ಲಿರುವ ತಂದೆ ಸಮಾಧಿ ಬಳಿ ಕುಳಿತ ಜಸ್ ರಾಜ್, ಡಾ.ಅರವಿಂದ್ ಯಾದವ್ ಬಳಿ ತಮ್ಮ ಸಂಘರ್ಷದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಹಾನ್ ಸಾಧಕ ಹೋರಾಟದ ಹಾದಿಯನ್ನು ಈಗಲೂ ಮುಂದುವರೆಸಿದ್ದಾರೆ. ಅವರು ಪ್ರತಿ ದಿನ ಹಾಗೂ ಪ್ರತಿ ಕ್ಷಣವನ್ನು ಹೋರಾಟವೆಂದು ಭಾವಿಸುತ್ತಾರೆ.

ತಾಯಿಯ ಔಷಧಿಗಾಗಿ ಕೊಲ್ಕತ್ತಾ ಬೀದಿಗಳಲ್ಲಿ ಅಲೆದಾಡಿದ ಜಸ್ ರಾಜ್ ತಮ್ಮ ನೋವಿನ ಕಥೆಯನ್ನು ಹಂಷಿಕೊಂಡಿದ್ದಾರೆ. ``ತಂದೆಯ ಸೇವೆ ಮಾಡಲಾಗಲಿಲ್ಲ. ಅಮ್ಮ ಜೊತೆಗಿದ್ದಳು. ಆದರೆ ಅವರನ್ನು ಕ್ಯಾನ್ಸರ್ ತಿನ್ನುತ್ತಿತ್ತು. 50ರ ದಶಕದಲ್ಲಿ ಕ್ಯಾನ್ಸರ್ ಬಂದವರ ಸ್ಥಿತಿ ಹೇಗಿರುತ್ತಿತ್ತು ಎಂದು ಈಗ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಡಾಕ್ಟರ್ ನೀಡಿದ ಔಷಧಿ ತರಲು ದಕ್ಷಿಣ ಕೊಲ್ಕತ್ತಾದಿಂದ ಕೇಂದ್ರ ಕೊಲ್ಕತ್ತಾದವರೆಗೆ ಬಂದಿದ್ದೆ. ಅನೇಕ ಔಷಧಿ ಅಂಗಡಿಗಳಲ್ಲಿ ಆ ಔಷಧಿಯೇ ಇರಲಿಲ್ಲ. ಒಂದು ಅಂಗಡಿಯಲ್ಲಿ ಔಷಧಿ ಸಿಗ್ತು. ಆದರೆ ಅದರ ಬೆಲೆ ದುಬಾರಿಯಾಗಿದ್ದರಿಂದ ಜೇಬಿನಲ್ಲಿದ್ದ ಹಣ ಸಾಕಾಗಲಿಲ್ಲ. ಓಗ ನನ್ನ ಬಳಿ ಇರುವಷ್ಟು ಹಣ ನೀಡುತ್ತೇನೆ. ಔಷಧಿ ಕೊಡಿ, ಉಳಿದ ಹಣವನ್ನು ನಂತರ ನೀಡುತ್ತೇನೆ ಎಂದೆ. ಆದರೆ ಅಂಗಡಿಯಾತ ಒಪ್ಪಲಿಲ್ಲ. ಆ ವೇಳೆ ನನ್ನ ಭುಜದ ಮೇಲೆ ಕೈ ಇಟ್ಟ ವ್ಯಕ್ತಿಯೊಬ್ಬರು ಎಷ್ಟು ಹಣ ಇದೆ ಕೊಡು. ಉಳಿದ ಹಣವನ್ನು ನನ್ನ ಖಾತೆಗೆ ಬರೆದು ಆತನಿಗೆ ಔಷಧಿ ಕೊಡು ಎಂದರು. ಅವರು ಬೇರೆ ಯಾರೂ ಅಲ್ಲ, ಅಂಗಡಿ ಮಾಲೀಕರಾಗಿದ್ದರು. ಅವರಿಗೆ ನನ್ನ ಪರಿಚಯ ಹೇಗಿತ್ತು ಎಂಬುದು ನನಗೆ ತಿಳಿದಿಲ್ಲ’’ ಎನ್ನುತ್ತಾರೆ ಜಸ್ ರಾಜ್.

image


ಹೋರಾಟ, ಹಾರ್ಡ್ ವರ್ಕ್, ಪ್ರಯತ್ನ ಜೀವನದಲ್ಲಿ ಮುಖ್ಯ. ಇವುಗಳ ಜೊತೆಗೆ ದೇವರ ಕೃಪೆ ಕೂಡ ಇರಬೇಕಂತೆ. ಜಸ್ ರಾಜ್ ಹಾದಿಯಲ್ಲಿ ಅನೇಕರ ಮಾರ್ಗದರ್ಶನವಿದೆ. ಅವರ ಹೋರಾಟದ ಹಾದಿಯಲ್ಲಿ ಅನೇಕ ಕಥೆಗಳಿವೆ. ತಾಯಿಗೆ ಔಷಧಿ ವ್ಯವಸ್ಥೆ ಮಾಡಲಾಯಿತು. ವೈದ್ಯರು ದಿನಕ್ಕೆ ಎರಡು ಬಾರಿ ಇಂಜೆಕ್ಷನ್ ನೀಡುವಂತೆ ಸೂಚಿಸಿದರು. ಪ್ರತಿ ಬಾರಿ 15 ರೂಪಾಯಿ ನೀಡಬೇಕಾಗಿತ್ತು. ಒಮ್ಮೆ ಇಂಜೆಕ್ಷನ್ ಗೆ ಜಸ್ ರಾಜ್ ಹಣ ನೀಡಿದರು. ಡಾಕ್ಟರ್ ಸಿಕ್ಕಾಗ, ಆಲ್ ಇಂಡಿಯಾ ರೆಡಿಯೋದಲ್ಲಿ ಸಂಜೆ ನಾನು ಹಾಡುತ್ತೇನೆ. ಕೇಳಿ ಎಂದು ಡಾಕ್ಟರ್ ಬಳಿ ವಿನಂತಿಸಿಕೊಂಡರು. ನನಗೆ ಕೇಳಲು ಆಗುವುದಿಲ್ಲ. ನಾನು ಸೊಸೆ ಮನೆಗೆ ಹೋಗುತ್ತೇನೆಂದರು ಡಾಕ್ಟರ್. ಇದು ಜಸ್ ರಾಜ್ ನಿರಾಸೆಗೆ ಕಾರಣವಾಯ್ತು. ಆದರೆ ಮರುದಿನ ಬಂದ ಡಾಕ್ಟರ್ ಮುಖ ಬೇರೆಯದನ್ನೇನೋ ಹೇಳುತ್ತಲಿತ್ತು. ಹತ್ತಿರ ಬಂದ ಅವರು ನಿನ್ನೆ ನಾನು ನಿನ್ನ ಹಾಡು ಕೇಳಿದೆ. ನನ್ನ ಸೊಸೆ ಮನೆಯಲ್ಲಿ ಹಾಡು ಕೇಳಿದೆ. ಹಾಡುಗಾರರ ಬಳಿ ಹಣ ಇರೋದಿಲ್ಲ ಎಂದಳು ನನ್ನ ಸೊಸೆ ಎಂದ್ರು. ಅವರ ಸೊಸೆ ಬೇರೆ ಯಾರೂ ಅಲ್ಲ ಗೀತಾ ರಾಯ್. ಅವರು ನಂತರ ಗೀತಾ ದತ್ ಹೆಸರಿನಲ್ಲಿ ಪ್ರಸಿದ್ಧಿ ಪಡೆದರು. ಆ ದಿನದ ನಂತರ ಡಾಕ್ಟರ್ ಪ್ರತಿ ಇಂಜಕ್ಷನ್ ಗೆ 2 ರೂಪಾಯಿ ಪಡೆಯುತ್ತಿದ್ದರು. ಹೀಗೆ ಹೋರಾಟದ ದಿನಗಳಲ್ಲಿ ಒಬ್ಬರಲ್ಲ ಒಬ್ಬರು ನನ್ನ ಜೊತೆ ನಡೆದರು ಎನ್ನುತ್ತ ಕೈ ಹಿಡಿದವರನ್ನು ನೆನೆಯುತ್ತಾರೆ ಮಹಾನ್ ಗಾಯಕ.

image


ಸಂಘರ್ಷದಿಂದ ಯಶಸ್ಸು ಸಿಗುತ್ತದೆ. ಯಶಸ್ಸನ್ನು ನಾನು ಎಂಬ ದೃಷ್ಟಿಯಲ್ಲಿ ನೋಡಬಾರದು. ಮನುಷ್ಯನಿಗೆ ಅಹಂಕಾರ ಬಂದರೆ ಆತನ ಪಯಣ ಮುಗಿದಂತೆ. ಇದರಿಂದ ಹೋರಾಟ ನಿಜವಾದ ಅರ್ಥ ಕಳೆದುಕೊಳ್ಳುತ್ತದೆ ಎಂಬುದು ಜಸ್ ರಾಜ್ ಅಭಿಪ್ರಾಯ.

ಪಂಡಿತ್ ಜಸ್ ರಾಜ್ ಹೈದ್ರಾಬಾದ್ ನ ಕೆಲವು ಗಲ್ಲಿಗಳಲ್ಲಿ ತಮ್ಮ ಬಾಲ್ಯ ಕಳೆದಿದ್ದಾರೆ. ಗೌಲಿಗುಡಾ ಚಮನ್ ಮತ್ತು ನಾಂಪಳ್ಳಿ ಪ್ರದೇಶಗಳಲ್ಲಿ ಅವರ ಬಾಲ್ಯದ ನೆನಪುಗಳಿವೆ. ಶಾಲೆಗೆ ಹೋಗುತ್ತಿದ್ದ ರಸ್ತೆ, ಹೋಟೆಲ್ ಗಳ ಬಗ್ಗೆ ಅವರಿಗೆ ನೆನಪಿದೆ.ಅಲ್ಲಿ ನಿಂತುಕೊಂಡು ಅವರು `ದಿವಾನಾ ಬನಾನಾ ಹೇ ತೋ ದಿವಾನಾ ಬನಾದೆ, ವರ್ನಾ ಕಹಿ ತಕದೀರ್ ತಮಾಷಾ ನ ಬನಾದೆ’ ಎಂಬ ಬೇಗಂ ಅಖ್ತರ್ ಗಝಲ್ ಹೇಳುತ್ತಿದ್ದರು. ಇದೇ ಗಝಲ್ ಅವರ ಶಾಲೆ ಬಿಡಿಸ್ತು. ನಂತರ ಅವರು ತಬಲಾ ಕಲಿಯಲು ಶುರುಮಾಡಿದರು.ಕೆಲ ವರ್ಷಗಳ ನಂತರ ಲಾಹೋರ್ ನಲ್ಲಿ ತಮ್ಮ ಗಾಯನ ಹೊರಹಾಕಲು ಮುಖ್ಯ ವೇದಿಕೆ ಸಿಗ್ತು. ಆದರೆ ಒಬ್ಬ ಗಾಯಕನಾಗಲು ಅವರು ಬಹಳಷ್ಟು ಹೋರಾಟ ನಡೆಸಬೇಕಾಯ್ತು.

ಜೀವನದಲ್ಲಿ ಸ್ಫೂರ್ತಿ ಸಿಗಬೇಕೆಂದರೆ ನಿರಂತರವಾಗಿ ಕೆಲಸ ಮಾಡುತ್ತಿರಬೇಕು. ಹಾಡುವ ಹವ್ಯಾಸವಿದ್ದರೆ ಹೊಸದನ್ನು ಕಲಿಯುತ್ತಿರಿ,ಅಭ್ಯಾಸ ಮಾಡುತ್ತಿರಿ. ಅಲ್ಲದೆ ದೇವರ ಕೃಪೆಗೆ ಕಾಯುತ್ತಿರಿ ಎನ್ನುತ್ತಾರೆ ಸಂಗೀತ ಲೋಕದ ಜೀವಂತ ದಂತ ಕಥೆ ಜಸ್ ರಾಜ್.

ಲೇಖಕರು: ಡಾ. ಅರವಿಂದ್​​ ಯಾದವ್​​​

ಅನುವಾದಕರು: ರೂಪಾ ಹೆಗಡೆ

    Share on
    close