ರಾಜಧಾನಿಯಲ್ಲಿ ಕೊಡಗಿನ ಕಾಫಿಯ ಕಂಪು : ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಪೆಷಲ್ ಟ್ಯಾಬ್ಲೋ..

ಬಿಆರ್​​ಪಿ ಉಜಿರೆ

ರಾಜಧಾನಿಯಲ್ಲಿ ಕೊಡಗಿನ ಕಾಫಿಯ ಕಂಪು : ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಪೆಷಲ್ ಟ್ಯಾಬ್ಲೋ..

Monday January 25, 2016,

2 min Read

image


ರಾಜಧಾನಿ ನವದೆಹಲಿಯಲ್ಲಿ ಪ್ರತೀ ಗಣರಾಜ್ಯೋತ್ಸವದಂದು ನಡೆಯುವ ಆಕರ್ಷಕ ಪಥ ಸಂಚಲನ ಇಡೀ ದೇಶ ಹಾಗೂ ವಿಶ್ವದ ಗಮನ ಸೆಳೆಯುತ್ತೆ. ಅದ್ರಲ್ಲೂ ಪರೇಡ್ ನಲ್ಲಿ ಭಾಗವಹಿಸುವ ಟ್ಯಾಬ್ಲೋಗಳು ಇನ್ನಿಲ್ಲದ ಆಕರ್ಷಣೆ ಪಡೆದಿವೆ. ಆಯಾ ರಾಜ್ಯಗಳ ಇತಿಹಾಸ, ಸಾಂಸ್ಕೃತಿಕ ಪರಂಪರೆ ಹಾಗೂ ಜನಜೀವನವನ್ನ ಬಿಂಬಿಸುವ ಸ್ತಬ್ಧಚಿತ್ರಗಳನ್ನ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪ್ರದರ್ಶಿಸಲಾಗುತ್ತಿದೆ. ಇನ್ನು ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಳೆದ 6 ವರ್ಷಗಳಿಂದ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಸಂಸ್ಕೃತಿ, ಜಾನಪದ ಕಲೆಗಳನ್ನು ಒಳಗೊಂಡ ಸ್ತಬ್ಧ ಚಿತ್ರಗಳನ್ನು ಪ್ರತಿಬಿಂಬಿಸುತ್ತಾ ಬರಲಾಗಿದೆ. ಈ ಬಾರಿಯ ಗಣರಾಜ್ಯೋತ್ಸವದಲ್ಲೂ ಕರ್ನಾಟಕ ತನ್ನ ವಿಶೇಷತೆಯನ್ನ ಸ್ತಬ್ಧ ಚಿತ್ರದ ಮೂಲಕ ಪ್ರತಿಬಿಂಬಿಸಲಿದೆ. ಈ ಬಾರಿ ರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಲಿರುವ ಟ್ಯಾಬ್ಲೋದ ವಸ್ತು ಕೊಡಗಿನ ಕಾಫಿ.

image


ಕಾಫಿನಾಡು ಕೊಡಗು. ಸುಂದರ ಪ್ರಕೃತಿಯ ನಡುವೆ ಹಲವು ಸಂಕಷ್ಟ ನಡುವೆಯೇ ಕಾಫಿ ಬೆಳೆಗಾರರು ಇಲ್ಲಿ ಕಾಫಿಯನ್ನು ಬೆಳೆಯುತ್ತಾರೆ. ಹೀಗೆ ಸ್ವಾದಿಷ್ಟತೆಗೆ ಹೆಸರಾಗಿದ್ದ ಕೊಡಗಿಗೆ ಈ ಬಾರಿ ರಾಷ್ಟ್ರ ಮಾನ್ಯತೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕೊಡಗಿನ ಕಾಫಿಯ ಟ್ಯಾಬ್ಲೋ ಎಲ್ಲರ ಗಮನಸೆಳೆಯಲಿದೆ. ಆ ದಿಸೆಯಲ್ಲಿ ಇದೇ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಕಾಫಿ ಬೆಳೆಗೆ ಸಂಬಂಧಿಸಿದಂತೆ ಸ್ತಬ್ಧಚಿತ್ರ ನಿರ್ಮಾಣವಾಗಿದೆ. ಈ ಮೂಲಕ ದೆಹಲಿಯ ರಾಜಪಥದಲ್ಲಿ ಕೊಡಗಿನ ಕಾಫಿ ಪರಿಮಳ ಇಡೀ ವಿಶ್ವಕ್ಕೆ ಪಸರಿಸಲಿದೆ. ಇನ್ನು ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲಿರುವ ಟ್ಯಾಬ್ಲೋ ಈಗಾಗಲೇ ಆಕರ್ಷಕವಾಗಿ ಅಂತಿಮ ತಾಲೀಮು ನಡೆಸಿದೆ.

image


ಕಾಫಿ ಬೀಜ ಸಂಸ್ಕರಣೆಗೊಂಡು ಕಾಫಿ ಪುಡಿಯಾಗಿ ನಂತ್ರ ಸ್ವಾದಿಷ್ಟ ಕಾಫಿಯಾಗಿ ಕಪ್ ಗೆ ಬರುವ ವಿವಿಧ ಹಂತಗಳನ್ನು ಈ ಟ್ಯಾಬ್ಲೋದಲ್ಲಿ ತೋರಿಸಲಾಗಿದೆ. ಪ್ರಧಾನ ಭಾಗದಲ್ಲಿ ಕಾಫಿ ತೋಟದಲ್ಲಿ ಕಾಫೀ ಹಣ್ಣು ಕೀಳುತ್ತಿರುವ ಮಹಿಳೆ ಇದ್ದಾಳೆ. ಇನ್ನು ಕಾಫಿ ಕಪ್ ನಲ್ಲಿ ವಿಶ್ವಕ್ಕೇ ಕಾಫಿ ಸ್ವಾದವನ್ನು ಪಸರಿಸುವಂತೆ ಬಿಂಬಿಸಲಾಗಿದೆ. ಹಾಗೆಯೇ, ಕಾಫಿ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ ಎನ್ನುವುದನ್ನು ಪ್ರತಿಬಿಂಬಿಸಲಾಗಿದೆ. ಕಾಫಿ ಹಣ್ಣುಗಳನ್ನು ಹಸನುಗೊಳಿಸುತ್ತಿರುವ ಮತ್ತು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಹಂತಗಳನ್ನು ತೋರಿಸಲಾಗಿದೆ. ವಾಹನದ ಮುಂಭಾಗದಲ್ಲಿ ಫಿಲ್ಟರ್ ಕಾಫಿ ತಯಾರಿಸುವ ಪರಿಕರಗಳನ್ನು ಇಡಲಾಗಿದೆ. ಕಾಫಿ ಬೀಜಗಳ ರಾಶಿಯ ನಡುವೆ ಇರುವ ಲೋಟಕ್ಕೆ ಬಟ್ಟಲಿನಿಂದ ಕಾಫಿಯನ್ನು ಸುರಿಯಲಾಗುತ್ತಿದೆ. ಫೀಲ್ಟರ್ ಕಾಫಿ ತಯಾರಿಸುವ ಪಾತ್ರಗಳು ಸಕ್ಕರೆ ಬಟ್ಟಲುಗಳು ಸಹ ಪ್ರಧಾನವಾಗಿ ಕಂಡುಬರುತ್ತಿದೆ. ಸ್ತಬ್ಧಚಿತ್ರದ ಮೇಲು ಭಾಗದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿವಿಧ ಹಂತಗಳನ್ನು ಪರೀಶೀಲಿಸುವ ಕಾಫಿ ತೋಟದ ಮಾಲಿಕರನ್ನು ಇಲ್ಲಿ ಬಿಂಬಿಸಲಾಗಿದೆ.

`ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಪರವಾಗಿ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ವಾರ್ತಾ ಇಲಾಖೆಯು ಕಳೆದ ಆರು ವರ್ಷಗಳಿಂದ ಸತತವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ. ಹೆಸರಾಂತ ಬರಹಗಾರ ಡಾ. ಎಚ್. ಎಲ್. ನಾಗೇಗೌಡರ ಅವರ `ಬೆಟ್ಟದಿಂದ ಬಟ್ಟಲಿಗೆ' ಕೃತಿಯಿಂದ ಪ್ರೇರಣೆ ಪಡೆದುಕೊಂಡು ಈ ಸ್ಥಬ್ತಚಿತ್ರಕ್ಕೆ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಈಗ ಅದು ವಾಸ್ತವಾಗಿ ಪ್ರದರ್ಶನಗೊಳ್ಳುತ್ತಿದೆ. ಬರಹಗಾರದ ಡಾ. ಎಚ್. ಎಲ್. ನಾಗೇಗೌಡರ ಜನ್ಮ ಶತಮಾನ ವರ್ಷವೂ ಆಗಿರುವ ಈ ವರ್ಷವೇ `ರಾಜಪಥ'ದಲ್ಲಿ `ಕಾಫಿ' ಮೆರವಣಿಗೆ ಹೊರಟಿರುವ ಸಹಜವಾಗಿ ಸಂತಸ ತಂದಿದೆ. ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಯುವ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಈ ವಸ್ತುವಿಗೆ ಸಂಗೀತವನ್ನು ರಚಿಸಿದ್ದಾರೆ. ಹೀಗೆ ಗಣರಾಜ್ಯೋತ್ಸದಂದು ಕೊಡಗು ಹಾಗ ಕನ್ನಡಿಗರ ಪ್ರತೀಕವಾಗಿ ರಾಜಪಥದಲ್ಲಿ ಕಾಣಿಸಿಕೊಳ್ಳಲಿರುವ ಈ ಟ್ಯಾಬ್ಲೋ ವಿಶ್ವಮಟ್ಟದಲ್ಲಿ ಗಮನ ಸೆಳೆಯಲಿದೆ ಅನ್ನೋದು ಎಲ್ಲರ ನಂಬಿಕೆ.