17 ವರ್ಷದ ತರುಣ- ಸುಂದರ ಕ್ರೀಡಾಕೂಟ- 6.5ಲಕ್ಷ ರೂಪಾಯಿ ಸಂಗ್ರಹ- ಇದು ಶೀಲ್ ಸೋನ್‌ಜಿ ಕಥೆ

ಟೀಮ್ ವೈ.ಎಸ್.

17 ವರ್ಷದ ತರುಣ- ಸುಂದರ ಕ್ರೀಡಾಕೂಟ- 6.5ಲಕ್ಷ ರೂಪಾಯಿ ಸಂಗ್ರಹ- ಇದು ಶೀಲ್ ಸೋನ್‌ಜಿ ಕಥೆ

Friday October 02, 2015,

4 min Read

ನೀವಂದುಕೊಂಡಂತೆ ಶೀಲ್ ಸೋನ್‌ಜಿ ಕೇವಲ 17ರ ಹರೆಯದ ಹುಡುಗ ಮಾತ್ರ ಅಲ್ಲ. ಒಬ್ಬ ಕಿಶೋರ ಇಷ್ಟು ಗಂಭೀರವಾಗಿ ಸಾಧನೆಯಲ್ಲಿ ನಿರ್ವಹಿಸಿದ್ದಾನೆಂದರೆ ಅದನ್ನು ಒಪ್ಪಿಕೊಳ್ಳುವುದು ಕೊಂಚ ಕಷ್ಟ. ಆದರೆ 30 ಸೆಕೆಂಡ್ ಅವನ ಜೊತೆ ಮಾತನಾಡಿದರೆ ಸಾಕು ಶೀಲ್‌ನ ಕ್ರಿಯಾಶೀಲತೆ ನಿಮ್ಮ ಅರಿವಿಗೆ ಬರುತ್ತದೆ. ಶೀಲ್ ಒಬ್ಬ ವ್ಯಾವಹಾರಿಕ ಹಾಗೂ ಪ್ರಬುದ್ಧ ತರುಣ. ಸುಮಾರು 6.5ಲಕ್ಷ ರೂ. ಮೊತ್ತವನ್ನು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಕಲ್ಯಾಣ ಮತ್ತು ಶಿಕ್ಷಣಕ್ಕಾಗಿ ಗಳಿಸಿದ್ದಾನೆಂದರೆ ಆತನ ಸಾಮರ್ಥ್ಯದ ಅಂದಾಜು ನಿಮಗಾಗಬಹುದು.

10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗಲೇ ಕ್ರೀಡಾಕೂಟದ ಆಯೋಜನೆ:

10ನೇ ತರಗತಿಯ ನಂತರ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಬದಲಾವಣೆ ತಂದಿದ್ದು ಶೀಲ್ ಪಾಲಿಗೆ ಅವಕಾಶವೊಂದನ್ನು ಸೃಷ್ಟಿಸಿತ್ತು. ಐಬಿ(ಇಂಟರ್ನ್ಯಾಶನಲ್ ಬಕ್ಕಲೌರಿಯೇಟ್) ಶೀಲ್ ನ ಶೈಕ್ಷಣಿಕ ಪ್ರಗತಿಯ ಜೊತೆ ಆತನ ಬೇರೆ ಆಸಕ್ತಿಗಳ ಕುರಿತಾಗಿ ಬೆಳಕು ಚೆಲ್ಲಿದೆ. ತನ್ನ ವಿದ್ಯಾಭ್ಯಾಸದ ಜೊತೆಗೆ ಸಿಎಎಸ್(ಕ್ರಿಯೇಟಿವ್, ಆ್ಯಕ್ಷನ್ ಮತ್ತು ಸರ್ವಿಸ್) ಅಂದರೆ ಸೃಜನಾತ್ಮಕತೆ, ಕಾರ್ಯರೂಪ ಮತ್ತು ಸೇವೆ ಕ್ಷೇತ್ರಗಳಲ್ಲಿ ಶೀಲ್ ಕ್ರಿಯಾಶೀಲನಾಗಿದ್ದಾನೆ.

ಐಬಿಯ ಚಟುವಟಿಕೆಯ ಮಾದರಿಯಂತೆ 11ನೇ ತರಗತಿ ಪ್ರಾರಂಭದಲ್ಲೇ ಶೀಲ್ ತನ್ನ ಗೆಳೆಯರೊಂದಿಗೆ ಹತ್ತಿರದ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಕಲಿಸತೊಡಗಿದ್ದ. ಶೀಲ್ ಹೇಳುವಂತೆ, ಸ್ಥಳೀಯ ಭಾಷೆಗಳ ತೊಡಕಿನಿಂದ ಹೊರಬಂದು ಆ ಶಾಲೆಯ ಮಕ್ಕಳಿಗೆ ಒರಿಗಾಮಿ, ವೇದಿಕ್ ಮ್ಯಾಥ್ಸ್ ಅಥವಾ ವೇದಗಣಿತ, ಫುಟ್ಬಾಲ್, ನೃತ್ಯಗಳನ್ನು ಕಲಿಸತೊಡಗಿದ್ದ. ಈ ಚಟುವಟಿಕೆಗಳಿಂದ ಖುಷಿಯಾದ ಶೀಲ್ ಗೆ ಆತನ ರಜಾಕಾಲದಲ್ಲೂ ಮಕ್ಕಳಿಗೆ ಕಲಿಸುವ ಉತ್ಸಾಹವಿತ್ತು. ಆದರೆ ಆ ಸಂದರ್ಭದಲ್ಲಿ ಅಲ್ಲಿ ಚುನಾವಣಾ ಸಂಬಂಧಿ ಕೆಲಸ ಕಾರ್ಯಗಳಾಗುತ್ತಿದ್ದ ಕಾರಣ ಇದು ಸಾಧ್ಯವಾಗಲಿಲ್ಲ. ಶೀಲ್ ಇಂಟರ್ನೆಟ್ ನಲ್ಲಿ ಕೆಲವು ಎನ್ ಜಿಒಗಳನ್ನು ಹುಡುಕುವ ಯತ್ನ ಮಾಡಿದ್ದನು. ಆಗ ಅವನು ಸಂಪರ್ಕಿಸಿದ ಸಂಸ್ಥೆಯೇ ಸಮೀಕ್ಷಾ ಫೌಂಡೇಶನ್. ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಇಂಗ್ಲೀಷ್ ಕಲಿಸಲು ಅವನು ಉತ್ಸುಕನಾಗಿದ್ದ.

image


ಮೊದಲ ಕಾರ್ಯಕ್ರಮದಲ್ಲೇ 6.5ಲಕ್ಷ ಗಳಿಕೆ

ಸಮೀಕ್ಷಾ ಸಂಸ್ಥೆಯಲ್ಲಿ ಮಕ್ಕಳಿಗೆ ಕಲಿಸಲು ಆರಂಭಿಸಿದ ಶೀಲ್, ಅವರೊಂದಿಗೆ ನಿಕಟ ಸಂಬಂಧ ಗಳಿಸಿದ್ದ. ಆದ್ದರಿಂದ ಆತ ಒಂದು ಹೆಜ್ಜೆ ಮುಂದೆ ಯೋಚಿಸಿ ಆ ಮಕ್ಕಳ ಕಲ್ಯಾಣಕ್ಕಾಗಿ ಯೋಜನೆಯೊಂದನ್ನು ಹಮ್ಮಿಕೊಂಡ. ಬಳಿಕ ಶೀಲ್ ಬೆಂಗಳೂರಿನ ಪ್ಲೇ ಅರೆನಾದಲ್ಲಿ ಒಂದು ದಿನದ ಬೃಹತ್ ಮಟ್ಟದ ಚಾರಿಟಿ ಫುಟ್ಬಾಲ್ ಟೂರ್ನಮೆಂಟ್ ನ್ನು ಆಯೋಜಿಸಿದ. ಫುಟ್ಬಾಲ್ ಆಟದ ಮೇಲೆ ಆಸಕ್ತಿ ಹೊಂದಿದ್ದರಿಂದ ಶೀಲ್ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಿದ್ದ.

ಯೋಜನೆಯನ್ನು ಕಾರ್ಯಗತಗೊಳಿಸಿದ್ದು ಹೇಗೆ?

ಶೀಲ್, ಶಾಲೆಯಲ್ಲಿ ಕಲಿತ ವ್ಯಾವಹಾರಿಕ ನಿರ್ವಹಣೆ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಹಾಗೂ ಸಂಪನ್ಮೂಲ ನಿರ್ವಹಣೆ ವಿಷಯಗಳನ್ನು ಇಲ್ಲಿ ಜಾರಿಗೊಳಿಸಲು ತೀರ್ಮಾನಿಸಿದ್ದ. ಅತ್ಯಂತ ಕಷ್ಟಕರ ದಾರಿಯನ್ನೇ ಆರಿಸಿಕೊಂಡಿದ್ದ ಶೀಲ್, ಅದನ್ನು ಶತಾಯಗತಾಯ ಜಾರಿಗೊಳಿಸಲು ಇಚ್ಛಿಸಿದ್ದ. ಆತನ ಲಿಂಕ್ದಿನ್ ಸಂಪರ್ಕಗಳನ್ನು ಬಳಸಿಕೊಂಡು ದೊಡ್ಡ ದೊಡ್ಡ ಸಂಸ್ಥೆಗಳ ಹೆಚ್ಆರ್ ಮ್ಯಾನೇಜರ್ ಗಳನ್ನು ಸಂಪರ್ಕಿಸಿದ. ಬಳಿಕ ಕೆಲವು ಮಹತ್ತರ ಜವಾಬ್ದಾರಿಗಳನ್ನು ಸ್ನೇಹಿತರಿಗೆ ವರ್ಗಾಯಿಸಿದ್ದ. ಗೆಳೆಯರೊಂದಿಗೆ ಕೂಡಿ ಅವರ ಕಾಲೋನಿಯಲ್ಲಿ ಮನೆ ಮನೆಗೆ ತೆರಳಿ ದೇಣಿಗೆ ಹಣವನ್ನು ಸಂಗ್ರಹಿಸಿದ. ಆದಾಯತೆರಿಗೆ ವಿಷಯದಲ್ಲಿ ಉಲ್ಲೇಖಿಸಲ್ಪಡುವ 80ಜಿ ನಂತೆ ಕೆಲವು ಸಂಸ್ಥೆಗಳಿಂದ ಚಾರಿಟಿ ಹೆಸರಿನಲ್ಲಿ ಚೆಕ್ ಗಳನ್ನು ಪಡೆದುಕೊಂಡ.

ಸಣ್ಣ ಸಣ್ಣ ಸಂಗತಿಗಳಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಿ ಪಂದ್ಯಾಟವನ್ನು ಆಯೋಜನೆ ಮಾಡಿದ ಶೀಲ್, ಯುಇಎಫ್ಎ ಫೆಡರೇಷನ್ ನ ತರಬೇತುದಾರರಿಗೆ ಮ್ಯಾಚ್ ರೆಫರಿಯಾಗಿ ಟೂರ್ನಮೆಂಟ್ ನಲ್ಲಿ ಕಾರ್ಯನಿರ್ವಹಿಸುವಂತೆ ಕೋರಿಕೊಂಡ. ಜೊತೆಗೆ ಉಳಿದ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲವು ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ. ಇದರ ಫಲವೆನ್ನುವಂತೆ ಪ್ಯಾರಾಮೌಂಟ್ ಹಾಗೂ ಸಕ್ರ ವರ್ಲ್ಡ್ ಆಸ್ಪತ್ರೆಗಳು ಕ್ರೀಡಾಪಟುಗಳ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ನೀಡಲು ಒಪ್ಪಿಕೊಂಡವು. ಟೂರ್ನಮೆಂಟ್ ಆಯೋಜನೆಯಾಗಿದ್ದ ಪ್ಲೇ ಅರೆನಾದ ಕ್ರೀಡಾಂಗಣದ ನಿರ್ವಾಹಕರು ಈ ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡಲು ಒಪ್ಪಿ ದೊಡ್ಡ ಪ್ರಮಾಣದ ರಿಯಾಯಿತಿ ನೀಡಿದರು.

image


ಫುಟ್ಬಾಲ್ ತಂಡಗಳು ಟೂರ್ನಮೆಂಟ್ ನಲ್ಲಿ ದಾಖಲಾತಿ ನಮೂದಿಸಿದ ನಂತರ ಶೀಲ್ ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳಿಗೆ ಪಂದ್ಯಾವಳಿ ನೋಡಿ ದೇಣಿಗೆ ನೀಡುವಂತೆ ಮನವಿ ಪತ್ರ ಸಲ್ಲಿಸಿದ.

ಮನೆ ಮನೆ ತಿರುಗಿ ಸಂಗ್ರಹಿಸಿದ್ದ ದೇಣಿಗೆಯ ಹಣ, ಕೆಲವು ಸಂಸ್ಥೆಗಳ ಉದಾರ ಆರ್ಥಿಕ ನೆರವು ಜೊತೆಗೆ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡು ವ್ಯಾಪಕವಾಗಿ ದೇಣಿಗೆ ನೀಡಿದ ಕಾರ್ಪೋರೇಟ್ ಸಂಸ್ಥೆಗಳ ಸಹಾಯದಿಂದ ಪಂದ್ಯಾವಳಿ ಮುಗಿದ ಬಳಿಕ ಶೀಲ್ ಸುಮಾರು 6.5ಲಕ್ಷ ರೂ, ಸಂಗ್ರಹಿಸಿದ್ದ.

ಶ್ಲಾಘನೆಯ ಮಾತುಗಳು

ಸ್ಪೋರ್ಟ್ಸ್ ಕೀಡಾ ಸಂಸ್ಥೆಯ ಸಂಸ್ಥಾಪಕರಾದ ಪೋರುಷ್, ಶೀಲ್ ಬಗೆಗೆ ಕೆಲವು ಉತ್ತಮ ಮಾತುಗಳನ್ನಾಡಿದ್ದಾರೆ. ಪಂದ್ಯಾವಳಿ ನಡೆಯುವ ಮುಂಚೆ ಲಿಂಕ್ದಿನ್ ನಲ್ಲಿ ಶೀಲ್ ಅವರಿಗೆ 2-3 ಸಂದೇಶಗಳನ್ನು ಕಳಿಸಿದ್ದನಂತೆ. ಅವರ ಸಂಸ್ಥೆಗೆ ಕಾರ್ಯಕ್ರಮಗಳ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯವೂ ಸಾಕಷ್ಟು ಮೇಲ್ಗಳು ಬರುತ್ತಿದ್ದಾಗ ಪೋರುಷ್ 17ವರ್ಷದ ಶೀಲ್ ಕಳಿಸಿದ್ದ ಸಂದೇಶದತ್ತ ಗಮನಕೊಟ್ಟಿದ್ದರಂತೆ. ಈ ವಯಸ್ಸಿನ ಅನೇಕ ತರುಣರು ಇಂಥದ್ದೊಂದು ಪ್ರೌಢತೆ ಹೊಂದಿರುವುದಿಲ್ಲ. ಹಾಗಾಗಿ ಶೀಲ್ ಯೋಜನೆ ಹಾಗೂ ಯೋಜನೆ ಹಿಂದಿನ ಆಶಯ ಪೋರುಷ್ರನ್ನು ಪಂದ್ಯಾವಳಿಗೆ ಕರೆತಂದಿತು.

image


ಶೀಲ್ ಪಂದ್ಯಾವಳಿಯಲ್ಲಿ ಆ್ಯಂಬ್ಯುಲೆನ್ಸ್ ಹಾಗೂ ಮೆಡಿಕಲ್ ಸಹಭಾಗಿಗಳನ್ನೂ ನೇಮಿಸಿದ್ದರು. ಈ ಅಂಶ ಪೋರುಷ್ ರನ್ನು ಸಾಕಷ್ಟು ಆಕರ್ಷಿಸಿತ್ತು. ಹಾಗಾಗಿ, ಪ್ರಾಯೋಜಕತ್ವ ನೀಡದಿದ್ದರೂ ಅವರ ಸ್ಪೋರ್ಟ್ಸ್ ಕೀಡಾದಲ್ಲಿ ಶೀಲ್ ಸಾಧನೆಯನ್ನು ಕವರ್ ಮಾಡಿದ್ದರು. ತನ್ಮೂಲಕ ಕೀಡಾಲಜಿ ಸರಣಿಯಲ್ಲಿ ಶೀಲ್ ಫುಟ್ಬಾಲ್ ಪಂದ್ಯಾಟದ ಆಯೋಜನೆ ಅಪ್ಲೋಡ್ ಆಯಿತು.

ಆ ಕಾರ್ಯಕ್ರಮದಲ್ಲಿ ಹಲವು ಪ್ರಸಿದ್ಧ ಸಂಸ್ಥೆಗಳು ಪಾಲ್ಗೊಂಡಿದ್ದವು. ಫ್ಲಿಪ್ಕಾರ್ಟ್, ಬ್ರೊಕೇಡ್, ಬ್ರೀಸಾ, ಸಾಥಿ, ಬಿಲಾಂಗ್, ಚೈಸೆಲ್ ಫಿಟ್ನೆಸ್, ಗೋಲ್ಡ್ಸ್ ಜಿಮ್ ಇತ್ಯಾದಿ ಸಂಸ್ಥೆಗಳು ಕೇವಲ ಭಾಗಿಯಾಗುವುದಷ್ಟೇ ಅಲ್ಲದೇ ಹಣ ಸಹಾಯ ಕೂಡ ಮಾಡಿದ್ದವು.

ನೀನು ಹೆಚ್ಚಿನದನ್ನು ಸಾಧಿಸುತ್ತೀಯ ಅನ್ನುವುದೇ 2ನೇ ಕಾರ್ಯಕ್ರಮ

2014ರ ನವೆಂಬರ್ ನಲ್ಲಿ ಶೀಲ್ ವಿಶ್ವವಿದ್ಯಾನಿಲಯದ ಅರ್ಜಿ ತುಂಬುವಲ್ಲಿ ನಿರತನಾಗಿದ್ದ. ಅಲ್ಲಿ ಆರ್ಥಿಕ ಸ್ಥಿರತೆ ಅನ್ನುವ ವಿಭಾಗದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ತೋರಿಸಬೇಕಿತ್ತು. ಹಾಗಾಗಿ ಯಾವುದೇ ತರಹದ ಕ್ರಿಯಾತ್ಮಕ ಕೆಲಸಗಳನ್ನು ತೋರಿಸಲಾಗದ ಶೀಲ್ ಆ ಕಾಲಂ ಅನ್ನು ಖಾಲಿ ಬಿಟ್ಟಿದ್ದ. 2015ರ ಮೇನಲ್ಲಿ ಪೋಷಕರೊಂದಿಗೆ ಬ್ಯಾಂಕ್ ಗೆ ತೆರಳಿದ್ದ ಶೀಲ್ ಗೆ ಬ್ಯಾಂಕ್ ಮ್ಯಾನೇಜರ್ ಶೈಕ್ಷಣಿಕ ಲೋನ್ ನ ಕಾರ್ಯಸೂಚಿಯನ್ನು ವಿವರಿಸುತ್ತಿದ್ದರು. ಆ ಸಂದರ್ಭದಲ್ಲಿ ಶೀಲ್ ತಮ್ಮ ತಂದೆಗೆ ಅವನು ಹಿಂದೆ ಆಯೋಜಿಸಿದ್ದ ಫುಟ್ಬಾಲ್ ಪಂದ್ಯಾವಳಿ ಹಾಗೂ ಅಲ್ಲಿ ಗಳಿಸಿದ ಹಣದ ಕುರಿತು ಹೇಳಿದ. ಶೀಲ್ ಎಲ್ಲಾ ಖರ್ಚುಗಳನ್ನು ಕಳೆದು ಸುಮಾರು 1.1 ಲಕ್ಷ ನಿವ್ವಳ ಹಣ ಉಳಿಸಿದ್ದ. ಅದೇ ಹಣ ಅವನ ವಿದ್ಯಾಭ್ಯಾಸಕ್ಕೂ ನೆರವಾಯಿತು.

ತನ್ನ ಬಿಡುವಿನ ವೇಳೆಯಲ್ಲಿ ಹೊಸ ಯೋಜನೆ ಮೂಲಕ ಹಣ ಗಳಿಸುವ ಮಾರ್ಗವನ್ನು ಇಲ್ಲಿ ಶೀಲ್ ನಿರ್ಧರಿಸಿದ್ದ. ಅದೇ ಹಣದಿಂದ ತನ್ನ ಉನ್ನತ ವಿದ್ಯಾಭ್ಯಾಸ ಮುಗಿಸುವ ಸಂಕಲ್ಪ ಮಾಡಿದ್ದ ಶೀಲ್.

ಮಹತ್ತರ ಆಶಯ ಹೊಂದಿದ್ದ ಶೀಲ್ ಹೇಳುವಂತೆ ಸ್ವತಂತ್ರನಾಗಿರುವುದನ್ನು ಕಲಿಯಬೇಕು. ಕೆಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಈ ಮೂಲಕ ಬೇರೆಯವರಿಗಿಂತ ಭಿನ್ನ ಎಂದು ಸಾಬೀತುಪಡಿಸಬೇಕು. ಯಾವುದೇ ಯೋಜನೆಯಿಂದ ಹಣ ಗಳಿಸಿದರೂ ಒಂದಂಶವನ್ನು ಸ್ಪಷ್ಟವಾಗಿ ಹೇಳಬೇಕು. ಅದೆಂದರೆ, ಯುವಕರು ಆದಾಯ ಗಳಿಸಿದರೆ, ಯಾರಿಗಾದರೂ ಕೊಂಚ ನೆರವಾಗುವ ಆಶಯ ಅದರ ಹಿಂದಿರುತ್ತದೆ. ಈ ಸಾಧನೆಯಿಂದ ಕೆಲವು ಯುವಕರನ್ನಾದರೂ ಪ್ರೇರಿತಗೊಳಿಸಿದರೆ ನಿಜವಾದ ಸಾಧನೆ ಮಾಡಿದಂತೆ.

ಯುವ ಉದ್ಯಮಿಯ ಮುಂದಿನ ನಡೆ

ಶೀಲ್ ಕೆನಡಾದ ವ್ಯಾಂಕೋವರ್ ಸಿಮೋನ್ ಫ್ರೇಸರ್ ಯುನಿವರ್ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಕಲಿಯಲು ಹೋಗಿದ್ದ. ಅಲ್ಲಿ ಆತನಿಗೆ ಎದುರಾದ ಪ್ರಶ್ನೆ, ಇದು ಅವನ ಔದ್ಯಮಿಕ ಯಾನದ ಮೊದಲ ಹೆಜ್ಜೆಯೇ?

ಅದಕ್ಕೆ ಉತ್ತರಿಸುತ್ತಾ ಮಾತನಾಡಿದ ಶೀಲ್, ಆ ಒಂದು ಆಯೋಜನೆ ತನ್ನ ಪಾಲಿಗೆ ಸಾಕಷ್ಟು ಅನುಭವ ಪರಿಣಿತಿ ಹಾಗೂ ಆಲೋಚನೆಗಳನ್ನು ಒದಗಿಸಿತು. ಅಂದು ಕ್ರೀಡಾಕೂಟವನ್ನು ಆಯೋಜಿಸಿದ್ದು ಈವೆಂಟ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಏನನ್ನಾದರೂ ಹಾಗೂ ಯಾವುದನ್ನಾದರೂ ಆಯೋಜಿಸಬಲ್ಲೆ ಅನ್ನುವ ಆತ್ಮವಿಶ್ವಾಸ ಒದಗಿಸಿತ್ತು. ಅದೇ ರೀತಿಯ ಕೆಲವು ಕಾರ್ಯಕ್ರಮಗಳನ್ನು ವ್ಯಾಂಕೋವರ್ ನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ನಡೆಸುತ್ತಲೇ ಆಯೋಜಿಸುವ ತೀರ್ಮಾನ ಮಾಡಿದ್ದಾನೆ ಶೀಲ್.

ಜೊತೆಗೆ ಮಾಹಿತಿಗಳ ಅವಲೋಕನ ಅಥವಾ ಡೇಟಾ ಅನಾಲಿಸಿಸ್ ಕ್ಷೇತ್ರದಲ್ಲೂ ಶೀಲ್ ಗೆ ಆಸಕ್ತಿ ಇದೆ. ಡೆಲ್ ಅನಾಲಿಟಿಕ್ಸ್ ನ ನಿರ್ದೇಶಕರು, ಡೆಕಾಥ್ಲಾನ್ ಇಂಡಿಯಾ ಸಂಸ್ಥೆಯ ಸಿಇಓ ಹಾಗೂ ಬ್ರಿಸಾ ಸಂಸ್ಥೆಯ ನಿರ್ದೇಶಕರಿಂದ ಮಾನ್ಯತೆ ಗಳಿಸಿರುವುದು ತನ್ನ ಪುಣ್ಯ ಎಂದು ಶೀಲ್ ಹೇಳಿಕೊಂಡಿದ್ದಾನೆ. ಹಾಗೂ ಶೀಘ್ರದಲ್ಲೇ ಡೇಟಾ ಅನಾಲಿಸಿಸ್ ಸಂಸ್ಥೆಯೊಂದನ್ನು ಆರಂಭಿಸಿ ಮುಂಬರುವ ದಿನಗಳಲ್ಲಿ ಯುವಕರನ್ನು ಸಬಲೀಕರಿಸುವ ಯೋಜನೆ ಶೀಲ್ ಗಿದೆ. ಈ ಮೂಲಕ ಸಕಾರಾತ್ಮಕವಾಗಿ ಹಾಗೂ ಸರ್ವಾಂಗೀಣವಾಗಿ ಸಾಮಾಜಿಕ ಪ್ರಗತಿಗೆ ಕಿರುಕಾಣಿಕೆ ನೀಡುವ ಆಶಯವನ್ನು ಶೀಲ್ ಹೊಂದಿದ್ದಾನೆ.