ಐಬಿಎಂನ ಉಪಾಧ್ಯಕ್ಷೆ ಲೂಲಾ ಮೊಹಾಂತಿ ಅವರ ಯಶೋಗಾಥೆ

ಟೀಮ್​ ವೈ.ಎಸ್​​.

ಐಬಿಎಂನ ಉಪಾಧ್ಯಕ್ಷೆ ಲೂಲಾ ಮೊಹಾಂತಿ ಅವರ ಯಶೋಗಾಥೆ

Sunday November 08, 2015,

7 min Read

5 ಮಂದಿ ಸಹೋದರಿಯರಿದ್ದ ಕುಟುಂಬದಲ್ಲಿ ಲೂಲಾ ಮೊಹಾಂತಿ ಜನಿಸಿದರು. ಒಂದು ರೀತಿಯಲ್ಲಿ ಅವರದ್ದು ಅಸಾಧಾರಣವಾದ ಬಾಲ್ಯ. 10ನೇ ತರಗತಿ ಪೂರೈಸುವುದರೊಳಗೆ ಲೂಲಾ 13 ಶಾಲೆಗಳನ್ನು ಬದಲಾಯಿಸಿದರು. ಇಂದು ಆಕೆ ಗ್ಲೋಬಲ್ ಬಿಸಿನೆಸ್ ಸರ್ವಿಸಸ್ ಗ್ಲೋಬಲ್ ಡೆಲಿವರಿ, ಐಬಿಎಂ ಇಂಡಿಯಾದ ಉಪಾಧ್ಯಕ್ಷೆ. ಅಲ್ಲದೇ ಭಾರತದ ಗ್ಲೋಬಲ್ ಡೆಲಿವರಿ ಸೆಂಟರ್‌ ಸಂಘಟನೆಗಳ ನಾಯಕತ್ವವನ್ನೂ ವಹಿಸಿದ್ದಾರೆ. ಹಾಗಾದರೆ ಲೂಲಾ ಮೊಹಾಂತಿ ಈ ಹಂತದವರೆಗೆ ಬೆಳೆದಿದ್ದು ಹೇಗೆ? ಬನ್ನಿ ಅವರ ಮಾತುಗಳಲ್ಲೇ ತಿಳಿಯೋಣ. ಓವರ್‌ ಟು ಲೂಲಾ ಮೊಹಾಂತಿ.

image


10ನೇ ತರಗತಿಯೊಳಗೆ 13 ಶಾಲೆಗಳ ಬದಲಾವಣೆ

ನಾನು ಒರಿಸ್ಸಾದಲ್ಲಿ ಜನಿಸಿದರೂ ಅಲ್ಲಿದ್ದದ್ದು ಕೇವಲ 2 ವರ್ಷಗಳು ಮಾತ್ರ. ಏಕೆಂದರೆ ನನ್ನ ತಂದೆ ವರ್ಗಾವಣೆಯಾಗುವ ಕೆಲಸದಲ್ಲಿದ್ದರು. ಹೀಗಾಗಿ 10ನೇ ತರಗತಿಗೆ ಬರುವುದರೊಳಗೆ ನಾನು 13 ಶಾಲೆಗಳನ್ನು ಬದಲಾಯಿಸಿದ್ದೆ. ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಮುಝಾಫರ್‌ನಗರಗಳಂತಹ ಪಟ್ಟಣಗಳಲ್ಲೂ ಇದ್ದೆ. ಬಿಟ್ಸ್ ಪಿಲಾನಿ ಶಿಕ್ಷಣ ಸಂಸ್ಥೆಗೆ ದಾಖಲಾದ ಮೇಲಷ್ಟೇ ಒಂದು ಕಡೆ ನೆಲೆ ನಿಂತು ಓದುವಂತಾಗಿದ್ದು. ಬಹಳಷ್ಟು ಪಟ್ಟಣಗಳನ್ನು, ಶಾಲೆಗಳನ್ನು ಬದಲಾಯಿಸುತ್ತಿದ್ದದ್ದು ನನ್ನ ಓದಿನ ದುಷ್ಪರಿಣಾಮ ಬೀರುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ ಸಿಬಿಎಸ್‌ಇ ಮಾಧ್ಯಮದ 10ನೇ ತರಗತಿಯ ಬೋರ್ಡ್ ಎಕ್ಸಾಮ್‌ನಲ್ಲಿ ನಾನು ಭಾರತಕ್ಕೆ ದ್ವಿತೀಯ ಸ್ಥಾನ ಪಡೆದು ತೇರ್ಗಡೆ ಹೊಂದಿದ್ದೆ.

ನನ್ನ ಪೋಷಕರು ತುಂಬಾ ಚೆನ್ನಾಗಿ ಓದಿಕೊಂಡಿದ್ದರು. ನನ್ನ ತಂದೆ ಆರ್ಟ್ಸ್ ವಿಚಾರದಲ್ಲಿ ಪದವಿ ಪಡೆದಿದ್ದರೇ, ತಾಯಿಗೆ ವಿಜ್ಞಾನ ವಿಚಾರ ಬಹಳ ಚೆನ್ನಾಗಿ ತಿಳಿದಿತ್ತು. ಅಲ್ಲದೇ ನನ್ನ ತಾಯಿ ಅದ್ಭುತ ಕ್ರೀಡಾಪಟುವಾಗಿದ್ದರು. ವಾಲಿಬಾಲ್​​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ನನ್ನ ತಂದೆ ಸಹ ನೈತಿಕ ಸರಿ ಎನ್ನಿಸುವ ನಿರ್ಧಾರಗಳನ್ನೇ ತೆಗೆದುಕೊಳ್ಳಲು ಪ್ರೇರೇಪಿಸುತ್ತಿದ್ದರು. ಹೀಗಾಗಿ ನನ್ನ ತಂದೆ ತಾಯಿಗಳಿಂದ ಮೌಲ್ಯಗಳ ಬಗ್ಗೆ ಚೆನ್ನಾಗಿ ತಿಳಿಯುವಂತಾಯಿತು. ಇಂದಿನ ನಾಯಕರುಗಳಿಗೆ ಇಂತಹ ನೈತಿಕ ಮೌಲ್ಯಗಳ ಪಾಠ ಚೆನ್ನಾಗಿ ಆಗಬೇಕು ಎಂಬುದು ನನ್ನ ಅಭಿಪ್ರಾಯ.

ಶಿಕ್ಷಣದ ಮಹತ್ವವನ್ನೂ ಸಹ ನಾನು ಚೆನ್ನಾಗಿ ಅರಿತಿದ್ದೆ. ಯಾವುದೇ ಪಟ್ಟಣಕ್ಕೆ, ನಗರಕ್ಕೆ ಹೋದರೂ ಅಲ್ಲಿನ ಗ್ರಂಥಾಲಯಗಳಲ್ಲಿ ತಪ್ಪದೇ ಸದಸ್ಯತ್ವ ಪಡೆಯುತ್ತಿದ್ದೆವು. ಇದಲ್ಲದೇ ಯಾವಾಗಲೂ ದೊಡ್ಡಮಟ್ಟದಲ್ಲಿ ಚಿಂತಿಸುವಂತೆ ತಂದೆತಾಯಿಯರು ಪ್ರೇರೇಪಿಸುತ್ತಿದ್ದರು. ಪದೇ ಪದೇ ಶಾಲೆ ಬದಲಾಯಿಸುತ್ತಿದ್ದರೆ, ಅದರಿಂದ ಸ್ನೇಹಿತರನ್ನು ಸಂಪಾದಿಸುವುದು ಕಷ್ಟವಾಗುತ್ತದೆ. ಹೀಗಾಗಿ ಕೆಲವು ಬಾರಿ ಹಲವು ಬಾರಿ ನಾನು ಏಕಾಂಗಿ ಮತ್ತು ಮುಂಗೋಪಿಯಾಗಿರುತ್ತಿದ್ದೆ. ಇಂತಹ ಸಂದರ್ಭಗಳಲ್ಲಿ ತಂದೆತಾಯಿಯರು ವಿಶಾಲ ಮನೋಭಾವವನ್ನು ಹೋಂದುವುದು ಮತ್ತು ವಿಭಿನ್ನ ದೃಷ್ಟಿಕೋನಗಳಲ್ಲಿ ಯೋಚಿಸುವುದರ ಪ್ರಾಮುಖ್ಯತೆಯನ್ನು ವಿವರಿಸುತ್ತಿದ್ದರು.

ನಾಲ್ವರು ಸೋದರಿಯರೊಂದಿಗೆ ಬೆಳೆದ ರೀತಿ

ನಾವು ಐವರು ಸೋದರಿಯರು. ಅವರಲ್ಲಿ ಮೂವರು ನನಗಿಂತ ಚಿಕ್ಕವರು. ಸಂಬಂಧಿಕರು ನಮ್ಮ ತಂದೆ ತಾಯಿಗೆ 5 ಮಂದಿ ಹೆಣ್ಣುಮಕ್ಕಳೊಂದಿಗೆ ಏನು ಮಾಡುತ್ತೀರಿ ಎನ್ನುತ್ತಿದ್ದರು. ಅವರಿಗೆಲ್ಲಾ ಹೆಣ್ಣುಮಕ್ಕಳ ಬಗ್ಗೆ ಒಂದು ರೀತಿ ತಾತ್ಸಾರ. ಆದರೆ ಪೋಷಕರಿಗೆ ನಮ್ಮ ಮೇಲೆ ನಂಬಿಕೆಯಿತ್ತು. ಹೆಣ್ಣುಮಕ್ಕಳೆಂದು ನಮ್ಮ ಬಗ್ಗೆ ಕೀಳಾಗಿ ನೋಡುವವರಿಗೆ ಹೆಣ್ಣುಮಕ್ಕಳೇ ದೊಡ್ಡ ಆಸ್ತಿ ಎಂದು ತೋರಿಸಿಕೊಟ್ಟರು. ನಾವು ಬೆಳೆಸಿಕೊಂಡ ಶಿಸ್ತಿನಿಂದ ನಮ್ಮನ್ನು ಇಂದು ಎಲ್ಲರೂ ಗೌರವಿಸುತ್ತಾರೆ. ನಾವು ತೃಪ್ತರು. ನನ್ನ ಅಕ್ಕ ಸಾಮಾಜಿಕ ವಿಜ್ಞಾನ ವಿಚಾರದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದು ಈಗ ಜೆಎನ್‌ಯು ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿದ್ದಾರೆ. ನನ್ನ ಕಿರಿಯ ಸಹೋದರಿ ಓರ್ವ ಐಎಎಸ್ ಅಧಿಕಾರಿ. ಇನ್ನೊಬ್ಬ ಸೋದರಿ ಇಂಜಿನಿಯರ್ ಹಾಗೂ ಕೊನೆಯ ಸಹೋದರಿ ಪತ್ರಕರ್ತೆ.

ಕಾಲೇಜು ದಿನಗಳು ಮತ್ತು ಮೊದಲ ಉದ್ಯೋಗ

ಉದ್ಯೋಗದಲ್ಲಿದ್ದ ತಾಯಿಯೊಂದಿಗೆ (ಆಕೆ ಒಬ್ಬ ಪ್ರೊಫೆಸರ್) ಬೆಳೆದದ್ದರಿಂದ ಕೆಲಸದ ಮಹತ್ವ ಏನೆಂಬುದು ಅರಿವಾಯಿತು. ನನಗೆ ವಿಜ್ಞಾನ ಮತ್ತು ಗಣಿತ ವಿಚಾರಗಳೆಂದರೆ ಬಹಳ ಇಷ್ಟ. ಹೀಗಾಗಿ ಸ್ವಾಭಾವಿಕವಾಗಿಯೇ ಎಂಜಿನಿಯರಿಂಗ್ ಅನ್ನು ಆಯ್ದುಕೊಂಡೆ. ನನ್ನ ಕೆಲ ಸ್ನೇಹಿತರು ಬಿಟ್ಸ್(ಬಿಐಟಿಎಸ್- ಬಿರ್ಲಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಸೈನ್ಸ್), ಪಿಲಾನಿಯಲ್ಲಿ ಅಧ್ಯಯನ ಮಾಡುತ್ತಿದ್ದರಿಂದ ನಾನೂ ಸಹ ಅಲ್ಲಿಯೇ ಸೇರಿಕೊಂಡೆ. ಉದ್ಯೋಗಾವಕಾಶಗಳು ಬರುತ್ತಿದ್ದ ವೇಳೆಯಲ್ಲಿ ಮೊದಲ ಬಾರಿಗೆ ನಾನು ಲಿಂಗ ತಾರತಮ್ಯದ ಬಿಸಿಯನ್ನು ಅನುಭವಿಸಿದೆ. ಒಂದು ಕಂಪನಿ ಮಹಿಳೆಯರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಿಯೇ ಬಿಟ್ಟಿತ್ತು. ಇದು ನನಗೆ ಸ್ವಲ್ಪವೂ ಸರಿಯೆನಿಸಲಿಲ್ಲ. ಅರ್ಹತೆಯಿದ್ದಾಗಲೂ ಮಹಿಳೆಯರನ್ನು ಏಕೆ ಉದ್ಯೋಗಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು 15 ನಿಮಿಷಗಳ ಕಾಲ ಆ ಕಂಪನಿಯವರೊಂದಿಗೆ ವಾದ ಮಾಡಿದೆ. ಆದರೆ ನನಗೆ ಸಮರ್ಥ ಉತ್ತರ ಸಿಗಲಿಲ್ಲ.

ಪದವಿ ಪಡೆಯುತ್ತಿದ್ದಾಗಲೇ ನನ್ನ ಸ್ನೇಹಿತರೆಲ್ಲಾ ಜೆಆರ್‌ಇ ಪರೀಕ್ಷೆಯನ್ನು ತೆಗೆದುಕೊಂಡು ವಿದೇಶಕ್ಕೆ ತೆರಳಲು ಸಿದ್ಧರಾಗುತ್ತಿದ್ದರು. ಆದರೆ ವಿದೇಶಕ್ಕೆ ತೆರಳುವುದಿಲ್ಲ ಎಂಬ ಸ್ಪಷ್ಟ ಹಾಗೂ ದೃಢ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೆ. ಇಲ್ಲಿ ನನ್ನ ಕುಟುಂಬದೊಂದಿಗೆ ನಾನು ಬೆಸೆದುಕೊಂಡಿದ್ದೆ. ಅವರನ್ನೆಲ್ಲಾ ಬಿಟ್ಟು ಹೋಗುವುದು ನನಗೆ ಅಸಾಧ್ಯವಾದ ಮಾತಾಗಿತ್ತು.

ಐವರು ಉದ್ಯಮಿಗಳು ಹುಟ್ಟುಹಾಕಿದ್ದ ಸಣ್ಣ ಕನ್ಸಲ್ಟಿಂಗ್ ಫರ್ಮ್ ಒಂದರಲ್ಲಿ ನಾನು ಮೊದಲ ಬಾರಿಗೆ ಕೆಲಸಕ್ಕೆ ಸೇರಿದೆ. ಕಾರ್ಯವಿಧಾನವನ್ನು, ನಿರ್ವಹಿಸುವ ರೀತಿಯನ್ನು ಅರಿಲು, ಕಲಿಯಲು ನಾನು ಸಣ್ಣ ಸಂಸ್ಥೆಯೊಂದಕ್ಕೆ ಸೇರಿದ್ದೆ. ಅಲ್ಲಿ ನಾನು ಆರ್ಥಿಕ ವಿಚಾರದಲ್ಲಿ ಸಮಾಲೋಚನೆ ಮಾಡುತ್ತಿದ್ದೆ. ಅಲ್ಲಿ ನನಗೆ ಬ್ಯಾಂಕಿಂಗ್ ಗ್ರೂಪ್‌ಗಳು, ಆರ್ಥಿಕ ತಜ್ಞರೊಂದಿಗೆ ಮುಖಾಮುಖಿಯಾಗುವ ಅವಕಾಶ ದೊರೆಯಿತು. ಇದರಿಂದ ಮ್ಯಾನೇಜ್ ಮೆಂಟ್ ಕನ್ಸಲ್ಟಿಂಗ್ ಕ್ಷೇತ್ರದ ಕುರಿತು ಅರಿತುಕೊಳ್ಳುವ, ಆ ಪ್ರಪಂಚಕ್ಕೆ ತೆರೆದುಕೊಳ್ಳುವ ಅನುಭವ ದೊರೆಯಿತು. ನಂತರ ನಾನು ಪಿಡಬ್ಲ್ಯುಸಿ ಸಂಸ್ಥೆಗೆ ಸೇರಿ ಅಲ್ಲಿ 9 ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ. ಅಲ್ಲಿ ತೈಲ ಮತ್ತು ಗ್ಯಾಸ್ ಪಿಎಸ್‌ಯು ಸಂಸ್ಥೆಗಾಗಿ ಮೊದಲ ಬಾರಿಗೆ ಕೆಲಸ ಮಾಡಿದೆ. ಈ ಸಂಸ್ಥೆಯ ದರ ಮಾದರಿಯ ಪುನರ್‌ನಿರ್ಮಾಣ, ಪೈಪ್ ಲೈನ್ ಮತ್ತು ಉತ್ಪನ್ನದ ಗುಣಮಟ್ಟ ಹೆಚ್ಚಿಸಲು ಸಹಾಯ ಮಾಡಿದೆ. ಮುಂದಿನ ಮೂರು ವರ್ಷಗಳಲ್ಲಿ ನನಗೆ ತೈಲ ಮತ್ತು ಗ್ಯಾಸ್ ಇಂಡಸ್ಟ್ರಿಯ ಬಗ್ಗೆ ಪರಿಣಿತಿ ದೊರೆಯಿತು. ರಿಫೈನಿಂಗ್ ಪ್ಲಾಂಟ್‌ಗಳು, ತೈಲ ಮತ್ತು ಗ್ಯಾಸ್ ಯುನಿಟ್‌ಗಳ ಬಗ್ಗೆ ತಿಳಿದುಕೊಂಡೆ. ಕೈಗೆ ಸಿಕ್ಕ ಎಲ್ಲಾ ವಾಣಿಜ್ಯಪತ್ರಿಕೆಗಳನ್ನು ಓದಿ ನನ್ನ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಿದ್ದೆ. ಈ ಯೋಜನೆಯನ್ನು ಮುಗಿಸುವಷ್ಟರಲ್ಲಿ ತೈಲ ಮತ್ತು ಗ್ಯಾಸ್ ವಿಚಾರದಲ್ಲಿ ಸಂಸ್ಥೆಯವರಿಗೇ ತಿಳಿಯದಷ್ಟು ವಿಚಾರ ನನಗೆ ತಿಳಿದುಬಿಟ್ಟಿತ್ತು. ಇದು ಯೋಚನಾ ಲಹರಿಯನ್ನು ಸಂಕುಚಿತಗೊಳಿಸಿಕೊಳ್ಳುವ ಬದಲು ಪ್ರತಿ ಹಂತವನ್ನೂ ಅಣು ಅಣುವಾಗಿ ತಿಳಿದುಕೊಂಡರೆ ನೀವು ಬಹಳಷ್ಟನ್ನು ಪಡೆದುಕೊಳ್ಳಬಹುದೆಂಬ ಜೀವನದಲ್ಲಿ ಮಹತ್ವದ ಪಾಠವನ್ನೇ ಕಲಿಸಿತು. ಪಿಡಬ್ಲ್ಯುಸಿ ಸಂಸ್ಥೆಯಲ್ಲಿ ವಿಭಿನ್ನ ಉತ್ಪಾದನೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ನಿರ್ವಹಿಸಿದೆ. ನಂತರ ತಂತ್ರಜ್ಞಾನದ ಕಡೆ ಆಕರ್ಷಿತಳಾದೆ. ಸ್ಯಾಪ್ ಸಂಸ್ಥೆಯಲ್ಲಿ ಕೆಲ ಕಾಲ ಕಾರ್ಯನಿರ್ವಹಿಸಿ ಬಳಿಕ ಬ್ಯಾಂಡ್ ವ್ಯಾಗನ್ ಸಂಸ್ಥೆಗೆ ಸೇರಿಕೊಂಡೆ.

ಐಬಿಎಂ-ಅವಕಾಶಗಳ ಸಮುದ್ರ

ಐಬಿಎಂನಲ್ಲಿ 15 ವರ್ಷಗಳ ಕಾಲದ ಉದ್ಯೋಗಯಾನವನ್ನು ನಾನೇ ಒಮ್ಮೆ ಹಿಂತಿರುಗಿ ನೋಡಿದರೆ ಐಬಿಎಂ ಒಂದು ಅವಕಾಶ ಸಮುದ್ರ ಎನಿಸುತ್ತದೆ. ಇಲ್ಲಿ ಒಂದೇ ಬಾರಿಗೆ ಹಲವು ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವಾಗುತ್ತದೆ. ಇಲ್ಲಿ ದೊರೆತ ಅನುಭವ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಉದಾಹರಣೆಗೆ, ಸ್ಯಾಪ್ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸಲು ಆರಂಭಿಸಿದ ಮೇಲೆ ಯುಎಸ್ ಮತ್ತು ಯುಕೆಯಲ್ಲಿ ಕಾಲ ಕಳೆದಿದ್ದೆ. ದೊಡ್ಡ ಮಟ್ಟದ ಗ್ರಾಹಕರನ್ನು ನಿರ್ವಹಿಸಿದ್ದೆ. ಉತ್ತಮ ಸ್ಥಳಗಳಲ್ಲಿ ತರಬೇತಿ ಪಡೆದಿದ್ದೆ. ಐಟಿ ಔಟ್ ಸೋರ್ಸಿಂಗ್ ಕಾರ್ಯಗಳಿಗಾಗಿ ಸಹಾಯ ಮಾಡಲು ಯುರೋಪ್‌ಗೆ ತೆರಳಿದ್ದೆ. ಅನೇಕ ಕೈಗಾರಿಕೋದ್ಯಮಿಗಳ ಜೊತೆಗೆ ಕಾರ್ಯನಿರ್ವಹಿಸುವ ಅವಕಾಶ ನನಗೆ ಒದಗಿತ್ತು.

ನಂತರ ಉದ್ಯಮ ಕಾರ್ಯಕ್ಷೇತ್ರಗಳ ಕುರಿತು ಅರ್ಥಮಾಡಿಕೊಳ್ಳಲು ಬಯಸಿದೆ. ಆಗ ಮನೀಲಾದಲ್ಲಿ ಐಬಿಎಂ ಸರ್ವಿಸಸ್ ಡೆಲಿವರಿ ಸೆಂಟರ್ ಅನ್ನು ಆರಂಭಿಸಲು ಕಾರ್ಯನಿರ್ವಹಿಸುವ ಅವಕಾಶ ಒದಗಿಬಂತು. ಅದೊಂದು ಅದ್ಭುತ ಅನುಭವ. ಈ ಮೊದಲು ಕೆಲವೇ ಕೆಲವು ಮಹಿಳೆಯರಿಗಷ್ಟೇ ತಿಳಿಯದ ಪ್ರದೇಶಗಳಲ್ಲಿ ಇಂತಹ ಕಾರ್ಯಗಳನ್ನು ನಿರ್ವಹಿಸುವ ಅವಕಾಶ ಬಂದಿತ್ತು. ಆಗ ಐಬಿಎಂ ಸಂಸ್ಥೆ ನಮ್ಮೊಂದಿಗೆ ಸಹಕರಿಸಿದ ರೀತಿ, ಬೆಂಬಲಿಸಿದ ರೀತಿ ನಿಜಕ್ಕೂ ಅಪೂರ್ವ.

ಈಗ ಭಾರತದಲ್ಲಿ ಐಬಿಎಂ ಡೆಲಿವರಿ ಸೆಂಟರ್ ಅನ್ನು ನಡೆಸಿಕೊಂಡು ಹೋಗುತ್ತಿದ್ದೇನೆ. ಐಬಿಎಂ ನನಗೆ ವಿಷಯವನ್ನು ನಿರೂಪಿಸುವುದೇ ಯೋಜನೆಯ ಪ್ರಮುಖ ಹಂತ ಎಂಬುದನ್ನು ಕಲಿಸಿಕೊಟ್ಟಿತ್ತು. ವರ್ಷಗಳುರುಳಿದಂತೆ ಉದ್ಯಮ ಕ್ಷೇತ್ರದಲ್ಲಿ ಪರಿಣಿತಿ ಪಡೆದೆ. ನೀವು ಯಾವುದೇ ಕ್ಷೇತ್ರದಲ್ಲಿರಿ, ನೀವೇನು ಮಾಡುತ್ತಿದ್ದೀರಿ ಎಂಬುದರ ಕುರಿತು ನಿಮಗೆ ಸ್ಪಷ್ಟತೆ ಇರಬೇಕು, ನೀವು ಮಾಡುತ್ತಿರುವುದನ್ನು ನೀವು ಸದಾ ಸಮರ್ಥಿಸಿಕೊಳ್ಳುತ್ತಿರಬೇಕು. ಕಂಪನಿಗಳು ದೀರ್ಘಕಾಲಿಕ ಯೋಜನೆ, ಸಂಸ್ಕೃತಿ, ಬಹಳ ಕಾಲ ಉದ್ಯಮದಲ್ಲಿ ನೆಲೆಯೂರಲು ಅಗತ್ಯವಿರುವ ಪರಂಪರೆಯ ಬಗ್ಗೆ ಗಮನವಹಿಸಲೇಬೇಕು. ದೊಡ್ಡ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಬ್ರಾಂಡ್‌ನ ಒಂದು ಭಾಗವಷ್ಟೇ ನೀವಾಗಿರುತ್ತೀರೇ ಹೊರತು ಅದಕ್ಕಿಂತ ಹೆಚ್ಚಿನದೇನೂ ಇಲ್ಲ. ಇದನ್ನು ಎಂದಿಗೂ ಮರೆಯಬಾರದು.

ನಾಯಕತ್ವದ ಮಂತ್ರಗಳು

1.ಕೈಗೆತ್ತಿಕೊಳ್ಳುವ ಪ್ರತಿ ಕಾರ್ಯದ ಉದ್ದೇಶವನ್ನು ಅರಿಯುವುದು: ನಾನು ಕೈಗೆತ್ತಿಕೊಳ್ಳುವ ಪ್ರತಿ ಕೆಲಸದ ಮಹತ್ವ ಹಾಗೂ ಜವಾಬ್ದಾರಿಯನ್ನು ಅರಿತು ಕೆಲಸಮಾಡುತ್ತೇನೆ. ಆ ಕಾರ್ಯವನ್ನು ಮಾಡದಿದ್ದರೆ ಆಕಾಶವೇ ತಲೆಮೇಲೆ ಬೀಳುತ್ತದೆ ಎಂಬ ರೀತಿ ಚಿಂತಿಸುತ್ತೇನೆ. ಇದು ಕೆಲಸವನ್ನು ಸಮರ್ಥವಾಗಿ ನಿಭಾಯಿಸುವಂತೆ ಮಾಡುತ್ತದೆ.

2.ನಾಯಕತ್ವ ವಹಿಸುವ ತಂಡದ ಸದಸ್ಯರ ಬಗ್ಗೆ ಆಸಕ್ತಿವಹಿಸುವುದು: ನನ್ನ ತಂಡವನ್ನು ಯಶಸ್ಸಿನತ್ತ ಮುಂದುವರೆಸುವುದು ನನಗೆ ಅತ್ಯಂತ ಮುಖ್ಯವಾದ ಅಂಶ. ನೀವು ನಾಯಕತ್ವದ ಉತ್ತುಂಗಕ್ಕೇರಿದಂತೆಲ್ಲಾ ಇದು ಬಹಳ ಕಷ್ಟವಾಗುತ್ತದೆ. ಆದರೂ ನಾಯಕತ್ವ ವಹಿಸಿಕೊಂಡ ಮೇಲೆ ಅದನ್ನು ನಿಭಾಯಿಸಲೇಬೇಕು.

3.ಸ್ವಸಾಮರ್ಥ್ಯದ ಬಗ್ಗೆ ಜಾಗೃತಿ ಮತ್ತು ಸ್ವವಿಮರ್ಶೆ: ನಾನು ಕಾರ್ಯನಿರ್ವಹಿಸುವ ಸಂಪೂರ್ಣ ಕ್ಷೇತ್ರದ ಮೇಲೆ ನನಗೆ ನಿಯಂತ್ರಣ ಇರುತ್ತದೆ. ಹೀಗಾಗಿ ನನ್ನ ಸಾಮರ್ಥ್ಯದ ಬಗ್ಗೆ ಮೊದಲು ತಿಳಿದುಕೊಂಡು, ನಾನು ಮಾಡಿದ ಕೆಲಸದ ಮೇಲೆ ನಾನೇ ವಿಮರ್ಶೆ ಮಾಡಿಕೊಂಡು ನಂತರ ಕಾರ್ಯಕ್ಷೇತ್ರಗಳ ಮೇಲೆ ನಿಯಂತ್ರಣ ಸಾಧಿಸುತ್ತೇನೆ. ಉತ್ತಮವಾದುದನ್ನು ಕೊಡುವುದಷ್ಟೇ ಮುಖ್ಯವಲ್ಲ, ನನ್ನಿಂದ ಸಾಧ್ಯವಾಗುವ ಅತ್ಯುತ್ತಮವಾದುದನ್ನು ಕೊಡುವುದು ಅತೀ ಮುಖ್ಯ ಎಂಬುದನ್ನು ನಾನು ಕಲಿತುಕೊಂಡಿದ್ದೇನೆ.

4. ಸಂಘಟನೆಯೊಂದರಲ್ಲಿ ಔನ್ನತ್ಯಕ್ಕೇರುತ್ತಾ ಹೋದಂತೆಲ್ಲಾ, ನೀವೊಬ್ಬರೇ ಎಲ್ಲವನ್ನೂ ಮಾಡಲಾರಿರಿ: ಇದು ಸಂಪೂರ್ಣವಾಗಿ ತಂಡದ ಕೆಲಸಕ್ಕೆ ಸಂಬಂಧಿಸಿದ ವಿಚಾರ. ನೀವು ಇತರರೊಂದಿಗೆ ಸೇರಿ ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದು ಪ್ರಮುಖ ಅಂಶ. ತಂಡದಲ್ಲಿ ಕೆಲಸ ಮಾಡುವಾಗ ನಿಮಗೆ ಇದರ ಅನುಭವವಾಗುತ್ತದೆ. ಆದರೆ ಸಂಸ್ಥೆಯಲ್ಲಿ ಉನ್ನತ ಹುದ್ದೆಗೇರಿದಂತೆಲ್ಲಾ ನಿಮ್ಮ ತಂಡದ ಸದಸ್ಯರನ್ನು ನೀವೇ ನಿಭಾಯಿಸಬೇಕಾಗಿರುತ್ತದೆ. ಹಾಗಾಗಿ ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರಬೇಕು.

5.ನಿಮ್ಮನ್ನು ಬೆಂಬಲಿಸುವ ಒಂದು ಜಾಲ ಮತ್ತು ಮಾರ್ಗದರ್ಶಕರನ್ನು ಹೊಂದಿರಬೇಕು: ಸಂಸ್ಥೆಯಿಂದ ನಾಯಕತ್ವ ಹಸ್ತಕ್ಷೇಪವಾದಾಗ ನನಗೆ ಈ ಅಂಶ ಎಷ್ಟು ಪ್ರಮುಖವಾದದ್ದೋ ಅರ್ಥವಾಯಿತು. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅನುಕೂಲ ಮಾಡಿಕೊಡುವ ಹಸ್ತಕ್ಷೇಪಗಳು ತುಂಬಾ ಪ್ರಮುಖವಾಗುತ್ತದೆ. ಹೀಗಾಗಿ ನಾನು ಸದಾ ಸರಿಯಾದ ಮಾರ್ಗದರ್ಶಕರನ್ನು, ಮಾದರಿ ವ್ಯಕ್ತಿಗಳನ್ನು ಹೊಂದಿದ್ದೆ. ಅವರುಗಳ ಸೂಕ್ತ ಸಲಹೆ, ಮಾರ್ಗದರ್ಶನಗಳು ನನ್ನನ್ನು ಸರಿಯಾದ ದಾರಿಯಲ್ಲಿ ನಡೆಸಿತು. ಎಲ್ಲಾ ಕಠಿಣ ಸಂದರ್ಭಗಳಲ್ಲಿ ಸಹಾಯ ಮಾಡಿತು.

ಐಬಿಎಂ ಡೆಲಿವರಿ ಸೆಂಟರ್‌ ಅನ್ನು ಮುನ್ನಡೆಸುತ್ತಾ...

ಐಬಿಎಂ ಡೆಲಿವರಿ ಸೆಂಟರ್‌ನಲ್ಲಿ ನಾನೀಗ ನಿರ್ವಹಿಸುತ್ತಿರುವ ಕೆಲಸವನ್ನು ನಾನು ಪ್ರೀತಿಸುತ್ತೇನೆ. ಪ್ರತೀವಾರವೂ 4-5 ಮಂದಿ ದೊಡ್ಡ ದೊಡ್ಡ ಗ್ರಾಹಕರನ್ನು ಭೇಟಿಯಾಗುತ್ತಿದ್ದೇನೆ. ಅನೇಕ ಉದ್ಯಮಗಳ ಸಿಎಕ್ಸ್ ಓ ಗಳ ಜೊತೆ ಕಾರ್ಯನಿರ್ವಹಿಸುವ ಅವಕಾಶ ದೊರಕುತ್ತಿದೆ. ತಂತ್ರಜ್ಞಾನಗಳು ಮತ್ತು ಗ್ರಾಹಕರೊಂದಿಗೆ ಕೆಲಸ ಮಾಡುವ ವಿಧಾನ ನನ್ನ ಮೇಲೆ ದೊಡ್ಡ ಪರಿಣಾಮ ಬೀರಿದೆ.

ಯುವ ಮಹಿಳಾ ಉದ್ಯಮಿಗಳಿಗೆ ಸಲಹೆ

1.ಕೆಲಸ ಕಾರ್ಯಗಳು ನನ್ನನ್ನು ನನ್ನ ವೈಯಕ್ತಿಕ ಜೀವನದಿಂದ ದೂರಮಾಡುತ್ತಿದೆ ಎಂದು ನನಗೆಂದೂ ಅನ್ನಿಸಿಲ್ಲ. ನೀವೇನಾದರೂ ಸಾಧಿಸಬೇಕೆಂದಿದ್ದರೆ, ನೀವು ನಿಮ್ಮ ಕೆಲಸವನ್ನು ಪ್ರೀತಿಸಬೇಕು. ಹೀಗಾಗಿ ಕೆಲಸ ಮತ್ತು ಜೀವನ ಏಕೀಕರಣ ಹೊಂದಬೇಕೇ ಹೊರತು ಬ್ಯಾಲೆನ್ಸ್ ಮಾಡುವುದಲ್ಲ. ನೀವಿನ್ನೂ ಆರಂಭದಲ್ಲಿದ್ದರೆ ನೀವು ಮಾಡುತ್ತಿರುವ ಕೆಲಸದ ಕುರಿತು ನಿಮಗೆ ಸ್ಪಷ್ಟತೆ ಇರಬೇಕು. ನಿಮ್ಮ ಕೆಲಸ ಎಲ್ಲಿ ಆರಂಭಿಸಬೇಕು ಎಂಬುದರ ಬಗ್ಗೆಯೂ ಅರಿವಿರಬೇಕು.

2. ಮಹಿಳೆಯರು ದುರ್ಬಲರಾಗಿರುತ್ತೇವೆ ಎಂದುಕೊಳ್ಳುವುದು ಸಹಜ. ಆದರೆ ಅದನ್ನು ಮೀರಿ ಬೆಳೆಯಬೇಕು. ಮತ್ತು ಬೆಳವಣಿಗೆಯನ್ನು ಕಾಯ್ದುಕೊಳ್ಳುವುದು ಅತೀ ಮುಖ್ಯವಾದ ಅಂಶ.

3.ನಂಬಿಕಸ್ತ ಸ್ನೇಹಿತರ ತಂಡವನ್ನು ಹೊಂದುವುದು ಮತ್ತು ಮಾರ್ಗದರ್ಶಕರನ್ನು ಹೊಂದುವುದೂ ಸಹ ಅತೀ ಮುಖ್ಯವಾದ ಅಂಶ. ಐಬಿಎಂನಲ್ಲಿ ಯುವತಿಯರಿಗೆ ಸೂಕ್ತ ಮಾರ್ಗದರ್ಶಕರನ್ನು ನೀಡಲಾಗುತ್ತದೆ ಮತ್ತು ಮಾರ್ಗದರ್ಶಕರೊಂದಿಗೆ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ಮಹಿಳೆಯರು ಸೂಕ್ತ ನೆಟ್‌ವರ್ಕ್‌ ಅನ್ನು ಹೊಂದಿಲ್ಲ ಎಂಬುದನ್ನು ನಾನು ಅರಿತಿದ್ದೇನೆ. ಅದಕ್ಕೆ ನಾವು ಬೆಳೆದುಬಂದ ರೀತಿಯೇ ಇದಕ್ಕೆ ಕಾರಣವಾಗಿರಬಹುದು. ನಮ್ಮಲ್ಲಿ ಬಹುತೇಕ ಮಂದಿಗೆ ಸಂಘಟನೆಯ ಚಾತುರ್ಯ ಇರುವುದಿಲ್ಲ. ಇವುಗಳನ್ನೆಲ್ಲಾ ಜನರೊಂದಿಗೆ ಬೆರೆಯುತ್ತಾ ಮತ್ತು ನೆಟ್‌ವರ್ಕ್‌ ಬೆಳೆಸಿಕೊಳ್ಳುತ್ತಾ ಪಡೆದುಕೊಳ್ಳಬೇಕು. ಅಂತರ್‌ ಸಂಪರ್ಕ ಮತ್ತು ಬುದ್ದಿವಂತ ಪ್ರಪಂಚದಲ್ಲಿ ನಾವಿಂದು ಬದುಕುತ್ತಿದ್ದೇವೆ. ನೂತನ ಟ್ರೆಂಡ್‌ಗಳ ಬಗ್ಗೆ ಮಾಹಿತಿ ಹೊಂದಿರುವುದು ಮತ್ತು ಪ್ರತಿಯೊಂದು ಉತ್ತಮ ವಿಚಾರಗಳನ್ನೂ ತಕ್ಷಣವೇ ಗ್ರಹಿಸುವುದು ಅತೀಮುಖ್ಯವಾದ ಅಂಶ.

4. ತಾಂತ್ರಿಕ ಕ್ಷೇತ್ರದಲ್ಲಿರುವ ಎಲ್ಲಾ ಮಹಿಳೆಯರಿಗೂ ನಾನು ಪ್ರೋತ್ಸಾಹ ನೀಡುತ್ತೇನೆ. ಏಕೆಂದರೆ ಈ ಕ್ಷೇತ್ರದಲ್ಲಿರುವುದೇ ದೊಡ್ಡ ವರ. ತಂತ್ರಜ್ಞಾನವನ್ನು ನಿಮ್ಮ ಮುಂದಿನ ದಾರಿಯುದ್ದಕ್ಕೂ ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳುವುದರಿಂದ ದೊಡ್ಡ ಅವಕಾಶ ನಿಮ್ಮದಾಗುವ ಸಾಧ್ಯತೆ ಇರುತ್ತದೆ.

ಉದ್ಯಮಕ್ಕೆ ಉತ್ತಮ ಸಲಹೆ

1.ಯಶಸ್ಸು ಮತ್ತು ಆರಾಮದಾಯಕ ಜೀವನ ಎಂದಿಗೂ ಒಟ್ಟಿಗೇ ಇರುವುದಿಲ್ಲ. ಅಂದ ಮಾತ್ರಕ್ಕೆ ನೀವು ಯಶಸ್ವಿಯಾಗಿದ್ದೀರೆಂದರೆ ನೀವು ನೆಮ್ಮದಿಯಾಗಿಲ್ಲ ಎಂದು ನಾನು ಹೇಳುತ್ತಿಲ್ಲ. ನೆಮ್ಮದಿ ಸಿಗುವುದು ಸಾಧ್ಯ. ಯಾವಾಗೆಂದರೆ ನಿಮಗೆ ನೀವೇ ಹೊಸ ಗುರಿಯ ಕಡೆ ಕಣ್ಣಿಟ್ಟಾಗ ಮಾತ್ರ ನೆಮ್ಮದಿ ಸಾಧ್ಯ.

2. ನಮ್ಮ ಬಹುತೇಕ ಉಪಾಧ್ಯಕ್ಷರುಗಳು ಮತ್ತು ಜಿಎಂಗಳು ತಮಗೆ ರಿಪೋರ್ಟ್ ಮಾಡಿಕೊಳ್ಳುವ ದೊಡ್ಡ ತಂಡವನ್ನೇ ಹೊಂದಿರುತ್ತಾರೆ. ನಿಮ್ಮ ಹುದ್ದೆ ನಿಮಗೆ ಅಧಿಕಾರ ತಂದುಕೊಟ್ಟಿರುತ್ತದೆ. ಆದರೆ ನಿಮ್ಮ ನಿಜವಾದ ಶಕ್ತಿ ಬರುವುದು ಯಾವಾಗ ನೀವು ಪರಿಣಿತಿಯಿಂದ ಕೆಲಸ ಮಾಡುತ್ತೀರೋ ಮತ್ತು ಸ್ಪರ್ಧಾತ್ಮಕವಾಗಿ ಕೆಲಸ ಮಾಡುತ್ತೀರೋ ಆಗ. ಮುಂದಿನ ಪೀಳಿಗೆ ನಾಯಕರುಗಳು ವಿಷಯದ ಉತ್ತಮ ಗ್ರಹಿಸುವಿಕೆ ಮತ್ತು ಪ್ರಭಾವಶಾಲಿಯಾಗಿ ಸಂವಹನ ನಡೆಸುವಲ್ಲಿ ಮತ್ತು ಪ್ರೇರಣೆಯಿಂದ ಮುನ್ನಡೆಯುವ ವಿಶ್ವಾಸ ಇದೆ.

ಉತ್ಪಾದಕತೆಯ ಸಲಹೆಗಳು

1. ಆದ್ಯತೆ ಪ್ರಮುಖ ಅಂಶ. ನಮ್ಮಲ್ಲಿ ಬಹುತೇಕರು ಅನೇಕ ಕಾರ್ಯಗಳನ್ನು ಒಂದೇ ಬಾರಿ ನಿರ್ವಹಿಸುತ್ತಿರುತ್ತೇವೆ. ಇದರಲ್ಲಿ ತುರ್ತನ್ನು ಗ್ರಹಿಸುವ ಮತ್ತು ಆದ್ಯತೆಯನ್ನು ಗ್ರಹಿಸುವ ಅಂಶ ತುಂಬಾ ಮುಖ್ಯವಾಗಿರುತ್ತದೆ.

2.ನಿಮಗೆ ಯಾವುದು ಹೆಚ್ಚಿನ ಶಕ್ತಿ ಕೊಡುತ್ತದೆ ಮತ್ತು ಯಾವುದು ನಿಮ್ಮ ಶಕ್ತಿಕುಂದಿಸುತ್ತದೆ ಎಂಬುದನ್ನು ಅರಿತುಕೊಳ್ಳುವುದು ಅತೀ ಮುಖ್ಯ ಅಂಶ. ಉದಾಹರಣೆಗೆ ನನಗೆ ನನ್ನ ಶೇ.70ರಷ್ಟು ಸಮಯವನ್ನು ಜನರೊಟ್ಟಿಗೆ ಕಳೆಯುವುದು ಅತೀ ಮುಖ್ಯ. ನನ್ನ ತಂಡದ ದೃಷ್ಟಿಕೋನವನ್ನು ತಿಳಿಯುವುದೂ ಸಹ ನನಗೆ ಇಷ್ಟ. ನನ್ನ ದಿನದಲ್ಲಿ ಇವೆರಡರಲ್ಲಿ ಯಾವುದನ್ನೇ ಮಾಡದಿದ್ದರೂ ನನ್ನ ದಿನ ಚೆನ್ನಾಗಿರಲಿಲ್ಲ ಎಂದು ನನಗೆ ಅನ್ನಿಸುತ್ತದೆ.

ಇಷ್ಟಪಡುವ ಪುಸ್ತಕಗಳು

ನಾನು ತುಂಬಾ ಓದುತ್ತೇನೆ. ಅದರಲ್ಲಿ ನನಗೆ ದ ಕ್ಯುರಿಯಸ್ ಇನ್ಸಿಡೆಂಟ್ ಆಫ್‌ ದ ಡಾಗ್ ಇನ್‌ ದ ನೈಟ್ ಟೈಮ್, ದ ಆರ್ಟ್ ಆಫ್ ಥಿಂಕಿಂಗ್ ಕ್ಲಿಯರ್ಲಿ, ಎಕ್ಸಿಕ್ಯುಟಿವ್ ಪ್ರೆಸೆನ್ಸ್, ಸ್ಪೀಡ್ ಆಫ್ ಟ್ರಸ್ಟ್ , ಗುಡ್ ಟು ಗ್ರೇಟ್ ಮತ್ತಿತರ ಪುಸ್ತಕಗಳು ಬಹಳ ಇಷ್ಟ.

ಕೊನೆಯ ಮಾತು

ನಮ್ಮ ಮುಂದಿರುವ ವಿಚಾರಗಳನ್ನು ನೋಡಿದರೆ ಕೆಲವು ಸಂಗತಿಗಳು ನನಗೆ ಸಕಾರಾತ್ಮಕವಾಗಿ ತೋರುತ್ತವೆ. ನೀವೇನೇ ಮಾಡಿದರೂ ಅದರಲ್ಲಿ ಸಂತೋಷ ಕಂಡುಕೊಳ್ಳುವುದು ಬಹಳ ಮುಖ್ಯವಾದ ಅಂಶ. ಅತ್ಯುತ್ತಮ ಕುಟುಂಬವನ್ನು ಹೊಂದಿರುವುದು ಮತ್ತು ಅತ್ಯುತ್ತಮ ಸ್ನೇಹಿತರನ್ನು ಹೊಂದಿರುವುದು ನೆಮ್ಮದಿಯ ವಿಚಾರ. ಎಲ್ಲಾ ಯಶಸ್ಸಿಗೂ ಇದೇ ತಳಪಾಯ. ಕ್ರಮೇಣ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗುತ್ತಾರೆ. ಅವರೊಂದಿಗೆ ಸೃಜನಶೀಲತೆಯಿಂದ ನೀವೂ ಸಹ ಮುಂದುವರೆಯಬೇಕು.