200 ಗರ್ಭಿಣಿಯರ ಜೀವ ಉಳಿಸಿದ ಆಪತ್ಬಾಂಧವ..

ಟೀಮ್ ವೈ.ಎಸ್.ಕನ್ನಡ 

200 ಗರ್ಭಿಣಿಯರ  ಜೀವ ಉಳಿಸಿದ ಆಪತ್ಬಾಂಧವ..

Saturday October 22, 2016,

2 min Read

ಚತ್ತೀಸ್​ಗಢದ ಹಳ್ಳಿಗಾಡಿನಲ್ಲಿ ಅಭಿವೃದ್ಧಿ ಅನ್ನೋದು ಇವತ್ತಿಗೂ ಮರಿಚೀಕೆ. ಮೂಲಸೌಕರ್ಯಗಳ ಕೊರತೆ, ಆರೋಗ್ಯ ಸೇವೆಗೂ ತತ್ವಾರ. ಇದ್ರಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವವರು ಮಹಿಳೆಯರು, ಗರ್ಭಿಣಿಯರ ಕಷ್ಟವಂತೂ ಹೇಳತೀರದು. ಆದ್ರೆ ನಾರಾಯಣಪುರದಲ್ಲಿ ಮಾತ್ರ ಬದಲಾವಣೆಯ ಗಾಳಿ ಬೀಸಿದೆ.

image


ಇಲ್ಲಿನ ನಿವಾಸಿ ಅಜಯ್ ತ್ರಾಕೆರೊ ಗರ್ಭಿಣಿಯರ ಪಾಲಿನ ಆಪತ್ಬಾಂಧವ. ಚತುರ ತಂತ್ರಜ್ಞಾನವನ್ನು ಬಳಸಿ ಅಜಯ್ ಬೈಕ್ ಆಂಬ್ಯುಲೆನ್ಸ್ ಒಂದನ್ನು ನಿರ್ಮಿಸಿದ್ದಾರೆ. ಧೂಳಿನಿಂದಾವೃತವಾದ, ಒರಟಾದ ದಾರಿಯಲ್ಲಿ ಗರ್ಭಿಣಿಯರನ್ನು ಹೊತ್ತು ಸಕಾಲಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿಸುವ ಕೆಲಸ ಈ ಆಂಬ್ಯುಲೆನ್ಸ್​ನದ್ದು. ''ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ಕಲ್ಯಾಣ ಸಂಸ್ಥೆಗಳಾದ ಯುನಿಸೆಫ್ ನೆರವಿನಿಂದ ಈ ಬೈಕ್ ಅಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ. ಈ ಬೈಕ್ ಆಂಬ್ಯುಲೆನ್ಸ್ ದಟ್ಟ ಕಾಡಿನಲ್ಲಿ, ಕುಗ್ರಾಮಗಳಲ್ಲಿ ಕೂಡ ಸಂಚರಿಸಬಲ್ಲದು'' ಎನ್ನುತ್ತಾರೆ ಅಜಯ್.

ಈ ಮಿನಿ ಆಂಬ್ಯುಲೆನ್ಸ್ ಅನ್ನು ವಿಶಿಷ್ಟವಾಗಿ ವಿನ್ಯಾಸ ಮಾಡಲಾಗಿದೆ. ಮುಂದೆ ಆಂಬ್ಯುಲೆನ್ಸ್ ಚಾಲಕ ಅಂದ್ರೆ ಅಜಯ್ ಕುಳಿತುಕೊಳ್ತಾರೆ, ಪಕ್ಕದಲ್ಲಿ ಗರ್ಭಿಣಿಯರನ್ನು ಕೂರಿಸಿಕೊಂಡು ಹೋಗಲು ಚಿಕ್ಕ ಜಾಗ ಮಾಡಲಾಗಿದೆ. ಸುತ್ತಲೂ ಬಟ್ಟೆಯಿಂದ ಮುಚ್ಚಿ ಗೂಡಿನಂತೆ ಅದನ್ನು ನಿರ್ಮಿಸಲಾಗಿದೆ. ಈ ಬೈಕ್ ಆಂಬ್ಯುಲೆನ್ಸ್ ತುರ್ತು ಸಂದರ್ಭಗಳಲ್ಲಿ ಸೈರನ್ ಮೊಳಗಿಸುತ್ತ ಮುಂದೆ ಸಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರಿಗೆ ನೆರವಾಗಲು ಫಸ್ಟ್ ಏಯ್ಡ್ ಕಿಟ್ ಕೂಡ ಇದರಲ್ಲಿದೆ. ಇಲ್ಲಿನ ಕಡಿದಾದ, ಅಪಾಯಕಾರಿ ರಸ್ತೆಗಳಲ್ಲಿ ಅಜಯ್ ತಮ್ಮ ಚಾಲನಾ ಕೌಶಲ್ಯವನ್ನು ಪಣಕ್ಕಿಟ್ಟು ಗರ್ಭಿಣಿಯರನ್ನು ಆಸ್ಪತ್ರೆಗೆ ತಲುಪಿಸ್ತಾರೆ. ಅಜಯ್ ಏಕಾಂಗಿಯಾಗಿ 200ಕ್ಕೂ ಹೆಚ್ಚು ಗರ್ಭಿಣಿಯರ ಜೀವ ಉಳಿಸಿದ್ದಾರೆ. ಅಕ್ಕಪಕ್ಕದ ಹಳ್ಳಿಗಳ ಜನರು ಕೂಡ ಅಜಯ್ ಅವರ ಬೈಕ್ ಆಂಬ್ಯುಲೆನ್ಸ್ ಅನ್ನು ಅವಲಂಬಿಸಿದ್ದಾರೆ.

ಇಂತಹ ಬೈಕ್ ಆಂಬ್ಯುಲೆನ್ಸ್​ಗಳು ಆಫ್ರಿಕಾ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಚತ್ತೀಸ್​ಗಢದ ಕಾಡುಮೇಡುಗಳಲ್ಲಿ ಸಂಚರಿಸಲು ಸಹ ಇದು ಹೇಳಿ ಮಾಡಿಸಿದಂತಹ ವಾಹನ. ''ದೇಶದಲ್ಲಿ ಗರ್ಭಿಣಿಯರ ಮರಣ ಪ್ರಮಾಣ ಹೆಚ್ಚುತ್ತಲೇ ಇದೆ. ಚತ್ತೀಸ್​ಗಢದಲ್ಲಿ ಕೂಡ ಗರ್ಭಿಣಿಯರ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಿಲ್ಲ. ಈ ಪ್ರಯೋಗದ ಮೂಲಕ ಗರ್ಭಿಣಿಯರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುತ್ತಿದ್ದೇವೆ. ನಕ್ಸಲ್ ಪೀಡಿತ ಬುಡಕಟ್ಟು ಪ್ರದೇಶಗಳಲ್ಲಿ, ದಟ್ಟ ಅರಣ್ಯದ ನಡುವೆ ವಾಸಿಸುತ್ತಿರುವ ಗರ್ಭಿಣಿಯರಿಗೆ ನೆರವಾಗುವುದೇ ತಮ್ಮ ಉದ್ದೇಶ'' ಅಂತಾ ಅಜಯ್ ವಿವರಿಸಿದ್ದಾರೆ.

ಅಜಯ್ ಅವರಂತೆ ಉಳಿದ ಹಳ್ಳಿಗಳ ಯುವಕರು ಕೂಡ ಸ್ವಯಂಪ್ರೇರಿತರಾಗಿ ಇಂತಹ ಸಮಾಜ ಸೇವೆಗೆ ಕೈಹಾಕಿದಲ್ಲಿ ಮಾತ್ರ ಕುಗ್ರಾಮಗಳ ಅಭಿವೃದ್ಧಿ ಸಾಧ್ಯ.

ಇದನ್ನೂ ಓದಿ..

ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ

ನೀರಲ್ಲಿ ಬಿದ್ದ ಮೊಬೈಲ್ ರಿಪೇರಿ ಬಲು ಈಸಿ..