ಶ್ರೀಮಂತ ಅಮೆರಿಕನ್ನರಂತೆ ಭಾರತೀಯರಲ್ಲಿ ಪರೋಪಕಾರದ ಮನಸ್ಸು ಏಕಿಲ್ಲ..? ಅಜೀಂ ಪ್ರೇಮ್‍ಜಿ ಅವರ ಬಳಿಯಿದೆ ಉತ್ತರ..

ಟೀಮ್ ವೈ.ಎಸ್​. ಕನ್ನಡ

ಶ್ರೀಮಂತ ಅಮೆರಿಕನ್ನರಂತೆ ಭಾರತೀಯರಲ್ಲಿ ಪರೋಪಕಾರದ ಮನಸ್ಸು ಏಕಿಲ್ಲ..? ಅಜೀಂ ಪ್ರೇಮ್‍ಜಿ ಅವರ ಬಳಿಯಿದೆ ಉತ್ತರ..

Wednesday December 23, 2015,

5 min Read

ಪರೋಪಕಾರ ಅನ್ನೋದು ಖಂಡಿತವಾಗಿಯೂ ಒಂದು ಕಲೆ. ಅದಕ್ಕೆ ಸಾಕ್ಷಿ ಮಾರ್ಕ್ ಜುಕರ್‍ಬರ್ಗ್. ಅವರು ತಮ್ಮ ಜೀವಮಾನದ ಗಳಿಕೆಯಲ್ಲಿ ಶೇ.99ರಷ್ಟು ಸಂಪತ್ತನ್ನು ದಾನ ಮಾಡಿದ್ದಾರೆ. ಜುಕರ್‍ಬರ್ಗ್ ಮಾತ್ರವಲ್ಲ, ವಾರನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಕೂಡ ಲೋಕೋಪಕಾರದ ಗುರುಗಳಿದ್ದಂತೆ. ಅಜೀಂ ಪ್ರೇಮ್‍ಜಿ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಲೋಕೋಪಕಾರ ಇತ್ತೀಚೆಗೆ ಎಲ್ಲರ ಗಮನ ಸೆಳೆಯುತ್ತಿದೆ. ವಿವಿಧ ಸಂಘ ಸಂಸ್ಥೆಗಳಿಗೆ ದಾನ ಮಾಡುವಿಕೆ ಭಾರತದಲ್ಲಿ ಸಂಪ್ರದಾಯದಂತೆ ಬೆಳೆದು ಬಂದಿದೆ. ಆದ್ರೆ ಯಾರು ಬಿಲಿಯನ್ ಡಾಲರ್‍ಗಟ್ಟಲೆ ದಾನ ಧರ್ಮ ಮಾಡ್ತಾರೋ ಅವರ ಬಗ್ಗೆ ಮಾತ್ರ ಸುದ್ದಿಯಾಗುವುದು ಸಹಜ. 1999ರಿಂದ್ಲೇ ಅಜೀಂ ಪ್ರೇಮ್‍ಜಿ ಲೋಕೋಪಕಾರ ಮಾಡಲು ಆರಂಭಿಸಿದ್ರು. ಇದಕ್ಕಾಗಿಯೇ ಅಜೀಂ ಪ್ರೇಮ್‍ಜಿ ಫೌಂಡೇಶನ್ ಅನ್ನು ಸ್ಥಾಪಿಸಿದ್ರು. ತಮ್ಮ ಸಂಸ್ಥೆ ವಿಪ್ರೋದ ಶೇ.40ರಷ್ಟು ಷೇರುಗಳನ್ನು ಅಂದ್ರೆ ಸುಮಾರು 52,000 ಕೋಟಿ ಹಣವನ್ನು ಲಾಭರಹಿತ ಟ್ರಸ್ಟ್​​ಗಳಿಗೆ ದಾನ ಮಾಡಿದ್ದಾರೆ. ಏಕಾಭಿಪ್ರಾಯದ ಗೆಳೆಯರೊಂದಿಗೆ ಸೇರಿ ದಾನ-ಧರ್ಮದ ಬಗ್ಗೆ ಇನ್ನಷ್ಟು ಪ್ರಚಾರ ಮಾಡುತ್ತಿದ್ದಾರೆ.

image


ಅಮೆರಿಕದವರಂತೆ ಶ್ರೀಮಂತ ಭಾರತೀಯರು ಕೊಡುಗೈ ದಾನಿಗಳಲ್ಲ, ಇದಕ್ಕೆ 2 ಕಾರಣಗಳಿವೆ ಎನ್ನುತ್ತಾರೆ ಪ್ರೇಮ್‍ಜಿ. ಮೊದಲನೆಯದಾಗಿ ಸಂಪತ್ತು ಹಂಚಿಕೆ ವಿಚಾರದಲ್ಲಿ ಭಾರತೀಯ ಕುಟುಂಬಗಳು ದೊಡ್ಡದಾಗಿರುತ್ತವೆ. ಎರಡನೆಯ ಕಾರಣ ಅಂದ್ರೆ, ತಾವು ಸಂಪಾದಿಸಿದ್ದೆಲ್ಲ ಪಿತ್ರಾರ್ಜಿತವಾಗಿ ತಮ್ಮ ಮಕ್ಕಳಿಗೆ ಸೇರಬೇಕೆಂದು ಜನರು ಬಯಸುತ್ತಾರೆ. ಐಐಎಂ ಬೆಂಗಳೂರಿನ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ, ಕಿರಣ್ ಮಜುಮ್‍ದಾರ್ ಶಾ, ತಾವೇನಾದ್ರೂ ಅಜೀಂ ಪ್ರೇಮ್‍ಜಿ ಅವರ ಜೀವನಚರಿತ್ರೆ ಬರೆಯುವುದಾದ್ರೆ ಅದಕ್ಕೆ `ಗಿವಿಂಗ್ ಇಟ್ ಆಲ್' ಎಂಬ ಹೆಸರು ನೀಡುವುದಾಗಿ ತಿಳಿಸಿದ್ರು. ಕಿರಣ್ ಮಜುಮ್‍ದಾರ್ ಹಾಗೂ ಅಜೀಂ ಪ್ರೇಮ್‍ಜಿ ಅವರ ನಡುವಣ ಮಾತುಕತೆಯ ಸಂಪೂರ್ಣ ವಿವರ ಇಲ್ಲಿದೆ.

ಕಿರಣ್ ಮಜುಮ್‍ದಾರ್ ಶಾ: ಕೊಡುಗೈ ದಾನಿಯಾಗಲು ನಿಮಗೆ ಪ್ರೇರಣೆಯಾಗಿದ್ದೇನು? ಬಾಲ್ಯದಲ್ಲಿ ಅಂತಹ ಸಂದರ್ಭವೇನಾದರೂ ಎದುರಾಗಿತ್ತಾ?

ಅಜೀಂ ಪ್ರೇಮ್‍ಜಿ: ಲೋಕೋಪಕಾರದ ಕಡೆಗೆ ನಾನು ಮನಸ್ಸು ಮಾಡಲು ನನಗೆ ಪ್ರೇರಣೆಯಾದವರು ನನ್ನ ತಾಯಿ. ಅವರೊಬ್ಬ ವೈದ್ಯೆ, ಪೋಲಿಯೋ ಪೀಡಿತ ಹಾಗೂ ಅಸಹಾಯಕ ಮಕ್ಕಳಿಗಾಗಿ ಮುಂಬೈನಲ್ಲಿ ಆರ್ಥೋಪೆಡಿಕ್ ಆಸ್ಪತ್ರೆಯೊಂದನ್ನು ನಡೆಸುತ್ತಿದ್ರು. ತಮ್ಮ 27ನೇ ವಯಸ್ಸಿನಿಂದ 77ನೇ ವರ್ಷದವರೆಗೂ ಆಸ್ಪತ್ರೆಯ ಅಧ್ಯಕ್ಷೆಯಾಗಿ ಅವರು ಖಾರ್ಯನಿರ್ವಹಿಸಿದ್ದಾರೆ. ಆಸ್ಪತ್ರೆಯನ್ನು ಮುನ್ನಡೆಸಲು ಹಣ ಸಂಗ್ರಹಿಸುವುದಕ್ಕೆ ಅವರು ತಮ್ಮ ಜೀವನವನ್ನು ವ್ಯಯಿಸಿದ್ದಾರೆ. ಯಾಕಂದ್ರೆ ಸರ್ಕಾರದ ನೆರವು ಸಮಯಕ್ಕೆ ಸರಿಯಾಗಿ ದೊರೆತ ಉದಾಹರಣೆಗಳೇ ಇಲ್ಲ.

image


ಕಿರಣ್ ಮಜುಮ್‍ದಾರ್ ಶಾ: ನೀವು ಯಾವಾಗ್ಲೂ ಹಣದ ಬಗ್ಗೆ ಕಾಳಜಿ ವಹಿಸ್ತಾ ಇದ್ರಿ. ಐಷಾರಾಮಿ ಕಾರುಗಳು, ಫೈವ್ ಸ್ಟಾರ್ ಹೋಟೆಲ್‍ಗಳಲ್ಲಿ ವಾಸ ಇವೆಲ್ಲದರಿಂದ ದೂರವೇ ಇದ್ರಿ. ಲೋಕೋಪಕಾರಿಯಾಗಲು ನಿಮ್ಮ ಆ ಗುಣಗಳೇ ಕಾರಣವಾಯ್ತಾ?

ಅಜೀಂ ಪ್ರೇಮ್‍ಜಿ: ಅದೊಂದು ಸರಿಯಾದ ಕೆಲಸ ಅನ್ನೋ ಕಾರಣಕ್ಕೆ ನಾನು ಹಣವನ್ನು ದಾನ ಮಾಡುತ್ತಿದ್ದೇನೆ. ನಮ್ಮ ದೇಶದಲ್ಲಿ ಬಡತನವಿದೆ, ಹಣದ ದುರುಪಯೋಗ ಕೂಡ ಆಗುತ್ತಿದೆ.

ಕಿರಣ್ ಮಜುಮ್‍ದಾರ್ ಶಾ: ಸಂಪತ್ತು ಹಾಗೂ ಜ್ಞಾನವನ್ನು ಹಂಚಿಕೊಳ್ಳಬೇಕು ಅನ್ನೋ ಮಾತಿದೆ. ಅದರರ್ಥ ಸಮಾಜದಲ್ಲಿ ನಾವು ಹೇಗೆ ಹಣವನ್ನು ಹೂಡಿಕೆ ಮಾಡುತ್ತಿದ್ದೇನೆ ಅನ್ನೋದು. ಈ ಸಂದೇಶವನ್ನು ಸಮಾಜಕ್ಕೆ ನೀವು ಹೇಗೆ ತಲುಪಿಸುತ್ತೀರಾ?

ಅಜೀಂ ಪ್ರೇಮ್‍ಜಿ: ಲೋಕೋಪಕಾರದ ಕಾರ್ಯವನ್ನು ನಾನು ತುಂಬಾ ತಡವಾಗಿ ಆರಂಭಿಸಿದೆ ಎಂಬ ಬಗ್ಗೆ ನನಗೆ ಬೇಸರವಿದೆ. ಸುಮಾರು 14-15 ವರ್ಷಗಳ ಹಿಂದೆ ನಾನು ಭಾರತದ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕಾಗಿರುವುದರಿಂದ ಕಳೆದ 4 ವರ್ಷಗಳಿಂದ ನಾವು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇವೆ.

ಕಿರಣ್ ಮಜುಮ್‍ದಾರ್ ಶಾ: ಬಿಲ್ ಗೇಟ್ಸ್ ಅವರ ಜೊತೆಗೆ ಸೇರಿ ನೀವು ಪರೋಪಕಾರದ ನೇತೃತ್ವ ವಹಿಸಿದ್ದೀರಾ. ದಾನ ಧರ್ಮದ ಪರಿಕಲ್ಪನೆಗಳ ಬಗ್ಗೆ ನೀವು ಕಾರ್ಪೊರೇಟ್ ಜಗತ್ತಿನ ದಿಗ್ಗಜರನ್ನು ಸೆಳೆಯುತ್ತಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯ. ಜನರು ತಮ್ಮ ಸಂಪತ್ತಿನ ಬಗ್ಗೆ ಯಾಕಿಷ್ಟು ಸ್ವಾರ್ಥಿಗಳಾಗಿದ್ದಾರೆಂದು ನಿಮಗನಿಸುತ್ತದೆ?

ಅಜೀಂ ಪ್ರೇಮ್‍ಜಿ: ಈ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಬಹುದು. ಬಹುತೇಕ ಜನರಿಗೆ ತಮ್ಮ ಸಾಮಾಜಿಕ ಜವಾಬ್ಧಾರಿಗಳ ಅರಿವಿದೆ. ದಾನ ಮಾಡುವುದರಲ್ಲಿ ಅಮೆರಿಕನ್ನರು ಲೀಡರ್‍ಗಳು. ಆದ್ರೆ ಭಾರತದ ಸಿರಿವಂತರ ಮನಸ್ಥಿತಿ ಬೇರೆ, ಅವರು ತಾವು ಸಂಪಾದಿಸಿದ್ದನ್ನೆಲ್ಲ ತಮ್ಮ ಮಕ್ಕಳಿಗೆ ಪಿತ್ರಾರ್ಜಿತ ಆಸ್ಥಿಯಾಗಿ ಬಿಟ್ಟು ಹೋಗುತ್ತಾರೆ. ಈ ಕ್ರಿಯೆ ನಿರೋಧಕದಂತೆ ಕೆಲಸ ಮಾಡುತ್ತದೆ. ಭಾರತದಲ್ಲಿ ಅತಿ ಹೆಚ್ಚು ಉದಾರ ಭಾಗ ಅಂದ್ರೆ ದಕ್ಷಿಣ ಭಾರತ.

image


ಕಿರಣ್ ಮಜುಮ್‍ದಾರ್ ಶಾ: ನಾವು ಸಂಪತ್ತು ಉತ್ಪಾದಕರ ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಯ ಜೊತೆಗಿದ್ದೇವೆ. ಲೋಕೋಪಕಾರಕ್ಕಾಗಿ ಅವರು ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನಾದ್ರೂ ದಾನ ಮಾಡಬೇಕೆಂಬ ಸಂದೇಶವನ್ನು ಹೇಗೆ ತಲುಪಿಸುತ್ತೀರಾ?

ಅಜೀಂ ಪ್ರೇಮ್‍ಜಿ: ಪ್ರಸ್ತುತ ಪೀಳಿಗೆಯ ಶ್ರೀಮಂತ ಮತ್ತು ಅರೆ ಶ್ರೀಮಂತರು ಹೆಚ್ಚು ಉದಾರತೆ ಪ್ರದರ್ಶಿಸಬೇಕೆಂದು ನಾನು ಇಚ್ಛಿಸುತ್ತೇನೆ. ಸಮಯ, ಪ್ರಯತ್ನ, ಹಣ ಅಥವಾ ಲೋಕೋಪಕಾರ ಇವುಗಳಲ್ಲಿ ಯಾವುದನ್ನಾದರೂ ಅವರು ದಾನ ಮಾಡಬಹುದು. ಹಿರಿಯರು ಯುವ ಜನತೆಗೆ ಪ್ರೇರಣೆಯಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರ ಪತ್ನಿಯರಿಗೆ ದಾನ ಧರ್ಮದ ಬಗ್ಗೆ ಅರಿವು ಮೂಡಿಸಬೇಕು. ಯಾಕಂದ್ರೆ ಪತ್ನಿಯರು ಸಾಮಾಜಿಕವಾಗಿ ಹೆಚ್ಚು ಪ್ರಜ್ಞಾವಂತರಾಗಿರುತ್ತಾರೆ. ಗಂಡಂದಿರು ಹಣ ಗಳಿಸುವುದರಲ್ಲಿ ಬ್ಯುಸಿಯಾಗಿರುತ್ತಾರೆ.

ಕಿರಣ್ ಮಜುಮ್‍ದಾರ್ ಶಾ: ನನಗನ್ನಿಸುತ್ತೆ, ಇದು ಮಹಿಳೆಯರು ಮತ್ತು ಪತ್ನಿಯರ ಪಾಲಿಗೆ ಅದ್ಭುತ ಪುರಾವೆಯಿದ್ದಂತೆ. ನೀವೀಗ ಐಐಎಂಬಿಯ ನಾಯಕತ್ವ ಶೃಂಗಸಭೆಯಲ್ಲಿದ್ದೀರಾ. ಅಲ್ಮಾ ಮೇಟರ್‍ಗೆ ಮರಳಿ ಕೊಡುವುದು ಎಷ್ಟು ಮುಖ್ಯ? ಇದೊಂದು ಹಾಸ್ಯಾಸ್ಪದ ಪ್ರಶ್ನೆ, ಆದ್ರೂ ವಿದ್ಯಾಮಾತೆಗೆ ಮರಳಿ ಕೊಡಲಾಗದವರಲ್ಲಿ ತಪ್ಪಿತಸ್ಥ ಭಾವನೆ ಮೂಡಬೇಕೆಂದು ನಿಮಗನಿಸುತ್ತಿದೆಯಾ?

ಅಜೀಂ ಪ್ರೇಮ್‍ಜಿ: ಇಲ್ಲ, ನಾನು ನನ್ನ ಅಲ್ಮಾ ಮೇಟರ್‍ಗೆ ಏನನ್ನೂ ಮರಳಿಸಿಲ್ಲ. ದೂರದಲ್ಲಿರುವ ಅಲ್ಮಾ ಮೇಟರ್‍ಗಿಂತ ನಮ್ಮ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಾನು ಭಾವಿಸುತ್ತೇನೆ. ಆದ್ರೆ ಇದು ವೈಯಕ್ತಿಕ ಆಯ್ಕೆ. ವಿಶ್ವದ ಬಹಳಷ್ಟು ವಿಶ್ವವಿದ್ಯಾನಿಲಯಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ನೆರವು ದೊರೆಯುತ್ತಿದೆ.

ಕಿರಣ್ ಮಜುಮ್‍ದಾರ್ ಶಾ: ನೀವು ಕಲಿತ ಶಾಲೆ, ಅಥವಾ ಕಾಲೇಜು ಆಡಳಿತ ಮಂಡಳಿ ಸಹಾಯ ಕೇಳಿದರೆ ನೀವು ಎಲ್ಲ ಎನ್ನಲು ಅಸಾಧ್ಯವೆಂದು ನನಗನಿಸುತ್ತಿದೆ, ಅಲ್ಲವೇ?

ಅಜೀಂ ಪ್ರೇಮ್‍ಜಿ: ಅವರು ನನ್ನ ಬಳಿ ಬರುತ್ತಲೇ ಇರುತ್ತಾರೆ.

ಕಿರಣ್ ಮಜುಮ್‍ದಾರ್ ಶಾ: ನೀವು ಅವರಿಗೆ ಒಲ್ಲೆ ಎಂದಿದ್ದೀರಾ?

ಅಜೀಂ ಪ್ರೇಮ್‍ಜಿ: ನಾನು ಆದ್ಯತೆಯ ಮೇರೆಗೆ ನಿಧಿಯನ್ನು ದಾನ ಮಾಡುತ್ತೇನೆ. ನಮ್ಮ ದೇಶಕ್ಕೆ ಇದು ಸೂಕ್ತವಾದದ್ದು.

ಕಿರಣ್ ಮಜುಮ್‍ದಾರ್ ಶಾ: ಆದ್ರೆ ನಾನಿದನ್ನು ಒಪ್ಪುವುದಿಲ್ಲ, ನಮಗೆ ವಿದ್ಯಾದಾನ ಮಾಡಿದ ಸಂಸ್ಥೆಗಳಿಗೆ ನಾವೇನನ್ನಾದರೂ ಮರಳಿ ಕೊಡಲೇಬೇಕು. ಯಾಕಂದ್ರೆ ಇವತ್ತು ನಾವಿರುವ ಸ್ಥಿತಿಗೆ ಕಾರಣ ನಮ್ಮ ವಿದ್ಯಾ ಸಂಸ್ಥೆಗಳು.

ಅಜೀಂ ಪ್ರೇಮ್‍ಜಿ: ನಿಮಗೆ ಸಿಕ್ಕ ಚಪ್ಪಾಳೆಗಳ ಸುರಿಮಳೆಯೇ ಈ ಪ್ರಶ್ನೆಗೆ ಉತ್ತರ.

ಕಿರಣ್ ಮಜುಮ್‍ದಾರ್ ಶಾ: ಜಗತ್ತಿನ ದಿಗ್ಗಜ ಉದ್ಯಮಿಗಳನ್ನು ಗಮನಿಸಿದಾಗ, ನೀವು ಲೋಕೋಪಕಾರದ ಜೊತೆಗೆ ಬೆರೆತಿದ್ದೀರಾ. ಬಿಲ್‍ಗೇಟ್ಸ್, ಎಲೊನ್ ಮಸ್ಕ್, ವಾರೆನ್ ಬಫೆಟ್ ಮತ್ತು ಮಾರ್ಕ್ ಜುಕರ್‍ಬರ್ಗ್‍ರಂತಹ ಜೊತೆಗೆ ಕೈಜೋಡಿಸಿದ್ದೀರಾ. ಬ್ಯಾಂಕ್‍ಗಳು ಕೂಡ ಪರೋಪಕಾರದಲ್ಲಿ ತೊಡಗಿಕೊಳ್ಳಬೇಕೆಂದು ನಿಮಗನಿಸುತ್ತಿಲ್ಲವೇ? ಒಳ್ಳೆ ಸಂಬಳ ಪಡೆಯುವ ನೌಕರರು, ಉನ್ನತ ಹುದ್ದೆಯಲ್ಲಿರುವವರು ಕೂಡ ಸಮಾಜಕ್ಕೆ ಕೊಡುಗೆ ನೀಡುವಂತಹ ಸಂಸ್ಕøತಿಯನ್ನು ಸೃಷ್ಟಿಸಲು ಏನು ಮಾಡುತ್ತೀರಾ?

ಅಜೀಂ ಪ್ರೇಮ್‍ಜಿ: ಅವರು ಕೊಡುತ್ತಿದ್ದಾರೋ ಇಲ್ಲವೋ ಅನ್ನೋದು ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಕಠಿಣ ತೀರ್ಪು ಕೊಡಲಾರೆ. ಇದು ಕೇವಲ ಪ್ರಚಾರ ಪಡೆಯುವ ಅಥವಾ ಗಮನಸೆಳೆಯುವ ಪ್ರಯತ್ನವಲ್ಲ.

ಕಿರಣ್ ಮಜುಮ್‍ದಾರ್ ಶಾ: ಉದ್ಯೋಗಿಗಳ ಲೋಕೋಪಕಾರದ ಕಥೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಬೇಕು. ಪರೋಪಕಾರದ ತತ್ವಶಾಸ್ತ್ರವನ್ನು ಉದ್ಯಮಗಳು ಹೇಗೆ ಅಳವಡಿಸಿಕೊಳ್ಳುತ್ತವೆ? ಬ್ಯುಸಿನೆಸ್ ಸ್ಕೂಲ್‍ಗಳಲ್ಲಿ ಪರೋಪಕಾರದ ಕೋರ್ಸ್ ಒಂದನ್ನು ಪರಿಚಯಿಸುವ ಅಗತ್ಯವಿದೆಯೇ?

ಅಜೀಂ ಪ್ರೇಮ್‍ಜಿ: ಹೌದು, ಅವರು ನಿಮ್ಮನ್ನೇ ಪ್ರಾಧ್ಯಾಪಕರನ್ನಾಗಿ ಮಾಡಿಬಿಡ್ತಾರೆ. ಈ ಕೋರ್ಸ್ ಪರೋಪಕಾರದ ಕಿಡಿಯನ್ನು ಹೊತ್ತಿಸಬಲ್ಲದು.

ಹೀಗೆ ತಮ್ಮ ಪ್ರಶ್ನೆಗಳ ಸರಣಿ ಮುಗಿಯುತ್ತಿದ್ದಂತೆ, ಕಿರಣ್ ಮಜುಮ್‍ದಾರ್ ಶಾ, ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ರು. ಅಜೀಂ ಪ್ರೇಮ್‍ಜಿ ಅವರಿಗೆ ಪ್ರೇಕ್ಷಕರು ಕೇಳಿದ ಪ್ರಶ್ನೆ, ಅದಕ್ಕವರು ಕೊಟ್ಟ ಉತ್ತರ ಇಲ್ಲಿದೆ.

ಹಣವನ್ನು ದಾನ ಮಾಡುವ ಸಂದರ್ಭದಲ್ಲಿ ಎದುರಾದ ಸವಾಲುಗಳೇನು ಎಂಬ ಪ್ರಶ್ನೆಗೆ ಅಜೀಂ ಪ್ರೇಮ್‍ಜಿ ಕೊಟ್ಟ ಉತ್ತರವೇನು ಗೊತ್ತಾ? ``ನನಗೆ ಎದುರಾದ ಅತಿ ದೊಡ್ಡ ಸವಾಲು ಅಂದ್ರೆ, ಸಮಸ್ಯೆಯ ಗಾತ್ರ, ವ್ಯಾಪ್ತಿ ಮತ್ತು ಆಳ. ನನ್ನಲ್ಲಿ ಹತಾಶೆಯಿತ್ತು, ದೊಡ್ಡ ಸಂಸ್ಥೆಯನ್ನು ಕಟ್ಟಿದಾಗ ಅದು ಸಹಜ. ನಾವು ಸರ್ಕಾರದ ಕಾರ್ಯತಂತ್ರಗಳನ್ನು ಅವಲಂಬಿಸಿಲ್ಲ. ನಾವೇ ಅದನ್ನು ಮುನ್ನಡೆಸಬೇಕು''.

image


ನೀವ್ಯಾಕೆ ರಾಜಕೀಯಕ್ಕೆ ಸೇರಬಾರದು ಅನ್ನೋ ಪ್ರಶ್ನೆ ಅಜೀಂ ಪ್ರೇಮ್‍ಜಿ ಅವರತ್ತ ತೂರಿ ಬಂತು. ``ನಾನು ರಾಜಕೀಯ ಸೇರಿಲ್ಲ, ಯಾಕಂದ್ರೆ ಇನ್ನು ಕೆಲವೇ ವರ್ಷಗಳಲ್ಲಿ ಅದು ನನ್ನನ್ನು ಕೊಂದುಬಿಡುತ್ತೆ. ರಾಜಕೀಯದಲ್ಲಿ ತೊಡಗಿಕೊಳ್ಳಲು ಪ್ರಜ್ಞೆ ಬೆಳೆಸಿಕೊಳ್ಳುವ ಅಗತ್ಯವಿದೆ''.

ದಾನ ಮಾಡಬೇಕೆಂದು ನಿರ್ಧಾರ ಮಾಡುವುದು ಹೇಗೆ ಅನ್ನೋ ಪ್ರಶ್ನೆಗೆ ಅಜೀಂ ಪ್ರೇಮ್‍ಜಿ ಅವರ ಕೊಟ್ಟ ಉತ್ತರ ಅದ್ಭುತವಾಗಿತ್ತು. ``ಕಳೆದ ವಾರ ಲೋಕೋಪಕಾರದ ಜವಾಬ್ಧಾರಿ ಹೊತ್ತವರು ಮತ್ತು ಪ್ಯಾನಲ್ ಸದಸ್ಯರ ಜೊತೆ ನಾನು ಸಭೆ ನಡೆಸಿದ್ದೆ. ಅವರ ಕುಟುಂಬದವರೆಲ್ಲ ಪರೋಪಕಾರದಲ್ಲಿ ತೊಡಗಿಕೊಂಡಿದ್ದಾರೆ, ಮಕ್ಕಳಿಗೆ ಹಣದ ಉಡುಗೊರೆ ಬಂದ್ರೆ ಅದರಲ್ಲಿ ಶೇ.25ರಷ್ಟನ್ನು ದಾನ ಮಾಡುತ್ತಾರೆ. ಅವರು 2 ವರ್ಷದ ಮಗುವಾಗಿದ್ದಾಗಿನಿಂದ್ಲೇ ಈ ಸಂಸ್ಕøತಿ ಬೆಳೆದು ಬಂದಿದೆ. ಇದೇ ರೀತಿಯಲ್ಲಿ ಎಲ್ಲರಲ್ಲೂ ದಾನ ಧರ್ಮದ ಬಗ್ಗೆ ಅರಿವು ಮೂಡಿಸಬಹುದು'' ಅನ್ನೋದು ಅಜೀಂ ಪ್ರೇಮ್‍ಜಿ ಅವರ ಅಭಿಪ್ರಾಯ.

ಲೇಖಕರು: ದೀಪ್ತಿ ನಾಯರ್​​

ಅನುವಾದಕರು: ಭಾರತಿ ಭಟ್​​

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ