ಕೋಲ್ಕತ್ತದಾ ಸ್ಲಂವಾಸಿಗಳ ಪಾಲಿನ ಅಕ್ಕರೆಯ ಅಕ್ಕ ಸೂಫಿಯಾರ ದಣಿವರಿಯದ ಸಮಾಜಸೇವೆ

ಟೀಮ್​​ ವೈ.ಎಸ್​​.

ಕೋಲ್ಕತ್ತದಾ ಸ್ಲಂವಾಸಿಗಳ ಪಾಲಿನ ಅಕ್ಕರೆಯ ಅಕ್ಕ ಸೂಫಿಯಾರ ದಣಿವರಿಯದ ಸಮಾಜಸೇವೆ

Monday November 02, 2015,

4 min Read

ಸೂಫಿಯಾ ಖಟೂನ್, ಕೋಲ್ಕತ್ತಾದ ನಿರ್ಗತಿಕರ ಪಾಲಿಗೆ ಅಕ್ಕರೆಯ ಅಕ್ಕಳಂತೆ ಮುಂದೆ ನಿಂತು ಬದುಕಿನ ಪಾಠ ಹೇಳಿಕೊಡುತ್ತಿದ್ದಾರೆ. ಜೀವನದಲ್ಲಿ ಹೊಸ ದಾರಿ ಕಾಣಲು ಸಂಪನ್ಮೂಲಗಳನ್ನು ಒದಗಿಸಿ ಕೊಡುತ್ತಾ ಅವರ ಬದುಕಿಗೆ ಹೊಸ ದೃಕ್ಪಥ ಕಲ್ಪಿಸಿಕೊಡುತ್ತಿದ್ದಾರೆ. ಯಾವುದೇ ನಿರೀಕ್ಷೆಗಳಿಲ್ಲದೆ ಸಾಮಾಜಿಕ ಉದ್ಯಮದಲ್ಲಿ ಸಾಧನೆ ಮಾಡಿರುವ ಸೂಫಿಯಾರ ಸೇವಾಕಾರ್ಯದ ಕಥೆಯಿದು.

12 ವರ್ಷದ ಅಂಜಲಿ ಕೋಲ್ಕತ್ತಾದ ಸ್ಲಂನಲ್ಲಿ ವಾಸಿಸುತ್ತಾರೆ. ಆದರೆ ಅಂಜಲಿಯವರ ಬದುಕಿನಲ್ಲಿ ಬಣ್ಣ ಮೂಡಿಸಿದ್ದು ಮಾತ್ರ ಸೂಫಿಯಾ ಖಟೂನ್.

ಶಿಕ್ಷಣಕ್ಕೆ ಸಂಬಂಧಿಸಿದ ಆಟಗಳು ನನಗೆ ಇಷ್ಟವಾಯಿತು. ಜೊತೆಗೆ ನಮಗೆ ವೈದ್ಯಕೀಯ ಕಾರ್ಯಾಗಾರ ಕೂಡಾ ಇತ್ತು. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ, ತುರ್ತು ಪರಿಸ್ಥಿತಿ ಎದುರಾದಾಗ ಏನು ಮಾಡಬೇಕು. ಅನ್ನುವ ಸಂಗತಿಗಳನ್ನು ಹೇಳಿಕೊಡಲಾಯಿತು. ಸಿಂಗಾಪುರದಿಂದ ಬಂದಿದ್ದ ಒಬ್ಬರು ನಮಗೆ ಆತ್ಮ ರಕ್ಷಣೆಯ ಬಗ್ಗೆ ತರಬೇತಿ ನೀಡಿದರು. ಅವರು ನೀಡಿದ ಪುಸ್ತಕಗಳನ್ನು ನಾನು ಚೆನ್ನಾಗಿ ಓದಲು ಕಲಿತುಕೊಂಡೆ. ದೀದಿ ನಮಗೆ ಚಿತ್ರ ಬಿಡಿಸುವ ಕ್ಲಾಸ್ ತೆಗೆದುಕೊಂಡಿದ್ದರು. ನಾನು ಸುಂದರವಾಗಿ ಚಿತ್ರ ಬರೆಯುವುದನ್ನು ಹೇಳಿಸಿಕೊಂಡೆ. ಹೀಗೆ ಉತ್ಸಾಹದಿಂದ ಹೇಳುವ ಮೂಲಕ ತನ್ನ ಅನುಭವಗಳನ್ನು ವಣಿರ್ಸಿಕೊಂಡಿದ್ದಾಳೆ ಅಂಜಲಿ.

image


ಉಳ್ಳವರು ಹಾಗೂ ನಿರ್ಗತಿಕರ ಮಧ್ಯೆ ಸಂಪರ್ಕ:

ಸೂಫಿಯಾ ಖಟೂನ್​ರ ನಮ್ಮ ವಿಶ್ವ ನಮ್ಮ ಯತ್ನ (ಒಡಬ್ಲ್ಯೂ ಒಐ-ಅವರ್ ವರ್ಲ್ಡ್ ಅವರ್ ಇನಿಶಿಯೇಟಿವ್) ಒಂದು ವಿಭಿನ್ನ ಸಮಾಜ ಪರಿವರ್ತನಾ ಸಂಸ್ಥೆ. ಫೇಸ್​​ಬುಕ್ ಪೇಜ್ ಜೊತೆ ಸೂಫಿಯಾ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ.

ಸೂಫಿಯಾ ಹೇಳುವಂತೆ ಒಡಬ್ಲ್ಯೂಓಐ ವಿಭಿನ್ನ ಪ್ರಯತ್ನ. ಸಾಮಾನ್ಯವಾಗಿ ಬೇರೆ ಬೇರೆ ಯೋಜನೆಗಳಲ್ಲಿ ಕೆಲಸ ಮಾಡುವ ಜನರಿಗೆ ಸಮಯವಿರುವುದಿಲ್ಲ. ಹಾಗಾಗಿ ತಮ್ಮ ನಿತ್ಯದ ಕೆಲಸಗಳೊಂದಿಗೆ ಉಚಿತ ಸಮಯದಲ್ಲಿ ಸ್ವಯಂಸೇವಕರಂತೆ ಕೆಲಸ ಮಾಡುವ ಅವಕಾಶ ನಮ್ಮಲ್ಲಿದೆ. ಇದೊಂದು ದೊಡ್ಡ ಜಾಲವಾಗಿದ್ದೆ ಬೇರೆ ಬೇರೆ ವರ್ಗಗಳ ಜನರಿಂದ ಸದಾ ನೆರವು ಸಿಗುತ್ತಿದೆ. ಇದರಲ್ಲಿ ವಕೀಲರು, ವೈದ್ಯರು, ವಿದ್ಯಾರ್ಥಿಗಳು, ಚಾರ್ಟೆಡ್ ಅಕೌಂಟೆಂಟ್​​​ಗಳು, ಕಂಪೆನಿ ಸೆಕ್ರಟರಿಗಳು, ಕಾರ್ಪೊರೇಟ್ ಉದ್ಯೋಗಿಗಳು, ಗೃಹಿಣಿಯರು, ಮನೆಯಲ್ಲಿ ವಿರಾಮದಲ್ಲಿರುವ ವೃದ್ಧರಾದಿಯಾಗಿ ಬಹಳಷ್ಟು ಬೇರೆ ಬೇರೆ ಜನರಿದ್ದಾರೆ. ನಮ್ಮ ಈ ಯೋಜನೆಯಲ್ಲಿ ನಿಜಕ್ಕೂ ಸಂಕಷ್ಟದಲ್ಲಿರುವ ಜನಗಳಿಗೆ ಸಹಾಯಹಸ್ತವಿದೆ. ಬಡವರಿಗೆ ಸ್ವಯಂ ಸ್ವಾವಲಂಭನೆಗೆ, ವೈದ್ಯಕೀಯ ನೆರವಿಗೆ, ಯಾವುದೇ ರೀತಿಯ ಪರಿಣಿತ ಸಲಹೆ ಸೂಚನೆಗೆ ಹಾಗೂ ಸಂಪನ್ಮೂಲಗಳ ಅಗತ್ಯವಿರುವ ಜನರಿಗೆ ನೆರವು ನೀಡಲು ಯೋಜನೆ ಸಿದ್ಧವಿರುತ್ತದೆ ಅನ್ನುವ ಮೂಲಕ ತಮ್ಮ ಯೋಜನೆಯ ಮಾಹಿತಿ ನೀಡಿದ್ದಾರೆ.

18 ವರ್ಷದ ಪ್ರಿಯಾಂಕ ಇನ್ನೊಬ್ಬಳು ಸ್ಲಂ ನಿವಾಸಿ. ಕೋಲ್ಕತ್ತಾದ ಕಾಳಿಘಾಟ್​​ನ ಸ್ಲಂನಲ್ಲಿ ವಾಸಿಸುವ ಪ್ರಿಯಾಂಕ ಸುಫಿಯಾ ಕ್ಯಾಂಪ್ ನಡೆಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಅದೊಂದು ಅತ್ಯದ್ಭುತ ಅನುಭವ, ಮೊದಲ ಬಾರಿಗೆ ಸೂಫಿಯಾ ಅಕ್ಕನನ್ನು ನೋಡಿದ್ದು ಇನ್ನೂ ನೆನಪಿದೆ. ಸೂಫಿಯಾ ದೀದಿ ಹಾಗೂ ಅವರ ಸ್ನೇಹಿತರು ನಮ್ಮ ಶಾಲೆಗೆ ಬಂದು ವಿವಿಧ ರೀತಿಯ ಆರ್ಟ್ ಹಾಗೂ ಕೌಶಲ್ಯಗಳನ್ನು ಕಲಿಸಿದರು. ಅದೊಂದು ಮರೆಯಲಾಗದ ವರ್ಕ್​ಶಾಪ್. ನಾನು ಸ್ಪೋಕನ್ ಇಂಗ್ಲೀಷ್​​ನಿಂದಾಗಿ ಇಂಗ್ಲೀಷ್ ಓದುವುದನ್ನು ಬರೆಯುವುದನ್ನು ಕಲಿತುಕೊಂಡೆ. ಇದರಿಂದ ನನ್ನ ಇಂಗ್ಲೀಷ್ ಸಾಕಷ್ಟು ಅಭಿವೃದ್ಧಿ ಹೊಂದಿತು ಅಂತರ ಹೇಳಿದ್ದಾಳೆ ಪ್ರಿಯಾಂಕ.

image


ಕೇವಲ ಶಿಕ್ಷಣ ಹಾಗೂ ಕಲೆ ಕಲಿಸುವುದರಿಂದ ಮಾತ್ರ ಸ್ಲಂಗಳ ಕಲ್ಯಾಣವಾಗುವುದಿಲ್ಲ ಜೊತೆಗೆ ಆರೋಗ್ಯ ಹಾಗೂ ಉತ್ಕೃಷ್ಟ ಆಹಾರ ನೀಡಬೇಕು ಅಂತ ಅರಿವಿದ್ದ ಸೂಫಿಯಾ ಇದಕ್ಕಾಗಿ ಅಲ್ಲಿನ ಜನತೆಗೆ ಇದರ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಸೂಫಿಯಾ ಯತ್ನಿಸುತ್ತಾರೆ.

ಹೈಜಿನ್ ಕಾರ್ಯಾಗಾರದಲ್ಲಿ ನಮಗೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು. ಅಲ್ಲಿಯವರೆಗೆ ನಮಗೆ ತಿಂಗಳ ಋತುಸ್ರಾವದ ಬಗ್ಗೆ ಎಳ್ಳಷ್ಟೂ ಅರಿವಿರಲಿಲ್ಲ. ಕಾರ್ಯಾಗಾರದ ನಂತರ ನಮಗೆ ಉಚಿತ ಸ್ಯಾನಿಟರಿ ಪ್ಯಾಡ್​​​ಗಳನ್ನು, ಪುಸ್ತಕಗಳನ್ನು, ಕ್ರಾಫ್ಟ್ ಸಾಮಗ್ರಿಗಳನ್ನು ಕೊಟ್ಟರು. ನಾನೀಗ 10ನೇ ತರಗತಿ ಉತ್ತೀರ್ಣಳಾಗಿದ್ದೇನೆ. ಸೂಫಿಯಾ ಅಕ್ಕ ನನಗೆ ಹಾಗೂ ನನ್ನ ತಂಗಿಗೆ ಸಹಾಯ ಮಾಡಿದ್ದಾರೆ. ದೀದಿ ನನಗೆ ಇನ್ನೂ ಹೆಚ್ಚು ಓದಲು ಪ್ರೋತ್ಸಾಹ ನೀಡುತ್ತಿದ್ದಾರೆ. ಹಾಗೂ ಹೊಲಿಗೆಯನ್ನೂ ಕಲಿಸುತ್ತಿದ್ದಾರೆ. ಮುಂದೊಂದು ದಿನ ನಾವೊಂದು ಸಣ್ಣ ಉದ್ಯಮ ಆರಂಭಿಸಲು ಈಗ ಧೈರ್ಯ ಬಂದಿದೆ ಅಂತ ಪ್ರಿಯಾಂಕ ಹೆಮ್ಮೆಯಿಂದ ಹೇಳಿದ್ದಾಳೆ.

ಒಡಬ್ಲ್ಯೂಒಐ ಕ್ರಿಸ್ಮಸ್ ಸಂದರ್ಭದಲ್ಲಿ ಸಂತಾ ಆನ್ ದ ವೇ ಅನ್ನುವ ಯೋಜನೆಯಡಿ, ಕೋಲ್ಕತ್ತದಾದ್ಯಂತ ಬೀದಿ ಬದಿಯಲ್ಲಿ ಬದುಕುವವರು ಹಾಗೂ ಸ್ಲಂ ವಾಸಿಗಳಿಗಾಗಿ ಉಚಿತ ಆಹಾರದ ಪೊಟ್ಟಣಗಳು, ಹೊಸ ಬಟ್ಟೆ, ಪೇಸ್ಟ್ರೀಸ್, ಮಕ್ಕಳಿಗೆ ಗೊಂಬೆಗಳು ಹಾಗೂ ಆಟಿಕೆಗಳನ್ನು ನೀಡುತ್ತದೆ.

ಬ್ಯೂಟಿಫುಲ್ ಸ್ಮೈಲ್ ಯೋಜನೆಯ ಹೆಸರಿನಲ್ಲಿ ಅನಾಥ ಮಕ್ಕಳೊಂದಿಗೆ ದಿನವೊಂದನ್ನು ಕಳೆಯಲಾಗುತ್ತದೆ. ಇತ್ತೀಚೆಗಷ್ಟೆ ಆಶಿಯಾನ್ ಹೋಂ ಆಶ್ರಮದಲ್ಲಿರೋ ಮಕ್ಕಳನ್ನು ನಿಕ್ಕೋ ಪಾರ್ಕ್​ಗೆ ಕರೆದುಕೊಂಡು ಹೋಗಲಾಗಿತ್ತು. ಲೀಡ್ ದ ವೇಯ್ ಅನ್ನುವುದು ಇನ್ನೊಂದು ಯೋಜನೆಯ ಹೆಸರು. ಇದರಲ್ಲಿ ಸ್ಲಂಗಳು ಹಾಗೂ ಕೆಳವರ್ಗದ ಮನೆಗಳ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಜೀವನಾನುಕೂಲಕ್ಕೆ ಬೇಕಿದ್ದ ಕಲೆಯ ಕೌಶಲ್ಯಗಳ ತರಬೇತಿ ಹಾಗೂ ಅರಿವು ಮೂಡಿಸಲಾಗುತ್ತಿದೆ.

ವಿನೂತನ ಆಲೋಚನೆ:

ಒಡಬ್ಲ್ಯೂಒಐನ ಸೂಫಿಯಾ ಹೇಳುವಂತೆ, ಏಪ್ರಿಲ್ 2012ರಲ್ಲಿ ಅವರಿಗೆ ಇಂತದ್ದೊಂದು ವಿಭಿನ್ನ ಆಲೋಚನೆ ಬಂದಿತು. ಯಾರೋ ವಯೋವೃದ್ಧರಿಗೆ ಮಾಡಿದ ಸಹಾಯವನ್ನು ಫೇಸ್​​ಬುಕ್​​ನಲ್ಲಿ ಅಂಕಣದ ರೂಪದಲ್ಲಿ ಬರೆದಿದ್ದೆ. ಇದಕ್ಕೆ ಬಂದ ಪ್ರತಿಕ್ರಿಯೆ ಮಾತ್ರ ಅತ್ಯದ್ಭುತವಾಗಿತ್ತು. ಇದರಿಂದ ನನಗೆ ಸಾಮಾಜಿಕ ಜಾಲತಾಣಗಳ ಶಕ್ತಿ ಹಾಗೂ ಸಾಮರ್ಥ್ಯದ ಅರಿವಾಯಿತು. ಇದರಿಂದ ಸಮಾಜದಲ್ಲಿ ದುರ್ಬಲರಿಗೆ ನೆರವು ನೀಡಬಹುದು ಅನ್ನುವ ಆಲೋಚನೆ ಮೂಡಿತು. ಇದರಿಂದ ಪ್ರೇರಿತಳಾದ ನನಗೆ ಮಕ್ಕಳಿಗೆ ಹಾಗೂ ವಯೋವೃದ್ಧಿರಿಗೆ ನೆರವು ನೀಡಬೇಕು ಅನ್ನುವ ಆಸೆಯಾಯಿತು. ಒಳ್ಳೆಯ ಮನಸಿನಿಂದ ಏನೇ ಮಾಡಿದರೂ ಒಳ್ಳೆಯ ಫಲಿತಾಂಶ ಸಿಗುತ್ತದೆ ಅನ್ನುವುದು ನನ್ನ ಅಭಿಪ್ರಾಯ ಅಂತಾರೆ ಸೂಫಿಯಾ.

image


ಇದರ ಸವಾಲುಗಳೂ ಹಾಗೂ ಜವಬ್ದಾರಿ

ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರೂ ಸೂಫಿಯಾ ತಮ್ಮ ಬಡವರಿಗೆ ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡುವ ಆಶಯವನ್ನು ಮುಂದುವರೆಸಿದ್ದಾರೆ. ನಿಸ್ವಾರ್ಥ ಸೇವೆ ಮಾಡುವ ಬದ್ಧತೆಯ ಸ್ವಯಂ ಸೇವಕರು, ಯೋಜನೆಗಳನ್ನು ರೂಪಿಸುವುದು, ದೇಣಿಗೆಗಳನ್ನು ಸಂಗ್ರಹಿಸುವುದು, ಆಸಕ್ತ ಜನರನ್ನು ಈ ಯೋಜನೆಯತ್ತ ಸೆಳೆಯುವುದು ಮುಂತಾದ ನನ್ನ ಅನುಭವಗಳು ವಿವರಣೆಗೆ ನಿಲುಕದ್ದು ಅನ್ನುವ ಉತ್ಸಾಹದ ಮಾತು ಸೂಫಿಯಾರದ್ದು.

ಪ್ರೇರಣಾತ್ಮಕ ಶಕ್ತಿ

ಮಕ್ಕಳೇ ಸೂಫಿಯಾರ ಸ್ಫೂರ್ತಿ. ಪ್ರತೀ ದಿನವೂ ಅವರಿಂದ ಹೊಸತನವನ್ನು ಕಲಿಯುತ್ತಿದ್ದಾರೆ ಸೂಫಿಯಾ. ಮಕ್ಕಳೊಂದಿಗೆ ಕೆಲಸ ಮಾಡುವಾಗ ಬಹಳಷ್ಟು ವಿಚಾರವನ್ನು ಕಲಿಯುತ್ತಾರಂತೆ. ಆ ಮಕ್ಕಳ ಬದುಕು ನಮ್ಮ ನಿಮ್ಮೆಲ್ಲರಿಗಿಂತ ಬಹಳ ಭಿನ್ನ. ನಮಗೆ ನಮ್ಮದೇ ಆದ ಮೌಲ್ಯಗಳಿವೆ, ಕುಟುಂಬಗಳಿವೆ, ಶಿಕ್ಷಣವಿದೆ, ಮನೆ ಇದೆ. ಎಲ್ಲದಕ್ಕಿಂತ ಮುಖ್ಯವಾಗಿ ನಮಗೆ ಇಂತಹ ಹಲವಾರು ಒಳ್ಳೆಯ ಸಂಗತಿಗಳಿವೆ. ಮಕ್ಕಳ ಆಸಕ್ತಿ ಹಾಗೂ ಶ್ರದ್ಧೆ ಪ್ರಾಮಾಣಿಕವಾದದ್ದು, ಅವಕ್ಕೆ ಹೊಸತನ್ನು ಕಲಿಸಲು ಸಾಕಷ್ಟು ತಾಳ್ಮೆ ಬೇಕು. ಈ ತರಬೇತಿ ಹೊಂದಿದ ಮಕ್ಕಳಿಗೆ ಕೊಂಚ ಹೂಡಿಕೆ ಹಾಗೂ ಸಂಪನ್ಮೂಲಗಳನ್ನು ಒದಗಿಸಿದರೇ ಅವರಿಂದ ಅತ್ಯುತ್ತಮವಾದ ಔಟ್ಪುಟ್ ಸಿಗುತ್ತದೆ. ಸೂಕ್ತವಾದ ಕಲಿಕೆ ಹಾಗೂ ತರಬೇತಿ ನೀಡುವುದರಿಂದ ಈ ಮಕ್ಕಳ ಸಾಮರ್ಥ್ಯಕ್ಕೆ ಒಂದು ವೇದಿಕೆ ಒದಗಿಸಿದಂತಾಗುತ್ತದೆ ಅಂತ ತಮ್ಮ ಮಾತನ್ನು ಮುಗಿಸಿದರು ಸೂಫಿಯಾ.