ಕಾರ್ಟೂನ್​​ ಗ್ಯಾಲರಿಗೆ ವಿಸಿಟ್​​ ಕೊಡಿ- ಮನಸ್ಸಿನ ನೆಮ್ಮದಿ ಪಡೆಯಿರಿ..!

ಉಷಾ ಹರೀಶ್

ಕಾರ್ಟೂನ್​​ ಗ್ಯಾಲರಿಗೆ ವಿಸಿಟ್​​ ಕೊಡಿ- ಮನಸ್ಸಿನ ನೆಮ್ಮದಿ ಪಡೆಯಿರಿ..!

Saturday October 17, 2015,

2 min Read

ಗೆರೆಗಳು ಪದಗಳಿಗಿಂತ ಹೆಚ್ಚು ಅರ್ಥವನ್ನು ನೀಡುತ್ತವೆ. ಕೆಲವೊಮ್ಮೆ ಪದಗಳು ಸರಿಯಾಗಿ ವಿಷಯವನ್ನು ತಿಳಿಸಲು ಎಡವಬಹುದು. ಆದ್ರೆ ವ್ಯಂಗ್ಯ ಚಿತ್ರಗಳು ಕೆಲವೇ ಸೆಕೆಂಡ್​​ಗಳಲ್ಲಿ ಸರಿಯಾದ ಬದಲಾವಣೆಗೆ ದಾರಿ ಮಾಡಿಕೊಡಬಹುದು. ಹೀಗಾಗಿ ಪತ್ರಿಕೋದ್ಯಮದಲ್ಲಿ ಸುದ್ದಿಯಷ್ಟೇ ಬಹು ಮುಖ್ಯ ಸ್ಥಾನವನ್ನು ವ್ಯಂಗ್ಯ ಚಿತ್ರಗಳು ಪಡೆದುಕೊಂಡಿವೆ. ವ್ಯಂಗ್ಯ ಚಿತ್ರ ಕಲೆ ಬೆಳೆಯಬೇಕು ವ್ಯಂಗ್ಯಚಿತ್ರಕಾರರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ರಚಿಸಬೇಕು ಎನ್ನುವ ಉದ್ದೇಶದಿಂದ 8 ವರ್ಷಗಳ ಕೆಳಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರಂಭವಾದ ಸಂಸ್ಥೆಯೇ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆ.

image


ಸಾಮಾನ್ಯವಾಗಿ ಪತ್ರಕರ್ತರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘ, ಸಿನಿಮಾ ಪತ್ರಕರ್ತರ ಸಂಘದಂತೆ ನಮಗೂ ಒಂದು ಸಂಘ ಸಂಸ್ಥೆ ಬೇಕು ಎಂಬ ಉದ್ದೇಶದಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರಕಾರರಾಗಿ ಕಾರ್ಯನಿರ್ವಹಿಸಿದ್ದ ನರೇಂದ್ರ ಅವರು ಸಮಾನ ಮನಸ್ಕರೊಂದಿಗೆ ಉದ್ಯಮಿ ಅಶೋಕ್ ಖೇಣಿ ಅವರ ಸಹಾಯದೊಂದಿಗೆ ಈ ಸಂಸ್ಥೆಯನ್ನು ಕಳೆದ ಎಂಟು ವರ್ಷಗಳ ಹಿಂದೆ ಆರಂಭ ಮಾಡಿದರು.

ದೇಶದ ಮೊಟ್ಟಮೊದಲ ಕಾರ್ಟೂನ್ ಗ್ಯಾಲರಿ

ಈ ಸಂಸ್ಥೆ ವತಿಯಿಂದ ಕಾರ್ಟೂನ್ ಗ್ಯಾಲರಿಯನ್ನು ಸಹ ಸ್ಥಾಪಿಸಲಾಗಿದೆ. ಇಡೀ ಭಾರತದಲ್ಲಿ ವ್ಯಂಗ್ಯ ಚಿತ್ರಕಾರರಿಗಾಗಿ ಇರುವ ಒಂದೇ ಒಂದು ಗ್ಯಾಲರಿ ಇದು. ಈ ಗ್ಯಾಲರಿಯಲ್ಲಿ ಖ್ಯಾತ ವ್ಯಂಗ್ಯ ಚಿತ್ರಕಾರರಾದ ಆರ್ ಕೆ ಲಕ್ಷ್ಮಣ್ ಸೇರಿದಂತೆ ದೇಶದ ವಿವಿಧ ಕಲಾವಿದರು ತಮ್ಮ ಕಾರ್ಟೂನ್​​ಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ರಷ್ಯಾ, ಜಪಾನ್, ಅಮೇರಿಕಾ ಸೇರಿದಂತೆ ವಿದೇಶಿ ಕಾರ್ಟೂನಿಸ್ಟ್​​ಗಳು ಕೂಡ ಪ್ರತಿ ವರ್ಷ ಇಲ್ಲಿಗೆ ಬಂದು ತಮ್ಮ ಚಿತ್ರಗಳನ್ನು ಪ್ರದರ್ಶನಕ್ಕಿಡುತ್ತಿದ್ದಾರೆ.

image


ಕಾರ್ಟೂನ್ ಕಾರ್ಯಾಗಾರ:

ಕಳೆದ ಎರಡು ವರ್ಷಗಳಿಂದ ಸಂಸ್ಥೆ ವ್ಯಂಗ್ಯ ಚಿತ್ರ ಕಾರ್ಯಾಗಾರವನ್ನುಹಮ್ಮಿಕೊಳ್ಳುತ್ತಾ ಬಂದಿದೆ. ಕಾರ್ಯಾಗಾರದ ಕೊನೆಯಲ್ಲಿ ಉತ್ತಮ ಚಿತ್ರಕ್ಕೆ ಒಂದು ಲಕ್ಷ ರೂ. ನಗದು ಬಹುಮಾನವನ್ನು ಖ್ಯಾತ ವ್ಯಂಗ್ಯ ಚಿತ್ರಕಾರರಾದ ಮಾಯಾ ಕಾಮತ್ ಅವರ ಹೆಸರಿನಲ್ಲಿ ಕೊಡಲಾಗುತ್ತಿದೆ. ಕಾರ್ಯಾಗಾರದಲ್ಲಿ ವ್ಯಂಗ್ಯ ಚಿತ್ರಕಾರರಿಂದ ತರಬೇತಿ, ಉಪನ್ಯಾಸ ಮತ್ತು ಭಾಗವಹಿಸಿದ ಪ್ರತಿಯೊಬ್ಬರಿಗೂ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಕಾರ್ಯಾಗಾರಕ್ಕೆ ಪೂನಾ, ಮುಂಬೈ ಸೇರಿದಂತೆ ದೇಶದ ಮತ್ತಿತರ ಕಡೆಗಳಿಂದ ಕಲಾಸಕ್ತರು ಭಾಗವಹಿಸಿದ್ದರು.

ಕಾರ್ಟೂನ್ ಲೈಬ್ರರಿ:

ಈ ಗ್ಯಾಲರಿಯಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ರಚಿತವಾಗಿರುವ ವ್ಯಂಗ್ಯ ಚಿತ್ರಗಳು, ವ್ಯಂಗ್ಯ ಚಿತ್ರಗಳಿಗೆ ಸಂಬಂಧಿಸಿದ ಪುಸ್ತಕಗಳು, ವ್ಯಂಗ್ಯ ಚಿತ್ರಕಾರರ ಬಗೆಗಿನ ವಿವರಗಳು ಕನ್ನಡ ಇಂಗ್ಲಿಷ್, ತೆಲುಗು ತಮಿಳು ಭಾಷೆಗಳಲ್ಲಿ ಲಭ್ಯ.

image


ದೇಶದ ವಿವಿಧ ಭಾಗಗಳಲ್ಲಿ ಈ ತರಹದ ಗ್ಯಾಲರಿಗಳನ್ನು ನಿರ್ಮಾಣ ಮಾಡಬೇಕು ಎಂಬ ಉದ್ದೆಶ ಹೊಂದಿದ್ದಾರೆ ನರೇಂದ್ರ ಅವರು. ಈ ಸಂಸ್ಥೆ ಪ್ರಾರಂಭವಾದಗಿನಿಂದ ದೇಶ ವಿದೇಶಗಳಿಳಿಂದ ವ್ಯಂಗ್ಯ ಚಿತ್ರಗಳನ್ನು ಸಂಗ್ರಹಿಸುವುದು, ಅವುಗಳ ಪ್ರದರ್ಶನವನ್ನು ಏರ್ಪಡಿಸುವುದು ಸೇರಿದಂತೆ ವ್ಯಂಗ್ಯ ಚಿತ್ರಗಳ, ಚಿತ್ರಕಾರರ ಬೆಳವಣಿಗೆಗೆ ಟೊಂಕ ಕಟ್ಟಿ ನಿಂತಿದ್ದಾರೆ. " ಇಡೀ ಭಾರತದಲ್ಲಿ ವ್ಯಂಗ್ಯ ಚಿತ್ರಗಳ ಪ್ರದರ್ಶನಕ್ಕಾಗಿ ಒಂದೇ ಒಂದು ಗ್ಯಾಲರಿಯನ್ನು ಸಂಸ್ಥೆ ಹೊಂದಿದೆ. ಇದಕ್ಕಾಗಿ ಲಿಮ್ಕಾ ಬುಕ್​ಗೂ ಸಂಸ್ಥೆ ಸೇರ್ಪಡೆಯಾಗಿದೆ. ವ್ಯಂಗ್ಯ ಚಿತ್ರಕಾರರ ಸಂಸ್ಥೆ, ಗ್ಯಾಲರಿ ಹೊಂದಿರುವ ಕಾರಣದಿಂದಾಗಿ ಬೆಂಗಳೂರು ವ್ಯಂಗ್ಯ ಚಿತ್ರಗಳ ರಾಜಧಾನಿ ಎಂಬ ಬಿರುದು ಪಡೆದುಕೊಂಡಿದೆ. ಇದು ಬೆಂಗಳೂರಿಗರ ಹೆಮ್ಮೆ. ಪ್ರತಿವರ್ಷ ಹೊಸ ಹೊಸ ವ್ಯಂಗ್ಯ ಚಿತ್ರಕಾರರನ್ನು ಬೆಳಸುವುದು ಸಂಸ್ಥೆಯ ಉದ್ದೇಶ. ಅದಕ್ಕಾಗಿ ಪ್ರತಿ ತಿಂಗಳು ಒಂದೊಂದು ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಏರ್ಪಡಿಸುತ್ತಿದೆ." ಅಂತಾರೆ ಭಾರತೀಯ ವ್ಯಂಗ್ಯ ಚಿತ್ರಕಾರ ಸಂಸ್ಥೆಯ ಮುಖ್ಯಸ್ಥ ನರೇಂದ್ರ.

ದೇಶದಲ್ಲೇ ಅನೇಕ ಹೊಸತನಗಳಿಗೆ ಕಾರಣವಾದ ಬೆಂಗಳೂರು ಈಗ ಕಾರ್ಟೂನಿಸ್ಟ್​​ಗಳನ್ನು ಕೂಡ ವಿಭಿನ್ನವಾಗಿ ಗುರುತಿಸುವ ಕಾರ್ಯ ಮಾಡುತ್ತಿದೆ.