ಕಾಡು ಬೆಳೆಸಿ ನಾಡು ಉಳಿಸಿದ "ಜಾಧವ್"​​

ಟೀಮ್​ ವೈ.ಎಸ್​. ಕನ್ನಡ

ಕಾಡು ಬೆಳೆಸಿ ನಾಡು ಉಳಿಸಿದ "ಜಾಧವ್"​​

Friday September 09, 2016,

3 min Read

ಆತನ ಹಠಮಾರಿತನ ನಿಜಕ್ಕೂ ಅಚ್ಚರಿ ಪಡಿಸುವಂತಹದು. ವಿಶ್ವದ ಪರಿಸರವಾದಿಗಳು ಭಾರತದ ಯಾವುದೋ ಕುಗ್ರಾಮದಲ್ಲಿರುವ ಈ ವ್ಯಕ್ತಿಯ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಈಶಾನ್ಯ ಭಾರತದಲ್ಲಿನ ಅಸ್ಸಾಂ ರಾಜ್ಯದ ನಗರ ಜೋಹಾರ್ತ್, ದೇಶದ ಯಾವುದೇ ನಗರಕ್ಕೂ ಕಡಿಮೆ ಇಲ್ಲ. ಆಗಾಗ ಬೋಡೋ ಉಗ್ರರ ಹಾವಳಿ, ಕೋಮುಗಲಭೆಗಳು, ಆಫ್ ಸ್ಪಾ ವಿರುದ್ಧ ಆಗಾಗ ನಡೆಯುವ ಪ್ರತಿಭಟನೆಗಳಿಂದ ಸದಾ ಕಾದ ಕಾವಲಿಯಂತಿರುವ ಈಶಾನ್ಯ ರಾಜ್ಯಗಳಲ್ಲಿ ಅಷ್ಟೇ ಸ್ವಚ್ಛಂದ ಮತ್ತು ದಟ್ಟ ಅರಣ್ಯ ಸಂಪತ್ತಿದೆ.

image


ಅಸ್ಸಾಂನ ಅತ್ಯಂತ ಸುಂದರ ದ್ವೀಪ ಮಾಜುಲಿ. ಸುಮಾರು 1,250 ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ಈ ಮಾಜುಲಿ ದ್ವೀಪ, ಬ್ರಹ್ಮಪುತ್ರ ನದಿಯಿಂದಲೇ ಕಷ್ಟದ ದಿನಗಳನ್ನ ಅನುಭವಿಸುತ್ತಿದೆ. ನದಿಯ ತೀರಗಳಲ್ಲಿ ಉಂಟಾಗುವ ಮಣ್ಣಿನ ಸವಕಳಿಯಿಂದಾಗಿ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿ ಕಳೆದುಕೊಂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಮಾಜುಲಿ ದ್ವೀಪ ನಿರಂತರ ಸವಕಳಿಗೆ ತುತ್ತಾಗಿ ಪ್ರಸ್ತುತ ತನ್ನ ಅರ್ಧದಷ್ಟು ಅರಣ್ಯ ಸಂಪತ್ತನ್ನ ಕಳೆದುಕೊಂಡಿದೆ. ಈಗ ಕೇವಲ 352 ಕಿಲೋಮೀಟರ್ ನಷ್ಟು ವ್ಯಾಪ್ತಿಗೆ ಅರಣ್ಯ ಮತ್ತು ಜನವಸತಿ ಪ್ರದೇಶ ಕುಸಿದಿದೆ.

ಇದನ್ನು ಓದಿ: ಬೆಂಗಳೂರಿಗೆ ಅಂದದ ಟಚ್​- ಗಪ್​ಚುಪ್​ ಆಗಿ ಮಾಡ್ತಿದ್ದಾರೆ ವರ್ಕ್​..!

ಸುಮಾರು ಒಂದೂವರೆ ಲಕ್ಷ ಜನರಿಗೆ ಆಶ್ರಯ ಒದಗಿಸಿರುವ ಮಾಜುಲಿ ದ್ವೀಪ ಮಳೆಗಾಲದಲ್ಲಿ ಆಗಾಗ ಪ್ರವಾಹಕ್ಕೆ ಸಿಲುಕುತ್ತದೆ. ಜನವಸತಿಗಳಿಗೆ ನುಗ್ಗುವ ಬ್ರಹ್ಮಪುತ್ರ ನದಿ ಜನರ ನೆಮ್ಮದಿ ಕೆಡಿಸುತ್ತದೆ. ಅಷ್ಟೇ ಅಲ್ಲ, ನಿರಂತರ ಪ್ರವಾಹದಿಂದ ಮಣ್ಣಿನ ಸವಕಳಿ ಉಂಟಾಗಿ ಸಾವಿರಾರು ಎಕರೆ ಪ್ರದೇಶ ಬರಡು ಭೂಮಿಯಾಗಿ ಪರಿಣಮಿಸಿದೆ. ಬಿಸಿಲಿನ ತಾಪ ಹೆಚ್ಚಾಗಿ ನೆರಳಿಲ್ಲದೇ, ಹಲವು ಪ್ರಾಣಿಪಕ್ಷಿಗಳು ಸಾವನ್ನಪ್ಪಿವೆ. ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಬರಡಾಗುತ್ತಿದ್ದ ಜಾಗದಲ್ಲಿ 30 ವರ್ಷಗಳ ಹಿಂದೆ ಅದೊಂದು ದಿನ 16ರ ಹರೆಯದ ಹುಡುಗನೊಬ್ಬ ನಡೆದು ಹೋಗುತ್ತಿದ್ದ. ಹಾವುಗಳ ಹಿಂಡೊಂದು ನದಿಯ ತೀರದಲ್ಲಿ ಬಿದ್ದಿದ್ದನ್ನ ನೋಡಿದ. ಹತ್ತಿರ ಹೋದಾಗಲೇ ಗೊತ್ತಾಗಿದ್ದು, ಬಿಸಿಲಿನ ತಾಪ ತಡೆಯಲಾಗದೇ ಹಾವುಗಳು ಸತ್ತುಬಿದ್ದಿವೆ ಅಂತಾ. ಆ ಹುಡುಗನಿಗೆ ಹಾವುಗಳ ಸಾವು ನೋಡಲಾಗಲಿಲ್ಲ. ಅಲ್ಲೇ ಕಣ್ಣೀರು ಹಾಕುತ್ತಾ ಕುಳಿತ. ಆಮೇಲೆ ಅಳುವುದನ್ನ ನಿಲ್ಲಿಸಿ ಮನಸ್ಸಿನಲ್ಲೊಂದು ದೃಢ ನಿಶ್ಚಯ ಮಾಡಿದ. 30 ವರ್ಷಗಳಲ್ಲಿ ತಾನು ಎಣಿಸಿದ್ದನ್ನ ಮಾಡಿ ಮುಗಿಸಿದ. ಪರಿಣಾಮ ಭಾರತದ ಫಾರೆಸ್ಟ್ ಮ್ಯಾನ್ ಎಂಬ ಬಿರುದನ್ನ ಪಡೆದ.

image


ಹಾವುಗಳ ಸಾವನ್ನ ಕಣ್ಣಾರೆ ಕಂಡ ಆ ಹದಿನಾರರ ಹರೆಯದ ಹುಡುಗ ಇದಕ್ಕೆ ಕಾರಣ ಹುಡುಕಿದಾಗ, ಅರಣ್ಯ ನಾಶ ಎಂಬುದು ಗೊತ್ತಾಗಿತ್ತು. ಇನ್ನು ಅತ್ತರೆ ಲಾಭವಿಲ್ಲ. ಈ ಮಾರಣಹೋಮವನ್ನು ಹೇಗಾದರೂ ತಡೆಯಬೇಕು ಅಂತಾ ನಿಶ್ಚಯಿಸಿ ಮನೆಗೆ ವಾಪಸ್ ಓಡಿ ಬಂದ. ಬರಡು ಭೂಮಿಯಲ್ಲಿ ಬಿದಿರು ಚೆನ್ನಾಗಿ ಬೆಳೆಯುತ್ತೆ ಎಂದು ಅರಿತಿದ್ದ ಆ ಹುಡುಗ, 200 ಬಿದಿರು ಸಸಿಗಳನ್ನ ಹೊತ್ತು ಆ ಬರಡು ನೆಲದಲ್ಲಿ ನೆಟ್ಟ. ಆ ಹುಡುಗ ಬೇರಾರೂ ಅಲ್ಲ ಭಾರತದ ಫಾರೆಸ್ಟ್ ಮ್ಯಾನ್ ಎಂದೇ ಖ್ಯಾತಿಗಳಿಸಿರುವ ಜಾಧವ್ ಮೊಲಾಯಿ ಪಾಯೆಂಗ್.

image


ಜಾಧವ್ ಹುಟ್ಟಿದ್ದು ಅಸ್ಸಾಂನ ಜೊರ್ಹಾತ್ ಜಿಲ್ಲೆಯ ಅರುಣಾ ಸಪೋರಿ ಎಂಬ ಕುಗ್ರಾಮದಲ್ಲಿ. ಕೃಷಿಯೇ ಜೀವನಾಧಾರವಾಗಿರುವ ಮಿಶಿಂಗ್ ಎಂಬ ಬುಡಕಟ್ಟು ಸಮುದಾಯದ ಪುಟ್ಟ ಕುಟುಂಬದಲ್ಲಿ. ಕೃಷಿಕರಾಗಿ ಹುಟ್ಟಿದ ಜಾಧವ್ ಮೇಲೆ ಹಾವಿನ ಸಾವಿನ ಘಟನೆ ಅದೆಷ್ಟರಮಟ್ಟಿಗೆ ಪ್ರಭಾವ ಬೀರಿತ್ತು ಅಂದ್ರೆ, ತನ್ನ ಗ್ರಾಮದ ಸುಮಾರು 80ರಷ್ಟು ಮಂದಿ ಯುವಕರಂತೆ ಮಿಲಿಟರಿ ಸೇರಲಿಲ್ಲ. ತಾನು ಹೋರಾಡಬೇಕಿದ್ದು ಅರಣ್ಯ ನಾಶದ ವಿರುದ್ಧ ಅಂತಾ ನಿರ್ಧರಿಸಿ ಕಾಡು ಬೆಳೆಸುವುದನ್ನೇ ಕಾಯಕ ಮಾಡಿಕೊಂಡರು. 30 ವರ್ಷಗಳ ಕಾಲ ಗಿಡಗಳನ್ನ ಪೋಷಿಸುವುದನ್ನೇ ಕೆಲಸ ಮಾಡಿಕೊಂಡ. ಈತನ ಕೃಷಿಗೆ ಫಲವೇ ಒಂದು ಸಾವಿರದ 360 ಎಕರೆ ವ್ಯಾಪ್ತಿಯ ಈ ದಟ್ಟ ಮೊಲಾಯಿ ಅರಣ್ಯ.

ಒಮ್ಮೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಘೇಂಡಾಮೃಗಗಳ ಸಂತತಿಯ ಬಗ್ಗೆ ಅಧ್ಯಯನ ಮಾಡಲು ಬಂದಾಗ ಈ ದಟ್ಟ ಕಾಡನ್ನ ನೋಡಿ ಒಂದು ಕ್ಷಣ ಮೌನವಾದ್ರು. ಇಂತಹ ವಿಶಾಲವಾದ ಅರಣ್ಯವನ್ನ ಏಕಾಂಗಿ ವ್ಯಕ್ತಿಯೊಬ್ಬ ಪೋಷಿಸುತ್ತಿದ್ದಾನೆ ಎಂದು ತಿಳಿಯುತ್ತಿದ್ದಂತೆ ಈ ಅರಣ್ಯಕ್ಕೆ ಅವರದೇ ಹೆಸರನ್ನ ನಾಮಕರಣ ಮಾಡಿದ್ರು. ಅಷ್ಟೇ ಅಲ್ಲ, ಜಾಧವ್​ರ ಅರಣ್ಯದ ಬಗೆಗಿನ ಕಾಳಜಿಗೆ 2012ರಲ್ಲಿ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂಬ ಬಿರುದು ದೊರೆತಿದೆ. ಆ ಬಳಿಕ, ಜಾಧವ್ ರನ್ನ ಹಲವು ಪ್ರಶಸ್ತಿಗಳು ಅರಸಿ ಬಂದವು. ಜಾಧವ್ ರ ಈ ಮಹತ್ಕಾರ್ಯವನ್ನ ಪರಿಗಣಿಸಿದ ಕೇಂದ್ರದ ನರೇಂದ್ರ ಮೋದಿ ಸರ್ಕಾರ 2015ರಲ್ಲಿ ಪದ್ಮಶ್ರೀ ಗೌರವ ನೀಡಿದೆ.

image


ಹಾಲು ಮಾರುತ್ತಾ ತನ್ನ ಹೆಂಡತಿ ಬಿನಿತಾ ಮತ್ತು ಮೂವರು ಮಕ್ಕಳನ್ನ ಪೋಷಿಸುತ್ತಿರುವ ಜಾಧವ್, ಈಗಲೂ ಎಲ್ಲೇ ಖಾಲಿ ಜಾಗ ಕಂಡರೂ ಅಲ್ಲಿ ಗಿಡ ನೆಡುತ್ತಾರೆ. ಅದನ್ನ ಪೋಷಿಸುತ್ತಾರೆ. ಸಣ್ಣ ಹುಡುಗನಾಗಿ ಅಂದು ನೆಟ್ಟ ಗಿಡಗಳು ಈಗ ಆಕಾಶದೆತ್ತರಕ್ಕೆ ಬೆಳೆದು ನಿಂತಿವೆ. ಈ ವಿಶಾಲವಾದ ದಟ್ಟ ಅರಣ್ಯದಲ್ಲೀಗ ಐದು ಬಂಗಾಳದ ಹುಲಿಗಳು, ಘೇಂಡಾಮೃಗಗಳು, ಹಾವುಗಳು, ರಣಹದ್ದುಗಳು ಸೇರಿದಂತೆ ಹಲವು ರೀತಿಯ ಪ್ರಾಣಿ ಪಕ್ಷಿಗಳು ನೆಲೆ ಕಂಡುಕೊಂಡಿವೆ. ಕೇವಲ ಕಾಡನ್ನ ಬೆಳೆಸಿದ್ದು ಮಾತ್ರವಲ್ಲ, ಅವುಗಳನ್ನ ಮರಗಳ್ಳರು ಮತ್ತು ಬೇಟೆಗಾರರಿಂದ ಏಕಾಂಗಿಯಾಗಿ ರಕ್ಷಣೆ ಮಾಡ್ತಿದ್ದಾರೆ ಜಾಧವ್. ಇವರ ಈ ಕೆಲಸದಿಂದಾಗಿ ಪ್ರವಾಸೋದ್ಯಮ ಕೂಡ ಹೆಚ್ಚಿದೆ.

ಒಟ್ಟಿನಲ್ಲಿ, ಒಬ್ಬಂಟಿಯಾಗಿ ಏನು ತಾನೇ ಮಾಡಲು ಸಾಧ್ಯ ಎಂದು ಪ್ರಶ್ನಿಸುವವರಿಗೆ ಜಾಧವ್ ಮೊಲಾಯಿ ಪಾಯೆಂಗ್ ಆದರ್ಶ ವ್ಯಕ್ತಿಯಾಗಿ ನಿಲ್ಲುತ್ತಾರೆ. ಇವರಂಥ ಛಲಗಾರರು ಊರಿಗೆ ಒಬ್ಬರಿದ್ರೆ ಇಡೀ ದೇಶ ಹಸಿರು ಸಿರಿಯಿಂದ ಕಂಗೊಳಿಸೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನು ಓದಿ:

1. ಕನ್ನಡದಲ್ಲೊಂದು ಅಂತರಾಷ್ಟ್ರೀಯ ಮಟ್ಟದ Ramp ಆಲ್ಬಂ

2. ಪೂಜಾ ಐಟಂಗಳ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ರೆಡಿಪೂಜಾ.ಕಾಂನಲ್ಲಿ ಆರ್ಡರ್​ ಮಾಡಿ..!

3. ಜೋಧ್​ಪುರದ ಉದ್ಯಮಿಗಳಿಗೆ ಸಹಾಯ ನೀಡುತ್ತಾ "ಫೇಸ್​ಬುಕ್​"ಎಂಟ್ರಿ..?