ಪ್ರವಾಸಿಗಳಿಗೆ ಅತ್ಯುತ್ತಮ ಪ್ರವಾಸದ ಅನುಭವ ಒದಗಿಸಿಕೊಡಲು ತೀರ್ಮಾನಿಸಿದ್ದರು ಆ ದಂಪತಿಗಳು..!

ಟೀಮ್​​ ವೈ.ಎಸ್​. ಕನ್ನಡ

ಪ್ರವಾಸಿಗಳಿಗೆ ಅತ್ಯುತ್ತಮ ಪ್ರವಾಸದ ಅನುಭವ ಒದಗಿಸಿಕೊಡಲು ತೀರ್ಮಾನಿಸಿದ್ದರು ಆ ದಂಪತಿಗಳು..!

Sunday December 06, 2015,

3 min Read

ಕೆಲವು ವರ್ಷಗಳ ಹಿಂದೆ ಏಕಾಂಗಿಯಾಗಿ ಅಂತರಾಷ್ಟ್ರೀಯ ಪ್ರವಾಸ ಮಾಡಿದ್ದ ನಿಧಿಗೆ ಆಗಿನ ಅನುಭವಗಳು ಮರೆಯಲಾಗಿರಲಿಲ್ಲ. ಆಗಿನ್ನೂ ತಂತ್ರಜ್ಞಾನ ಇಷ್ಟು ಮುಂದುವರೆದಿರಲಿಲ್ಲ. ಮೊಬೈಲ್ ಹಾಗೂ ಇಂಟರ್ನೆಟ್ ಇಷ್ಟೆಲ್ಲಾ ಆಯ್ಕೆಗಳನ್ನು ನೀಡುತ್ತಲೂ ಇರಲಿಲ್ಲ. ಯಾವುದೇ ಪ್ರವಾಸಿ ತಾಣಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುವ ವ್ಯವಸ್ಥೆ ಇರಲಿಲ್ಲ. ಅದರಲ್ಲೂ ಅಂತರಾಷ್ಟ್ರೀಯ ಪ್ರವಾಸಿ ತಾಣಗಳ ಬಗ್ಗೆ ವಿವರಣೆಗಳು ನೀಡುವ ಸೌಕರ್ಯಗಳು ಆಗಿರಲಿಲ್ಲ. ಈಗಲೂ ಈ ಕ್ಷೇತ್ರದಲ್ಲಿ ಅಷ್ಟೊಂದು ವ್ಯವಸ್ಥಿತ ಯೋಜನೆಗಳಿಲ್ಲ.

ಈ ಸಮಸ್ಯೆಯನ್ನು ದೂರವಾಗಿಸಲು ಟ್ರಾವೆಲ್ ತಂತ್ರಜ್ಞಾನದ ಸ್ಟಾರ್ಟ್ ಅಪ್ ಗ್ವಿಡೂ ಹುಟ್ಟಿಕೊಂಡಿತು. ಇದರ ಆ್ಯಪ್​​ನಲ್ಲಿ ಟ್ರಾವೆಲಿಂಗ್ ಸ್ಥಳಗಳನ್ನು ಪರಿಪೂರ್ಣವಾಗಿ ವಿವರ ಸಹಿತ ಪಟ್ಟಿಮಾಡಲಾಗಿದೆ. ಪ್ರವಾಸಿಗಳಿಗೆ ಪ್ರವಾಸಿ ತಾಣದ ಮಾಹಿತಿ ನೀಡುವ ಸೌಲಭ್ಯ ಇದರಲ್ಲಿದೆ. ಜೊತೆಗೆ ತಾಣಗಳಿಗೆ ಸಂಬಂಧಿಸಿದ ಆಡಿಯೂ ವಿಷ್ಯುವಲ್ ಗೈಡ್, ಹೋಟೆಲ್ ಬುಕಿಂಗ್, ರೆಸ್ಟೋರೆಂಟ್ ಹಾಗೂ ಶಾಪಿಂಗ್ ಸ್ಥಳಗಳ ಮಾಹಿತಿಯೂ ಇದರಲ್ಲಿದೆ.

image


ಆವಿಷ್ಕರಿಸಲ್ಪಟ್ಟ ಕ್ಷಣ..

ವಿದೇಶಗಳಿಗೆ ಸದಾ ಸಂಚರಿಸುವ ನಿಧಿ ವರ್ಮಾರಿಗೆ ಗ್ವಿಡೂ ಆಲೋಚನೆ ಬಂದಿತು. ಅವರು ತಮ್ಮ ಮೊದಲ ಪ್ಯಾರಿಸ್ ಪ್ರವಾಸದಲ್ಲಿ ಐಫೆಲ್ ಟವರ್ ಎದುರಿಗಿರುವ ಹೋಟೆಲ್​​ನಲ್ಲಿ ಉಳಿದುಕೊಂಡಿದ್ದರು. ಆಗ ಮುಂದಿನ ಐಫೆಲ್ ಟವರ್​​​ನ ವಿಹಂಗಮ ದೃಶ್ಯ ಅವರನ್ನು ರೋಮಾಂಚಿತಗೊಳಿಸಿತ್ತು. ರೊಮ್ಯಾಂಟಿಕ್ ಆಗಿರುವ ನಿಧಿ ವರ್ಮಾ, ತಮ್ಮ ಪ್ರೀತಿಪಾತ್ರ ವ್ಯಕ್ತಿಯೊಂದಿಗೆ ಮುಂದಿನ ಪ್ಯಾರಿಸ್ ಪ್ರವಾಸದಲ್ಲಿ ಇದೇ ಹೋಟೆಲ್​​ನಲ್ಲಿ ರೂಂ ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಮೊದಲ ದಿನ ಅವರಿಗೆ ಐಫೆಲ್ ಟವರ್ ಮುಚ್ಚಿತ್ತು. ಎರಡನೇ ದಿನ ಅಲ್ಲಿ ದೊಡ್ಡದೊಂದು ಕ್ಯೂ ಇತ್ತು. ಹಾಗಾಗಿ ಅವರಿಗೆ ವಿವರವಾದ ಮಾಹಿತಿ ಲಭ್ಯವಾಗಲೇ ಇಲ್ಲ. ನಿಧಿ ಹೇಳುವಂತೆ ಅವರು ಮೊದಲೇ ಟಿಕೆಟ್ ಬುಕ್ ಮಾಡಿ ಅಲ್ಲಿಗೆ ಬಂದಿದ್ದರು. ಆದರೆ ಅಲ್ಲಿನ ಗೈಡ್​​ಗಳು ಅವರಿಗೆ ವಿಕಿಪೀಡಿಯಾ ಪುಟಗಳ ಮಾಹಿತಿ ನೀಡುತ್ತಿದ್ದರು.

ಹೀಗಾಗಿ ಆ ದಂಪತಿಗಳು ತಮ್ಮ ಸ್ಮಾರ್ಟ್​ಫೋನ್​​ನಲ್ಲಿ ಪೂರ್ಣ ಪ್ರಮಾಣದ ವಿವರಣೆ ಸರಳವಾಗಿ ಸಿಗುವಂತಿರಬೇಕು ಎಂದು ಆಲೋಚಿಸಿದ್ದರು. ಅವರ ಈ ವೈಯಕ್ತಿಕ ಅನುಭವವೇ ಗ್ವಿಡೂ ಅನ್ನುವ ಆಡಿಯೋ ವಿಷ್ಯುವಲ್ ಗೈಡ್ ನಿರ್ಮಾಣಕ್ಕೆ ಪ್ರೇರಣೆಯಾಯಿತು. ಪ್ರವಾಸಿಗಳು ತಮ್ಮ ಟೂರ್​​ನ ಅನುಭವವನ್ನು ಇನ್ನಷ್ಟು ಸುಲಭವಾಗಿಸಿಕೊಳ್ಳಲು ಈ ಆಡಿಯೋ ವಿಷ್ಯುವಲ್ಸ್ ಖಂಡಿತಾ ನೆರವಾಗುತ್ತದೆ ಅನ್ನುವುದು ನಿಧಿಯವರ ವಿಶ್ವಾಸ.

ತಂಡ ಕಟ್ಟುವ ಅನುಭವ:

ಗ್ವಿಡೂ 6 ಜನ ಕೋರ್ ಟೀಮ್ ಸದಸ್ಯರು ಹಾಗೂ ಮುಂಬೈ ಮೂಲದ 17 ಸದಸ್ಯರ ತಂಡವನ್ನು ಹೊಂದಿದೆ. ಗ್ವಿಡೂ ಸಂಸ್ಥೆಯ ಸಿಇಓ ಹಾಗೂ ಸಂಸ್ಥಾಪಕರಾದ ವಿನೀತ್ ಬುಡ್ಕಿ, ಸಂಸ್ಥಾಪಕಿ ನಿಧಿ ವರ್ಮಾ, ಮಾರ್ಕೆಟಿಂಗ್ ಮುಖ್ಯಸ್ಥ ದರ್ಶನ್ ಶರ್ಮಾ, ಚೀಫ್ ಟೆಕ್ನಿಕಲ್ ಆಫೀಸರ್ ಪ್ರಶಾಂತ್ ಚೌಧರಿ, ಕಂಟೆಂಟ್ ಮುಖ್ಯಸ್ಥ ಅಲ್ವಿನಾ ಸಯೀದ್, ವ್ಯಾವಹಾರಿಕ ಅಭಿವೃದ್ಧಿ ಅಧಿಕಾರಿ ಅನಿರುದ್ಧ ಮಾಲಿ ಗ್ವಿಡೂವಿನ ಸಕ್ರಿಯ ತಂಡದ ಪ್ರಮುಖ ಸದಸ್ಯರು.

ಉಳಿದ ಸ್ಟಾರ್ಟ್ ಅಪ್ ಸಂಸ್ಥೆಗಳಂತೇ ಗ್ವಿಡೂ ಸಹ ಆರಂಭದಲ್ಲಿ ಹೂಡಿಕೆ, ಸಹಭಾಗಿತ್ವ, ಆದಾಯ ಮಾದರಿ ಉತ್ತೇಜನದಂತಹ ಸವಾಲುಗಳನ್ನು ಎದುರಿಸಿತ್ತು. ಆದರೂ ತಮ್ಮ ಕಾರ್ಯಶ್ರದ್ಧೆ ಹಾಗೂ ಸಂಸ್ಥೆಯ ಅಭಿವೃದ್ಧಿಯೆಡೆಗೆ ಗಮನವಿಟ್ಟು ಕೆಲಸ ಮಾಡಿದ ನಂಬಿಕೆಯ ತಂಡದ ಪರಿಶ್ರಮದಿಂದ ಈ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಯಿತು ಅನ್ನುವುದು ನಿಧಿ ಅವರ ಅಭಿಪ್ರಾಯ.

ಆಕರ್ಷಣೆ ಹಾಗೂ ಅಭಿವೃದ್ಧಿ:

ಎಸ್​​ವಿಪಿ ಫ್ಲೈ ದುಬೈನ ಹೂಡಿಕೆದಾರರಾದ ಪವನ್ ಬೋರ್ಲೇ ಹಾಗೂ ಪಾರ್ಟ್​ನರ್​​ಗಳಾದ ಮೇಕ್​​ ಮೈ ಟ್ರಿಪ್, ಮೇಕಾಂಗ್ ಟೂರಿಸಂನ ಸಹಕಾರದಿಂದ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಯಿತು ಅನ್ನುವುದು ನಿಧಿರವರ ಮಾತು.

ಗ್ವಿಡೂ ತಂಡ ಇಲ್ಲಿಯವರೆಗೆ ಸುಮಾರು 1 ಲಕ್ಷದಷ್ಟು ಡೌನ್ಲೋಡ್ ಕಂಡಿದೆ. ವೆಬ್ ಅಪ್ಲಿಕೇಶನ್ ಲಾಂಚ್ ಆದ ಕೇವಲ 2 ತಿಂಗಳಲ್ಲೇ 2 ಲಕ್ಷ ಪ್ರವಾಸಿಗಳು ಗ್ವಿಡೂ ನೆರವು ಪಡೆದುಕೊಂಡಿದ್ದಾರೆ. ಇಲ್ಲಿ ಮೂರು ಹಂತದಲ್ಲಿ ಆದಾಯವನ್ನು ಯೋಜಿಸಲಾಗಿದೆ. ಶೇ. 60ರಷ್ಟು ಆದಾಯ ಟೂರ್ ಹಾಗೂ ಈಕ್ಟಿವಿಟಿಗಳಿಂದ ಬರುತ್ತದೆ. ಶೇ.15ರಷ್ಟು ಆದಾಯ ಆಡಿಯೂ ಗೈಡ್​​ನಿಂದ ಹಾಗೂ ಉಳಿದ ಆದಾಯ ವ್ಯಾವಹಾರಿಕ ಚಂದಾದಾರಿಕೆ ಮಾದರಿಯಿಂದ ಬರುತ್ತದೆ.

ಗ್ವಿಡೂ ನಿರ್ವಹಿಸುತ್ತಿರುವ ಪ್ರಕಾಶ್ ಹೇಳುವಂತೆ ಇದು ಪ್ರವಾಸಿಗಳಿಗೆ ಅತ್ಯುತ್ತಮ ಅನುಭವ ಒದಗಿಸಿಕೊಡುತ್ತಿದೆ. ಮುಂದೆ ಇದಕ್ಕೆ ಹೆಚ್ಚುವರಿ ಸೌಕರ್ಯಗಳನ್ನು ಆ್ಯಡ್ ಮಾಡಿ ಮ್ಯಾಪಿಂಗ್, ದರ ಪಟ್ಟಿ, ಲೈಫ್​​ಸ್ಟೈಲ್​​ಗೆ ಸಂಬಂಧಿಸಿದ ಟೂಲ್ ನಿರ್ಮಿಸುವ ಯೋಜನೆ ಇದೆ ಅಂದಿದ್ದಾರೆ ಪ್ರಕಾಶ್.

ಮಾರುಕಟ್ಟೆಯ ಅವಕಾಶ ಹಾಗೂ ಭವಿಷ್ಯದ ಯೋಜನೆಗಳು:

ಫೋಕಸ್ವ್ರೈಟ್ ರಿಸರ್ಚ್ ವಾರ್ಷಿಕ ವರದಿಯ ಪ್ರಕಾರ ಟೂರಿಸಂ ಕ್ಷೇತ್ರದಲ್ಲಿ ವಾರ್ಷಿಕವಾಗಿ 160 ಅಮೇರಿಕನ್ ಡಾಲರ್ ವಹಿವಾಟು ನಡೆಸುವ ಅಂದಾಜಿದೆ. ಗ್ವಿಡೂ ಸಂಸ್ಥೆಯನ್ನು ಪ್ರಾರಂಭಿಕ ಹಂತದಲ್ಲಿ ವಿನೀತ್ ಹಾಗೂ ನಿಧಿ ಶ್ರಮಪಟ್ಟು ಮೇಲೆತ್ತಿದರು. ಕಳೆದ ಫೆಬ್ರವರಿಯಲ್ಲಿ ಎಸ್​​ವಿಪಿ ಫ್ಲೈ ದುಬೈ, ಟೀಮ್ ಇಂಡಸ್, ಗ್ಯಾಪ್ ಜಂಪರ್ಸ್ ಸಂಸ್ಥೆಗಳ ಹೂಡಿಕೆದಾರ ಪವನ್ ಬೋರ್ಲೆಯಿಂದ ಆರಂಭಿಕ ಹೂಡಿಕೆ ಮಾಡಿಕೊಂಡಿತು. ಡುಕ್ಯಾಬ್​​​ನ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಅನೂಪ್ ಅಗರ್ವಾಲ್, ನಿರ್ಮಲ ಸಿಂಗ್, ಮುಂಬೈ ಮೂಲದ ಚಾರ್ಟೆಡ್ ಅಕೌಂಟೆಂಟ್​​​ಗಳಾದ ವಿಶಾಲ್ ಶಾ, ಉಶಿಕ್ ಗಾಲಾ, ಸಂಜಯ್ ಸಹಾ ಗ್ವಿಡೂಗೆ ಹೂಡಿಕೆ ಮಾಡಿದ್ದಾರೆ.

ಗ್ರಾಹಕರಿಗೆ ಅತ್ಯುತ್ತಮ ಪ್ರವಾಸದ ಅನುಭವಗಳನ್ನು ಒದಗಿಸಿಕೊಡುವ ಮೂಲಕ, ಹೊಸ ಹೊಸ ಆವಿಷ್ಕಾರಗಳನ್ನು ನಡೆಸಿ, ಈ ಕ್ಷೇತ್ರದಲ್ಲಿ ಲೀಡರ್ ಆಗಬೇಕು ಅನ್ನುವುದು ನಿಧಿಯವರ ಕನಸು. ಟೂರ್ಗಳನ್ನು ಎಂಜಾಯ್ ಮಾಡುವ ಗ್ರಾಹಕರಿಗೆ ಗ್ವಿಡೂ ಯಾವತ್ತಿಗೂ ಜೊತೆಯಾಗುವ ಸಂಗಾತಿಯಾಗುತ್ತದೆ ಅನ್ನುವುದು ನಿಧಿಯವರ ಭರವಸೆಯೂ ಹೌದು.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ವಿಶ್ವಾಸ್​​​