ಅಪಘಾತವಾಗಿ ಕೈ ಗೆ ಸಣ್ಣ ಪೆಟ್ಟಾದರೂ ಅಯ್ಯೋ ಕೈಯೇ ಹೋಯ್ತಲ್ಲ ಅಂದ್ಕೊಳ್ತಾರೆ. ಇನ್ನು ಕಣ್ಣಿಗೆ ಏನಾದ್ರೂ ಪೆಟ್ಟಾದ್ರೆ ಜೀವನಾನೇ ಮುಗಿದುಹೋಯ್ತು ಅಂದ್ಕೊಳ್ತಾರೆ. ಆದ್ರೆ ಇಲ್ಲೊಬ್ವರಿಗೆ ಹುಟ್ಟಿನಿಂದಲೇ ಕಣ್ಣು ಇಲ್ಲ, ಕೈ ಗಳೂ ಇಲ್ಲ. ಇಷ್ಟಾದರೂ ಅವರೇನು ಜೀವನವೇ ಮುಗಿದೋಯ್ತು ಅಂತ ಕುಳಿತಿಲ್ಲ. ಜನರು ಹೊಟ್ಟೆಕಿಚ್ಚು ಬರುವಂತೆ ಜೀವನೋತ್ಸಾಹದಿಂದ ಬದುಕು ನಡೆಸುತ್ತಿದ್ದಾರೆ. ಬಳ್ಳಾರಿಯ ದೇವಿನಗರದ ನಿವಾಸಿ ಶಂಕರ್ ಈ ಸ್ಟೋರಿಯಾ ಕಥಾ ನಾಯಕ.
ಇದನ್ನು ಓದಿ: ಒಂದು ‘ಚಿಪ್ಸ್'ನ ಕಥೆ.. ಹಳ್ಳಿಯಿಂದ ಮೆಟ್ರೋವರೆಗೆ ಹಬ್ಬಿದ ಸ್ವಾದ.. !
ವಿದ್ಯಾಭ್ಯಾಸ, ದುಡಿಮೆಯ ಛಲ ಇದ್ದರೆ, ಸಾಧನೆ ನಿಶ್ಚಿತ ಎನ್ನುವುದಕ್ಕೆ ವಿಕಲಚೇತನ ಯುವಕ ಶಂಕರ್ ಎಲ್ಲರಿಗೂ ಮಾದರಿ. ಕೈ-ಕಣ್ಣಿಲ್ಲದಿದ್ದರೂ ಇತರರು ಕಣ್ಣರಳಿಸುವ ರೀತಿ ಬದುಕುತ್ತಿದ್ದಾರೆ. ಚಂದ್ರಶೇಖರ, ಸರೋಜಮ್ಮ ದಂಪತಿಗೆ ಶಂಕರ ಏಕೈಕ ಪುತ್ರ. ಶಂಕರ್ ಗೆ ಹುಟ್ಟುವಾಗಲೇ ಎರಡು ಕಣ್ಣುಗಳು ಕಾಣುತ್ತಿರಲಿಲ್ಲ. ಎರಡು ಕೈಗಳು ಸರಿಯಾಗಿಲ್ಲ. ಇದ್ದೊಬ್ಬ ಮಗ ಹೀಗಾದನಲ್ಲ ಅನ್ನೋದೇ ಪೋಷಕರ ಚಿಂತೆಯಾಗಿತ್ತು. ಆದ್ರೆ ಈಗ ತಮ್ಮ ಮಗನ ಬಗ್ಗೆ ಪೋಷಕರಲ್ಲಿ ಹೆಮ್ಮೆ ಇದೆ. ಜಗತ್ತನ್ನೇ ಗೆದ್ದರೂ ತಂದೆ ತಾಯಿ ಹೆಮ್ಮೆ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ತಮ್ಮ ಮಗ ವಿಕಲಚೇತನನಾದರೂ ಎಲ್ಲರಿಗಿಂತಲೂ ಮುಂದಿದ್ದಾನೆ ಅನ್ನೋದೇ ಶಂಕರ್ ತಂದೆ ತಾಯಿಗೆ ಹೆಮ್ಮೆ.
ಒಂದರಿಂದ ಹತ್ತನೇ ತರಗತಿಯವರೆಗೆ ಬ್ರೈಲ್ ಲಿಪಿಯಲ್ಲಿ ಶಂಕರ್ ಶಿಕ್ಷಣ ಪಡೆದರು. ಆ ನಂತರ ಸಾಮಾನ್ಯ ವಿದ್ಯಾರ್ಥಿಗಳಂತೆ ಪಿಯುಸಿ ಓದಿ 75% ಅಂಕ ಗಳಿಸಿ ಎಲ್ಲರನ್ನೂ ಬೆರೆಗುಗೊಳಿಸದ್ದರು. ಸಾಮಾನ್ಯರಂತಿದ್ದ ಹುಡುಗರೆಲ್ಲ ಫೇಲ್ ಆದ್ರೆ ಈ ಹುಡುಗ ಮಾತ್ರ ಅಸಾಮಾನ್ಯ ಸಾಧನೆ ತೋರಿದ್ದ. ಪಿಯುಸಿ ಮುಗಿಸಿದ ನಂತರ ಶಂಕರ್ ಗೆ ಡಿಗ್ರಿ ಮಾಡುವ ಕನಸಿತ್ತು. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪದವಿ ಮುಗಿಸಿದರು. ಪದವಿಯಲ್ಲಿ ಶಂಕರ್ ಪಡೆದ ಅಂಕವೆಷ್ಟು ಗೊತ್ತಾ..? 83%. ಪ್ರತಿಭಾವಂತರೂ ಅಂತ ಹೇಳಿಕೊಳ್ಲುವವರು ಇವರ ಸಾಧನೆಯನ್ನೊಮ್ಮೆ ನೋಡಬೇಕು. ಕಂಪ್ಯೂಟರ್ನಲ್ಲಿ ಎಚ್ಟಿಎಂಎಲ್, ಪಿಎಚ್ಪಿ ಸೇರಿದಂತೆ ಇತರ ಕೋರ್ಸ್ ಕಲಿಯುವ ಮೂಲಕ ಇತರರಿಗೂ ಚೈತನ್ಯ ತುಂಬಿದ್ದಾರೆ.
ಪದವಿ ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ವೆಬ್ ಡೆವಲಪರ್ ಆಗಿ ಕೆಲಸ ನಿರ್ವಹಿಸಿದ್ದ ಶಂಕರ, ತಾಯಿ ಇರುವ ಕಾರಣಕ್ಕೆ ಬಳ್ಳಾರಿಗೆ ಆಗಮಿಸಿ ಸೈಬರ್ ಕೆಫೆ ನಡೆಸುತ್ತಿದ್ದಾರೆ. ಪ್ರತಿಭಾವಂತಿಕೆಗೆ ವಿಕಲತೆ ಎಂದಿಗೂ ಅಡ್ಡಿಯಾಗುವುದಿಲ್ಲ ಅನ್ನೋದನ್ನ ಶಂಕರ್ ಸಾಧಿಸಿ ತೋರಿಸಿದ್ದಾರೆ. ದೇವಿನಗರದಲ್ಲಿ ಪ್ರತ್ಯೇಕವಾಗಿ ಸೈಬರ್ ಕೆಫೆ ಇಟ್ಟುಕೊಂಡಿರುವ ಇವರು, ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.
ನನಗೆ ಕೈಗಳಿಲ್ಲ, ಕಣ್ಣು ಇಲ್ಲ ಅಂತ ಯಾವತ್ತಿಗೂ ಅನಿಸಿಲ್ಲ. ನನ್ಮ ಪಾಡಿಗೆ ನಾನು ಓದಿದೆ. ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದ್ದಕ್ಕೆ ಒಳ್ಳೆಯ ಅಂಕಗಳು ನನಗೆ ಬಂದವು. ಎಲ್ಲರೂ ನನ್ನನ್ನಿ ಅಭಿನಂದಿಸುತ್ತಾರೆ. ಕಣ್ಣಿಲ್ಲದಿದ್ದರೂ, ಕೈಗಳಿಲ್ಲದಿದ್ದರೂ ಇದೆಲ್ಲ ಹೇಗೆ ಸಾಧ್ಯ ಅಂತ ಕೇಳುತ್ತಾರೆ. ಅವರಿಗೆಲ್ಲ ನನ್ನ ಉತ್ತರ ಒಂದೆ. ನನಗೆ ಹೊರಗೆ ಕಾಣಲು ಕಣ್ಣಿಲ್ಲ ನಿಜ, ಒಳಗಣ್ಣು ಇದೆ. ನನಗೆ ಕೈಗಳಿಲ್ಲ ನಿಜ. ಆದ್ರೆ ಕೈಗಳಿಲ್ಲ ಅಂತ ಯಾವತ್ತಿಗೂ ಅನ್ನಿಸಿಲ್ಲ. ನಾನು ವಿಶೇಷ ಅಥವಾ ವಿಕಲ ಚೇತನ ಅಂತ ನನಗೆ ಅನ್ನಿಸಿಯೇ ಇಲ್ಲ ಅಂತ ವಿಶ್ವಾಸದಿಂದ ಹೇಳ್ತಾರೆ ಶಂಕರ್.
ಶಂಕರ್ ಗೆ ಎರಡು ಕಣ್ಣುಗಳೂ ಕಾಣುವುದಿಲ್ಲ, ಸರಿಯಾಗಿ ಎರಡು ಕೈಗಳಿಲ್ಲದಿದ್ದರೂ ಮೊಬೈಲ್ ಹಾಗೂ ಕಂಪ್ಯೂ ಟರ್ ಬಳಕೆಯಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಕಂಪ್ಯೂಟರ್, ಮೊಬೈಲ್ ಮತ್ತು ಟೆಕ್ನಾಲಜಿಗೆ ಸಂಬಂಧಿಸಿದ ವಿಷಯಗಳಲ್ಲಿ ಶಂಕರ್ ಗೆ ಅಗಾದ ಜ್ಞಾನವಿದೆ. ಸರಳವಾಗಿಯೇ ಕಂಪ್ಯೂಟರ್ ಆಪರೇಟ್ ಮಾಡುವ ಮೂಲಕ ಅಕ್ಕ-ಪಕ್ಕ ಕುಳಿತವರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಾರೆ, ಬೆರಗು ಮೂಡಿಸುತ್ತಾರೆ. ವಿಕಲಚೇತನರು ನಮ್ಮಿಂದು ಏನೂ ಆಗುವುದಿಲ್ಲ ಎಂದು ಕುಳಿತುಕೊಳ್ಳಬೇಕಿಲ್ಲ. ಎಲ್ಲರಂತೆ ಸಾಧನೆ ಮೆರೆಯಲು ನಮಗೂ ಸಾಧ್ಯವಿದೆ ಅನ್ನೋದನ್ನ ಸಾಧಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
1. ಜಪಮಾಲೆಗೆ ಫ್ಯಾಷನ್ ಟಚ್ –ಕಾಶಿ ಗ್ರಾಮಗಳಲ್ಲಿ ಮೋದಿ ಸ್ಟಾರ್ಟ್ ಅಪ್ ಇಂಡಿಯಾ ಕನಸು ನನಸು
2. ಮೈಸೂರಿನಲ್ಲಿ135 ಅಡಿ ಎತ್ತರದ ಕ್ಲಾಕ್ ಟವರ್..!
3. ಅನುಭವವಿಲ್ಲದಿದ್ರೂ ಅದ್ಭುತ ಹೆಚ್ ಆರ್.. ! : ಇದು ನಿತ್ಯಾ ಡೇವಿಡ್ ಅವರ ವೃತ್ತಿ ಬದುಕಿನ ಯಶೋಗಾಥೆ