18 ವರ್ಷದ ವಿಜ್ಞಾನಿ ಕರಣ್ ಜೆರಾತ್ ಕಂಡುಕೊಂಡ ನವೀನ ಜೀವನ

ಟೀಮ್​​ ವೈ.ಎಸ್​​. ಕನ್ನಡ

18 ವರ್ಷದ ವಿಜ್ಞಾನಿ ಕರಣ್ ಜೆರಾತ್ ಕಂಡುಕೊಂಡ ನವೀನ ಜೀವನ

Wednesday November 18, 2015,

4 min Read

ಸಮುದ್ರದಲ್ಲಿ ತೈಲ ಸೋರುವಿಕೆಗೆ ಪರಿಹಾರವನ್ನ ಕಂಡುಹಿಡಿದ ಕರಣ್ ಜೆರಾತ್ ಅವರಿಗೆ, ಈ ವರ್ಷದ ಸಮಾರಂಭದಲ್ಲಿ ಇಂಟೆಲ್‍ನ ಯುವ ವಿಜ್ಞಾನಿ ಎಂಬ ಪ್ರಶಸ್ತಿ ದೊರೆತಿದೆ. ಸಮುದ್ರದಲ್ಲಿ ತೈಲ ಸೋರಿಕೆಯಾದ್ರೆ ಸಕಲ ಜಲಚರಗಳು ಹಾಗೂ ಪರಿಸರಕ್ಕೆ ಹಾನಿಯುಂಟಾಗುತ್ತೆ. ಅದನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದವು. 2010ರಲ್ಲಿ ಮೆಕ್ಸಿಕೋ ಕೊಲ್ಲಿಯ ಸಮುದ್ರದಾಳದಲ್ಲಿ ತೈಲ ಸೋರಿಕೆ ಸಂಭವಿಸಿದಾಗ, ಕರಣ್ ಟೆಕ್ಸಾಸ್‍ನ ಫ್ರೆಂಡ್ಸ್​​ವುಡ್‍ನಲ್ಲಿ ವಾಸಿಸುತ್ತಿದ್ದರು. ಈ ಘಟನೆಯನ್ನು ನೋಡಿ ನನಗೆ ತುಂಬಾ ಬೇಸರವಾಯ್ತು. ಪ್ರಕೃತಿಗೆ ಎಷ್ಟು ಹಾನಿಯಾಗಿದೆ ಎಂದು ನನಗೆ ಅರಿವಾಗಿ, ಅದರ ಬಗ್ಗೆ ಏನಾದರೂ ಮಾಡಲೇಬೇಕಿತ್ತು’ ಎಂದು ಕರಣ್ ಹೇಳುತ್ತಾರೆ.

image


ಕರಣ್​​, ಸಂಶೋಧನೆ ಮತ್ತು ವಿನ್ಯಾಸಗಳು ವಿಫಲವಾಗದಂತೆ ದಿನಕ್ಕೆ 10 ಗಂಟೆಗಳ ಕಾಲ ಪ್ರಯೋಗ ಮಾಡುತ್ತಿದ್ದರು. ಅವರ ಪ್ರಯತ್ನ ಹಾಗೂ ಸಂಶೋಧನೆಗೆ ತಕ್ಕ ಹಾಗೆ ಇಂಟೆಲ್ ವತಿಯಿಂದ 50,000 ಗೆದ್ದ ಹೆಗ್ಗಳಿಕೆಗೆ ಪಾತ್ರವಾದರು. ಕರಣ್ ಆವಿಷ್ಕಾರ ಎಲ್ಲರಿಗೂ ಮಾದರಿಯಾಗಿರಬೇಕೆಂದು ಮಾಧ್ಯಮದವರು ಬೆಂಬಲಿಸಿದರು. ಈಗ ಕರಣ್ ಬಹುಮಾನವನ್ನಾಗಿ ಪಡೆದ ಹಣವನ್ನು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪೆಟ್ರೋಲಿಯಂ ಇಂಜಿನಿಯರಿಂಗ್ ಮಾಡಲು ಉಪಯೋಗಿಸುತ್ತಿದ್ದಾರೆ. ತನ್ನ ಆವಿಷ್ಕಾರವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಸಿಕ್ಕ ಪ್ರತಿಯೊಂದು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರು ‘ಕಾಸ್ಮೊಪಾಲಿಟಿನ್ ಸಮುದಾಯದಿಂದ ಬಂದಿದ್ದರಿಂದ, ಮನಸ್ಸು ಮತ್ತು ವಯಸ್ಸು ಯಾವುದೇ ಸಂಶೋಧನೆಗೆ ಅಡ್ಡಿಯಾಗಲಿಲ್ಲ’ ಎಂದು ಯುವರ್‍ಸ್ಟೋರಿಗೆ ಹೇಳಿದರು ಕರಣ್. ಇಲ್ಲಿದೆ ಕರಣ್ ಜೆರಾತ್ ಜೊತೆ ಯುವರ್‍ಸ್ಟೋರಿ ನಡೆಸಿದ ಸಂದರ್ಶನ...

ನೀವು ನಿಮ್ಮ ಬಾಲ್ಯವನ್ನು ಭಾರತ, ಮಲೇಷ್ಯಾ ಮತ್ತು ಅಮೇರಿಕಾದಲ್ಲಿ ಕಳೆದವರು. ನಿಮ್ಮ ದೃಷ್ಟಿಯಲ್ಲಿ ಜಾಗತಿಕ ಅನುಭವಗಳು ಹೇಗಿವೆ?

ನಾನು ಮುಂಬೈನಲ್ಲಿ ಜನಿಸಿದೆ, ಆದರೆ ನಾನು 1 ವರ್ಷದವನಿದ್ದಾಗ ನಾವು ಮಲೇಷ್ಯಾಗೆ ಸ್ಥಳಾಂತರಿಸಿದೆವು. ಅಲ್ಲಿ ಕೌಲಾಲಂಪುರ್‍ನ ಅಂತರರಾಷ್ಟ್ರೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅಲ್ಲಿನ ಬದಲಾದ ಸಂಸ್ಕೃತಿ, ಜೀವನ ಶೈಲಿಗೆ ನಾವೂ ಬದಲಾಗಬೇಕಿತ್ತು. 2008ರಲ್ಲಿ ನಾವು ಟೆಕ್ಸಾಸ್‍ನ ಫ್ರೆಂಡ್ಸ್​​ವುಡ್‍ನಲ್ಲಿ ನೆಲೆಸಿದೆವು. ನನ್ನ ವೈಜ್ಞಾನಿಕ ಕಾರ್ಯಗಳು ಅಲ್ಲಿಂದ ಶುರುವಾಗಿ ರೂಪುಗೊಳ್ಳಲಾರಂಭಿಸಿತು.

ನಿಮ್ಮ ತಂದೆ – ತಾಯಿಯ ಬಗ್ಗೆ?

ನನ್ನ ತಂದೆ ನಾರ್ವೆ ಶಿಪ್ಪಿಂಗ್ ಕಂಪನಿಯಲ್ಲಿ ಇಂಜಿನಿಯರ್, ತಾಯಿ ಒಬ್ಬ ಕಲಾವಿದೆ, ಅವರಿಬ್ಬರ ಅತ್ಯುತ್ತಮ ಗುಣ, ಅಂದರೆ ವೈಜ್ಞಾನಿಕ ಹಾಗೂ ಕಲಾತ್ಮಕ ಗುಣಗಳು ನನಗೆ ಬಂದಿವೆ.

ನೀವು ಅಮೇರಿಕಾದ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಹೇಗೆ ಸಾಧ್ಯವಾಯಿತು?

ಅದು ಹೊಸ ಜಾಗವಾದುದರಿಂದ ಮೊದಲು ಬಹಳ ಭಯ ಆಯಿತು. ಏಕೆಂದರೆ ಅಲ್ಲಿ ತಂದೆಯ ಕೆಲಸದಿಂದ ಒಂದು ಕುಟುಂಬವನ್ನು ಹೊರತುಪಡಿಸಿ ಯಾರೊಬ್ಬರೂ ಗೊತ್ತಿರಲಿಲ್ಲ. ಹಾಗಾಗಿ ಹೊಂದಾಣಿಕೆಗೆ ಕೊಂಚ ಸಮಯ ಬೇಕಾಯಿತು. ಅಲ್ಲಿನ ಶಾಲೆಯಲ್ಲಿ ನಾನು ವಿಜ್ಞಾನದ ಕಡೆ ತುಂಬಾ ಆಕರ್ಷಿತನಾದೆ. ಹೊಸದನ್ನು ತಿಳಿಯುವ ಆಸಕ್ತಿ ಹೆಚ್ಚಾಯಿತು.

ನೀವು ಈ ಸಾಧನವನ್ನು ತಯಾರು ಮಾಡಬೇಕೆಂದು ಯಾವಾಗ ನಿರ್ಧರಿಸಿದಿರಿ?

ರಜೆಯನ್ನು ಕಳೆಯಲು ನನ್ನ ತಾಯಿಯ ಕುಟುಂಬವಿದ್ದ ಸಿಂಗಾಪುರಕ್ಕೆ ಹೋಗಿದ್ದೆವು. ಅದೇ ಸಂದರ್ಭದಲ್ಲಿ ಮೆಕ್ಸಿಕೋ ಕೊಲ್ಲಿಯಲ್ಲಿ ತೈಲ ಸೋರುವಿಕೆ ಸಂಭವಿಸಿತು. ಆದ್ದರಿಂದ ಸಾಗರದ ಪರಿಸರ ನಾಶವಾಗತೊಡಗಿತು. ಅದಕ್ಕೆ ಹೇಗಾದರೂ ಪರಿಹಾರ ಕಂಡುಹಿಡಿಯಬೇಕೆಂದು ನಾನು ಗ್ರಂಥಾಲಯಕ್ಕೆ ಹೋಗಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿ, ವಿವಿಧ ವಿನ್ಯಾಸಗಳ ರೇಖಾಚಿತ್ರ ಮತ್ತು ನೀಲನಕಾಶೆಗಳನ್ನು ತಯಾರು ಮಾಡತೊಡಗಿದೆ.

image


ನೀವು ಈ ಮೊದಲು ಕೂಡ ಹೀಗೇ ಪರಿಸರವಾದಿಯಾಗಿದ್ರಾ?

ನಾನು ಮೊದಲಿನಿಂದ ಪರಿಸರವಾದಿಯೇ, ಆದರೆ ಮೆಕ್ಸಿಕೋ ಕೊಲ್ಲಿಯಲ್ಲಿ ನಡೆದ ಘಟನೆ ನನ್ನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು. ನನ್ನಿಂದ ಏನಾದರೂ ಇದನ್ನು ಎದುರಿಸಲು ಸಾಧ್ಯವಾದೀತೆ ಎಂದು ಯೋಚಿಸಿದೆ.

ನೀವು ಅಮೇರಿಕಾಗೆ ಹಿಂತಿರುಗಿದ ನಂತರ ನಿಮ್ಮ ಪ್ರಯೋಗ ಹೇಗೆ ಶುರು ಮಾಡಿದಿರಿ?

ಅಮೆರಿಕ ಮರಳುವ ಮುನ್ನವೇ ನಾನು ಸಆಕಷ್ಟು ವಿಷಯಗಳನ್ನು ಕಲೆ ಹಾಕಿದ್ದೆ. ನಂತರ ಮನೆಗೆ ವಾಪಸ್ಸಾದ ಬಳಿಕ ಅದಕ್ಕೆ ಮತ್ತಷ್ಟು ಜೀವ ತುಂಬಿದೆ. ಈ ಮೂಲಕ ವಿಜ್ಞಾನ ಮೇಳದಲ್ಲಿ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಿದೆ, ನನ್ನ ಯೋಚನೆಗೆ ರಸಾಯನ ಶಾಸ್ತ್ರ ಶಿಕ್ಷಕಿ ಸಹಾಯ ಮಾಡಿದರು. ನನಗೆ ಬೇಕಾದ ಸಾಕಷ್ಟು ವಿಷಯಗಳು ನನಗೆ ಇಂಟರ್ನೆಟ್‍ನಲ್ಲಿ ದೊರಕಲಿಲ್ಲ, ನನ್ನ ಕಾರ್ಯ ನನ್ನ ಗುರು ಹಿಲ್ ಅವರ ಮಾರ್ಗದರ್ಶನ ಹಾಗೂ ನನ್ನ ಪ್ರಯೋಗದಿಂದ ಮುಂದೆ ಸಾಗಿತು.

ನಿಮ್ಮ ಕಲ್ಪನೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಇತ್ಯರ್ಥವಾಗಲು ಕಾರಣವಾದ ಸಂಪನ್ಮೂಲಗಳು ಯಾವುವು?

ನನ್ನ ಗುರು, ಫೋಸ್ಟರ್ ಹೈಡ್ರಾಲಿಕ್ಸೆನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮೂಲಕ ನಾನು ಬಹಳಷ್ಟು ಕಲಿಯಲು ಸಾಧ್ಯವಾಯಿತು. ನಾನು ಸ್ಟೋನರ್ ಪೈಪ್‍ಲೈನ್ ಎಂಬ ಸಾಫ್ಟ್​​​ವೇರ್ ಮೂಲಕ ಮಾದರಿ ತಯಾರಿಸಿದೆ. ಕಛೇರಿಯಲ್ಲಿ ಅನುಮತಿ ಪಡೆದ ನಂತರ ರಜಾ ದಿನಗಳಲ್ಲಿ ಎಂಟೊಂಭತ್ತು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಸಾಧನ 75 ಅಡಿ ಉದ್ದ ಇದ್ದ ಕಾರಣ ನಾನದನ್ನು ತಯಾರಿಸಲಿಲ್ಲ. ಯಾರಾದರೂ ಹೂಡಿಕೆದಾರರು ಸಿಕ್ಕರೆ ನಾನು ಪ್ರಯತ್ನಿಸುತ್ತೇನೆ.

ನಿಮ್ಮ ಸಾಧನವು ಇನ್ನು ಸೈದ್ಧಾಂತಿಕ ಹಂತದಲ್ಲಿದೆ. ಅದು ಖಚಿತವಾಗಿ ತೈಲ ಸೋರುವಿಕೆಯನ್ನು ತಡೆಗಟ್ಟುವುದೆಂದು ನೀವು ಹೇಗೆ ಹೇಳುವಿರಿ?

ನಾನು ನನ್ನ ಆವಿಷ್ಕಾರವನ್ನು ಪರೀಕ್ಷಿಸಲು ಬಳಸುತ್ತಿರುವ ಸಾಫ್ಟ್​​​ವೇರ್ ಸ್ಟೋನರ್ ಪೈಪ್‍ಲೈನ್ ಸಿಮ್ಯುಲೇಟರ್, ಈ ಗುಣಮಟ್ಟದ ಸಾಫ್ಟ್​​​ವೇರ್ ಉತ್ತಮವಾಗಿದ್ದು ಅದನ್ನು ಬಹುತೇಕ ಉದ್ಯಮಗಳಲ್ಲಿ ಬಳಸಲಾಗುತ್ತಿದೆ. ನನ್ನ ಕಲ್ಪನೆಯನ್ನು ಸಾಕಾರಗೊಳಿಸಲು ಅದು ಬಹಳ ಸಹಾಯಕಾರಿಯಾಗಿದೆ. ಇದನ್ನ ಪ್ರತಿಪಾದಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಟೆಕ್ಸಾಸ್‍ನ ಆಸ್ಟಿನ್ ವಿಶ್ವವಿದ್ಯಾನಿಲಯದ ಅತ್ಯಾಧುನಿಕ ಸಾಫ್ಟ್‍ವೇರ್‍ಅನ್ನು ಬಳಸಿ ನನ್ನ ಪ್ರಯೋಗವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತೇನೆ.

ನಿಮ್ಮ ಕಲ್ಪನೆಯಿಂದ ತಂತ್ರಗಳನ್ನು ಕಂಡುಕೊಳ್ಳಲು ಎಷ್ಟು ಸಮಯ ಬೇಕಾಯಿತು?

ನಾನು ತುಂಬಾ ಜನರನ್ನ ಭೇಟಿ ಮಾಡಿದೆ, ಪುಸ್ತಕಗಳನ್ನ ಓದಿ ತಿಳಿದುಕೊಂಡೆ, ಬ್ರಿಟಿಷ್ ಪೆಟ್ರೋಲಿಯಂ ನಲ್ಲಿ ಒಂದು ಟೊಳ್ಳು ಆಕೃತಿ ದೊರೆಯಿತು. ನಾನು ಸುಮಾರು 30 ವಿನ್ಯಾಸಗಳನ್ನು ತಯಾರು ಮಾಡಿದ ನಂತರ ನನಗೆ ಉತ್ತಮ ಫಲ ದೊರೆಯಿತು.

ಇದು ತೈಲವನ್ನು ಸ್ವಚ್ಛಗೊಳಿಸಲು ಸುಮಾರು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ನನ್ನ ಸಾಧನ, ಕಂಪನಿಯವರು ಎಣ್ಣೆ ಸೋರುವಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ಎಣ್ಣೆಯನ್ನು ಶೇಖರಿಸುತ್ತದೆ ಹಾಗೂ ಸಾಗರವನ್ನು ಕಲುಷಿತವಾಗದಂತೆ ನಿಯಂತ್ರಿಸುತ್ತದೆ.

ನೀವು ನಿಮ್ಮ ಸಾಧನ 75 ಅಡಿ ಉದ್ದ ಇದೆ ಎಂದು ಹೇಳಿದಿರಿ, ಹಾಗಾದರೆ ಅದು ತುಂಬಾ ತೂಕವಿರಬಹುದು, ಅದನ್ನು ಸಾಗಿಸುವುದು ಹೇಗೆ?

ಸಾಗಿಸುವುದು ಕಷ್ಟಕರ ಕೆಲಸವಲ್ಲ, ಅದಕ್ಕಾಗಿ ಹಡಗುಗಳಿವೆ. ಅದು 300 ಟನ್ ತೂಕವಿರುವುದರಿಂದ ಅದು ತೇಲುವ ಸಾಧ್ಯತೆಯೂ ಇಲ್ಲ. ಅದ್ದರಿಂದ ಕಾರ್ಯಸಾಧನೆಯ ತೊಂದರೆ ಇಲ್ಲವೇ ಇಲ್ಲ.

ನೀವು ಈ ಮಾದರಿಯನ್ನು ಅಭಿವೃದ್ಧಿಪಡಿಸಲು ನಿಮ್ಮ ಬಹುಮಾನದ ಹಣವನ್ನು ಬಳಸುವಿರಾ?

ನಾನು ಟೆಕ್ಸಾಸ್‍ನ ಆಸ್ಟಿನ್ ವಿಶ್ವವಿದ್ಯಾನಿಲಯದಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮಾಡಲಿದ್ದೇನೆ. ನನ್ನ ಪೋಷಕರು ನನ್ನ ಓದಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನಾನು ಆ ಹಣವನ್ನು ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳುತ್ತೇನೆ. ಅಲ್ಲಿ ಅತ್ಯುತ್ತಮ ಪ್ರಾಧ್ಯಾಪಕರಿರುತ್ತಾರೆ. ಅವರ ಸಹಾಯದೊಂದಿಗೆ ನನ್ನ ಸಾಧನವನ್ನು ಅಭಿವೃದ್ಧಿ ಪಡಿಸುತ್ತೇನೆ.

image


ನಿಮಗೆ ಇಂಟೆಲ್ ಪ್ರಶಸ್ತಿ ದೊರೆತ ನಂತರ ನಿಮ್ಮ ಬೆಂಬಲಕ್ಕಾಗಿ ಯಾರಾದರೂ ಹೂಡಿಕೆದಾರರು ಅಥವಾ ಸಂಸ್ಥೆಗಳು ಮುಂದಾಗಿವೆಯೇ?

ಇನ್ನೂ ಇಲ್ಲ, ನನ್ನ ಸಾಧನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಆದಷ್ಟು ಬೇಗ ಪ್ರಯತ್ನಿಸುತ್ತೇನೆ. ಆ ನಂತರ ಯಾರಾದರೂ ಮುಂದೆ ಬರುವ ನಿರೀಕ್ಷೆಯಿದೆ.

ಸಮಾರಂಭದಲ್ಲಿ ನಿಮ್ಮ ಆವಿಷ್ಕಾರಕ್ಕೆ ಎಲ್ಲರೂ ಭೇಷ್ ಎಂದು ಬೆನ್ನು ತಟ್ಟಿದ್ದರು, ಆದರೆ ಸಮಾರಂಭ ಮುಗಿದ ಕೂಡಲೆ ಅದರ ಬಗೆಗಿನ ಆಸಕ್ತಿ ಎಲ್ಲರಲ್ಲೂ ಕಡಿಮೆಯಾದಂತಿದೆ?

ಅದರಿಂದ ನಾನು ನಿರಾಶನಾಗಿಲ್ಲ. ನಾನು ಸಾಧಿಸುವುದು ಇನ್ನೂ ಬಹಳಷ್ಟಿದೆ. ನನ್ನ ವಿಶ್ವವಿದ್ಯಾನಿಲಯದಲ್ಲಿ ಸಾಧನವನ್ನು ಅಭಿವೃದ್ಧಿಪಡಿಸಿದ ನಂತರ ನಾನೇ ಸ್ವತಃ ಹೂಡಿಕೆದಾರರನ್ನು ಹುಡುಕುತ್ತೇನೆ. ನಾನು ನನ್ನ ಯೋಜನೆ ಪ್ರದರ್ಶಿಸಲು ಭಾರತಕ್ಕೆ ಬರುತ್ತೇನೆ, ಬಹುಶಃ ಅಲ್ಲೇನಾದರೂ ಸಹಾಯ ದೊರಕಬಹುದು.

ನಿಮಗೆ ಈ ಪ್ರಶ್ನೆ ಇಷ್ಟವಾಗದಿರಬಹುದು, ಆದರೆ ನೀವು ಯಾವಾಗಲಾದ್ರೂ ಸೋಲು ಅನುಭವಿಸಿದ್ರಾ?

ನಾನು ನನ್ನ ಜೀವನದಲ್ಲಿ ಯಾವ ಮಾರ್ಗ ತೆಗೆದುಕೊಳ್ಳಬೇಕೆಂದು ತಿಳಿಯದೆ ಅಸುರಕ್ಷತೆಯನ್ನೆದುರಿಸುತ್ತಿದ್ದೆ. ಆದರೆ ವಿಜ್ಞಾನ ಮೇಳಗಳ ಮೂಲಕ ನಾನು ಇಂಜಿನಿಯರಿಂಗ್ ನನ್ನ ಪ್ರೀತಿ ಎಂಬುದನ್ನು ಅರಿತೆ. ಇಂಟೆಲ್ ಪ್ರಶಸ್ತಿ ನನ್ನಲ್ಲಿ ಸಕಾರಾತ್ಮಕ ಭಾವನೆಯನ್ನು ತುಂಬಿತು. ಯಾವುದೇ ಸಾಧನೆ, ಕಲ್ಪನೆಗೆ ವಯಸ್ಸು ಅಡ್ಡಾಗಿರುವುದಿಲ್ಲ. ಕಾರ್ಯಗತಗೊಳಿಸುವುದು ನಿಮ್ಮ ಕೈಲಿರುತ್ತದೆ.

ಹೊಸ ಸಂಶೋಧನಾಕಾರರಿಗೆ, ಹಾಗೂ ರಚನಾಕಾರರಿಗೆ ನಿಮ್ಮ ಸಲಹೆ ಏನು?

ಯುವ ಪೀಳಿಗೆಯವರು ಸದಾ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದು ಕೆಲವರ ಭಾವನೆ. ಇದರಲ್ಲಿ ಘನತೆಗೇನೂ ಧಕ್ಕೆ ಉಂಟಾಗುವುದಿಲ್ಲ. ನಿಮ್ಮ ಕಲ್ಪನೆ ದೊಡ್ಡದಾಗಿರಲಿ, ಅದನ್ನು ಇನ್ನೂ ವಿಸ್ತರಿಸಿಕೊಳ್ಳಿ.

ಲೇಖಕರು: ರಾಖಿ ಚಕ್ರಬೊರ್ತಿ

ಅನುವಾದಕರು: ವಿಶಾಂತ್​​​​

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ