ಪರಿಸರ ಉಳಿಸಲು ಹೊಸ ಪ್ಲಾನ್​- ಎಲೆಕ್ಟ್ರಿಕ್​ ಕಾರುಗಳನ್ನು ಬಳಸುವ ಚಿಂತನೆ

ಟೀಮ್​ ವೈ.ಎಸ್​. ಕನ್ನಡ

ಪರಿಸರ ಉಳಿಸಲು ಹೊಸ ಪ್ಲಾನ್​- ಎಲೆಕ್ಟ್ರಿಕ್​ ಕಾರುಗಳನ್ನು ಬಳಸುವ ಚಿಂತನೆ

Tuesday July 26, 2016,

2 min Read

ವಾಯುಮಾಲಿನ್ಯದ ಬಗ್ಗೆ ಎಲ್ಲಾ ಮಾತನಾಡುವವರೆ. ಆದ್ರೆ ಅದನ್ನು ತಡೆಗಟ್ಟುವ ಬಗ್ಗೆ ಯಾರೂ ದೊಡ್ಡ ಹೆಜ್ಜೆ ಇಟ್ಟಿಲ್ಲ. ಪರಿಸರವನ್ನು ಕಾಪಾಡಲು ಆ ಯೋಜನೆ ಮಾಡೋಣ, ಈ ಯೋಜನೆಯನ್ನು ಜಾರಿಗೆ ತರೋಣ ಅನ್ನೋ ಚರ್ಚೆ ಮಾತ್ರ ನಡೆಯುತ್ತದೆ. ಆದ್ರೆ ಅದ್ಯಾವುದು ಕೂಡ ಪರಿಸರವನ್ನು ಕಾಪಾಡುವ ಬಗ್ಗೆ ಯಾವುದೇ ಸೂಚನೆ ಕೊಟ್ಟಿಲ್ಲ. ವಾಯುಮಾಲಿನ್ಯಕ್ಕೆ ವಾಹನಗಳ ಬಳಕೆ ಕೂಡ ಒಂದು ಮುಖ್ಯ ಕಾರಣ. ಹೀಗಾಗಿ ಮಾಲಿನ್ಯ ತಡೆಯುವ ವಾಹನಗಳನ್ನು ಬಳಸುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಆದ್ರೆ ಅದು ಅಷ್ಟಾಗಿ ಪರಿಣಾಮ ಬೀರಿಲ್ಲ.

image


ದೇಶದ ರಾಜಧಾನಿ ದೆಹಲಿ ಸೇರಿದಂತೆ ಇತರೆ ನಗರಗಳಲ್ಲಿ ವಾಹನ ಸಂಖ್ಯೆ ಹೆಚ್ಚಾಗಿ ಅದರಿಂದ ವಾಯುಮಾಲಿನ್ಯ ಹೆಚ್ಚಾಗಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿದೆ. ಇದು ವಾಸ್ತವ ಕೂಡ ಹೌದು. ಅದಕ್ಕಾಗಿ ದೆಹಲಿಯಲ್ಲಿ ಕೆಲ ವಾಹನಗಳು ಸಂಚರಿಸುವಂತಿಲ್ಲ ಎಂದು ನಿಯಮವನ್ನು ಜಾರಿಗೆ ತರಲಾಯಿತು. ಈಗ ಸರಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನ ಬಳಸಿ ಪರಿಸರ ಕಾಪಾಡಬೇಕು ಎಂಬ ವಾದ ಆರಂಭವಾಗಿದೆ.

ಇದನ್ನು ಓದಿ: ಕೈ ಹಿಡಿಯಿತು ಕೈ ರುಚಿಯ ರಹಸ್ಯ- ಶ್ರಮದ ಹಿಂದಿತ್ತು ಕಿಚ್ಚನ ಸಪೋರ್ಟ್​

ಸರಕಾರಿ ಅಧಿಕಗಳು ಇಲೆಕ್ಟ್ರಿಕ್​ ವಾಹನ ಬಳಸಿ ಅನ್ನೋ ಕಾನೂನು ಜಾರಿಗೆ ಬಂದ್ರೆ ಇನ್ನು ಕೆಲವೇ ದಿನಗಳಲ್ಲಿ ಸರಕಾರಿ ಅಧಿಕಾರಿಗಳು ದೆಹಲಿಯಲ್ಲಿ ಎಲೆಕ್ಟ್ರಾನಿಕ್ ಕಾರಿನಲ್ಲಿ ಸಂಚರಿಸುತ್ತಾರೆ. ಪರ್ಯಾಯ ಇಂಧನದ ಬಳಕೆಯಿಂದ ಪರಿಸರ ಮಾಲಿನ್ಯವನ್ನು ತಡೆಯಬಹುದು ಎಂಬ ಉದ್ದೇಶದಿಂದ ಈ ನಿಯಮ ಜಾರಿಗೆ ರಸ್ತೆ ಸಾರಿಗೆ ಮತ್ತು ಭಾರಿ ಕೈಗಾರಿಕೆ ಸಚಿವಾಲಯ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಸರಕಾರಿ ಇಲಾಖೆಗಳು ಕಡ್ಡಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕೆಂದು ಹಣಕಾಸು ಸಚಿವಾಲಯಕ್ಕೆ ಸಾರಿಗೆ ಸಚಿವಾಲಯ ಪತ್ರ ಬರೆಯಲಿದೆ.

image


ಓಲಾ ಉಬರ್​ಗೂ ಸೂಚನೆ

ಭಾರತದಲ್ಲಿ ಕಡಿಮೆ ದರದಲ್ಲಿ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಮತ್ತು ಉಬರ್ ಸಂಸ್ಥೆಗಳಿಗೂ ಎಲೆಕ್ಟ್ರಿಕ್ ಕಾರುಗಳನ್ನು ಕೊಂಡು ಬಳಸುವಂತೆ ಸಾರಿಗೆ ಸಚಿವಾಲಯ ಸೂಚಿಸಿದೆ. ಈ ಮೂಲಕ ಮೆಟ್ರೋ ಪಾಲಿಟನ್ ನಗರಗಳಲ್ಲಿ ಹೆಚ್ಚಾಗಿರುವ ಕ್ಯಾಬ್​ಗಳನ್ನು ಎಲೆಕ್ಟ್ರಿಕ್ ಕಾರುಗಳನ್ನಾಗಿ ಬದಲಾಯಿಸಿದರೆ, ಪರಿಸರ ಮಾಲಿನ್ಯವನ್ನು ಸಾಕಷ್ಟು ಹತೋಟಿಗೆ ತರಬಹುದು ಎಂಬುದು ಸಾರಿಗೆ ಇಲಾಖೆಯ ಯೋಚನೆ. ಆದ್ರೆ ಈ ಕ್ಯಾಬ್​ಗಳನ್ನು ಕಟ್ಟಿ ಹಾಕಲು ಬೇರೆ ಯಾವುದಾದರೂ ಮಾರ್ಗ ಹುಡಕಬೇಕಾದಿತು. ಯಾಕಂದ್ರೆ ಲಕ್ಷಾಂತರ ಎಲೆಕ್ಟ್ರಿಕ್​ ಕಾರುಗಳನ್ನು ಒಮ್ಮೆಲೆ ಕೊಂಡುಕೊಳ್ಳು ಸಾಧ್ಯವಿಲ್ಲ. ಮೇಲಾಗಿ ಅಷ್ಟೊಂದು ಕಾರುಗಳ ಉತ್ಪಾದನೆಯೂ ನಡೆಯುತ್ತಿಲ್ಲ.

ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಈ ನಿರ್ಧಾರ

ವಾಹನಗಳಿಂದ ಹೆಚ್ಚುತ್ತಿರುವ ಮಾಲಿನ ತಡೆಗೆ ಪರಿಹಾರ ಸೂಚಿಸುವಂತೆ ಸರಕಾರಕ್ಕೆ ಇತ್ತೀಚಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವಾಲಯ ಈ ತಿರ್ಮಾನಕ್ಕೆ ಬಂದಿದೆ. ಸರ್ಕಾರಿ ಸ್ವಾಮ್ಯದ ವಾಹನಗಳ ಪೈಕಿ ಶೇಕಡಾ 20 ರಷ್ಟು ವಾಹನಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಬಹುದು. ಇದಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಸಚಿವಾಲಯಗಳು ಹಾಗೂ ಇಲಾಖೆಗಳಲ್ಲಿ ಒದಗಿಸಬಹುದು. ಇತ್ತೀಚಿಗೆ ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಹೊಸ ವಿಚಾರ ಹಾಗೂ ಅವುಗಳ ಅನುಷ್ಠಾನದ ಕುರಿತು ಚರ್ಚಿಸಲಾಗಿದೆ.

image


ಯಾವಾಗ ಅನುಷ್ಠಾನ

2020ರ ವೇಳೆಗೆ ದ್ವಿಚಕ್ರ ವಾಹನಗಳು ಸೇರಿ ಸುಮಾರು ಅವರವತ್ತು ಲಕ್ಷ ವಾಹನಗಳನ್ನು ರಸ್ತೆಗಿಳಿಸುವುದು ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲಾನ್. ಸದ್ಯ ಮಹೀಂದ್ರಾ ಇ20 ಎಲೆಕ್ಟ್ರಿಕ್ ಕಾರ್ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 90 ರಿಂದ 100 ಕಿಲೋಮೀಟರ್ ದೂರ ಹೋಗುತ್ತದೆ. ಅಮೇರಿಕಾದಲ್ಲಿರುವ ಎಲೆಕ್ಟ್ರೋ ಆಟೋ ಕಂಪನಿ ಟೆಸ್ಲಾದ ಕಾರ್ಖಾನೆಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸದ್ಯದಲ್ಲೇ ಭೇಟಿ ನೀಡಲಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಬಗ್ಗೆ ಕಂಪನಿಯೊಂದಿಗೆ ಚರ್ಚೆ ನಡೆಸಿಲಿದ್ದಾರೆ.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾವು ಸರ್ಕಾರಿ ಅಧಿಕಾರಿಗಳನ್ನು ಎಲೆಕ್ಟ್ರಿಕ್ ಕಾರಿನಲ್ಲಿ ನೋಡಬಹುದು. ಇದರಿಂದ ಸ್ವಲ್ಪ ಮಟ್ಟಿನ ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ. ಈ ಎಲೆಕ್ಟ್ರಿಕ್​ ವಾಹನಗಳ ಬಳಕೆ ಕಟ್ಟುನಿಟ್ಟಾಗಿ ಜಾರಿಗೆ ಬಂದ್ರೆ ವಾಯುಮಾಲಿನ್ಯ ತಡೆಗಟ್ಟುವ ಜೊತೆಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳನ್ನು ಕೂಡ ತಡೆಗಟ್ಟಬಹುದು.

ಇದನ್ನು ಓದಿ:

1. ಅಂದು ಕೂಲಿ, ಇಂದು 5 ಕಂಪನಿಗಳ ಒಡೆಯ!

2. ಮಾರಕವಾಗುತ್ತಿದೆ ಬೆಂಗಳೂರು ಟ್ರಾಫಿಕ್ - ಪ್ರಯಾಣಿಕರಲ್ಲಿ ಹೆಚ್ಚುತ್ತಿದೆ ನರದೌರ್ಬಲ್ಯ ಸಮಸ್ಯೆ

3. ವಯಸ್ಸಿನಲ್ಲೇನಿದೆ..? ಉದ್ಯಮಿಗಳಿಗೆ ಅದು ಕೇವಲ ಸಂಖ್ಯೆಯಷ್ಟೇ..