ಸಮುದಾಯ ರೇಡಿಯೋ ಸ್ಥಾಪಿಸಿದ ಕರ್ನಾಟಕದ ಮೊಟ್ಟ ಮೊದಲ ಮಹಿಳೆ
ಉಷಾ ಹರೀಶ್
Friday October 23, 2015,
2 min Read
ಕಾಯಕವೇ ಕೈಲಾಸ ಅನ್ನೋದು ಸತ್ಯ. ಆದ್ರೆ ಮಾಡೋ ಕಾಯಕ ವಿಭಿನ್ನವಾಗಿ ಇರದೇ ಇದ್ರೆ ಬದುಕು ಬೇಜಾರಾಗೋದು ನಿಜ. ಆದ್ರೆ ಯಾವುದೂ ಕೂಡ ಅಂದುಕೊಂಡಷ್ಟೇ ವೇಗದಲ್ಲಿ ನಡೆಯೋದಿಲ್ಲ. ಆದ್ರೆ ಕಟ್ಟಿಕೊಂಡ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನ ಪಡದೇ ಇದ್ರೆ ಅದು ಹಾಗೇಯೇ ಇರುತ್ತದೆ. ಆದ್ರೆ ಈಕೆಯ ಕಥೆಯೇ ವಿಭಿನ್ನ. ಮಾಡ್ತಿದ್ದ ಕೆಲಸವನ್ನೇ ಕೈ ಬಿಟ್ಟು ಸಾಮಾಜ ಉದ್ದಾರ ಮಾಡಬೇಕೆಂದು ಹೊರಟವರ ಹೆಸರು ಶಮಂತ.
ಪೇಜ್ 3 ವಿಭಾಗದಲ್ಲಿ ಗಾಸಿಪ್ಗಳನ್ನು ಬರೆದುಕೊಂಡು, ಸಾವಿರಾರು ರೂಪಾಯಿ ಸಂಬಳ ಪಡೆದು ವರ್ಣ ರಂಜಿತ ವೃತ್ತಿ ಬದುಕು ಬಿಟ್ಟು ಗ್ರಾಮೀಣ ಭಾಗದ ಮಹಿಳೆಯರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಅವರ ಸಮಸ್ಯೆಗಾಗಿಯೇ ಮತ್ತು ಸರಕಾರದ ಯೋಜನೆಗಳ ಕುರಿತಾಗಿ ಸಮಾನ್ಯ ಜನರಿಗೆ ಮಾಹಿತಿ ಒದಗಿಸಲು ಒಂದು ಸಮುದಾಯ ರೇಡಿಯೋ ಸ್ಟೇಷನ್ ಸ್ಥಾಪಿಸಿದ ಧೀಮಂತ ಪತ್ರಕರ್ತೆಯ ಕಥೆ ಇದು.
ಇವರು ಪಡೆದಿದ್ದು ಕಾನೂನು ಪದವಿಯಾದರೂ ಪ್ರಾಕ್ಟೀಸ್ ಮಾಡದೇ ಪತ್ರಿಕೋದ್ಯಮ ಜಾನಪದ ಕಲೆಗಳಲ್ಲಿ ಡಿಪ್ಲೋಮ ಪಡೆದು ಪೂರ್ಣ ಪ್ರಮಾಣದ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದರು. ಪೇಜ್ 3, ಸಿನಮಾ ವಾರಪತ್ರಿಕೆ, ಕೆಲ ಚಾನೆಲ್ಗಳಲ್ಲಿ ಒಂದಷ್ಟು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ನಂತರ ಗ್ರಾಮೀಣ ಭಾಗದ ಜನರ ಅಶೋತ್ತರಗಳಿಗೆ ಏನಾದರೂ ಮಾಡಬೇಕು ಎಂದುಕೊಂಡು ತನ್ಮೂಲಕ ಅಭಿವದ್ಧ್ಧಿ ಪತ್ರಿಕೋದ್ಯಮ ಅಥವಾ ಪರ್ಯಾಯ ಪತ್ರಿಕೋದ್ಯಮದ ಸಾಧ್ಯತೆಗಳ ವಿಸ್ತಾರವನ್ನು ಪ್ರತ್ಯಕ್ಷವಾಗಿ ಕಾಣಿಸುವ ಪ್ರಯತ್ನದಲ್ಲಿ ಹುಟ್ಟಿಕೊಂಡಿದ್ದೇ ಸಾರಥಿ ಎಂಬ ಸ್ವಯಂ ಸೇವಾ ಸಂಸ್ಥೆ.
ಈ ಸ್ವಯಂ ಸಂಸ್ಥೆಯ ಮೂಲಕ ಈಗಾಗಲೇ ಕರ್ನಾಟಕ ಮಾಲಿನ್ಯನಿಯಯಂತ್ರಣ ಮಂಡಳಿ ಪ್ರಕೃತಿ ಕಥಾ ಕಾರ್ಯಗಾರ ಮತ್ತಿತರ ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯರಿಗಾಗಿ ಗ್ರಾಮೀಣ ಭಾಗದ ಜನರಿಗೆ ಮನರಂಜನೆಯ ಜತೆಗೆ ಮಾಹಿತಿಯನ್ನು ನೀಡಬೇಕು ಎಂಬ ಉದ್ದೇಶದಿಂದ ಸ್ಥಾಪಿತವಾದದ್ದೇ ಸಾರಥಿ ಝಲಕ್ 90.4 ರೇಡಿಯೋ ಸ್ಟೇಷನ್.
ರೇಡಿಯೋ ಸ್ಟೇಷನ್ ಸ್ಥಾಪಿಸಿದ ಮೊಟ್ಟ ಮೊದಲ ಕರ್ನಾಟಕದ ಮಹಿಳೆ ಎಂಬ ಖ್ಯಾತಿಗೂ ಶಮಂತಾ ಅವರು ಪಾತ್ರರಾಗಿದ್ದಾರೆ. 2012ರ ಸೆಪ್ಟಂಬರ್ನಲ್ಲಿ ಪ್ರಾರಂಭವಾದ ಈ ಸ್ಟೇಷನ್ ಸದ್ಯ ಮಹಿಳೆಯರಿಂದಲೇ ನಿರ್ವಹಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಯಲ್ಲಿ ಪ್ರಾರಂಭವಾದ ಈ ಎಫ್ ಎಂ ನ್ನು ತನ್ನ ಗೆಳತಿಯರಾಧ ಉಷಾ ಅವರೊಂದಿಗೆ ಸ್ಥಳೀಯರ ಸಹಕಾರವೂ ದೊರೆತಿದೆ. ಮನರಂಜನೆ ಮಹಿಳಾ ಸಂಬಂಧಿ ಶೈಕ್ಷಣಿಕ ಸ್ಥಳೀಯ ಸಮಸ್ಯೆಗಳ ಬಗ್ಗೆ ಈ ಚಾನೆಲ್ ಕೆಸಲ ಮಾಡುತ್ತಿದೆ.
ಮಹಿಳಾ ಹೋರಾಟಗಾರ್ತಿ:
ವಾಸ್ತವ ಸಂಗತಿಗಳನ್ನು ಆಧರಿಸಿ ಈಟಿವಿ ಕನ್ನಡಕ್ಕಾಗಿ ಸುಮಾರು 250 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಮಹಿಳೆಯರ ಹಕ್ಕುಗಳ ಬಗ್ಗೆ ಅವರ ಆರೋಗ್ಯದ ಪ್ರಸಾರವಾದ ಶ್ರೀಮತಿ ಡಾಟ್ಜಾಮ್, ಕಲ್ಯಾಣಿ ಜಾನಕಿ ಮುಂತಾದ ಎಪಿಸೋಡ್ಗಳನ್ನು ನಿರ್ದೇಶಿಸಿ ಮಹಿಳಾ ಪರ ಹೋರಾಟಕ್ಕೆ ಶಮಂತ ಅವರ ಕೊಡುಗೆಯನ್ನು ಸೂಚಿಸುತ್ತವೆ. ಮಹಿಳಾ ಹಕ್ಕುಗಳಿಗೆ ಸಂಬಂಧಪಟ್ಟಂತೆ ಇವರು ನಿರ್ಮಿಸಿದ್ದ ಸಾಕ್ಷ್ಯ ಚಿತ್ರಕ್ಕೆ 2008ರಲ್ಲಿ ರಾಷ್ಟ್ರೀಯ ಮನ್ನಣೆಯು ದೊರೆತಿದೆ. ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ನೊಂದ ಜನರ ಹಕ್ಕುಗಳನ್ನು ಕುರಿತುಕೃತಿ ರಚಿಸಿದ್ದಾರೆ.
ವರದಕ್ಷಿಣೆ ಸಾವು ಮತ್ತು ಕ್ರಿಮಿನಲ್ ಕಾರಣಗಳಿಂದ ನೊಂದ ಮಹಿಳೆಯರಿಗಾಗಿ ಮಾನಿನಿ ಎಂಬ ಸಂಸ್ಥೆಯ ಮೂಲಕ ಹೋರಾಡಿ ಅದಕ್ಕಾಗಿ ವಿಶೇಷ ನ್ಯಾಯಲಯ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಪ್ರಶಸ್ತಿ ಪುರಸ್ಕಾರ
ಶಮಂತಮಣಿ ಅವರ ಲೇಖನಿಯಿಂದ ಸಾಕಷ್ಟು ಕೃತಿಗಳು ರಚನೆಯಾಗಿವೆ ಅವುಗಳಲ್ಲಿ ಗಿರಿ ಸ್ನೇಹ ಎಂಬ ಪ್ರವಾಸಿ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕೆ ಕೆ ಬಿರ್ಲಾ ಫೌಂಡೇಶನ್ನಿಂದ ಫೆಲೋಷಿಪ್ ನವದೆಹಲಿಯ ದಿ ಹಿಂದೂಸ್ಥಾನ ಟೈಮ್ಸ್ನಿಂದ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳನ್ನು ಶಮಂತ ತಮ್ಮ ಸಾಮಾಜಿಕ ಕಾರ್ಯಕ್ಕೆ ಪಡೆದಿದ್ದಾರೆ. ಪಟಪಟನೆ ಹರಳು ಹುರಿದಂತೆ ಮಾತನಾಡುವ ಶಮಂತ ಪೇಜ್ 3 ಪತ್ರಿಕೋದ್ಯಮದಲ್ಲಿ ನಿಶ್ಚಿಂತೆಯಿಂದ ಇರಬಹುದಾಗಿತ್ತು. ಬದಲಿಗೆ ಬದುಕು ಬದಲಿಸುವ ಅಭಿವೃದ್ಧಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡು ಗ್ರಾಮೀಣ ಭಾಗದ ಮಹಿಳೆಯರ ಪರ ಕೆಲಸ ಮಾಡುತ್ತಿದ್ದಾರೆ.
ಸದ್ಯ ಇವರು ಆರಂಭ ಮಾಡಿರುವ ಸಾರಥಿ ಝಲಕ್ ಎಫ್ ಎಮ್ ಪ್ರಸಾರ 25 ಕಿಮಿಗಷ್ಟೇ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ಹೆಚ್ಚಿಸಿ 10 ಲಕ್ಷ ಶೋತೃಗಳನ್ನು ತಲುಪುವುದು ಶಮಂತಮಣಿ ಅವರ ಉದ್ದೇಶ. ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸಲು ಸಿದ್ದವಾಗಿರುವ ಸಾಕಷ್ಟು ಮಂದಿಗೆ ಶಮಂತಮಣಿ ಅವರು ಸ್ಪೂರ್ತಿದಾಯಕವಾಗಿದ್ದಾರೆ. ಶಮಂತ ಇನ್ನಷ್ಟು ಸಾಮಾಜಿಕ ಕೆಲಸ ಮಾಡಲು ಸರಕಾರ, ದಾನಿಗಳು ಸಹಾಯಹಸ್ತ ನೀಡಿದರೆ ಅವರ ಮಹಿಳಾ ಪರ ಹೋರಾಟಕ್ಕೆ ಧನಿಗೂಡಿಸಿದಂತಾಗುತ್ತದೆ.