ಮೂರು ನದಿಗಳು ಸೇರಿ ಮೈಸಿಒಎಲ್ ಸಮುದ್ರ ಸೃಷ್ಟಿಯಾಯಿತು !

ಟೀಮ್​​ ವೈ.ಎಸ್​​.ಕನ್ನಡ

ಮೂರು ನದಿಗಳು ಸೇರಿ ಮೈಸಿಒಎಲ್ ಸಮುದ್ರ ಸೃಷ್ಟಿಯಾಯಿತು !

Friday November 20, 2015,

4 min Read

“19 ವರ್ಷಗಳ ಕಾಲ ವಕ್ಹಾರ್ಡ್ ಆಸ್ಪತ್ರೆಗಳು ಸರಿಸುಮಾರು 3000 ಬೆಡ್​​​ಗಳನ್ನು ಹೊಂದಿದ್ದವು, ಇದು ಎರಡನೇ ಅತಿದೊಡ್ಡ ಆಸ್ಪತ್ರೆ ಸಮೂಹವಾಗಿತ್ತು. ಅತಿದೊಡ್ಡ ಆಸ್ಪತ್ರೆಯ ಬಳಿ 7 ಸಾವಿರ ಬೆಡ್​​​ಗಳಿದ್ದವು. ಸಧ್ಯ ಪ್ರತಿ ಬೆಡ್​​ನ ಖರ್ಚು 185,000 ಡಾಲರ್ ಆಗಿದೆ. ನಮ್ಮ ದೇಶದ ಅತಿದೊಡ್ಡ ಸಮಸ್ಯೆ ಎಂದರೆ ಮೂಲಸೌಕರ್ಯ ಅಭಿವೃದ್ದಿ ಎನ್ನುತ್ತಾರೆ, ಮೆಡ್ವೆಲ್ ವೆಂಚರ್ನ ವಿಶಾಲ್ ಬಾಲಿ. ಬೆಳೆಯುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ ಎದುರಾಗುತ್ತಿರುವ ಮೂಲಸೌಕರ್ಯ ಸವಾಲುಗಳನ್ನು ಅವರು ಹೈಲೈಟ್ ಮಾಡುತ್ತಿದ್ದಾರೆ.

ಈ ಸವಾಲು ಎದುರಿಸಲೆಂದೇ ಸ್ಥಾಪನೆಯಾಗಿದ್ದು ಮೈಸಿಒಎಲ್. ಭಾರತದಲ್ಲಿ ಒಳ ರೋಗಿಗಳ ದಾಖಲಾತಿ ಪ್ರಕ್ರಿಯೆಯನ್ನು ಸರಳೀಕರಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

image


ಆಸ್ಪತ್ರೆಗಳಲ್ಲಿ ಬೆಡ್ ಲಭ್ಯತೆ, ತಜ್ಱರ ಮತ್ತು ಆಸ್ಪತ್ರೆಗಳ ಬಗೆಗಿನ ಸಮಗ್ರ ದತ್ತಾಂಶದ ಕೊರತೆ ಹಾಗೂ ದಾಖಲಾತಿ ಪ್ರಕ್ರಿಯೆಗಳ ಕಠಿಣತೆ ಭಾರತದ ದೊಡ್ಡ ಸವಾಲಾಗಿದೆ. ಒಂದು ಅಂದಾಜಿನ ಪ್ರಕಾರ ದೆಹಲಿಯೊಂದರಲ್ಲೇ ಆಸ್ಪತ್ರೆಗಳಲ್ಲಿ ರೋಗಿಗಳು ದಾಖಲಾತಿ ಪಡೆಯುವ ಪ್ರಕ್ರಿಯೆಯಲ್ಲಿ 31,500ಕ್ಕೂ ಹೆಚ್ಚು ಮಾನವ ಗಂಟೆಗಳು ವ್ಯರ್ಥವಾಗುತ್ತಿವೆಯಂತೆ.

ಸಂಸ್ಥಾಪಕ ತಂಡ

ಮೆರಿಲ್ಯಾಂಡ್ ಯೂನಿವರ್ಸಿಟಿಯ ಎಕನಾಮಿಕ್ಸ್ ಪ್ರೊಫೆಸರ್ ಮುದಿತ್ ಕಪೂರ್ , ಖಾಸಗಿ ಹೂಡಿಕೆ ನಿರ್ವಹಣೆ ಮತ್ತು ಕನ್ಸಲ್ಟಿಂಗ್ ಸಲಹೆಗಾರರಾಗಿ ಕೆಲಸ ಮಾಡಿದ್ದ ವೈಭವ್ ಸಿಂಗ್ ಈ ಐಡಿಯಾದ ಬಗ್ಗೆ ತಿಂಗಳುಗಟ್ಟಲೆ ಚರ್ಚೆ ಮಾಡಿದ್ದರು. ಆಸ್ಪತ್ರೆಗಳಲ್ಲಿ ಗಂಭೀರವಾಗಿ ಪ್ರಾಥಮಿಕ ಸಂಶೋಧನೆಗಳನ್ನು ನಡೆಸಿದ್ದರು.

ಈ ಕೆಲಸಕ್ಕೆ ಇಬ್ಬರು ಸಾಕಾಗಲ್ಲ ಎಂದಾಗ, ಸೇನೆಯಲ್ಲಿ ಶಿಸ್ತಿನಿಂದ ದುಡಿದಿದ್ದ ದಿನೇಶ್ ತಿವಾರಿಯವರನ್ನು ಕರೆಸಿ, ಕಾರ್ಯಾಚರಣೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯ ಹೊಣೆ ಹೊರಿಸಿದರು. ಆಹಾರ ಕ್ಷೇತ್ರದಲ್ಲಿ ನವ್ಯೋದ್ಯಮವೊಂದನ್ನು ನಡೆಸಿದ್ದ ಆರತಿ ಗುಪ್ತಾ ಅವರು ಗ್ರಾಹಕರ ಸೇವೆಯ ಹೊಣೆ ಹೊತ್ತುಕೊಂಡರು.

ಸಮಸ್ಯೆಗಳಿಗೆ ಪರಿಹಾರ

ರಾಷ್ಟ್ರ ರಾಜಧಾನಿ ವಲಯದಲ್ಲಿ ಸರಳ ಮೆಥಡಾಲಜಿ ಮೂಲಕ ಹಲವು ದೊಡ್ಡ ಆಸ್ಪತ್ರೆಗಳ ರೋಗಿಗಳನ್ನು ಮತ್ತು ಅವರ ಸಂಬಂಧಿಗಳನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಲಾಯಿತು. ರೋಗಿಗಳ ಕಡೆಯಿಂದ ಬಂದ ದೂರುಗಳಲ್ಲಿ ಪ್ರಮುಖವಾದ ದೂರುಗಳು ಇಂತಿವೆ:

• ಆಸ್ಪತ್ರೆ, ವೈದ್ಯರ ಮತ್ತು ಸೌಕರ್ಯಗಳ ಲಭ್ಯತೆ ಬಗ್ಗೆ ಮಾಹಿತಿ ಕೊರತೆ ದೊಡ್ಡ ಹಿನ್ನಡೆಯಾಗಿದೆ. ಒತ್ತಡದ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸುವುದು ಅತ್ಯಂತ ದುಬಾರಿಯಾಗಿತ್ತು. ಹೀಗಾಗಿ ರೋಗಿಗಳಿಗೆ ಕೈಗೆ ಸಿಕ್ಕ ಅವಕಾಶ ಬಳಸಿಕೊಳ್ಳುವುದು ಅನಿವಾರ್ಯವಾಗಿತ್ತು.

• ಒಳರೋಗಿ ದಾಖಲಾತಿ : ರೋಗಿಗಳು ಮತ್ತು ಕೇರ್​​​ಟೇಕರ್​​​ಗಳಿಗೆ ದಾಖಲಾತಿ ಸಂಬಂಧ ಸರಿಯಾದ ಸಲಹೆಗಳು ಸಿಗುತ್ತಿರಲಿಲ್ಲ. ಹೀಗಾಗಿ ದಾಖಲಾತಿಗಾಗಿ ಮೂರರಿಂದ ನಾಲ್ಕು ಗಂಟೆಗಳ ಸಮಯ ವ್ಯರ್ಥವಾಗುತ್ತಿತ್ತು.

• ಬಿಲ್ಲಿಂಗ್ ಮತ್ತು ವಿಮೆ : ಬಿಲ್ಲಿಂಗ್ ವೇಳೆಯಲ್ಲಿ ನಿರೀಕ್ಷೆ ಮತ್ತು ನಿಗದಿತ ಮೊತ್ತ ಒಂದಕ್ಕೊಂದು ಹೊಂದಾಣಿಕೆಯೇ ಆಗಿರುವುದಿಲ್ಲ. ಬಿಲ್ ನ ವಿವಿಧ ಭಾಗಗಳ ಬಗ್ಗೆ ಯಾರೂ ಯಾವ ಮಾಹಿತಿಯನ್ನೂ ನೀಡಿರುವುದಿಲ್ಲ. ಪರಿಣಾಮವಾಗಿ ಡಿಸ್ಚಾರ್ಜ್ ವೇಳೆ ಮನಸ್ತಾಪ ಮತ್ತು ಕಾಲಹರಣಕ್ಕೆ ಕಾರಣವಾಗಿರುತ್ತದೆ. ವಿಮೆಯ ವಿಚಾರದಲ್ಲಾದರೆ, ಟಿಪಿಎಗಳ ಜೊತೆ ವ್ಯವಹರಿಸುವುದು ತುಂಬಾ ಕಷ್ಟವಾಗಿರುತ್ತದೆ. ಇದರಿಂದಾಗಿ ಭಾರೀ ನಿಧಾನ, ಗೊಂದಲಗಳು, ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಸರಾಸರಿ 6 ಗಂಟೆಗಳ ಕಾಲಹರಣವಾಗಿರುತ್ತದೆ.

• ವೈದ್ಯರಿಗೆ : ವೈದ್ಯರಿಗೆ ದೊಡ್ಡ ಸವಾಲೆಂದರೆ ರೋಗಿಗಳ ಇತಿಹಾಸ ಮತ್ತು ಫಾಲೋ ಅಪ್​​ಗಳು. ಸಮಯಕ್ಕೆ ಸರಿಯಾಗಿ ಔಷಧಗಳ ಸೇವನೆ, ಆರೋಗ್ಯ ದಾಖಲೆಗಳನ್ನು ತರುವುದು ಅಗತ್ಯವಾಗಿರುತ್ತದೆ.

• ಆಸ್ಪತ್ರೆಯಲ್ಲಿ ತಂಗುವಿಕೆಯ ಅವಧಿ ಕಡಿತ: ಆಸ್ಪತ್ರೆಗಳು ರೋಗಿಗಳನ್ನು ಎಷ್ಟು ಸಾಧ್ಯವೋ ಅಷ್ಟು ದೀರ್ಘಾವಧಿಗೆ ಉಳಿಸಿಕೊಳ್ಳುತ್ತವೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ, ಆಸ್ಪತ್ರೆಗಳು ನಿಜಕ್ಕೂ ರೋಗಿಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಡಿಸ್ಚಾರ್ಜ್ ಮಾಡಲು ಯೋಚಿಸುತ್ತವೆ. ಒಬ್ಬ ರೋಗಿಯ ತಂಗುವಿಕೆಯ ಅವಧಿಯಲ್ಲಿ ಕನಿಷ್ಟ 30 ಗಂಟೆ ಕಡಿಮೆಯಾದರೂ ಅವರಿಗೆ ಸರಾಸರಿ ತಂಗುವಿಕೆಯ ಅವಧಿ ಕಡಿಮೆಯಾಗುತ್ತದೆ. ಇದರಿಂದ ಆಸ್ಪತ್ರೆಗಳಿಗೆ ದಾಖಲಾತಿ ಸಂಖ್ಯೆ ಮತ್ತು ಮಾರ್ಜಿನ್ ಎರಡೂ ಜಾಸ್ತಿಯಾಗುತ್ತದೆ. ಇದರಿಂದ ಲಾಭವೂ ಹೆಚ್ಚು.

•ಮಾಹಿತಿ ಕೊರತೆಯಿಂದ ಬೆಡ್​​ಗಳ ಭರ್ತಿ ವೈಫಲ್ಯ : ಭಾರತದಲ್ಲಿ ಬೆಡ್​​ಗಳ ಸಂಖ್ಯೆ ಕಡಿಮೆ ಇದೆ ಎನ್ನುವುದು ಸಾಮಾನ್ಯ ಭಾವನೆ. ಆದರೆ, ಅತ್ಯುತ್ತಮ ಆಸ್ಪತ್ರೆಗಳಲ್ಲಿ ಕೂಡಾ ಶೇಕಡಾ ಸರಾಸರಿ 70ರಷ್ಟು ಬೆಡ್​​ಗಳು ಮಾತ್ರ ಭರ್ತಿಯಾಗಿರುತ್ತವೆ ಎನ್ನುವುದೇ ನಿಜವಾದ ಸತ್ಯ.

ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಆರೋಗ್ಯ ಸೇವೆಗಳ ಬಗ್ಗೆ ಬರುವ ದೂರುಗಳ ಸಂಖ್ಯೆ ತುಂಬಾನೇ ಕಡಿಮೆ. ಹೆಚ್ಚಿನ ದೂರುಗಳೆಲ್ಲವೂ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಪಟ್ಟದ್ದಾಗಿರುತ್ತವೆ.

ಆ್ಯಪ್​​ನ ಬಳಕೆ

ಮೈಸಿಒಎಲ್ ಅಥವಾ ಸರ್ಕಲ್ ಆಫ್ ಲೈಫ್ ಹೆಲ್ತ್​​ಕೇರ್ ಪ್ರೈವೇಟ್ ಲಿಮಿಟೆಡ್ ಮೊಬೈಲ್ ಅಪ್ಲಿಕೇಶನ್ ಮೂಲಕ ಅತ್ಯುತ್ತಮ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಮುದಿತ್ ಅವರು ಹೇಳುವಂತೆ, ಮೈಸಿಒಎಲ್​​ನ ಅತಿ ದೊಡ್ಡ ಪ್ರತ್ಯೇಕತೆ ಎಂದರೆ, ವ್ಯಕ್ತಿಗತ ಉಚಿತ ಸಹಾಯಕರ ಸೇವೆ. ಮೈಸಿಒಎಲ್ ಮೂಲಕ ಸಹಾಯಕರನ್ನು ಬುಕ್ ಮಾಡಿದರೆ, ಕಂಪನಿಯು ತಕ್ಷಣವೇ ರೋಗಿ ಮತ್ತು ಕೇರ್​​ಟೇಕರ್ ಅವರಿಗೆ ಸಹಾಯಕರನ್ನು ನೇಮಿಸುತ್ತದೆ. ಅವರು ರೋಗಿಯ ದಾಖಲಾತಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾರೆ.

ಆ್ಯಪ್​​ನ ವಿವಿಧ ಉಪಯೋಗಗಳು

• ಎಲ್ಲಾ ವೈದ್ಯಕೀಯ ವ್ಯವಸ್ಥೆಗಳು, ಪ್ರಾಕ್ಟಿಷನರ್​​ಗಳು, ಹಾಗೂ ಬೆಡ್ ಲಭ್ಯತೆ ಬಗ್ಗೆ ಸಮಗ್ರ ಮಾಹಿತಿ ನೀಡುತ್ತದೆ

• ಆಸ್ಪತ್ರೆ ದಾಖಲಾತಿ ಅಗತ್ಯವಿರುವ ಎಲ್ಲಾ ರೋಗಿಗಳಿಗೆ ವೈಯುಕ್ತಿಕ ಸಹಾಯಕನ ನೇಮಕಾತಿ

• ವಿಮೆ ಸಂಯೋಜನೆ, ಡಿಸ್ಚಾರ್ಜ್ ಮತ್ತು ಪೋಸ್ಟ್ ಡಿಸ್ಚಾರ್ಜ್ ಸಹಾಯ

• ವಿದ್ಯುನ್ಮಾನ ಮಾದರಿಯಲ್ಲಿ ಆರೋಗ್ಯ ದಾಖಲಾತಿಗಳು

• ಆರೋಗ್ಯ ರಕ್ಷೆಯ ಮುಂದುವರಿಕೆ ( ಜ್ಞಾಪನೆ, ಹೊರರೋಗಿ ನೋಂದಣಿ, ರೋಗ ನಿರ್ವಹಣಾ ಕೇಂದ್ರಗಳು)

• ಬಳಕೆದಾರರ ಜೊತೆ ದಾಖಲಾತಿ ಪ್ರಕ್ರಿಯೆಯನ್ನು ನಿರ್ವಹಿಸುವುದು, ತೃತೀಯ ಪಕ್ಷದ ದಾಖಲಾತಿಯನ್ನು ನಿರ್ವಹಿಸುವುದು

• ರೋಗಿ ಮತ್ತು ಕೇರ್​​ಟೇಕರ್ ಜೊತೆಗಿನ ಗಂಟೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು

• ಆರೋಗ್ಯ ರಕ್ಷೆಯ ದಾಖಲಾತಿಗಳನ್ನು ಡಿಜಿಟಲೀಕರಿಸುವುದು

• ರೋಗಿಯ ಕುಟುಂಬಕ್ಕೆ ಆರೋಗ್ಯ ವಿಮೆಯ ಸಲಹೆ

• ರೋಗಿಯ ಮೈಸಿಒಲ್ ಅಕೌಂಟ್​​ಗೆ ಔಷಧಗಳ ರಿಮೈಂಡರ್ ಅಪ್ಲೋಡ್ ಮಾಡುವುದು

• ಡಿಸ್ಚಾರ್ಜ್ ಪ್ರಕ್ರಿಯೆ ನಿಭಾಯಿಸುವುದರಲ್ಲಿ, ರೋಗಿಗಳಿಗೆ ಸಹಾಯ ಮಾಡುವ ಸಹಾಯಕರು, ಡಿಸ್ಚಾರ್ಜ್ ಅವಧಿಯನ್ನು ಕಡಿಮೆಗೊಳಿಸುತ್ತಾರೆ.

ವೈಭವ್ ಅವರ ಪ್ರಕಾರ, ಆಸ್ಪತ್ರೆಗಳಲ್ಲಿ ಸಹಾಯಕರ ನೇಮಕಾತಿಗೆ ಅವಕಾಶ ದೊರಕಿಸಿಕೊಳ್ಳುವುದೇ ಅವರಿಗೆ ದೊಡ್ಡ ಸವಾಲಾಗಿತ್ತು. ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಮತ್ತೊಂದು ಸವಾಲಾಗಿತ್ತು.

ಆಸ್ಪತ್ರೆಗಳು ರೋಗಿ ಕೇಂದ್ರಿತವಾಗಿ ನಿರ್ವಹಣೆ ಮಾಡುವುದರಲ್ಲಿ ಯಶಸ್ವಿಯಾಗಿದ್ದರೂ, ಗ್ರಾಹಕ ಕೇಂದ್ರಿತವಾಗಿ ನಿರ್ವಹಣೆ ಮಾಡುವುದರಲ್ಲಿ ವಿಫಲವಾಗಿದ್ದವು ಎನ್ನುತ್ತಾರೆ ಮುದಿತ್. ಹೀಗಾಗಿ, ಇಂತಹ ಸೇವೆಯ ಅವಶ್ಯಕತೆ ಇತ್ತು. ಇದು ಕೇವಲ ರೋಗಿಗಳಿಗೆ ಮಾಹಿತಿಯನ್ನಷ್ಟೇ ಕೊಡುತ್ತಿಲ್ಲ. ಬದಲಿಗೆ ಆಸ್ಪತ್ರೆಯ ಸಮಗ್ರ ಅನುಭವವನ್ನೇ ಬದಲಾಯಿಸುತ್ತಿದೆ.

ದೊಡ್ಡ ದೊಡ್ಡ ಆಸ್ಪತ್ರೆಗಳಿಂದ ಈ ಸೇವೆಗೆ ಅವಕಾಶ ಪಡೆದ ಬಳಿಕ ಚಿಕ್ಕ ಆಸ್ಪತ್ರೆಗಳನ್ನು ಸೆಳೆಯುವುದು ಕಷ್ಟದ ಕೆಲಸವಾಗಿರಲಿಲ್ಲ. ಚಿಕ್ಕ ಆಸ್ಪತ್ರೆಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಿಸುವುದು, ಮಾರುಕಟ್ಟೆ ವಿಸ್ತರಿಸುವುದು, ಜನಪ್ರಿಯತೆ ಪಡೆಯುವುದು ಮೊದಲಾದ ಕಾರಣಗಳಿಗೆ ನಮ್ಮ ಸೇವೆ ಅತ್ಯಂತ ಅಗತ್ಯವಾಗಿತ್ತು ಎನ್ನುತ್ತಾರೆ ಮುದಿತ್.

ವಹಿವಾಟು ಮತ್ತು ಭವಿಷ್ಯದ ಯೋಜನೆ

ಆರಂಭಗೊಂಡ ಒಂದೇ ವಾರಕ್ಕೆ ಆ್ಯಪ್ಅನ್ನು 2000 ಮಂದಿ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಕ್ರಿಯ ಬಳಕೆದಾರರಿದ್ದಾರೆ. ನಾವೀಗ ಆರಂಭಿಕ ಹಂತದಲ್ಲಿರುವುದರಿಂದ ನಮ್ಮ ಗಮನವನ್ನೆಲ್ಲಾ ಈ ಉತ್ಪನ್ನದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದಕ್ಕೆ ಮೀಸಲಿರಿಸುತ್ತಿದ್ದೇವೆ. ಮೊಬೈಲ್ ಬಳಸುತ್ತಿರುವ ಗ್ರಾಹಕರಲ್ಲಿ ನಮ್ಮ ಉತ್ಪನ್ನ ಜನಪ್ರಿಯತೆ ಪಡೆಯುತ್ತಿದೆ ಎನ್ನುತ್ತಾರೆ ವೈಭವ್.

ಮೈಸಿಒಲ್ ಭವಿಷ್ಯದಲ್ಲಿ ಚೆನ್ನೈ ಹೈದ್ರಾಬಾದ್, ಮತ್ತು ಬೆಂಗಳೂರಿನಲ್ಲಿ 2016ರ ಮಾರ್ಚ್ ಒಳಗಾಗಿ ಸೇವೆ ಆರಂಭಿಸಬೇಕು ಎಂಬ ಗುರಿ ಹಾಕಿಕೊಂಡಿದೆ. ಸೆಪ್ಟಂಬರ್ ವೇಳೆಗೆ ಮುಂಬೈ, ಕೋಲ್ಕತ್ತಾ ಮತ್ತು ಪುಣೆಗಳಿಗೂ ಸೇವೆ ವಿಸ್ತರಿಸುವ ಯೋಜನೆ ಇದೆ. ಮಾರ್ಚ್ 2016ರೊಳಗೆ ವೈದ್ಯಕೀಯ ಪ್ರವಾಸೋದ್ಯಮ ವ್ಯವಹಾರ ಆರಂಭಿಸುವ ಐಡಿಯಾ ಇದೆ. ಇದು ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶದ ರೋಗಿಗಳನ್ನು ಗುರಿಯಾಗಿಸಿಕೊಳ್ಳಲಿದೆ.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ಪ್ರೀತಮ್​​