ಒಂದೇ ಕ್ಲಿಕ್‍ನಿಂದ ನಿಮ್ಮ ಮನೆಯ ಬಾಗಿಲಿಗೇ ತಲುಪುತ್ತೆ ತಾಜಾ ತರಕಾರಿ ಮತ್ತು ತಾಜಾ ಹಣ್ಣು.

ಟೀಮ್​ ವೈ.ಎಸ್​. ಕನ್ನಡ

ಒಂದೇ ಕ್ಲಿಕ್‍ನಿಂದ ನಿಮ್ಮ ಮನೆಯ ಬಾಗಿಲಿಗೇ ತಲುಪುತ್ತೆ ತಾಜಾ ತರಕಾರಿ ಮತ್ತು ತಾಜಾ ಹಣ್ಣು.

Wednesday January 20, 2016,

3 min Read

ಸಮಯಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಸಹಜ. ಇತ್ತೀಚೆಗಂತೂ ವಿಶ್ವದಾದ್ಯಂತ ನಿತ್ಯ ಒಂದಿಲ್ಲೊಂದು ಬದಲಾವಣೆ ಆಗುತ್ತಿದೆ. ಇದರಿಂದ ಉತ್ತಮ ದರ್ಜೆಯ ವಸ್ತುಗಳು ನಮ್ಮ ಮುಂದೆ ಕ್ಷಣ ಮಾತ್ರದಲ್ಲಿ ಪ್ರತ್ಯಕ್ಷವಾಗುತ್ತವೆ. ಮಾರುಕಟ್ಟೆಯ ಎಲ್ಲಾ ರಂಗಗಳಲ್ಲೂ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಇದೀಗ ಬದಲಾವಣೆಯ ಗಾಳಿ ಬೀಸುತ್ತಿದೆ. ಈಗ ತರಕಾರಿ ಮತ್ತು ಹಣ್ಣುಗಳ ಖರೀದಿಯಲ್ಲೂ ಬದಲಾವಣೆ ಅನ್ನೋದನ್ನ ನಾವು ಕಾಣಬಹುದಾಗಿದೆ. ಹಿಂದೆ ಜನ ಹಣ್ಣು, ತರಕಾರಿಗಳನ್ನ ಕೊಳ್ಳಲು ಮಾರುಕಟ್ಟೆಗೆ ಹೋಗಬೇಕಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ದೊಡ್ಡ ದೊಡ್ಡ ಮಾಲ್‍ಗಳಲ್ಲೂ, ಕಾಂಪ್ಲೆಕ್ಸ್​​ಗಳಲ್ಲೂ ಹಣ್ಣು, ತರಕಾರಿಗಳನ್ನ ಖರೀದಿಸಬಹುದು. ಇನ್ನು ಕೆಲವು ಕಡೆ ಮನೆಗೇ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಹೀಗಿರುವಾಗಲೇ ಗುರ್‍ಗಾಂವ್‍ನ ಪೂರ್ಣಿಮಾ ರಾವ್ ಅವರು ಕಡಿಮೆ ಬೆಲೆಯಲ್ಲಿ ತಾಜಾ ಹಣ್ಣು ಮತ್ತು ತರಕಾರಿಗಳನ್ನ ಮಾರಾಟ ಮಾಡಲು ಫ್ರೆಶ್2ಹಾಲ್ ಅನ್ನೋ ಸಂಸ್ಥೆಯನ್ನ ಪ್ರಾರಂಭಿಸಿದ್ದಾರೆ. ಫ್ರೆಶ್2ಹಾಲ್ ನಲ್ಲಿ ತಾಜಾ ಹಣ್ಣು ಮತ್ತು ತರಕಾರಿಗಳನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಂದರೆ, ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಮಾರಲಾಗುತ್ತದೆ. ಇದಕ್ಕೆ ಕಾರಣ ಹಣ್ಣು ಮತ್ತು ತರಕಾರಿಗಳನ್ನ ರೈತರೇ ಈ ಸಂಸ್ಥೆಗೆ ನೇರವಾಗಿ ಪೂರೈಸುತ್ತಾರೆ. ಮಧ್ಯವರ್ತಿಗಳ ಕಾಟ ಇಲ್ಲದೆ ಇರುವುದರಿಂದ ಫ್ರೆಶ್2ಹಾಲ್‍ಗೆ ಕಡಿಮೆ ಬೆಲೆ ಹಣ್ಣು ಮತ್ತು ತರಕಾರಿಗಳು ಸಿಗುತ್ತವೆ. ಆ ಲಾಭವನ್ನ ಫ್ರೆಶ್2ಹಾಲ್ ನೇರವಾಗಿ ಗ್ರಾಹಕರಿಗೇ ವರ್ಗಾಯಿಸುತ್ತಿದೆ. ಇದರಿಂದಾಗಿಯೇ ಫ್ರೆಶ್2ಹಾಲ್‍ನಲ್ಲಿ ಗ್ರಾಹಕರಿಗೆ ತಾಜಾ ಹಣ್ಣು ಮತ್ತು ತರಕಾರಿಗಳು ಕಡಿಮೆ ಬೆಲೆಗೆ ಸಿಗಲು ಸಾಧ್ಯವಾಗುತ್ತ್ತಿದೆ. ಇದರಿಂದ ಫ್ರೆಶ್2ಹಾಲ್‍ನ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇನ್ನು ಫ್ರೆಶ್2ಹಾಲ್ ವೆಬ್‍ಸೈಟ್‍ನಿಂದ ಗ್ರಾಹಕರು ತಮಗೆ ಬೇಕಾದ ಹಣ್ಣುಗಳು ಮತ್ತು ತರಕಾರಿ ಖರೀದಿಸುವುದರಿಂದ ಅವರಿಗೆ ಸಮಯ ಉಳಿಯುವುದಷ್ಟೇ ಅಲ್ಲದೆ ಹೆಚ್ಚಿನ ಲಾಭವೂ ಆಗುತ್ತದೆ.

image


ಪಟಿಯಾಲದ ಮಧ್ಯಮ ಕುಟುಂಬವೊಂದರಲ್ಲಿ ಜನಿಸಿದ ಪೂರ್ಣಿಮಾ, ಅಲ್ಲಿಯೇ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದರು. ಕಂಪ್ಯೂಟರ್ ಸೈನ್ಸ್​​ನಲ್ಲಿ ಪದವಿ ಪಡೆದ ನಂತರ ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು. 2007ರಲ್ಲಿ ಅವರಿಗೆ ಮೊದಲನೇ ಪುತ್ರಿ ಜನಿಸಿದಾಗ ಕೆಲಸಕ್ಕೆ ರಾಜೀನಾಮೆ ನೀಡಿದರು. ಇದಾದ ನಂತರ 2011ರಲ್ಲಿ ಮತ್ತೆ ಕೆಲಸಕ್ಕೆ ಸೇರಿದರು. ಇದಾದ ಒಂದು ವರ್ಷ ಕಳೆಯುವಷ್ಟರಲ್ಲಿ ಮತ್ತೊಂದು ಮಗುವಿಗೆ ಜನ್ಮನೀಡಿದ್ರು. ಆಗ ಮಕ್ಕಳ ಆರೈಕೆಯ ದೃಷ್ಟಿಯಿಂದ ಪೂರ್ಣಿಮಾ ಕೆಲಸ ಬಿಡಬೇಕಾಗಿ ಬಂತು.

ಮಕ್ಕಳ ಪಾಲನೆ ಮಾಡ್ತಾ ಮನೆಯಲ್ಲಿದ್ರೂ, ಪೂರ್ಣಿಮಾ ಅವರಿಗೆ ಸದಾ ಏನಾದರೊಂದು ಹೊಸತನ್ನ ಮಾಡಬೇಕೆಂಬ ಹಂಬಲ ಕಾಡುತ್ತಲೇ ಇತ್ತು. ತಮ್ಮ ಮಾವನ ಮನೆಗೆ ಆ ಗ್ರಾಮದ ರೈತರು ಹೆಚ್ಚಾಗಿ ಬರುತ್ತಿದ್ದರು. ಆ ರೈತರೊಂದಿಗೆ ಸೇರಿ ಏನಾದರೂ ಮಾಡಬೇಕೆಂಬ ಯೋಚನೆ ಪೂರ್ಣಿಮಾರಿಗೆ ಚಿಗುರೊಡೆಯಿತು. ಆ ಆಲೋಚನೆ ಬಂದದ್ದೇ ತಡ ಅದಕ್ಕೆ ಬೇಕಾದ ರೀಸರ್ಚ್ ಶುರು ಮಾಡಿ, 2015 ರ ಜುಲೈ ನಲ್ಲಿ ಫ್ರೆಶ್2ಹಾಲ್‍ಗೆ ಅಡಿಪಾಯ ಹಾಕಿದರು.

ಯುವರ್‍ಸ್ಟೋರಿ ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾ, ನಮ್ಮ ಕುಟುಂಬದವರಿಗೆ ಹರಿಯಾಣದಲ್ಲಿ ಸ್ವಂತ ಜಮೀನಿದೆ. ನಮ್ಮ ಮನೆಯ ಸದಸ್ಯರಿಗೆ ಹರಿಯಾಣ, ಪಂಜಾಬ್ ಮತ್ತು ರಾಜಸ್ತಾನದ ಹಲವು ರೈತರ ಪರಿಚಯವಿದೆ. ಇದರಿಂದಾಗಿಯೇ ನಾನು ನಿರ್ಧರಿಸಿದೆ, ಈ ರೈತರಿಂದ ಹಣ್ಣು, ತರಕಾರಿಗಳನ್ನು ಕೊಂಡು ಸೀದಾ ಗುರ್‍ಗಾಂವ್‍ನಾದ್ಯಂತ ಮಾರಾಟ ಮಾಡುವುದು ಅಂತ. ಇದರಿಂದ ರೈತರಿಗೂ ಹಾಗೂ ಗ್ರಾಹಕರಿಗೂ ಸಾಕಷ್ಟು ಅನುಕೂಲವಾಗುತ್ತೆ ಅಂತ ಯೋಚಿಸಿ ತಕ್ಷಣ ಕಾರ್ಯಪ್ರವೃತ್ತನಾದೆ.” ಎನ್ನುತ್ತಾರೆ ಪೂರ್ಣಿಮಾ..

ಪ್ರಾರಂಭದಲ್ಲಿ ಕೆಲವೇ ರೈತರೊಂದಿಗೆ ಶುರುವಾದ ಈ ಮಳಿಗೆÉಯ ಕಡೆಗೆ ನಂತರದಲ್ಲಿ ಹೆಚ್ಚೆಚ್ಚು ರೈತರು ಬರಲು ಆರಂಭಿಸಿದರು. ಏಕೆಂದರೆ ಇಲ್ಲಿ ರೈತರಿಗೆ ಯೋಗ್ಯವಾದ ಬೆಲೆ ಸಿಗುತ್ತಿತ್ತು. ಜೊತೆಗೆ ತುಂಬಾ ಕಡಿಮೆ ಬೆಲೆಗೆ ಹಣ್ಣು ತರಕಾರಿ ಸಿಗುತ್ತಿದ್ದುದರಿಂದ ಗ್ರಾಹಕರ ಸಂಖ್ಯೆಯೂ ಹೆಚ್ಚಾಯಿತು.

ಪೂರ್ಣಿಮಾರವರು ಈ ಕಾರ್ಯಕ್ಷೇತ್ರದಲ್ಲಿ ಬೇರೂರುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಈ ಕೆಲಸದಲ್ಲಿ ಎಷ್ಟೇ ಸಫಲತೆಗಳಿದ್ದರೂ, ಮಾರುಕಟ್ಟೆಯಲ್ಲಿ ಹಲವು ಜನರು ಇದೇ ಕೆಲಸವನ್ನು ಮಾಡತೊಡಗಿದರೆ ಆಗ ನಷ್ಟ ಸಂಭವಿಸೋ ಸಾಧ್ಯತೆಯೂ ಇತ್ತು. ಯೋಗ್ಯ ವಸ್ತುಗಳು ಮತ್ತು ಉತ್ತಮವಾದ ದೃಷ್ಠಿಕೋನದೊಂದಿಗೆ ಮುಂದುವರೆದರೆ ಮಾತ್ರ ಸಫಲರಾಗಬಹುದು ಎನ್ನುತ್ತಾರೆ ಪೂರ್ಣಿಮಾ.

ಆರಂಭದ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಿದ್ರೂ, ಕೆಲ ದಿನಗಳ ನಂತರ ಉತ್ತಮವಾದ ಪ್ರತಿಕ್ರಿಯೆ ಬರಲಾರಂಭಿಸಿತು. ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಉತ್ತಮ ಸೇವೆಯನ್ನು ನೀಡುವುದರೊಂದಿಗೆ ಉನ್ನತ ದರ್ಜೆಯ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸಫಲರಾಗಿದ್ದೇ ಅದಕ್ಕೆ ಕಾರಣ. ಮಾರ್ಕೆಟಿಂಗ್‍ಗೆ ಹೆಚ್ಚಿನ ಒತ್ತು ನೀಡದೇ, ಅದಕ್ಕೆ ಖರ್ಚು ಮಾಡಬೇಕಾಗಿದ್ದ ಹಣ ಉಳಿಸಲಾಯ್ತು. ಇದರಿಂದ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಉತ್ಪನ್ನಗಳು ದೊರೆಯುತ್ತಿವೆ. ಇದೇ ಸ್ಟ್ರಾಟಜಿಯೊಂದಿಗೆ ಮುನ್ನಡೆಯುತ್ತಿರುವುದರಿಂದ ‘ಫ್ರೆಶ್2ಹಾಲ್’ನ ಗ್ರಾಹಕರೇ ತಮ್ಮ ಸುತ್ತಮುತ್ತಲಿನ ಜನರಿಗೆ ತಿಳಿಸುತ್ತಿದ್ದು, ಆ ಮೂಲಕ ಗ್ರಾಹಕರಿಂದಲೇ ಉಚಿತ ಜಾಹೀರಾತು ಸಿಗುತ್ತಿದೆ.

ಶೇ.90ರಷ್ಟು ಗ್ರಾಹಕರನ್ನು ಖುದ್ದು ಭೇಟಿ ಮಾಡಿರುವ ಪೂರ್ಣಿಮಾ, ತಮ್ಮ ವೆಬ್‍ಸೈಟ್‍ನರಲ್ಲಿ ಪ್ರಥಮ ಬಾರಿಗೆ ಹಣ್ಣು-ತರಕಾರಿಗಳನ್ನು ಬುಕ್ ಮಾಡುತ್ತಿರುವುದರಿಂದ ಆಗುತ್ತಿರುವ ಅನುಕೂಲಗಳ ಬಗ್ಗೆ, ಅವರು ಮುಕ್ತ ಕಂಠದಿಂದ ಹೊಗಳುವುದನ್ನು ಕಂಡಿದ್ದಾರೆ. ಪೂರ್ಣಿಮಾರ ಟೀಂ ಚಿಕ್ಕದಾಗಿದ್ದು, ಇದರಿಂದ ಅತಿ ಹೆಚ್ಚಿನ ಕೆಲಸವನ್ನು ಇವರೇ ಮಾಡುತ್ತಿದ್ದಾರೆ. ಇದಕ್ಕೆÉ ಇವರ ಪತಿ ಹಾಗೂ ಕುಟುಂಬ ವರ್ಗದವರು ಸಹಕಾರ ನೀಡುತ್ತಿದ್ದಾರೆ.

ಪೂರ್ಣಿಮಾರವರು ತಮ್ಮ ಗ್ರಾಹಕರಿಂದ ಬರುವ ಎಲ್ಲಾ ಪ್ರತಿಕ್ರಿಯೆಗಳನ್ನು ನಿಷ್ಠೆಯಿಂದ ಗಮನಿಸಿ, ತಮ್ಮ ತಪ್ಪುಗಳನ್ನು ತಿದ್ದಿಕೊಂಡು, ಮತ್ತೊಮ್ಮೆ ಅಂತಹÀ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಆದ್ದರಿಂದಲೇ ಇವರ ಕಂಪೆನಿಯು ಇಂದಿಗೂ ಪ್ರಥಮ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ.

ಪೂರ್ಣಿಮಾರವರು ಇನ್ನೂ ಎರಡು ವರ್ಷಗಳ ಕಾಲ ಗುರ್‍ಗಾಂವ್ ಜನತೆಗೇ ತಮ್ಮ ಸೇವೆಯನ್ನು ಮೀಸಲಾಗಿಟ್ಟು, ನಂತರ ತಮ್ಮ ಸೇವೆಯ ವಿಸ್ತರಣೆಗೆ ಮುಂದಾಗಬೇಕೆಂಬ ನಿರ್ಣಯದೊಂದಿಗೆ ಮುನ್ನಡೆಯುತ್ತಿದ್ದಾರೆ.

ಲೇಖಕರು: ಅಶುತೋಷ್​ ಕಾಂತ್ವಾಲ್​

ಅನುವಾದ : ಬಾಲು