ಮತ್ತೊಂದು ಹೊಸ ದಾಖಲೆ ಬರೆದ ಕೇರಳ- ತೃತೀಯ ಲಿಂಗಿಗಳಿಗೆ ಮೊತ್ತ ಮೊದಲ ಸೌಂದರ್ಯ ಸ್ಪರ್ಧೆ ಆಯೋಜಿಸಿದ ಸರಕಾರ
ಟೀಮ್ ವೈ.ಎಸ್. ಕನ್ನಡ
Sunday June 18, 2017,
2 min Read
ಅಭಿವೃದ್ಧಿಯ ವಿಚಾರಕ್ಕೆ ಬಂದರೆ ಕೇರಳ ಸಹಜವಾಗಿಯೇ ಮುಂದೆ ನಿಲ್ಲುತ್ತದೆ. ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಅನ್ನುವ ವಿಚಾರದಲ್ಲಿ ಕೇರಳ ಎಲ್ಲಾ ರಾಜ್ಯಗಳಿಗೂ ಮಾದರಿ. ತೃತೀಯ ಲಿಂಗಿಗಳಿಗೆ ಸರಕಾರಿ ಕೆಲಸ ಮತ್ತು ತೃತೀಯ ಲಿಂಗಿ ಕ್ರೀಡಾಪಟುಗಳಿಗೆ ಕ್ರೀಡಾಕೂಟ ಆಯೋಜನೆ ಮಾಡಿ ಕೇರಳ ಸರಕಾರ ದಾಖಲೆ ಬರೆದಿತ್ತು. ಈಗ ವಿಶ್ವದ ಮೊತ್ತ ಮೊದಲ ತೃತೀಯ ಲಿಂಗಿಗಳ ಬ್ಯೂಟಿ ಕಂಟೆಸ್ಟ್ ಸ್ಪರ್ಧೆ ನಡೆಸಿ ಮತ್ತೊಂದು ದಾಖಲೆ ಬರೆದಿದೆ.
ತೃತೀಯ ಲಿಂಗಿಗಳನ್ನು ಸಮಾನರು ಎಂದು ಕಾಣುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತರುವ ಸುದುದ್ದೇಶವೂ ಇದರಲ್ಲಿದೆ. "ಧ್ವಾಯ ಆರ್ಟ್ಸ್ ಅಂಡ್ ಕಲ್ಚರಲ್ ಸೊಸೈಟಿ" ತೃತೀಯ ಲಿಂಗಿಗಳಿಗೆ ಬ್ಯೂಟಿ ಕಂಟೆಸ್ಟ್ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು.
“ ನಮ್ಮ ಉದ್ದೇಶ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಆಗಿದೆ. ಅವರಿಗೆ ಕೆಲಸ ಹಾಗೂ ಜೀವನೋಪಾಯಗಳನ್ನು ಹುಡುಕಿಕೊಳ್ಳಲು ಸಹಾಯ ನೀಡುವ ಉದ್ದೇಶ ನಮ್ಮಲ್ಲಿದೆ. ”
- ಶೀತಲ್ ಶ್ಯಾಂ, ಹೋರಾಟಗಾರ್ತಿ
"ಧ್ವಾಯ ಆರ್ಟ್ಸ್ ಅಂಡ್ ಕಲ್ಚರಲ್ ಸೊಸೈಟಿ" ಆಯೋಜಿಸಿದ್ದ ಈ ವಿಶೇಷ ಬ್ಯೂಟಿ ಕಂಟೆಸ್ಟ್ ಎರ್ನಾಕುಲಂನ ನೆಡುಂಬಸರಿಯಲ್ಲಿ ನಡೆದಿತ್ತು. ಸಿನಿಮಾ ಲೋಕದ ಸೂಪರ್ ಸ್ಟಾರ್ಗಳಾದ ಪಾರ್ವತಿ ಓಮನ್ ಕುಟ್ಟನ್, ರಮ್ಯಾ ನಂಬೀಷನ್, ಮಧುಸಾಧಿಕಾ, ಮುಕ್ತಾ, ಶಾಮ್ನ ಕಾಸಿಂ, ಕೃಷ್ಣ ಪ್ರಭಾ ಮತ್ತು ಸಿಂಗ್ ರಿಮಿ ಟಾಮಿ ಈ ವಿಶೇಷ ಬ್ಯೂಟಿ ಕಂಟೆಸ್ಟ್ಗೆ ಸಾಕ್ಷಿಯಾಗಿದ್ದರು.
ಮೊತ್ತ ಮೊದಲ ತೃತೀಯ ಲಿಂಗಿಗಳ ಬ್ಯೂಟಿ ಕಂಟೆಸ್ಟ್ ಸ್ಪರ್ಧೆಯ ತೀರ್ಪುಗಾರರಾಗಿ 2008ರ ಮಿಸ್ ಇಂಡಿಯಾ ಖ್ಯಾತಿಯ ರಂಜಿನಿ ಹರಿದಾಸ್, ಪಾರ್ವತಿ ಒಮನ್ ಕುಟ್ಟನ್, ಡಾ. ಪೌಲ್ ಮಣಿ ಮತ್ತು ಡಾ. ಸಾಮ್ ಭಾಗವಹಿಸಿದ್ದರು. ಸುಮಾರು 15 ಸ್ಪರ್ಧಿಗಳು ತಮ್ಮ ತಮ್ಮ ಸೌಂದರ್ಯವನ್ನು ಬಾಹ್ಯ ಲೋಕಕ್ಕೆ ತೋರಿಸಿದ್ದರು.
ಇದನ್ನು ಓದಿ: ಎಚ್ಚರ..! ಇನ್ನು 10 ವರ್ಷಗಳಲ್ಲಿ ಬಾಳೆಹಣ್ಣು ಸಿಗೋದೇ ಇಲ್ವಂತೆ..!
ತೃತೀಯ ಲಿಂಗಿಗಳ ಮೊದಲ ಸೌಂದರ್ಯ ಸ್ಪರ್ಧೆಯಲ್ಲಿ ಶ್ಯಾಮ ಪ್ರಶಸ್ತಿ ಪಡೆದರು. ತೀರ್ಪುಗಾರರು ಶ್ಯಾಮನಿಗೆ, "ನೀನೊಂದು ಮಗುವನ್ನು ದತ್ತು ಪಡೆಯುವ ಅವಕಾಶ ಸಿಕ್ಕರೆ ಯಾವ ಲಿಂಗದ ಮಗುವನ್ನು ದತ್ತು ಪಡೆಯುತ್ತೀಯಾ..?" ಅನ್ನುವ ಪ್ರಶ್ನೆ ಹಾಕಿದ್ದರು. ಅದಕ್ಕೆ ಶ್ಯಾಮ್ ನಾನು ಗಂಡು ಮಗುವನ್ನು ದತ್ತು ಪಡೆಯುತ್ತೇನೆ ಅನ್ನುವ ಉತ್ತರ ನೀಡಿದ್ದರು. 25 ವರ್ಷದ ಶ್ಯಾಂ ಮಲೆಯಾಳಂನಲ್ಲಿ ಸ್ನಾತಕೋತ್ತರ ಪದವಿ ಕೂಡ ಪಡೆದುಕೊಂಡಿದ್ದಾರೆ. ಕೇರಳ ಸರಕಾರ ನೀಡುವ ವಿದ್ಯಾರ್ಥಿ ವೇತನವನ್ನು ಪಡೆದ ಮೊದಲ ತೃತೀಯ ಲಿಂಗಿ ಕೂಡ ಶ್ಯಾಂ ಆಗಿದ್ದರು.
“ಮಹಿಳೆಯರಿಗೆ ಹೋಲಿಸಿದರೆ ಪುರುಷರು ತೃತೀಯ ಲಿಂಗಿಗಳಿಗೆ ಹೆಚ್ಚು ಅವಮಾನ ಮಾಡುತ್ತಾರೆ. ನನಗೆ ಗಂಡು ಮಗುವನ್ನು ದತ್ತು ಪಡೆಯುವ ಅವಕಾಶ ಸಿಕ್ಕರೆ, ಆ ಮಗುವಿಗೆ ತೃತೀಯ ಲಿಂಗಿಗಳು ಕೂಡ ಎಲ್ಲರಂತೆ ಸಮಾನರು, ಅವರಿಗೂ ಗೌರವ ಕೊಡಬೇಕು ಅನ್ನುವುದನ್ನು ಕಲಿಸುತ್ತೇನೆ. ಈ ಮೂಲಕ ಆ ಮಗು ಕೂಡ ಸಮಾಜದ ಬದಲಾವಣೆಗೆ ಪ್ರಯತ್ನ ಪಡಲಿದೆ. ”
- ಶ್ಯಾಂ, ತೃತೀಯ ಲಿಂಗಿಳ ಬ್ಯೂಟಿ ಸ್ಪರ್ಧೆಯ ವಿಜೇತರು
ಸಮಾಜ ಎಷ್ಟೇ ಮುಂದುವರೆದಿದ್ದರೂ ತೃತೀಯ ಲಿಂಗಿಗಳನ್ನು ಜನ ಇನ್ನೂ ಮನಷ್ಯರಂತೆ ಕಾಣುತ್ತಿಲ್ಲ. ಅಷ್ಟೇ ಅಲ್ಲ ಅವರಿಗೆ ಗೌರವನ್ನು ಕೂಡ ನೀಡುತ್ತಿಲ್ಲ. ಅವರು ಎಂಜಿನಿಯರಿಂಗ್ ಪದವಿ ಪಡೆದಿದ್ದರೂ, ತೃತೀಯ ಲಿಂಗಿಗಳು ಅನ್ನುವ ಕಾರಣಕ್ಕೆ ಅವರಿಗೆ ಕೆಲಸ ನೀಡುತ್ತಿಲ್ಲ. ಆದರೆ ಕೇರಳ ಸರಕಾರ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಹಲವು ಸ್ಕೀಮ್ ಗಳ ಮೂಲಕ ಅವರೂ ಕೂಡ ಎಲ್ಲರಂತೆ ಒಂದೇ ಅನ್ನುವ ಸಂದೇಶವನ್ನು ಸಾರುತ್ತಿದೆ. ಒಟ್ಟಿನಲ್ಲಿ ಕೇರಳ ಸರಕಾರದ ಯೋಜನೆಗಳು ಎಲ್ಲಾ ಸರಕಾರಗಳಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.