ಭಾರತೀಯ ಮೂಲದ ಬ್ರಿಟನ್ ಪೊಲೀಸ್ ಅಧಿಕಾರಿಗೆ ಶೌರ್ಯ ಪ್ರಶಸ್ತಿ..

ಟೀಮ್ ವೈ.ಎಸ್.ಕನ್ನಡ 

ಭಾರತೀಯ ಮೂಲದ ಬ್ರಿಟನ್ ಪೊಲೀಸ್ ಅಧಿಕಾರಿಗೆ ಶೌರ್ಯ ಪ್ರಶಸ್ತಿ..

Thursday February 16, 2017,

2 min Read

ಇವರು ರಿಯಲ್ ಹೀರೋ. ಭಾರತೀಯ ಮೂಲದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಅಧಿಕಾರಿ. ಹೊತ್ತಿ ಉರಿಯುತ್ತಿದ್ದ ಮನೆಯೊಂದರಲ್ಲಿ ಸಿಕ್ಕಿದ ಇಡೀ ಕುಟುಂಬವನ್ನು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ ದಕ್ಷ, ಧೈರ್ಯವಂತ ಮತ್ತು ಸಾಹಸಿ. ಈ ಮೂಲಕ ಸಾವಿರಾರು ಲಂಡನ್ ಪ್ರಜೆಗಳ ಮನಸ್ಸನ್ನೂ ಗೆದ್ದಿದ್ದಾರೆ.

image


ಬ್ರಿಟಿಷ್ ಪೊಲೀಸ್ ಅಧಿಕಾರಿಯಾಗಿರೋ ಶಂದ್ ಪನೇಸರ್ ಅವರಿಗೆ ಶೌರ್ಯ ಪ್ರಶಸ್ತಿ ಒಲಿದಿದೆ. ಸಹಪಾಠಿ ಕ್ರೇಗ್ ನಿಕೋಲ್ಸನ್ ಅವರೊಂದಿಗೆ ಶಂದ್ ಪನೇಸರ್ ಕೂಡ ‘ಔಟ್ ಸ್ಟ್ಯಾಂಡಿಂಗ್ ಬ್ರೇವರಿ ಆಫ್ ದಿ ಇಯರ್ ಎಟ್ ದಿ ಟೋಟಲ್ ಎಕ್ಸಲೆನ್ಸ್ ಇನ್ ಪೊಲೀಸಿಂಗ್ ಅವಾರ್ಡ್ಸ್’ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವಾರ ಪನೇಸರ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯ್ತು. ವಿಶೇಷ ಅಂದ್ರೆ ಈ ಪ್ರಶಸ್ತಿಗಾಗಿ ಶಂದ್ ಪನೇಸರ್ ಅವರನ್ನು ಲಂಡನ್ ನ ಪೊಲೀಸ್ ಇಲಾಖೆ ಅಥವಾ ಸರ್ಕಾರ ಆಯ್ಕೆ ಮಾಡಿಲ್ಲ. ಶೌರ್ಯ ಪ್ರಶಸ್ತಿಗೆ ಪನೇಸರ್ ಅರ್ಹರು ಅಂತಾ ಸಾರ್ವಜನಿಕರೇ ಆಯ್ಕೆ ಮಾಡಿದ್ದಾರೆ. ಪನೇಸರ್ ಅವರ ಪರ ಮತ ಹಾಕಿದ್ದಾರೆ.

2016ರ ಸಪ್ಟೆಂಬರ್ ನಲ್ಲಿ ಹಿಲ್ಲಿಂಗ್ಟನ್ ನಲ್ಲಿರುವ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಮನೆಯೊಳಕ್ಕೆ ಇಬ್ಬರು ಸಿಲುಕಿಕೊಂಡಿದ್ರು. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಪೊಲೀಸ್ ಅಧಿಕಾರಿಗಳಾದ ಶಂದ್ ಪನೇಸರ್ ಮತ್ತು ಕ್ರೇಗ್ ನಿಕೋಲ್ಸನ್ ಅಲ್ಲಿಗೆ ಹಾಜರಾಗಿದ್ರು. ಅವರ ಬಳಿ ಬೆಂಕಿ ತಡೆಯುವ ಯಾವುದೇ ಉಪಕರಣವಾಗ್ಲಿ, ಅಗ್ನಿ ನಿರೋಧಕ ಬಟ್ಟೆಗಳಾಗ್ಲಿ ಇರಲಿಲ್ಲ. ಆದ್ರೂ ಯಾವುದೇ ಹಿಂಜರಿಕೆ ಅಥವಾ ಪ್ರಾಣಭಯವಿಲ್ಲದೆ ಜೀವದ ಹಂಗು ತೊರೆದು ಬೆಂಕಿಯ ನಡುವೆಯೇ ಮನೆಯೊಳಕ್ಕೆ ಪ್ರವೇಶಿಸಿ, ಅಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.

ಮನೆಯ ತುಂಬೆಲ್ಲಾ ದಟ್ಟವಾದ ಹೊಗೆ ಆವರಿಸಿತ್ತು, ಎಲ್ಲಿ ನೋಡಿದ್ರೂ ಅಗ್ನಿಯ ಕೆನ್ನಾಲಗೆ ಚಾಚುತ್ತಿತ್ತು. ಒಳಗಡೆ ಸಿಲುಕಿಕೊಂಡಿರುವವರು ಹೊರಬರುವುದು ನಿಜಕ್ಕೂ ಕಷ್ಟಕರ ಅನ್ನೋದು ಈ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿತ್ತು. ಹೊಗೆಯಿಂದ ಪಾರಾಗಲು ತಾವು ಧರಿಸಿದ್ದ ಸಮವಸ್ತ್ರವನ್ನೇ ಮುಖಕ್ಕೆ ಕಟ್ಟಿಕೊಂಡ ಅಧಿಕಾರಿಗಳು ಕತ್ತಲಲ್ಲೇ ಒಳನುಗ್ಗಿ ಓರ್ವ ಪುರುಷ ಹಾಗೂ ಮಹಿಳೆಯನ್ನು ಪಾರು ಮಾಡಿದ್ರು. ಅಷ್ಟರಲ್ಲಾಗ್ಲೇ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ಲು. ಇನ್ನು ಸ್ವಲ್ಪ ಹೊತ್ತು ತಡವಾಗಿದ್ರೂ ಆಕೆ ಬದುಕುತ್ತಿರಲಿಲ್ಲ. ಪೊಲೀಸ್ ಅಧಿಕಾರಿಗಳ ಧೈರ್ಯ ಮತ್ತು ಸಾಹಸದಿಂದಾಗಿ ಇಬ್ಬರೂ ಪಾರಾಗಿ ಬಂದಿದ್ದಾರೆ.

ಸಾರ್ವಜನಿಕರ ರಕ್ಷಣೆ, ಅಪರಾಧಿಗಳೊಂದಿಗೆ ಸೆಣೆಸಾಟ ಹೀಗೆ ಅಪಾಯಕಾರಿ ಕೆಲಸವನ್ನು ನಿರ್ವಹಿಸುವ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಿದಲ್ಲಿ ಇನ್ನಷ್ಟು ಹುರುಪು ಮತ್ತು ಧೈರ್ಯದಿಂದ ಅವರು ಕರ್ತವ್ಯ ಮುಂದುವರಿಸಲು ಸಾಧ್ಯ. ಲಂಡನ್ ನಗರ ಹಾಗೂ ಜನತೆಯನ್ನು ರಕ್ಷಿಸಲು ಪೊಲೀಸರು ಮಾಡ್ತಾ ಇರೋ ಕಾರ್ಯ ಶ್ಲಾಘನೀಯ ಅಂತಾ ಕಮಿಷನರ್ ಸರ್ ಬರ್ನಾರ್ಡ್ ಹೋಗನ್ ಹೋವ್ ಹೇಳಿದ್ದಾರೆ. 

ಇದನ್ನೂ ಓದಿ.. 

ಅಪ್ಪನ ಪ್ರೀತಿ ಜೊತೆಗೆ ಕೇಕ್ ಉದ್ಯಮದಲ್ಲಿ ಯಶಸ್ವಿಯಾದ ಬೆಂಗಳೂರಿನ ಯುವತಿ 

ಪಬ್ಲಿಕ್ ಪ್ಲೇಸ್​ನಲ್ಲಿ ಹೊಡೆಯಬೇಡಿ ಧಮ್ : ಬೀಳುತ್ತೆ 1000 ರೂಪಾಯಿ ಫೈನ್