ನೃತ್ಯದ ಶಕ್ತಿ+ಮಾತಿನ ಯುಕ್ತಿ = ವಸಂತ ವೈಕುಂಠ
ಟೀಮ್ ವೈ.ಎಸ್. ಕನ್ನಡ
Tuesday March 21, 2017,
3 min Read
ಮಾತಿನಲ್ಲಿದೆ ಮಾಂತ್ರಿಕ ಶಕ್ತಿ
ಡಿಪ್ರೆಷನ್ ಅನ್ನೋದು ಇವತ್ತು ಬಹು ದೊಡ್ಡ ಸಮಸ್ಯೆಯಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರು ಒಂದಲ್ಲ ಒಂದು ಹಂತಕ್ಕೆ ಖಿನ್ನತೆಗೆ ಒಳಗಾಗಬಹುದು. ಇದನ್ನು ಕಣ್ಣಾರೆ ಕಂಡು ಮರುಕಪಡುತ್ತಿದ್ದ ಪ್ರಖ್ಯಾತ ನೃತ್ಯ ಪಟು ಶ್ರೀಮತಿ ವಸಂತ ವೈಕುಂಠ ಅದೊಂದು ದಿನ ಅವರಿಗೆ ಸಾಂತ್ವನ ಹೇಳಲು ಸಿದ್ಧರಾದರು. ಆದ್ರೆ ಅದನ್ನು ಮಾಡೋದು ಹೇಗೆ? ಪ್ರತಿಯೊಬ್ಬರನ್ನು ಅದು ಏಕ ಕಾಲಕ್ಕೆ ತಲುಪಬೇಕು. ಸಾಮೂಹಿಕವಾಗಿ ಒಂದೇ ತೆರೆನಾದ ಸಮಸ್ಯೆ ಎದುರಿಸುತ್ತಿರುವವರಿಗೆ ಸಮಧಾನ ಹೇಳಲೆಬೇಕು ಎಂದು ನಿರ್ಧರಿಸಿದರು. ಆಗಲೇ ಅವರಿಗೆ ನೆರವಾದದ್ದು ಇಂಟರ್ನೆಟ್. ಲೈಫ್ ಅಂಡ ಲೀವ್ ಅನ್ನೋ ಆನ್ಲೈನ್ ಕೌನ್ಸಿಲಿಂಗ್ ಆರಂಭಿಸಿದರು.
ಮೊದಲ ಹೆಜ್ಜೆ ಮುಂದೆ ಸಾಗಲಿಲ್ಲ
ಪ್ರಖ್ಯಾತ ಇಂಗ್ಲೀಷ್ ದಿನ ಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾಗಿದ್ದ ಟಿ ಎಸ್ ಕೃಷ್ಣನ್ ರವರ ಮಗಳಾದ ವಸಂತ ರವರಿಗೆ ನೃತ್ಯದ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಅದಕ್ಕಾಗಿಯೇ ತಮ್ಮ 5 ನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿಕೆ ಆರಂಭಿಸಿದರು. ಆದ್ರೆ ಅದೊಂದು ದಿನ ನೀವು ನೃತ್ಯ ಮಾಡಬಾರದು ಇದು ಕಾಲಿಗೆ ಅಪಾಯಕಾರಿ ಎಂದು ವೈದ್ಯರು ಹೇಳಿಬಿಟ್ಟರು. ಇದು ಆಘಾತಕಾರಿ ಅನಿಸಿದರು ಸಹ ಕಲೆಯ ಮೇಲೆ ಅವರಿಗಿದ್ದ ಪ್ರೀತಿ 7 ವರ್ಷಗಳ ಕಾಲ ವೀಣೆ ಕಲಿಯುವಂತೆ ಮಾಡಿತು. ನಂತರ ಮದುವೆ ಮಾಡಿಕೊಂಡು ತಮ್ಮ ಪುಟ್ಟ ಮಗನೊಂದಿಗೆ ಓಮನ್ಗೆ ತೆರಳಿದರು.
ಅಸಾಧ್ಯವನ್ನು ಸಾಧ್ಯವಾಗಿಸಿದವರು
ಖ್ಯಾತ ನೃತ್ಯಗಾರ್ತಿ ಸುಧಾ ಚಂದ್ರನ್ ಅವರ ಮರದ ಕಾಲುಗಳನ್ನು ನೊಡಿ ಮತ್ತೆ ನೃತ್ಯ ಮಾಡಲು ಮನಸು ಮಾಡುತ್ತಾರೆ. ಅಲ್ಲಿಂದ ಎಲ್ಲವೂ ಬದಲಾಗುತ್ತದೆ. ಮತ್ತೆ 20 ವರ್ಷದ ನಂತರ ತಮ್ಮ ಡ್ಯಾನ್ಸಿಂಗ್ ಕರಿಯರ್ ಆರಂಭಿಸುತ್ತಾರೆ. ಗುರುಗಳಾದ ಚಿತ್ರಾ ವಿಶ್ವೇಶರನ್ ಅವರ ಮಾರ್ಗದರ್ಶನ ಪಡೆಯುತ್ತಾರೆ. 1987ರಲ್ಲಿ ಮೊದಲ ಭರತನಾಟ್ಯ ಪ್ರದರ್ಶನ ನೀಡುತ್ತಾರೆ. ಇದಿಷ್ಟೇ ಅಲ್ಲದೇ ದೂರದರ್ಶನದಲ್ಲಿ ಆಡಿಷನ್ ಇಲ್ಲದೇ ನೃತ್ಯ ಪ್ರದರ್ಶನ ನೀಡಿದ ಮೊದಲ ಆನಿವಾಸಿ ಭಾರತೀಯ ನೃತ್ಯಗಾರ್ತಿ ಎನ್ನುವ ಹಿರಿಮೆಗೂ ಪಾತ್ರರಾಗುತ್ತಾರೆ. ಅವರ ಶ್ರದ್ಧೆ ಪರಿಶ್ರಮದ ಫಲವಾಗಿ ಸಿನಿಮಾ ನಿರ್ದೇಶಕರು, ನೃತ್ಯ ಆಯೋಜಕರು ಸಾಕಷ್ಟು ಅವಕಾಶಗಳನ್ನು ನೀಡುತ್ತಾರೆ. ಇದೇ ಸ್ಪೂರ್ತಿಯಿಂದಲೇ ಮಸ್ಕತ್ನಲ್ಲಿ ಶಿವಶಕ್ತಿ ನೃತ್ಯ ಶಾಲೆಯನ್ನು ಸ್ಥಾಪಿಸಿ ನೂರಾರು ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಇದನ್ನು ಓದಿ: 115 ವರ್ಷಗಳ ಸಂಪ್ರದಾಯ ಹೊಂದಿರುವ "ಮದರ್ಸ್ ರೆಸೆಪಿ"ಯ ಕಥೆ ಕೇಳಿ
ಮತ್ತೆ ಗೆಜ್ಜೆ ಕಟ್ಟಿ ಗೆದ್ದ ರೋಚಕ ಕಥೆ
ನೃತ್ಯ ಕೇವಲ ಮನರಂಜನೆಯಲ್ಲ ಅದು ಶಾಂತಿ, ಸೌಹಾರ್ದತೆ, ನೆಮ್ಮದಿಗೆ ರಾಯಾಭಾರಿ ಎನ್ನುತ್ತಾರೆ. ಪತಿ ವೈಕುಂಠ ಅವರ ಪ್ರೋತ್ಸಾಹದಿಂದ ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದರು. ಅಲ್ಲದೇ ಸ್ಪಿರಿಚ್ಯುಯಾಲಟಿ ಇನ್ ಡ್ಯಾನ್ಸ್ ಎನ್ನುವ ಪುಸ್ತಕವನ್ನು ಬರೆದರು. 20 ವರ್ಷಗಳ ನಂತರ ಮತ್ತೆ ನೃತ್ಯವನ್ನು ಆರಂಭಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಡೆಡಿಕೇಷನ್ ಎಲ್ಲವನ್ನು ಸಾಧ್ಯವಾಗಿಸಿತ್ತು. ಮಹಾರಾಷ್ಟ್ರದ ಗವರ್ನರ್ ಇವರನ್ನು ಆಹ್ವಾನಿಸಿ ಅಭಿನಯ ಸರಸ್ವತಿ ಅನ್ನೋ ಬಿರುದನ್ನು ಕೂಡ ನೀಡಿದ್ದಾರೆ. ಯುಎಸ್ಎ ಕಲಾವಿಧೂಷಿ ಬಿರುದನ್ನು ನೀಡಿದೆ. ತಮ್ಮದೇ ಆದ ಬ್ಯಾಲೆ ಡ್ಯಾನ್ಸ್ ಫಾರ್ಮ್, ಕಾಸ್ಮಿಕ್ ಎನರ್ಜಿ, ಗಂಗೆಯ ಬಗ್ಗೆ ಸೇರಿದಂತೆ ಲೆಕ್ಕವಿಲ್ಲದಷ್ಟು ನೃತ್ಯ ಪ್ರದರ್ಶನ ನೀಡಿದ್ದಾರೆ. ಡಾ.ಬಾಲಮುರುಳಿ ಕೃಷ್ಣರಿಂದ ಬೆಸ್ಟ್ ಡಾನ್ಸ್ ಟೀಚರ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.
ಆನ್ಲೈನ್ ಕೌನ್ಸಿಲಿಂಗ್
ಈಗ ತಮ್ಮದೇ ಆದ ಕೌನ್ಸಿಲಿಂಗ್ ವೆಬ್ ಒಂದನ್ನು ಆರಂಭಿಸಿದ್ದಾರೆ. ನೃತ್ಯದಿಂದ ತಾವು ಇಷ್ಟು ವರ್ಷದಿಂದ ಪಡೆದುಕೊಂಡ ಸಾತ್ವಿಕ ಶಕ್ತಿ ಮತ್ತು ಕಾಸ್ಮಿಕ್ ಪವರ್ನಿಂದ ತಮ್ಮ ಮಾತಿನ ಮೂಲಕ ನೊಂದವರಿಗೆ ಆನ್ಲೈನ್ ಮೂಲಕ ಕೌನ್ಸಿಲಿಂಗ್ ಮಾಡುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವ ರೀತಿ, ವಿಚ್ಚೇದನವನ್ನು ನಿಲ್ಲಿಸುವುದು ಹೇಗೆ? ಸಂತೋಷವಾಗಿ ಬದುಕುವುದು ಹೇಗೆ ಸೇರಿದಂತೆ ಹಲವಾರು ವಿಡಿಯೋಗಳನ್ನು ಮಾಡಿದ್ದಾರೆ. ಅಲ್ಲದೇ ಲೈಫ್ಸ್ಟೈಲ್ ಮತ್ತು ರಿಲೇಷನ್ಶಿಪ್ ಬಗ್ಗೆಯೂ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಇವರ ವಿಡಿಯೋದಿಂದ ಪ್ರಯೋಜನ ಪಡೆದುಕೊಂಡವರು ಬಹಳ ಜನರಿದ್ದಾರೆ. ಆ ಮೂಲಕ ಎಲ್ಲಾ ನೊಂದ ಮನಸಿಗೆ ಧ್ವನಿಯಾಗುತ್ತಿದ್ದಾರೆ.
ಬದುಕಲ್ಲಿ ಏನೇ ಬರಲಿ, ಅಸಾಧ್ಯ ಅನ್ನುವುದು ಯಾವುದು ಇಲ್ಲ. ಕಾಲ ಸರಿದಂತೆ ಎಲ್ಲ ಪ್ರಶ್ನೆಗೂ ಉತ್ತರ ದಕ್ಕುತ್ತದೆ. ಒಮ್ಮೆ ಆಗುವುದಿಲ್ಲ ಎಂದು ಕೈ ಕಟ್ಟಿ ಕುಳಿತ ಕೆಲಸ ಮುಂದೆ ಹೇಗೆಲ್ಲಾ ಬದುಕು ಬದಲಿಸಬಲ್ಲದು ಅನ್ನುವುದಕ್ಕೆ ಶ್ರೀಮತಿ ವಸಂತ ವೈಕುಂಠ್ ಅತ್ಯುತ್ತಮ ಉದಾಹರಣೆ. ನೃತ್ಯದಲ್ಲಿ ದೊಡ್ಡ ಹೆಸರು ಮಾಡಿದ ನಂತರ ಇದೀಗ ಗೊಂದಲದಲ್ಲಿರುವವರಿಗೆ ತಮ್ಮ ಅನುಭವದ ಮೂಲಕ ಮಾರ್ಗದರ್ಶನ ನೀಡುತ್ತಿರುವುದು ಮತ್ತೊಂದು ಸ್ಪೂರ್ತಿ ಸೆಲೆ.
1. ಈ ಗ್ರಾಮದಲ್ಲಿ ಹೆಣ್ಣುಮಕ್ಕಳೇ ಮನೆ ಒಡತಿಯರು..!
2. ಇಳಿವಯಸ್ಸಿನಲ್ಲೂ ದೇಶ ಸುತ್ತುವ ಸಾಹಸಿ : ವಿಶ್ವಪರ್ಯಟನೆ ಮಾಡ್ತಿದ್ದಾರೆ 95ರ ಅಮ್ಮಾಚಿ